- ಸಹಕಾರಿ ವ್ಯವಸ್ಥೆ ಗ್ರಾಮೀಣ ಜನರ ಬದುಕಿನಲ್ಲಿ ಬೆಳಕಾಗಿದೆ-ಶಶಿಕುಮಾರ್ ರೈ ಬಾಲ್ಯೊಟ್ಟು
- ಜನರ ಆರ್ಥಿಕ ಬದುಕಿನ ಸಬಲೀಕರಣ ಸಹಕಾರ ರಂಗದ ಉದ್ಧೇಶ-ಎಸ್.ಬಿ.ಜಯರಾಮ ರೈ
- ಸ್ವಚ್ಚತೆಯಲ್ಲಿ ಸ್ವಯಂ ಜಾಗೃತಿಯಿಂದ ಬದಲಾವಣೆ ಸಾಧ್ಯ-ಡಾ||ಎಸ್.ಆರ್.ಹರೀಶ್ ಆಚಾರ್ಯ
- ವೈಚಾರಿಕತೆ, ವೈಜ್ಞಾನಿಕತೆಯಿಂದ ಮನೋ ಮಾಲಿನ್ಯ ನಿವಾರಣೆ ಸಾಧ್ಯ-ರೆ.ಡಾ.ಆಂಟನಿ ಪ್ರಕಾಶ್ ಮೊಂತೆರೊ
ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಲಿ. ಮಂಗಳೂರು, ಸಹಕಾರ ಇಲಾಖೆ ದ.ಕ.ಜಿಲ್ಲೆ ಹಾಗೂ ಸಂತ ಪೀಲೋಮಿನಾ ಕಾಲೇಜು(ಸ್ವಾಯತ್ತ) ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ-2025 ಪ್ರಯುಕ್ತ ಸ್ವಚ್ಚತಾ ಸೇ ಸಹಕಾರ್ ಕಾರ್ಯಕ್ರಮ ಮೇ.28 ರಂದು ಸಂತ ಫಿಲೋಮಿನಾ ಕಾಲೇಜಿ(ಸ್ವಾಯತ್ತ)ನಲ್ಲಿ ನಡೆಯಿತು.
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಸ್ವಚ್ಛ ಭಾರತ ನಿರ್ಮಾಣ ಮಾಡುವುದು ಈ ಕಾರ್ಯಕ್ರಮ ಸಂಘಟನೆಯ ಉದ್ದೇಶವಾಗಿದೆ. ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸುತ್ತವೆ ಎಂಬುದು ಈ ಕಾರ್ಯಕ್ರಮದ ಧ್ಯೆಯವಾಗಿದೆ. ಇಂದು ಅಂತರಾಷ್ಟ್ರೀಯ ಸಹಕಾರಿ ದಿನಾಚರಣೆಯಾಗಿದ್ದು ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ ಅಂಗವಾಗಿ ಸ್ವಚ್ಛತಾ ಸೆ ಸಹಕಾರ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು. ಕೃಷಿ, ಸಹಕಾರಿ ಮತ್ತು ಸಹಕಾರಿ ಪತ್ತಿನ ಸಂಘಗಳಿಂದ ಆರ್ಥಿಕ ಸಬಲೀಕರಣವಾಗುತ್ತಿದೆ. ಭಾರತ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರಿ ಸಂಘಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದಿಂದ ಬೆಳೆದು ಬಂದಿದ್ದು ರೈತರಿಗೆ ಅತ್ಯಂತ ಸಹಕಾರಿಯಾಗಿದೆ. ಸಹಕಾರಿ ರತ್ನ ಸವಣೂರು ಸೀತಾರಾಮ ರೈರವರು ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘವನ್ನು ಸ್ಥಾಪನೆ ಮಾಡಿದವರು. ಇಂದು ಅದರ 15 ಶಾಖೆಗಳನ್ನು ಮಾಡುವ ಮೂಲಕ ಸಂಸ್ಥೆಯನ್ನು ಬೆಳಗಿಸಿದ್ದಾರೆ ಎಂದರು. ಮೊಳಹಳ್ಳಿ ಶಿವರಾಯರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಿಸಿರುವ ಈ ಸಹಕಾರಿ ವ್ಯವಸ್ಥೆ ಹಲವಾರು ಜನರ ಬದುಕಿನಲ್ಲಿ ಬೆಳಕಾಗಿದೆ. ಅಲ್ಲದೆ ಭಾರತ ದೇಶದ ಭೂಪಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಗುರುತಿಸಲ್ಪಡುವಂತೆ ಬೆಳೆದು ನಿಂತಿದೆ. ವಿದ್ಯಾರ್ಥಿಗಳು ಹೇಗೆ ಈ ವ್ಯವಸ್ಥೆಯ ಒಂದು ಸಹಾಯವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ ಅವರು ಸಹಕಾರಿ ವ್ಯವಸ್ಥೆಯಿಂದ ಜೀವನ ರೂಪಿಸುವ ಅವಕಾಶಗಳನ್ನು ಉಪಯೋಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜನರ ಆರ್ಥಿಕ ಬದುಕಿನ ಸಬಲೀಕರಣ-ಎಸ್.ಬಿ.ಜಯರಾಮ ರೈ:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಮಾತನಾಡಿ, ಹಿಂದಿನ ಕಾಲದಲ್ಲಿ ಲೇವಾದೇವಿ ವ್ಯವಸ್ಥೆಯ ಕಪಿಮುಷ್ಠಿಯಿಂದ ಸಾಮಾನ್ಯ ಜನರು ನಲುಗುತ್ತಿದ್ದರು. ಲೇವಾದೇವಿಯಿಂದ ಹೊರಬರಲು ಅಗತ್ಯದ ಹಣಕಾಸಿನ ನೆರವು ನೀಡುವ ಕಾರ್ಯಕ್ರಮ ಈ ಸಹಕಾರಿ ವ್ಯವಸ್ಥೆಯಿಂದ ಆರಂಭವಾಯಿತು. ನಾನು ನಿನಗಾಗಿ ನೀನು ನನಗಾಗಿ ನಾವು ಎಲ್ಲರಿಗಾಗಿ ಎಂಬ ನಂಬಿಕೆಯೊಂದಿಗೆ ಜನರ ಆರ್ಥಿಕ ಬದುಕನ್ನು ಸಬಲಗೊಳಿಸುವುದು ಸಹಕಾರಿಯ ಉದ್ಧೇಶವಾಗಿದೆ. ಹುಟ್ಟಿನಿಂದ ಚಟ್ಟದವರೆಗೆ ಎಂಬ ಗಾದೆ ಮಾತಿನಂತೆ ಜನತೆಯ ಬದುಕಿನ ಸಹಾಯಕ್ಕೆ ಸಹಕಾರಿ ಬ್ಯಾಂಕುಗಳು ಬದ್ಧವಾಗಿವೆ ಎಂದರು.
ಸ್ವಚ್ಚತೆಯಲ್ಲಿ ಸ್ವಯಂ ಜಾಗೃತಿ ಬೇಕು-ಡಾ||ಎಸ್.ಆರ್.ಹರೀಶ್ ಆಚಾರ್ಯ:
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಡಾ||ಎಸ್.ಆರ್.ಹರೀಶ್ ಆಚಾರ್ಯ ವಿಷಯ ಮಂಡನೆ ಮಾಡಿ ಮಾತನಾಡಿ ಸಹಕಾರಿ ಕ್ಷೇತ್ರ ಎಂಬುದು ಜಾತ್ಯತೀತ, ವರ್ಗಾತೀತ, ವರ್ಣಾತಿತ, ಸೀಮಾತೀತ ಮತ್ತು ಯಾವುದೇ ಪಕ್ಷ ರಾಜಕೀಯದಿಂದ ಬಹು ದೂರವಾಗಿರುವುದಾಗಿದೆ. ಸ್ವಚ್ಛತೆಯ ನಿಜವಾದ ರಾಯಭಾರಿ ಮಹಾತ್ಮ ಗಾಂಧಿ. ಸ್ವಚ್ಛತೆಗೆ ಅಮೇರಿಕಾ ದೇಶ ಮಾಡೆಲ್ ಆಗಿದೆ. ಸ್ವಚ್ಛತೆಯಲ್ಲಿ ಸ್ವಯಂ ಜಾಗೃತಿ ಬೇಕು. ನಮ್ಮ ಪರಿಸರವನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ. ಪ್ರತಿಯೊಬ್ಬ ನಾಗರಿಕರು ಈ ಜವಾಬ್ದಾರಿಯನ್ನು ಅರಿತರೆ ಸ್ವಚ್ಚತೆ ಸಾಧ್ಯ. ಯಾವುದೇ ಯೋಜನೆ ಜಾರಿ ಮಾಡುವಾಗ ನಾವು ಜಾಗೃತಿ ವಹಿಸಬೇಕು. ವ್ಯವಸ್ಥೆಗಳು ಸರಿಯಾಗಿ ಇರಲು ನಮ್ಮ ಜವಾಬ್ದಾರಿ ಕೂಡ ಇರಬೇಕು. ಪ್ರತಿಯೊಬ್ಬರು ವ್ಯವಸ್ಥೆಯ ಲೋಪದೋಷಕ್ಕೆ ಪರಿಹಾರ ಕಂಡುಕೊಳ್ಳಬೇಕು. ಆಗ ಮಾತ್ರ ಪರಿಸರ ಜಾಗೃತಿ ಮತ್ತು ದೇಶದಲ್ಲಿ ಬದಲಾವಣೆಯನ್ನು ತರಲು ಸಾಧ್ಯ. ಹಸಿ ತ್ಯಾಜ್ಯ ನಮ್ಮ ಮನೆಯ ಕೈತೋಟಕ್ಕೆ, ಕೃಷಿಗೆ ಉತ್ತಮವಾಗಿರುವ ಗೊಬ್ಬರವಾಗಿದೆ. ಎಂದರು.

ವೈಚಾರಿಕತೆ, ವೈಜ್ಞಾನಿಕತೆಯಿಂದ ಮನೋಮಾಲಿನ್ಯ ನಿವಾರಣೆ-ರೆ.ಡಾ.ಆಂಟನಿ ಪ್ರಕಾಶ್ ಮೊಂತೆರೊ:
ಅಧ್ಯಕ್ಷತೆ ವಹಿಸಿದ್ದ ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ) ಪ್ರಾಂಶುಪಾಲ ರೆ.ಡಾ.ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ ಕ್ರಮಬದ್ಧವಾದ ಪಾಠ ಪ್ರವಚನಗಳಿಗೆ ಹೊರತಾಗಿ ಜೀವನದಲ್ಲಿ ಕಲಿಯುವುದು ಬಹಳಷ್ಟು ಇದೆ. ಸ್ವಚ್ಛತೆ ಎಂದರೆ ಬೀದಿಬದಿಯ ಸ್ವಚ್ಛತೆ ಮಾತ್ರವಲ್ಲ ಸಮಾಜದ ಸ್ವಚ್ಛತೆ ಕೂಡ ಆಗಿದೆ. ಸಮಾಜದ ಸ್ವಚ್ಚತೆಗಿಂತ ನಮ್ಮ ಮನಸ್ಸಿನ ಸ್ವಚ್ಚತೆ ಆಗಬೇಕಿದೆ. ಮನೋಮಾಲಿನ್ಯ ನಿವಾರಣೆ ಮಾಡಿದಾಗ ಸ್ವಚ್ಚತೆಯ ಅರಿವು ಉಂಟಾಗುತ್ತದೆ. ಈ ವಿಚಾರದ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕಾದ ಸಮಯ ಬಂದಿದೆ. ದ.ಕ.ಜಿಲ್ಲೆ ಭಾರತ ದೇಶದಲ್ಲೇ ಗುರುತಿಸುವಂತಹ ಜಿಲ್ಲೆಯಾಗಿದೆ. ಆದರೆ ಇಲ್ಲಿನ ಜನರು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬಿಟ್ಟು ಬದುಕುತ್ತಿದ್ದಾರೆ. ವಿದ್ಯಾರ್ಥಿಗಳು ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಬಗೆಗೆ ಒಲವು ಬೆಳೆಸಿಕೊಳ್ಳಬೇಕು. ಇದರಿಂದ ಮನಸ್ಸಿನ ಮಾಲಿಲ್ಯ ನಿವಾರಣೆಯಾಗುತ್ತದೆ ಎಂದು ಹೇಳಿದ ಅವರು ಕಾರ್ಯಕ್ರಮವನ್ನು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಆಯೋಜಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಮಂಜುನಾಥ ಎನ್.ಎಸ್., ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎನ್.ರಘು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸಂಜೀವ ಪೂಜಾರಿ, ಆದರ್ಶ ವಿವಿದೋದ್ಧೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ವಸಂತ ಜಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತನ್ವಿ ರೈ ಮತ್ತು ಬಳಗ ಪ್ರಾರ್ಥಿಸಿ ಪಿಜಿ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್ ಕೋ ಆರ್ಡಿನೇಟರ್ ಹರ್ಷಿತ್ ಕೆ. ಕಾರ್ಯಕ್ರಮ ನಿರೂಪಿಸಿದರು. ಸ್ನಾತ್ತಕೋತ್ತರ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕುಮಾರ ಶಿಲ್ಪ ವಂದಿಸಿದರು. ಪಿ.ಜಿ. ಭೌತಶಾಸ್ತ್ರ ವಿಭಾಗದ ಕೋ-ಆರ್ಡಿನೇಟರ್ ವಿಪಿನ್ ನಾಯ್ಕ್ ಹಾಗೂ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸಾರ್ವಜಿನಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ಸಹಕರಿಸಿದರು. ಕಾಲೇಜು ಪರಿಸರದಲ್ಲಿ ಸ್ವಚ್ಛತೆ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.