ಕಾಣಿಯೂರು: ರಾಜ್ಯ ಹೆದ್ದಾರಿಯ ಬದಿಯಲ್ಲಿಯೇ ಅಪಾಯಕಾರಿ ಮರಗಳು

0

ಅಪಾಯ ಸೃಷ್ಟಿಸುತ್ತಿದೆ ರಸ್ತೆಗೆ ವಾಲಿಕೊಂಡಿರುವ ಬೃಹತ್ ಗಾತ್ರದ ಮರಗಳು
ವಿದ್ಯುತ್ ಕಂಬಗಳಿಗೂ ಹಾನಿ- ವಾಹನ ಸಂಚಾರಕ್ಕೂ ಭಯ
ಅಪಾಯ ಸಂಭವಿಸುವ ಮೊದಲು ಮರ ತೆರವಿಗೆ ಆಗ್ರಹ

ವರದಿ : ✍️ ಸುಧಾಕರ್ ಕಾಣಿಯೂರು

ಕಾಣಿಯೂರು: ರಾಜ್ಯ ಹೆದ್ದಾರಿ ಸಂಪರ್ಕಿಸುವ ಪುತ್ತೂರು- ಕಾಣಿಯೂರು- ಸುಬ್ರಹ್ಮಣ್ಯ ಮಾರ್ಗದಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗೆ ವಾಲಿ ಕೊಂಡಿದ್ದು, ಬೀಳುವ ಹಂತದಲ್ಲಿವೆ. ಈ ಮಾರ್ಗದ ರಸ್ತೆಯಲ್ಲಿ ದಿನನಿತ್ಯವೂ ಸಾವಿರಾರು ದ್ವಿಚಕ್ರ ವಾಹನ ಸವಾರರು, ಬಸ್‌, ಕಾರುಗಳು ಸಂಚರಿಸುತ್ತವೆ. ಇದರಿಂದ ವಾಹನ ಸವಾರರು ಭಯದಲ್ಲೇ ಸಂಚರಿಸುತ್ತಿದ್ದು, ಗಾಳಿ ಮಳೆಗೆ ಎಲ್ಲಿ ಮರಗಳು ಬಿದ್ದು ಅಪಾಯ ಸಂಭವಿಸುತ್ತದೆ ಅನ್ನೋ ಆತಂಕದಲ್ಲಿದ್ದಾರೆ. ಈ ಮಾರ್ಗದಲ್ಲಿ ಮಾತ್ರವಲ್ಲದೇ ಇಡೀ ಜಿಲ್ಲೆಯ‌ಲ್ಲಿ ಈ ರೀತಿ ರಸ್ತೆಗಳ ಪಕ್ಕದಲ್ಲಿ ಮರಗಳು ರಸ್ತೆಗೆ ವಾಲಿಕೊಂಡಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿವೆ. ಅಪಾಯಕಾರಿ ಮರ ತೆರವು ಕುರಿತು ಪ್ರತಿ ಗ್ರಾಮ ಸಭೆಗಳಲ್ಲಿ ಚರ್ಚೆ ನಡೆದರೂ ಸಂಬಂಧಪಟ್ಟ ಇಲಾಖೆ ಮಾತ್ರ ಮರಗಳನ್ನು ತೆರವುಗೊಳಿಸಲು ಹಿಂದೇಟು ಹಾಕುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಅಪಾಯಕಾರಿ ಮರಗಳು

ಮರದ ಕೆಳಭಾಗದಲ್ಲಿಯೇ ವಿದ್ಯುತ್‌ ತಂತಿಗಳು ಹಾದು ಹೋಗಿವೆ. ಮರ ಬಿದ್ದಲ್ಲಿ ವಿದ್ಯುತ್‌ ತಂತಿಗಳ ಮೇಲೆಯೇ ಬೀಳುತ್ತದೆ. ಇದರಿಂದ ನೂರಾರು ಮನೆಯ ವಿದ್ಯುತ್‌ ಸಂಪರ್ಕ ಸಹ ಕಡಿತಗೊಳ್ಳಬಹುದಾಗಿದೆ. ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಮರ ತೆರವು ಕಾರ್ಯಾಚರಣೆಗೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಮಳೆ– ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಸಾಕಷ್ಟು ಅನಾಹುತ ಸೃಷ್ಟಿಸುತ್ತವೆ. ವಾಹನಗಳ ಮೇಲೆ ಬಿದ್ದು ಅಪಾರ ನಷ್ಟ ಉಂಟುಮಾಡುತ್ತವೆ. ಸಂಚರಿಸುವ ವಾಹನಗಳ ಮೇಲೆ ಮರ ಬಿದ್ದ ಘಟನೆಯು ನಡೆದಿದೆ. ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ಕಿತ್ತುಬಿದ್ದು, ಕಂಬಗಳು ನೆಲಕ್ಕುರುಳಿ ಹಾನಿಯುಂಟಾದ ಘಟನೆಯು ನಡೆದಿದೆ.

ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು

ಪ್ರತಿ ವರ್ಷವೂ ಹಲವಾರು ಮರಗಳು ಧರಾಶಾಹಿಯಾಗುತ್ತವೆ. ವಿದ್ಯುತ್ ಲೈನ್ ಮೇಲೆ ಮರ ಬಿದ್ದರಂತೂ ಅನಾಹುತ ಇನ್ನೂ ಹೆಚ್ಚು. ಇಂತಹ ಘಟನೆಗಳು ಪ್ರತಿ ವರ್ಷ ಮರುಕಳಿಸುತ್ತಿದ್ದು, ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಮೊದಲೇ ಎಚ್ಚೆತ್ತುಕೊಂಡು ಅಪಾಯಕಾರಿ ಮರಗಳ ತೆರವಿಗೆ ಮುಂದಾಗಬೇಕು, ಮರ ತೆರವಿಗೆ ಅರಣ್ಯ ಇಲಾಖೆಯೂ ತ್ವರಿತಗತಿಯಲ್ಲಿ ಅನುಮತಿ ನೀಡುವಂತಾಗಬೇಕು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಮೇಲಾಧಿಕಾರಿಗಳು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು

ಕೆಲವೊಂದು ಪ್ರದೇಶದಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ಬೃಹತ್ ಗಾತ್ರದ ಮರಗಳ ಕೊಂಬೆಗಳು ರಸ್ತೆಗೆ ಬಾಗಿಕೊಂಡಿರುತ್ತದೆ ಮತ್ತು ಕೆಲವೊಂದು ಕಡೆಗಳಲ್ಲಿ ವಿದ್ಯುತ್ ಕಂಬಗಳನ್ನು ಅವೈಜ್ಞಾನಿಕವಾಗಿ ರಸ್ತೆಯ ಬದಿಗಳಲ್ಲಿ ಹಾಕಿರುತ್ತಾರೆ. ಮಾತ್ರವಲ್ಲದೇ ರಸ್ತೆಗಳ ಇಕ್ಕೆಲಗಳಲ್ಲಿ ರಸ್ತೆಗೆ ಹತ್ತಿರವಾಗಿ ಪೈಪ್ ಲೈನ್ ಗಳಿಗೋಸ್ಕರ ಮಣ್ಣನ್ನು ಅಗೆಯುವುದರಿಂದ ಮಳೆಗಾಲದ ಸಮಯದಲ್ಲಿ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿ ಪ್ರಾಣ ಹಾನಿಯಾಗುವ ಸಂಭವ ಜಾಸ್ತಿ. ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಮರದ ಕೊಂಬೆಗಳನ್ನು ಮತ್ತು ಅಪಾಯಕಾರಿಯಾಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿದರೆ, ಪೈಪ್ ಲೈನ್ ಹಾಕುವಾಗ ನಿರ್ದಿಷ್ಟ ವ್ಯಾಪ್ತಿಗೆ ನಿಗದಿಪಡಿಸಿದರೆ ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯವನ್ನು ತಡೆಯಬಹುದು.

ಸುಬ್ರಹ್ಮಣ್ಯ ಕೆ. ಎಂ. ರಾಷ್ಟ್ರೀಯ ಕ್ರೀಡಾಪಟು, ಅಧ್ಯಕ್ಷರು, ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ (ರಿ.) ಕಲ್ಪಡ, ಕೊಡಿಯಾಲ.

LEAVE A REPLY

Please enter your comment!
Please enter your name here