ಬೊಳುವಾರಿನಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಜಾಗದ ಒತ್ತುವರಿ- ಶಾಸಕರಿಂದ ಪರಿಶೀಲನೆ: ಒತ್ತುವರಿ ತೆರವಿಗೆ ಸೂಚನೆ

0

ದೇವಸ್ಥಾನದ ಜಾಗವನ್ನು ದೇವಸ್ಥಾನಕ್ಕೆ ಹಿಂಪಡೆಯಲಿದ್ದೇವೆ-ಅಶೋಕ್ ಕುಮಾರ್ ರೈ

ಪುತ್ತೂರು: ರಾಜ್ಯದ ನಂ.1 ದೇವಸ್ಥಾನವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಬೊಳುವಾರಿನಲ್ಲಿರುವ ಜಾಗ ಒತ್ತುವರಿಯಾಗಿರುವುದನ್ನು ಮೇ.28ರಂದು ಸಂಜೆ ಪರಿಶೀಲನೆ ನಡೆಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಒತ್ತುವರಿ ತೆರವುಗೊಳಿಸುವಂತೆ ಒತ್ತುವರಿದಾರರಿಗೆ ಸೂಚನೆ ನೀಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯಡಿ ಇರುವ ದೇವಸ್ಥಾನದ ಜಾಗಗಳು ಒತ್ತುವರಿಯಾಗಿದ್ದರೆ ಅದರ ತೆರವುಗೊಳಿಸಲು ಸರಕಾರದ ಆದೇಶವಿದೆ. ಬೊಳುವಾರಿನಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಅಭಿವೃದ್ಧಿ ಕಾರ್ಯ ನಡೆಸಲು ಮತ್ತು ಮುಂದಿನ ದಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜಾಗವನ್ನು ಪಡೆಯುವ ನಿಟ್ಟಿನಲ್ಲಿ ಶಾಸಕರು ಈ ಪರಿಶೀಲನೆ ನಡೆಸಿದರು. ಅತಿಕ್ರಮಣಗೊಂಡಿರುವ ದೇವಸ್ಥಾನದ ಜಾಗವನ್ನು ತೆರವುಗೊಳಿಸುವಂತೆ ಅಲ್ಲಿ ಮನೆ, ಕಟ್ಟಡ ಮಾಡಿಕೊಂಡವರಿಗೆ ಶಾಸಕರು ಸೂಚನೆ ನೀಡಿದರು.

ಇಲ್ಲಿ ದೇವಸ್ಥಾನದ ಜಾಗದಲ್ಲಿ ಮನೆ ಮಾಡಿಕೊಂಡಿರುವ 6 ಮಂದಿ ಶಾಸಕರಲ್ಲಿ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ಮನವಿ ಮಾಡಿದರು. ಮಹಿಳೆಯೊಬ್ಬರು ಇದೇ ಸ್ಥಳದಿಂದ ನಮ್ಮ ಮನೆಗೆ ರಸ್ತೆ ಕೊಡಿಸುವಂತೆ ಮನವಿ ಮಾಡಿದರು. ಜಾಗದಲ್ಲಿ ಶ್ಯಾಮಲ, ಸುಂದರ ಗೌಡ, ರಮೇಶ್, ಶ್ರೀಧರ್, ಆಲಿಸ್ ಪಿಂಟೊರವರು ಮನೆ ಮಾಡಿ ವಾಸ್ತವ್ಯವಿದ್ದಾರೆ. ವಿ.ಕೆ.ಸ್ಟೀಲ್‌ನ ವಸಂತ ಆಚಾರ್ಯ, ತರಕಾರಿ ಅಂಗಡಿಯ ನಿಜಾರ್ ಅವರು ಅಂಗಡಿ ಕಟ್ಟಡ ಕಟ್ಟಿಕೊಂಡಿದ್ದು ಅವರೆಲ್ಲರೂ ಈಗ ಜಾಗವನ್ನು ತೆರವು ಮಾಡಬೇಕಾಗಿದೆ. ಯಾರ‍್ಯಾರು ಈವರೆಗೆ ದೇವಸ್ಥಾನದ ಜಾಗವನ್ನು ಅನುಭವಿಸಿದ್ದಾರೋ ಅವರು ದೇವಸ್ಥಾನಕ್ಕೆ ಬಿಟ್ಟುಕೊಡಬೇಕು. ಮುಂದೆ ಅವರು ಬೇರೆ ಕಡೆ ನಿವೇಶನಕ್ಕೆ ಅರ್ಜಿ ಹಾಕಬಹುದು. ತಕ್ಷಣ ಬಿಟ್ಟು ಹೋಗಿ ಎಂದು ಹೇಳುವುದಿಲ್ಲ. ಆದರೆ ನಾಲ್ಕು ತಿಂಗಳು ಕಾಲಾವಕಾಶ ಕೊಡುತ್ತೇವೆ ಎಂದು ಶಾಸಕರು ಅವರಿಗೆ ತಿಳಿಸಿದ್ದಾರೆ.

ಬೇರೆ ವ್ಯವಸ್ಥೆ ಕಲ್ಪಿಸಿ: ದೇವಸ್ಥಾನದ ಜಾಗದಲ್ಲಿ ಹಲವು ವರ್ಷಗಳಿಂದ ವಾಸ್ತವ್ಯ ಹೊಂದಿರುವ ಶ್ಯಾಮಲಾ ಎಂಬವರು ಶಾಸಕರಲ್ಲಿ ಬೇರೆ ವ್ಯವಸ್ಥೆಗೆ ಮನವಿ ಮಾಡಿಕೊಂಡರು. ನಾವು ನಿಮಗೆ ಕೊಡಬಾರದು ಎಂದು ಹೇಳುವುದಲ್ಲ. ಆದರೆ ಸರಕಾರದ ಸುತ್ತೋಲೆಯಂತೆ 2 ತಿಂಗಳಲ್ಲಿ ತೆರವು ಮಾಡಬೇಕಾಗುತ್ತದೆ. ನೀವು ಮನೆ ನಿವೇಶನಕ್ಕೆ ಅರ್ಜಿ ಹಾಕಿ. ಬನ್ನೂರು ಪಂಚಾಯತ್ ವ್ಯಾಪ್ತಿಯಲ್ಲಿ ಜಾಗ ಇದೆ. ನನ್ನ ವೈಯುಕ್ತಿಕ ನೆಲೆಯಲ್ಲಿ ಏನಾದರೂ ಸಹಾಯ ಮಾಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ಮಹಾಲಿಂಗೇಶ್ವರ ದೇವರು ಬರಲು ದಾರಿಕೊಡಿಸಿ: ಸುಬ್ರಹ್ಮಣ್ಯ ದೇವಸ್ಥಾನದ ಜಾಗವನ್ನು ಬಳಸಿಕೊಂಡು ಹೋಗುತ್ತಿದ್ದ ಪಕ್ಕದ ಮನೆಯ ಗಣೇಶ್ ಕಾಮತ್ ಎಂಬವರ ಪತ್ನಿ ಅನಿತಾ ಕಾಮತ್ ಅವರು ನಮ್ಮ ಮನೆಯಲ್ಲಿ ಮಹಾಲಿಂಗೇಶ್ವರ ದೇವರ ಕಟ್ಟೆಯಿದೆ. ದೇವರು ಬರುವಷ್ಟು ದಾರಿ ಕೊಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದರು. ಉತ್ತರಿಸಿದ ಶಾಸಕರು ಹತ್ತಿಪ್ಪತ್ತು ಫೀಟ್ ರಸ್ತೆ ಕೊಡಲು ಆಗುವುದಿಲ್ಲ. ಆದರೆ ನಿಮಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ನಮಗೆ ಈ ಜಾಗ ಬಿಟ್ಟುಕೊಡಿ: ಸುಬ್ರಹ್ಮಣ್ಯ ದೇವಸ್ಥಾನದ ಜಾಗದಲ್ಲಿರುವ ಸುಂದರ ಗೌಡ ಅವರ ಮನೆಗೆ ಶಾಸಕರು ತೆರಳಿ ವಿಷಯ ಪ್ರಸ್ತಾಪಿಸಿದಾಗ ಸುಂದರ ಗೌಡ ಅವರು ಹಲವು ಕಡತಗಳನ್ನು ಹಿಡಿದುಕೊಂಡು ಬಂದು ಈ ಜಾಗ ನಮ್ಮ ಹೆಸರಿಗೆ ಭೂನ್ಯಾಯ ಮಂಡಳಿಯಿಂದ (ಟ್ರಿಬ್ಯುನಲ್) ಜಡ್ಜ್‌ಮೆಂಟ್ ಆಗಿದೆ, ಖಾತೆ ಆಗಿದೆ ಎಂದು ಹೇಳಿಕೊಂಡರು. ಶಾಸಕರು ಅವರು ಕೊಟ್ಟ ದಾಖಲೆ ನೋಡಿ ಇದರಲ್ಲಿ ಎಲ್ಲೂ ಜಡ್ಜ್‌ಮೆಂಟ್ ಆಗಿರುವ ಪ್ರಸ್ತಾಪ ಇಲ್ಲ. ಇನ್ನೂ ಕೇಸು ನಡೆಯುತ್ತಿದೆ. ಅದನ್ನೆಲ್ಲ ನೋಡಿಯೇ ನಾನು ಬಂದಿರುವುದು. ಸರಕಾರದ ಆದೇಶದಂತೆ ನೀವು ಜಾಗ ತೆರವು ಮಾಡಬೇಕು. ನೀವು ನಿಮ್ಮ ವಕೀಲರಲ್ಲಿ ಸಲಹೆ ಪಡೆದುಕೊಳ್ಳಿ. ನಾವು ನಿಮಗೆ ಸಮಯ ಕೊಡುತ್ತೇವೆ ಎಂದಾಗ ಸುಂದರ ಗೌಡ ಅವರು ನಾನು ನಿಮ್ಮಲ್ಲಿ ಬೇಡುವುದು ಒಂದೇ, ನಮಗೆ ಈ ಜಾಗ ಬಿಟ್ಟುಕೊಡಿ. ಇಲ್ಲಿ ನಾಗನ ಕಟ್ಟೆ, ರಕ್ತೇಶ್ವರಿ ದೈವ ಇದೆ. ಅದನ್ನು ನಂಬಿಕೊಂಡು ಬರುತ್ತಿದ್ದೇವೆ. ಹಾಗಾಗಿ ದಯಮಾಡಿ ನಮಗೆ ಕೊಡಿಸಿ ಎಂದರು. ಶಾಸಕರು ಉತ್ತರಿಸಿ ನಿಮ್ಮ ಹೆಸರಿನಲ್ಲಿ ಈ ಜಾಗ ಇದ್ದರೆ ಯಾರಿಗೂ ಅದನ್ನು ಮುಟ್ಟಲು ಆಗುವುದಿಲ್ಲ. ಆದರೆ ಇದೀಗ ನಿಮ್ಮ ಹೆಸರಿಗೆ ಇನ್ನೂ ಆಗಿಲ್ಲ. ಹಾಗಾಗಿ ನೀವು ಬಿಟ್ಟುಕೊಡಬೇಕಾಗಿದೆ ಎಂದರು. ಇದೇ ಸಂದರ್ಭ ಇನ್ನೊಂದು ಮನೆಯ ಆಲಿಸ್ ಪಿಂಟೊ ಅವರು ಮನೆ ತೆರವು ಮಾಡಲು ಕಾಲಾವಕಾಶ ಕೇಳಿಕೊಂಡರು. ವಿ.ಕೆ.ಸ್ಟೀಲ್‌ನ ವಸಂತ ಅಚಾರ್ಯ ಅವರಲ್ಲೂ ಶಾಸಕರು ಮಾತನಾಡಿ ವಿಚಾರ ಪ್ರಸ್ತಾಪಿಸಿದರು.

ದೇವಸ್ಥಾನದ ಜಾಗವನ್ನು ದೇವಸ್ಥಾನಕ್ಕೆ ಹಿಂಪಡೆಯಲಿದ್ದೇವೆ: ಧಾರ್ಮಿಕ ದತ್ತಿ ಇಲಾಖೆಯಡಿ ಇರುವ ದೇವಸ್ಥಾನದ ಜಾಗಗಳು ಒತ್ತುವರಿಯಾಗಿದ್ದರೆ ತೆರವುಗೊಳಿಸುವ ಕಾರ್ಯ ಸರಕಾರದ ಆದೇಶದಂತೆ ಮಾಡಲಾಗುತ್ತಿದೆ. ಒತ್ತುವರಿ ಆಗಿದ್ದರೆ ಅವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುತ್ತೇವೆ. ಬೊಳುವಾರಿನಲ್ಲಿ ಸುಬ್ರಹ್ಮಣ್ಯ ದೇವಸ್ಥಾನದ 1 ಎಕ್ರೆ 58 ಸೆಂಟ್ಸ್ ಜಾಗ ಇದೆ. ಅದರಲ್ಲಿ ಒತ್ತುವರಿ ಆಗಿದೆ. ಅದನ್ನು ತೆರವು ಮಾಡುವ ಮೂಲಕ ದೇವಸ್ಥಾನದ ಜಾಗವನ್ನು ದೇವಸ್ಥಾನಕ್ಕೆ ಹಿಂಪಡೆಯಲಿದ್ದೇವೆ. ಜಾಗ ಬಿಟ್ಟವರಿಗೆ ಬೇರೆ ಕಡೆ ನಿವೇಶನ ಕೊಡುವ ಕೆಲಸ ಮಾಡುತ್ತೇವೆ. ಅತಿಕ್ರಮಣಗೊಳಿಸುವವರಿಗೆ ಸರಕಾರದಿಂದ ಯಾವುದೇ ಸೌಲಭ್ಯಕೊಡಲು ಆಗುವುದಿಲ್ಲ. ಆದರೂ ನನ್ನ ವೈಯುಕ್ತಿಕ ನೆಲೆಯಲ್ಲಿ ಸಹಾಯ ಮಾಡುವ ಕೆಲಸ ಮಾಡುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ದೇವಸ್ಥಾನದ ಅನುಮತಿ ಪಡೆದು ಮುಂದಿನ ದಿನ ಬೊಳುವಾರಿನಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಜಾಗವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹಸ್ತಾಂತರ ಮಾಡುವ ಬೇಡಿಕೆಯನ್ನು ಮುಂದಿಟ್ಟು ಸರಕಾರದ ಮೂಲಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪಡೆಯಲಿದ್ದೇವೆ. ಮುಂದಿನ ದಿನ ದೇವಸ್ಥಾನಕ್ಕೆ ಆದಾಯ ಬರುವ ರೀತಿಯಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟುವ ಚಿಂತನೆ ಇದೆ. ಅದೇ ರೀತಿ ಬೊಳುವಾರಿನ ಚತುಷ್ಪಥ ರಸ್ತೆಗೆ ಮತ್ತು ದೇವಸ್ಥಾನಕ್ಕೆ ಬೇಕಾದ ಎಲ್ಲಾ ಜಾಗವನ್ನು ಪಡೆಯಲಿದ್ದೇವೆ ಎಂದರು. ಮೂರು ಮಂದಿ ಏಳೂವರೇ ಸೆಂಟ್ಸ್ ಜಾಗ ಪಡೆದುಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ದೇವಸ್ಥಾನದ ವರ್ಗ ಜಾಗವನ್ನು ಕೊಡಲು ಅವಕಾಶವಿಲ್ಲ. ಇದು ಈಗಲೂ ಭೂನ್ಯಾಯಮಂಡಳಿ ಕೇಸ್‌ನಲ್ಲಿದೆ. ಅಲ್ಲಿರುವ ನಾಗನ ಕಟ್ಟೆಯನ್ನು ತೆರವು ಮಾಡಲಾಗುವುದು. ರಸ್ತೆಗೆ ಬೇಡಿಕೆ ಮನವಿ ಬಂದಿರುವುದನ್ನು ಗಮನಿಸಿದ್ದೇವೆ. ಅದಕ್ಕೆ ಮಾನವೀಯತೆ ನೆಲೆಯಲ್ಲಿ ನೋಡಬಹುದು ಎಂದರು.

ಹಿಂದಿನ ಸರಕಾರ ಒತ್ತು ಕೊಡಲಿಲ್ಲ: ಹಿಂದಿನ ಸರಕಾರ ಈ ಜಾಗದ ಕುರಿತು ಒತ್ತು ಕೊಡುತ್ತಿದ್ದರೆ ಇವತ್ತು ಇಲ್ಲಿ ಮನೆ ಕಟ್ಟಿದವರು ನಿರ್ಗತಿಕರಾಗುವ ಪರಿಸ್ಥಿತಿ ಇರುತ್ತಿರಲಿಲ್ಲ. ಅವರೆಲ್ಲ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು. ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಕಾರ್ಯನಿರ್ವಹಣಾಽಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕೆಪಿಸಿಸಿ ಸದಸ್ಯ ಹೇಮನಾಥ ಶೆಟ್ಟಿ ಕಾವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ನಗರಯೋಜನಾ ಪ್ರಾಽಕಾರದ ಸದಸ್ಯ ನಿಹಾಲ್ ಪಿ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಅಜಿತ್ ರೈ ಹೊಸಮನೆ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸರ್ವೆ ಇಲಾಖೆಯ ನಿಸಾರ್ ಪಾಶ, ಮೋಹನ್, ಕಂದಾಯ ಇಲಾಖೆಯ ಮಹೇಶ್, ಗೋಪಾಲ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಶ್ ರೈ, ಇಂಜಿನಿಯರ್ ತೌಸಿಪ್ ಉಪಸ್ಥಿತರಿದ್ದರು.

ದೇವಸ್ಥಾನಕ್ಕೆ ಆದಾಯ ತರುವ ಕೆಲಸ ಆಗಲಿದೆ
ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡುವ ಮೂಲಕ ತಿಂಗಳಿಗೆ ರೂ.25 ರಿಂದ 30 ಲಕ್ಷ ಆದಾಯ ಬರಬೇಕು. ದೇವಸ್ಥಾನಕ್ಕೆ ಸಂಬಂಧಿಸಿದ ಹೊರಗಿರುವ ಜಾಗದಿಂದ ಮುಂದೆ ಆದಾಯ ಬರಬೇಕು. ಸುಬ್ರಹ್ಮಣ್ಯ, ಧರ್ಮಸ್ಥಳ, ಕೊಲ್ಲೂರು ಮಾದರಿಯಲ್ಲೇ ಇಲ್ಲಿಯೂ ಆಗಬೇಕು. ಬ್ಯಾಂಕ್ ಆ- ಬರೋಡದವರು ಶಾಖೆ ಮಾಡಲು ಎಟಿಎಮ್ ಮಾಡಲು ಜಾಗ ಕೇಳಿದ್ದಾರೆ. ದೇವಸ್ಥಾನಕ್ಕೆ ಆದಾಯ ತರುವ ಕೆಲಸ ಆಗಲಿದೆ.
ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here