ಕಡಬ: ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದು ಮಗು ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ರವಿವಾರ ಸುಬ್ರಹ್ಮಣ್ಯ – ಉಡುಪಿ ರಾಜ್ಯ ಹೆದ್ದಾರಿಯ ನೂಜಿಬಾಳ್ತಿಲ ಎಂಬಲ್ಲಿ ಸಂಭವಿಸಿದೆ.
ಕುಕ್ಕೆ ಸುಬ್ರಹ್ಮಣ್ಯ ಭಾಗದಿಂದ ಇಚ್ಲಂಪಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಎಂಬಲ್ಲಿ ಬೃಹತ್ ಮರ ಮುರಿದು ಬಿದ್ದಿದೆ. ಘಟನೆಯಿಂದ ಚಾಲಕ, ಇಬ್ಬರು ಮಹಿಳೆಯರು, ಒಂದು ಮಗು ಕಾರಿನಲ್ಲಿ ಸಿಲುಕಿಕೊಂಡಿದ್ದು ಸ್ಥಳೀಯರು ಕಾರ್ಯಾಚರಣೆ ನಡೆಸಿ ಸಿಲುಕಿದ್ದ ಗಾಯಾಳುಗಳನ್ನು ಹೊರ ತೆಗೆದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಾರಿನಲ್ಲಿದ್ದವರ ಮುಖ, ಮೈ-ಕೈಗೆ ತೀವ್ರ ಗಾಯವಾಗಿದೆ ಎಂದು ಕಾರ್ಯಾಚರಣೆ ನಡೆಸಿದವರು ತಿಳಿಸಿದ್ದಾರೆ. ಘಟನೆಯಿಂದ ಕೆಲ ಕಾಲ ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳೀಯರು ಮರ ತೆರವಿಗೆ ಸಹಕರಿಸಿದರು.