ಜಡತ್ವ ಮನೋಸ್ಥಿತಿಯ ಅಧಿಕಾರಿಗಳ ಚಳಿ ಬಿಡಿಸಿದ ಶಾಸಕರು
ಉಪ್ಪಿನಂಗಡಿ: ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಾಣದೇ ಇಲಾಖೆಯಿಂದ ಇಲಾಖೆಗೆ ಪತ್ರ ವ್ಯವಹಾರ ಮಾಡಿ ತಮ್ಮ ಕೆಲಸವಾಯಿತೆಂದು ಸುಮ್ಮನಿರುವ ಜಡತ್ವ ಮನೋಸ್ಥಿತಿಯ ಅಧಿಕಾರಿಗಳಿಗೆ ಶಾಸಕರು ಚಳಿ ಬಿಡಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಮೇ.28ರಂದು ನಡೆದ ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕಾ ಸಭೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈಯವರು, ಮಳೆಗಾಲದಲ್ಲಿ ಅನಾಹುತಗಳು ಸಂಭವಿಸಿ ಮನೆ ಬಿದ್ದು ಸಂಪೂರ್ಣ ನಾಶವಾದಾಗ ಸರಕಾರದಿಂದ ಅದಕ್ಕೆ ಪರಿಹಾರ ಸಿಗುತ್ತದೆ. ಆದರೆ ಗ್ರಾಮ ಆಡಳಿತಾಧಿಕಾರಿಗಳು ವರದಿ ಮಾಡುವಾಗ ಅರ್ಧಂಬರ್ಧ ವರದಿ ತಯಾರಿಸಬೇಡಿ. ಶೇ.30 ರಿಂದ ಶೇ.50ರಷ್ಟು ಮನೆಗೆ ಹಾನಿಯಾದಾಗ ಅದನ್ನು ಮತ್ತೆ ರಿಪೇರಿ ಮಾಡಲು ಬರುವುದಿಲ್ಲ. ಅವರು ಹೊಸ ಮನೆಯನ್ನೇ ನಿರ್ಮಿಸಬೇಕಷ್ಟೇ. ಆದರೆ ಕೆಲವು ಗ್ರಾಮ ಆಡಳಿತಾಧಿಕಾರಿಯವರು ಅರ್ಧ ಭಾಗ ಮನೆ ನಾಶವಾದರೆ ಭಾಗಶಃ ಅಂತ ವರದಿ ಮಾಡುತ್ತಾರೆ. ಆಗ ಪರಿಹಾರದ ಮೊತ್ತ ಕಡಿಮೆಯಾಗುತ್ತದೆ. ಶ್ರೀಮಂತರ ಮನೆಗಳು ಬೀಳುವುದಿಲ್ಲ. ಅವರಲ್ಲಿ ಹಣವಿರುತ್ತದೆ. ಅವರು ಗಟ್ಟಿಯಾದ ಮನೆಯನ್ನೇ ಕಟ್ಟಿರುತ್ತಾರೆ. ಆದರೆ ಬೀಳುವುದು ಬಡವರ ಮನೆಗಳೇ ಜಾಸ್ತಿ. ಆದ್ದರಿಂದ ಇಂತಹ ಸಂದರ್ಭದಲ್ಲಿ ಸಂಪೂರ್ಣವಾಗಿ ಮನೆಗೆ ಹಾನಿಯಾಗಿದೆ ಎಂದು ವರದಿಯಲ್ಲಿ ತೋರಿಸಿ. ಆಗ ಅವರಿಗೆ ಸಂಪೂರ್ಣ ಪರಿಹಾರ ದೊರೆಯಲು ಸಾಧ್ಯ. ಕಾನೂನಿನೊಳಗೆ ಮಾನವೀಯತೆಯೂ ಇರಲಿ. ವರದಿ ನೀಡುವಲ್ಲಿ ಕೂಡಾ ತಡ ಮಾಡಬೇಡಿ. ತಕ್ಷಣ ವರದಿ ನೀಡುವ ಮೂಲಕ ಪರಿಹಾರದ ಮೊತ್ತ ಶೀಘ್ರವಾಗಿ ಅವರ ಕೈತಲುಪುವಂತೆ ಮಾಡಬೇಕು ಎಂದು ಕಡಕ್ ಸೂಚನೆ ನೀಡಿದರು.
ಹಳೆ ಸೇತುವೆ ಬಂದ್ಗೆ ಆದೇಶ:
ಉಪ್ಪಿನಂಗಡಿಯ ಕುಮಾರಧಾರ ನದಿಯಲ್ಲಿರುವ ಹಳೆಯ ಸೇತುವೆಯಲ್ಲಿ ಸಂಚಾರ ನಿಷೇಧಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿದ ಶಾಸಕರು, ಸೇತುವೆ ಹಳೆಯದಾಗಿರುವ ಕಾರಣ ಅದರ ಮೇಲೆ ವಾಹನ ಸಂಚಾರವಾದರೆ ಅಪಾಯ ಉಂಟಾಗುವ ಸಂಭವ ಇದೆ. ಮಕ್ಕಳು ನಡೆದುಕೊಂಡು ಹೋಗುವುದು ಕೂಡಾ ಅಪಾಯವೇ. ಆದ್ದರಿಂದ ಮಳೆಗಾಲದ ಸಮಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಸೇತುವೆಯನ್ನು ಬಂದ್ ಎಂದು ಆದೇಶಿಸಿದರು.
ಇಂದೇ ಅಂಗನವಾಡಿಯ ಕೀ ನೀಡಿ:
ಶಾಸಕರ ಅನುದಾನ ಹಾಗೂ ಗ್ರಾ.ಪಂ.ನ ಉದ್ಯೋಗ ಖಾತ್ರಿ ಯೋಜನೆಯಡಿ ಹಿರೇಬಂಡಾಡಿ ಗ್ರಾಮದ ಪಾಲೆತ್ತಡಿಯಲ್ಲಿ ನೂತನ ಅಂಗನವಾಡಿ ಕಟ್ಟಡವೊಂದು ನಿರ್ಮಾಣವಾಗಿದೆ. ಆದರೆ ಅದರ ಉದ್ಘಾಟನೆ ಇನ್ನೂ ಆಗಿಲ್ಲ. ಅಂಗನವಾಡಿ ಹಳೆಯ ಕಟ್ಟಡದಲ್ಲೇ ನಡೆಯುತ್ತಿದೆ. ಈ ಕಟ್ಟಡ ಸಂಪೂರ್ಣ ನಾದುರಸ್ತಿ ಹೊಂದಿದ್ದು, ಕಟ್ಟಡ ಕುಸಿಯುವ ಭೀತಿಯಿದೆ ಎಂದು ಸಾರ್ವಜನಿಕರೋರ್ವರು ಪ್ರಸ್ತಾಪಿಸಿದಾಗ ಈ ಬಗ್ಗೆ ಶಾಸಕರು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸಿಡಿಪಿಒ ಅವರಲ್ಲಿ ವಿಚಾರಿಸಿದರು. ಆಗ ಉತ್ತರ ನೀಡಿದ ಅಂಗನವಾಡಿ ಮೇಲ್ವೀಚಾರಕಿಯವರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಹಣ ಬಂದಿಲ್ಲ ಎಂದು ಗ್ರಾ.ಪಂ.ನವರು ಈ ಕಟ್ಟಡದ ಉದ್ಘಾಟನೆಗೆ ಒಪ್ಪುತ್ತಿಲ್ಲ. ಅಂಗನವಾಡಿಯ ಕೀ ಕೂಡಾ ಕೊಡುತ್ತಿಲ್ಲ ಎಂದರು. ಈ ಸಂದರ್ಭ ಗರಂ ಆದ ಶಾಸಕರು, ಹಿರೇಬಂಡಾಡಿ ಗ್ರಾ.ಪಂ. ಕಾರ್ಯದರ್ಶಿಯನ್ನು ಈ ಬಗ್ಗೆ ಪ್ರಶ್ನಿಸಿದರಲ್ಲದೆ, ಪಿಡಿಒ ಅವರನ್ನು ತೀವೃವಾಗಿ ತರಾಟೆಗೆ ತೆಗೆದುಕೊಂಡರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರಲ್ಲಿ ಕೆಲವು ಗ್ರಾ.ಪಂ. ಪಿಡಿಒಗಳು ಕಾನೂನಿನ ಸರಿಯಾದ ಅರಿವಿಲ್ಲದಿದ್ದರೂ ತಾವು ಐಎಎಸ್ ಆಫೀಸರ್ಗಳಂತೆ ವರ್ತಿಸುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಏನ್ರೀ ಇಒ ಅವರೇ ಅಂತವರನ್ನು ಮೊದಲು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ. ಇಲ್ಲದಿದ್ದಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಅಂಗನವಾಡಿ ಕೀ ಇಟ್ಟುಕೊಳ್ಳಲು ಪಿಡಿಒ ಅವರು ಅವರ ಮನೆಯಿಂದ ದುಡ್ಡು ತಂದು ಅಂಗನವಾಡಿ ಕಟ್ಟಿದ್ದ ಎಂದು ಗರಂ ಆಗಿಯೇ ಪ್ರಶ್ನಿಸಿದರಲ್ಲದೆ, ಇಂದೇ ಅಂಗನವಾಡಿಯ ಕೀ ನೀಡುವಂತೆ ಗ್ರಾ.ಪಂ. ಕಾರ್ಯದರ್ಶಿಗೆ ಸೂಚಿಸಿದ ಶಾಸಕರು, ಸಿಡಿಪಿಒ ಅವರಿಗೆ ನೀವು ಅವರಲ್ಲಿವರಲ್ಲಿ ಕೇಳಬೇಡಿ. ಹೊಸ ಕಟ್ಟಡಕ್ಕೆ ಅಂಗನವಾಡಿ ಸ್ಥಳಾಂತರಿಸಿ ಎಂದರು.
ಸಂಜೆಯೊಳಗೆ ನೀರು ಕೊಡಿ:
ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕೊಳವೆ ಬಾವಿ ಹಾಳಾಗಿದ್ದು, ಅದರ ನೀರು ಕೂಡಾ ಕುಡಿಯಲು ಯೋಗ್ಯವಿಲ್ಲ. ನಮಗೆ ನೀರು ಕೊಡಲು ಗ್ರಾ.ಪಂ.ಗೆ ಮನವಿ ಮಾಡಿದಾಗ ನೀಡಿ ಅದಕ್ಕೆ ಡೆಪೋಸಿಟ್ ಕಟ್ಟಬೇಕು. ಮೀಟರ್ ಹಾಕಬೇಕು ಎಂದು ಹೇಳುತ್ತಾರೆ ಎಂದು ಕಲಂದರ್ ಶಾಫಿ ಆರೋಪಿಸಿದರು. ಈ ಸಂದರ್ಭವೂ ಗರಂ ಆದ ಶಾಸಕರು ಈ ಬಗ್ಗೆ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಅವರನ್ನು ವಿಚಾರಿಸಿದರು. ಆಗ ಪಿಡಿಒ ಅವರು ಅಲ್ಲಿ 1400 ಮಕ್ಕಳಿದ್ದಾರೆ. ಅಲ್ಲಿಗೆ ನೀರು ಕೊಟ್ಟಾಗ ನಮಗೆ ಜನರಿಗೆ ಕುಡಿಯಲು ನೀರು ಕೊಡಲು ಸಮಸ್ಯೆಯಾಗುತ್ತದೆ ಎಂದರು. ಇದನ್ನು ಕೇಳಿ ಕೆಂಡಾಮಂಡಲವಾದ ಶಾಸಕರು, ನೀರಿಲ್ಲದಿದ್ದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಏನು ಮಾಡಬೇಕು. ಈ ಬಗ್ಗೆ ಯಾವ ಮೀಟಿಂಗ್ ಬೇಡ. ಸಂಜೆಯೊಳಗೆ ಅಲ್ಲಿಗೆ ನೀರಿನ ಸಂಪರ್ಕ ನೀಡಬೇಕು ಎಂದು ಸೂಚಿಸಿದರು.
ಬೀಳುವ ಸ್ಥಿತಿಯಲ್ಲಿರುವ ಅಂಗನವಾಡಿಗಳ ಲೀಸ್ಟ್ ಕೊಡಿ:
ತಾಲೂಕಿನಲ್ಲಿ ಏಳು ಅಂಗನವಾಡಿಗಳು ನಾದುರಸ್ತಿಯಲ್ಲಿದೆ ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸಿಡಿಪಿಒ ಅವರು ಸಭೆಗೆ ಮಾಹಿತಿ ನೀಡಿದಾಗ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ಕುಮಾರ್ ರೈಯವರು, ಅಂಗನವಾಡಿಗಳು ನಾದುರಸ್ತಿಯಲ್ಲಿರುವ ಬಗ್ಗೆ ನಿಮ್ಮ ನಿಮ್ಮಲ್ಲೇ ಮಾತನಾಡಿಕೊಂಡರೆ ಏನು ಪ್ರಯೋಜನವಿಲ್ಲ. ಯಾವುದೆಲ್ಲಾ ಅಂಗನವಾಡಿ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿದೆ ಎಂಬುದನ್ನು ನನ್ನ ಗಮನಕ್ಕೆ ತನ್ನಿ. ಅದಕ್ಕೆ ಅನುದಾನ ತಂದು ಹೊಸ ಅಂಗನವಾಡಿ ಕಟ್ಟಡವನ್ನು ನಿರ್ಮಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದರು.
ಅಪಾಯವುಂಟಾದರೆ ಯಾರು ಹೊಣೆ?:
ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡುತ್ತಿದ್ದಂತೆ ಮಾತನಾಡಿದ ಗ್ರಾಮಸ್ಥರು ಉಪ್ಪಿನಂಗಡಿ ಮಾದರಿ ಶಾಲಾ ಬಳಿಯಲ್ಲಿ ಒಣಗಿದ ಮರವೊಂದು ವಾಲಿಕೊಂಡು ಇದ್ದು, ಅಪಾಯದ ಸ್ಥಿತಿಯಲ್ಲಿದೆ, ಶಾಲಾ ಮಕ್ಕಳು ಆತಂಕದಿಂದಲೇ ಇದರ ಮುಂದೆ ನಡೆದು ಹೋಗುತ್ತಿದ್ದಾರೆ. ಕಳೆದ ವರ್ಷದ ಸಭೆಯಲ್ಲಿ ಅದರ ತೆರವಿಗೆ ಮನವಿ ಸಲ್ಲಿಸಿದ್ದು, ಆ ಸಂದರ್ಭದಲ್ಲಿ ಸಭೆಯಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗೆ ಸೂಚನೆ ನೀಡಲಾಗಿತ್ತು. ಆದರೆ ತೆರವು ಆಗಿಲ್ಲ ಎಂದು ಸಭೆಯ ಗಮನ ಸೆಳೆದರು. ಅದೇ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಕೂಟೇಲ್ ದರ್ಗಾದ ಬಳಿ ಮತ್ತು ಬೆದ್ರೋಡಿಯಲ್ಲಿ ಭಾರೀ ಗಾತ್ರದ ಮರಗಳು ರಸ್ತೆಗೆ ಬೀಳುವ ಸ್ಥಿತಿಯಲ್ಲಿ ವಾಲಿಕೊಂಡು ಇದೆ. ರಸ್ತೆಯಲ್ಲಿ ವಾಹನದ ಮೇಲೆ ಬಿದ್ದರೆ ಪ್ರಾಣಾಪಾಯದ ಆತಂಕ ಇದೆ. ಆದ ಕಾರಣ ಇವುಗಳನ್ನು ತೆರವು ಮಾಡಬೇಕು ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. ಆಗ ಶಾಸಕರು ವಲಯ ಅರಣ್ಯಾಧಿಕಾರಿಯನ್ನು ಉದ್ದೇಶಿಸಿ ಯಾಕೆ ಹೀಗೆ ಮಾಡುತ್ತೀರಿ, ಸಮಸ್ಯೆಗಳನ್ನು ಹಾಗೇ ಉಳಿಸಿಕೊಳ್ಳುತ್ತೀರಿ. ಅಪಾಯ ಉಂಟಾಗಿ ಜೀವ ಹಾನಿಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಅದಕ್ಕೆ ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಹಾಗೂ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಬೋಷನರಿ ಎ.ಸಿ.ಎಫ್. ಹಸ್ತ ಅವರು ಅಪಾಯಕಾರಿ ಮರಗಳನ್ನು ತೆರವು ಮಾಡುವುದಕ್ಕೆ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಚರಂಡಿ ಸರಿಪಡಿಸಲು ಸೂಚನೆ:
ಈ ಹಿಂದೆ ಪೇಟೆಯಿಂದ ರಾಜಕಾಲುವೆ ಮೂಲಕ ಮತ್ತು ಸೂರಪ್ಪ ಕಂಪೌಂಡ್ ಕಡೆಯಿಂದ ಬರುವ ತೋಡಿನ ನೀರು ಹರಿದು ಬಂದು ನದಿ ಸೇರುವಂತಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಮೋರಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ. ಒಂದೆಡೆ ನಿಲ್ಲುವಂತಾಗಿದೆ. ಮುಂದೆ ಮಳೆಗಾಲದಲ್ಲಿ ಇಲ್ಲಿಯ ನೀರು ಪೇಟೆಯ ಒಳಗಡೆ ನುಗ್ಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಸಭೆಯಲ್ಲಿ ತಿಳಿಸಿದರು. ಆಗ ಹೆದ್ದಾರಿ ಎಂಜಿನಿಯರ್ ಪ್ರತಿಕ್ರಿಯಿಸಿ ತೋಡಿನಲ್ಲಿ ಕಸಕಡ್ಡಿ ಬಂದು ಹೀಗಾಗಿದೆ ಎಂದು ಸಮಜಾಯಿಸಿ ನೀಡಿದರು. ಆಗ ಗ್ರಾಮಸ್ಥರು ಮತ್ತೆ ಪ್ರತಿಕ್ರಿಯಿಸಿ “ಹೆದ್ದಾರಿ ಇಲಾಖೆಯವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹೆದ್ದಾರಿಯವರು ನಿರ್ಮಿಸಿರುವ ಚರಂಡಿಯು ಈ ರಾಜಕಾಲುವೆಯಿಂದ ಎತ್ತರದಲ್ಲಿರುವುದರಿಂದ ರಾಜಕಾಲುವೆಯ ನೀರು ಈ ಮುಂದಕ್ಕೆ ಹರಿಲಾಗದೇ ಹೀಗಾಗಿದೆ ಎಂದರು. ಆಗ ಶಾಸಕರು ಎಂಜಿನಿಯರ್ರವರನ್ನು ಮಾತಿಗೆ ಎಳೆದು ‘ಶೀಘ್ರ ಈ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದರು. ಆಗ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸರಿಪಡಿಸಿಕೊಡುವುದಾಗಿ ತಿಳಿಸಿದರು.
ದೋಷಾರೋಪಣೆ ಮಾಡಿ ತಾನೇ ಸಿಕ್ಕಿಬಿದ್ದ:
ಸಭೆ ನಡೆಯುತ್ತಿದ್ದಂತೆಯೇ ದ್ವನಿವರ್ಧಕವನ್ನು ಕೈಗೆತ್ತಿಕೊಮ್ಡ ಕೆಂಪಿ ಮಜಲು ನಿವಾಸಿಯೋರ್ವರು ಪಂಚಾಯತ್ ಆಡಳಿತವನ್ನು ಮನಸೋ ಇಚ್ಚೆ ನಿಂದಿಸಿ , ಶಾಸಕರನ್ನು ಮೆಚ್ಚಿಸಲು ಯತ್ನಿಸಿದರು. ಸಾಲದೆಂಬಂತೆ ಹಲವು ವರ್ಷಗಳಿಂದ ಪೇಟೆಯ ತ್ಯಾಜ್ಯ ನದಿಗೆ ಹರಿದು ಬಿಡಲಾಗುತ್ತಿದೆ . ಇದನ್ನು ತಡೆಗಟ್ಟಲು ಹಲವು ಸಭೆಗಳಲ್ಲಿ ನಿರ್ಣಯ ಕೈಗೊಂಡಿದ್ದರೂ ಒಂದು ಹನಿ ತ್ಯಾಜ್ಯ ನದಿ ಸೇರುವುದನ್ನು ತಡೆಯಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ರವರು , ದೂರು ನೀಡಿದ ವ್ಯಕ್ತಿಯ ಮನೆಯ ತ್ಯಾಜ್ಯವೂ ನದಿ ಸೇರುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಿಂದಲಾದರೂ ಇಂಗು ಗುಂಡಿ ರಚಿಸಿ ಎಂದು ವಿನಂತಿಸಿದರೂ ಸ್ಪಂದಿಸಿಲ್ಲ ಎಂದಾಗ ಶಾಸಕರು ಆಕ್ರೋಶಗೊಂಡು ನಾಗರಿಕರು ತಮ್ಮ ಕರ್ತವ್ಯವನ್ನು ಮೊದಲು ನಿರ್ವಹಿಸಬೇಕು ಎಂದರು.
ತಡೆಗೋಡೆ ಬಿರುಕು ಗಂಭೀರವಾಗಿ ಪರಿಗಣಿಸಿ:
ಉಪ್ಪಿನಂಗಡಿಯ ಶಾಲಾ ರಸ್ತೆಯಲ್ಲಿ ಹೆದ್ದಾರಿ ವಿಸ್ತರಣೆಯ ಕಾಮಗಾರಿಯ ವೇಳೆ ನಿರ್ಮಿಸಲಾದ ಬಲು ಎತ್ತರವಾದ ತಡೆಗೋಡೆಯಲ್ಲಿ ಬಿರುಕು ಕಾಣಿಸಿರುವುದನ್ನು ವಿಡಿಯೋ ದೃಶ್ಯಾವಳಿಯಲ್ಲಿ ಕಂಡ ಶಾಸಕರು ಈ ಬಗ್ಗೆ ಹೆದ್ದಾರಿ ಇಲಾಖಾಧಿಕಾರಿಗಳಿಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ನಿರ್ದೇಶಿಸಿದರು.
ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ಪುತ್ತೂರು ನಗರ ಸಭೆಯ ಮುಖ್ಯಾಧಿಕಾರಿ ಮಧು ಎಸ್. ಮನೋಹರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಶಿಕ್ಷಣ ಇಲಾಖೆಯ ಲೋಕೇಶ್, ಲೋಕೋಪಯೋಗಿ ಇಲಾಖೆಯ ರಾಜೇಶ್ ರೈ, ಮೆಸ್ಕಾಂ ಇಲಾಖೆಯ ಶಿವಶಂಕರ್, ಅರಣ್ಯ ಇಲಾಖೆಯ ಕಿರಣ್, ಹಸ್ತ, ಪಶು ಸಂಗೋಪನಾ ಇಲಾಖೆಯ ಡಾ. ಧರ್ಮಪಾಲ, ಆರೋಗ್ಯ ಇಲಾಖೆಯ ಡಾ. ದೀಪಕ್ ರೈ ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ, ಉಪಾಧ್ಯಕ್ಷೆ ಶ್ರೀಮತಿ ವಿದ್ಯಾಲಕ್ಷ್ಮೀ ಪ್ರಭು, ೩೪ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಕ್ ಉಪಸ್ಥಿತರಿದ್ದರು.
ಸಭೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಸಮಿತಿ ಸದಸ್ಯರಾದ ಕೃಷ್ಣ ರಾವ್ ಅರ್ತಿಲ, ದೇವದಾಸ ರೈ, ವೆಂಕಪ್ಪ ಪೂಜಾರಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಯು.ಟಿ. ತೌಸೀಫ್, ಅಬ್ದುರ್ರಹ್ಮಾನ್ ಕೆ. ಸಣ್ಣಣ್ಣ, ಧನಂಜಯ ನಟ್ಟಿಬೈಲು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ಪ್ರಮುಖರಾದ ಡಾ. ರಾಜಾರಾಂ ಕೆ.ಬಿ., ಆದಂ ಕೊಪ್ಪಳ, ಕೈಲಾರ್ ರಾಜ್ಗೋಪಾಲ್ ಭಟ್, ಪ್ರಶಾಂತ್ ಡಿಕೋಸ್ತ, ಅಬ್ದುಲ್ ರಹಿಮಾನ್ ಯುನಿಕ್, ಮುಹಮ್ಮದ್ ಕೆಂಪಿ, ಅನಿ ಮಿನೇಜಸ್, ಜಯಪ್ರಕಾಶ್ ಬದಿನಾರು, ಯು.ಟಿ. ಇರ್ಷಾದ್, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದು, ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.
ಹಿರೇಬಂಡಾಡಿ ಗ್ರಾಮ ಆಡಳಿತಾಧಿಕಾರಿ ನರಿಯಪ್ಪ ಸ್ವಾಗತಿಸಿ, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ವಂದಿಸಿದರು.

ಅಧಿಕಾರಿಗಳು ತಕ್ಷಣ ಕಾರ್ಯೋನ್ಮುಖರಾಗಿ: ಅಶೋಕ್ ಕುಮಾರ್ ರೈ
ನಿರೀಕ್ಷೆಗಿಂತ ಮೊದಲೇ ಮಳೆಗಾಲ ಪ್ರಾರಂಭವಾದ ಕಾರಣಕ್ಕೆ ಹಲವಾರು ಇಲಾಖೆಗಳಲ್ಲಿ ಪೂರ್ವ ಸಿದ್ದತೆ ಆಗದೇ ಇರುವುದರಿಂದ ಈ ಬಾರಿ ಎಲ್ಲೆಡೆ ಸಮಸ್ಯೆ ಕಾಣಿಸಿದೆ. ಆದಾಗ್ಯೂ ಗ್ರಾಮ ಮಟ್ಟದಲ್ಲಿ ಪಿಡಿಒರವರ ನೇತೃತ್ವದಲ್ಲಿ ಸಂಕಷ್ಠಕ್ಕೆ ಸ್ಪಂದಿಸುವ ತಂಡವನ್ನು ರಚಿಸಲಾಗಿದೆ. ರಸ್ತೆ ಡಾಮರೀಕರಣ , ಕಾಂಕ್ರೀಟೀಕರಣ ಕಾಮಗಾರಿ ಮಳೆಯಿಂದಾಗಿ ಎಲ್ಲೆಡೆ ಅಪೂರ್ಣವಾಗಿದೆ. ಗಾಳಿ ಮಳೆಗೆ ಸಿಲುಕಿ ಮೆಸ್ಕಾಂ ಇಲಾಖೆ ಭಾರೀ ಹಾನಿಗೆ ತುತ್ತಾಗಿದ್ದು, ಸೇವೆಯಲ್ಲಿ ವ್ಯತ್ಯಯವುಂಟಾಗಿದೆ. ಪುತ್ತೂರು ತಾಲೂಕುವೊಂದರಲ್ಲೇ ಮೆಸ್ಕಾಂ 237 ವಿದ್ಯುತ್ ಕಂಬಗಳನ್ನು ಹಾಗೂ 15 ಪರಿವರ್ತಕಗಳನ್ನು ಕಳೆದುಕೊಂಡಿದೆ. ಅಪಾಯಕಾರಿ ಮರಗಳ ಬಗ್ಗೆ ಅರಣ್ಯ ಇಲಾಖೆ ನಿಗಾವಿರಿಸಬೇಕು. ಶಾಲಾ ಕಾಲೇಜು ಮತ್ತು ಅಂಗನವಾಡಿ ಕಟ್ಟಡಗಳ ಶಿಥಿಲತೆಯ ಬಗ್ಗೆ ನಿಗಾವಿರಿಸಬೇಕು. ಖಾಸಗಿ ಭೂಮಿಯಲ್ಲಿರುವ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವರೇ ಮಾತುಕತೆಯ ಮಾರ್ಗೋಪಾಯಗಳನ್ನು ಅನುಸರಿಸಬೇಕು. ಅಗಲೀಕರಣ ಕಾಮಗಾರಿ ನಡೆಯುತ್ತಿರುವ ಹೆದ್ದಾರಿಯ ಬಗ್ಗೆ ಇಲಾಖೆಯು ಹೆಚ್ಚಿನ ನಿಗಾವಿರಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ ಜರುಗಿಸಬೇಕು, ಪ್ರವಾಹದಂತಹ ವಿಕೋಪದ ಸಮಯದಲ್ಲಿ ಎನ್ ಡಿ ಆರ್ ಎಫ್ ತಂಡದೊಂದಿಗೆ ಸ್ಥಳೀಯ ಗೃಹರಕ್ಷಕ ದಳ ಮತ್ತು ಈಜುಪಟುಗಳ ಸಹಕಾರ ಪಡೆಯಬೇಕು. ಮಳೆಗಾಲದ ದಿನಗಳಲ್ಲಿ ಎದುರಾಗುವ ಸಮಸ್ಯೆಗಳು, ಅಪಾಯಗಳನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ತಕ್ಷಣ ಕಾರ್ಯೋನ್ಮುಖರಾಗಬೇಕು. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ೨೪\೭ನಂತೆ ಕೆಲಸ ಮಾಡುವ ಮೂಲಕ ಸಾರ್ವಜನಿಕರ ನೆರವಿಗೆ ತಕ್ಷಣ ಧಾವಿಸಿ ಬರಬೇಕು ಎಂಬಿತ್ಯಾದಿ ಸಲಹೆಗಳನ್ನು ಶಾಸಕ ಅಶೋಕ್ ಕುಮಾರ್ ರೈ ನೀಡಿದರು.
ಅಧಿಕಾರಿಗಳಿಗೆ ಎಸಿ ಖಡಕ್ ಪಾಠ
ಮಠದಲ್ಲಿ ವಿದ್ಯುತ್ ತಂತಿಗಳು ತುಂಬಾ ಹಳೆಯದಾಗಿದ್ದು, ಇದು ಆಗಾಗ ತುಂಡಾಗಿ ಬೀಳುತ್ತಿದೆ. ಈ ಬಗ್ಗೆ ನಾವು ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ, ಯಾವುದೇ ಸ್ಪಂದನೆ ಇಲ್ಲ ಎಂದು ಗ್ರಾ.ಪಂ. ಸದಸ್ಯ ಅಬ್ದುರ್ರಝಾಕ್ ಆರೋಪಿಸಿದರು. ತಕ್ಷಣವೇ ಈ ಬಗ್ಗೆ ನಿಮ್ಮ ಗಮನಕ್ಕೆ ಬಂದಿದೆಯಲ್ಲವೇ? ಏನು ಕ್ರಮ ಕೈಗೊಂಡಿದ್ದೀರಿ ಎಂದು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಅವರನ್ನು ಸಂಪರ್ಕಿಸಿದರು. ಅದಕ್ಕೆ ಪಿಡಿಒ ಅವರು ನಾನು ಇದನ್ನು ಮೆಸ್ಕಾಂನವರ ಗಮನಕ್ಕೆ ತಂದಿದ್ದೇನೆ ಎಂದಾಗ ಕೋಪಗೊಂಡ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಏನು ಕ್ರಮವಾಗಿದೆ ಎಂದು ತಿಳಿದುಕೊಂಡಿದ್ದೀರಾ? ಅಧಿಕಾರಿಗಳು ಕೇವಲ ಇಲಾಖೆಯಿಂದ ಇಲಾಖೆಗೆ ಪತ್ರ ವ್ಯವಹಾರ ಮಾಡಿ ಸುಮ್ಮನೇ ಕೂರುವುದಲ್ಲ. ಸಾರ್ವಜನಿಕರ ದೂರಿಗೆ ಸಂಬಂಧಿಸಿ ನಿಗಾ ಇಟ್ಟು ಅದಕ್ಕೆ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಟಾಸ್ಕ್ಪೋರ್ಸು ಸಮಿತಿಯನ್ನು ರಚಿಸಲಾಗಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅದನ್ನು ನಿರ್ವಹಣೆ ಮಾಡಬೇಕು, ಪಂಚಾಯತ್ ವ್ಯಾಪ್ತಿಯಲ್ಲಿ ಏನೇ ಸಮಸ್ಯೆ ಎದುರಾದರೂ ತಕ್ಷಣ ಸ್ಪಂದಿಸಬೇಕು. ಸ್ಥಳೀಯ ಅಧಿಕಾರಿಗಳಿಂದ ಪೂರಕ ಸಹಕಾರ ಸಿಗದೇ ಇದ್ದಲ್ಲಿ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ದೂರಿಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿ ಸ್ಪಂದಿಸದಿದ್ದಲ್ಲಿ ನನ್ನ ಗಮನಕ್ಕೆ ತರಬೇಕು ಎಂದು ಪಿಡಿಒ ಗಳಿಗೆ ಖಡಕ್ ಸೂಚನೆ ನೀಡಿದರು.