ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಗ್ರಾಮ ಪಂಚಾಯತ್ಗೆ ವ್ಯಾಪ್ತಿಯ ಮುರ ಜಂಕ್ಷನ್ನಲ್ಲಿ ವಾಹನ ಅಪಘಾತವಾಗುವುದನ್ನು ತಡೆಗಟ್ಟುಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಕಬಕ ಗ್ರಾಮ ಪಂಚಾಯತ್ ಹಾಗೂ ಸಾರ್ವಜನಿಕರು ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಮುರ ಜಂಕ್ಷನ್ನಿಂದ ಕೆದಿಲಕ್ಕೆ ತೆರಳುವ ರಸ್ತೆಗೆ ಈ ಹಿಂದೆ ಇದ್ದ ರಸ್ತೆಯನ್ನು ಬದಲಿಸಿ ಹೊಸದಾಗಿ ರೈಲ್ವೆ ಮೇಲ್ವೇತುವೆ ನಿರ್ಮಾಣಗೊಂಡು ಆ ರಸ್ತೆಯಲ್ಲಿ ವಾಹನ ಸಂಚಾರ ಪ್ರಾರಂಭಗೊಂಡ ದಿನದಿಂದ ಇಂದಿನವರೆಗೂ ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಈ ಸ್ಥಳ ಅಪಘಾತಗಳು ನಡೆಯುತ್ತಲೇ ಇದೆ. ಆವೈಜ್ಞಾನಿಕವಾಗಿ ನಿರ್ಮಾಣವಾದ ರೈಲ್ವೆ ಮೇಲ್ವೇತುವೆಯಿಂದಾಗಿ ಮುರದಿಂದ ಕೆದಿಲ ರಸ್ತೆಗೆ ತಿರುಗುವಲ್ಲಿ ವಾಹನಗಳು ಮುಖ್ಯರಸ್ತೆಗೆ ಸೇರುವಾಗ ಅಥವಾ ಮುಖ್ಯ ರಸ್ತೆಯಿಂದ ತಿರುಗಿ ಹೋಗುವಾಗ ಅತ್ಯಂತ ಹೆಚ್ಚಿನ ಅಪಘಾತಗಳು ಆಗುತ್ತಿವೆ. ಇಷ್ಟು ಮಾತ್ರವಲ್ಲದೆ ರಸ್ತೆಯ ಸಮೀಪದಲ್ಲಿ ದಟ್ಟವಾದ ಮರಗಳಿದ್ದು, ಈ ಅಡ್ಡ ರಸ್ತೆಯಿಂದ ಬರುವಂತಹ ವಾಹನಗಳು ಮುಖ್ಯ ರಸ್ತೆಗೆ ಕಾಣದ ರೀತಿಯಲ್ಲಿ ಅಡ್ಡವಾಗಿ ಇರುತ್ತದೆ. ಈ ಮರಗಳಿರುವ ಸ್ಥಳಗಳು ರೈಲ್ವೆ ಇಲಾಖೆಗೆ ಸಂಬಂಧಿಸಿದ ಜಾಗವಾಗಿರುವುದರಿಂದ ಸ್ಥಳೀಯರು ನಿರಂತರವಾಗಿ ಮನವಿಯನ್ನು ಸಲ್ಲಿಸುತ್ತಾ ಬರಲಾಗಿದೆ. ಆದರೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ರೈಲ್ವೆ ಇಲಾಖೆಯ ವಿಳಂಬ ನೀತಿಯಿಂದಾಗಿ ಮತ್ತಷ್ಟು ಅಪಘಾತಕ್ಕೆ ಪೂರಕವಾದಂತಹ ವಾತಾವರಣ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ಇತ್ತೀಚಿಗೆ ಒಂದು ತಿಂಗಳಿನಲ್ಲಿ ಮೂರು ಗಂಭೀರವಾದಂತಹ ಅಪಘಾತವಾಗಿದ್ದು, ಸರಾಸರಿ ವಾರದಲ್ಲಿ ಒಂದೆರಡು ಅಪಘಾತ ಆಗುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿರುವುದಲ್ಲದೇ ಗಂಭೀರವಾದಂತಹ ಗಾಯಗಳು ಕೂಡಾ ಆಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಸಂಚಾರಿ ಠಾಣೆಯ ಪೋಲೀಸರು ಹಂಪ್ಗಳನ್ನು ನಿರ್ಮಾಣ ಮಾಡಿದ್ದರೂ ಅದನ್ನು ಕಾನೂನಿನ ಚೌಕಟ್ಟಿನಲ್ಲಿ ಪರಿಗಣಿಸದೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ತೆರವುಗೊಳಿಸಿರುವುದಲ್ಲದೆ ಸದ್ರ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕೈಗೊಂಡಿರುವುದಿಲ್ಲ. ಹೀಗಾಗಿ ಸಾರ್ವಜನಿಕರು ಪ್ರತಿಭಟನೆಯನ್ನು ನಡೆಸಿದರೂ ಅಂತಹ ಮನವಿಗಳಿಗೆ ಕೂಡ ಸರಕಾರ ಮತ್ತು ಇಲಾಖೆ ಕಿವುಡುತನವನ್ನು ಪ್ರದರ್ಶಿಸಿದೆ. ರಸ್ತೆಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ಹಣ್ಣು-ಹಂಪಲುಗಳನ್ನು ಮಾರುವುದು, ಮೀನು ಮಾರುವುದು ಇತ್ಯಾದಿ ವ್ಯಾಪಾರವನ್ನು ಮಾಡುತ್ತಿದ್ದು, ಅಲ್ಲಿಗೆ ಖರೀದಿಸಲು ಬರುವಂತಹ ಜನಗಳಿಂದ ಮತ್ತು ವಾಹನ ನಿಲುಗಡೆ ಮಾಡುವ ಕಾರಣದಿಂದ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸುತ್ತಿದೆ. ಇದೊಂದು ಗಂಭೀರವಾದ ಸಮಸ್ಯೆಯಾಗಿದ್ದ ಸಂಬಂಧಪಟ್ಟ, ಇಲಾಖೆಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಿರಂತರವಾಗಿ ಇಲ್ಲಿ ಅಪಘಾತದಿಂದ ಸಂಭವಿಸುತ್ತಿರುವ ಅಪಮೃತ್ಯುವನ್ನು ತಪ್ಪಿಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
ಕಬಕ ಗ್ರಾ.ಪಂ ಅಧ್ಯಕ್ಷೆ ಸುಶೀಲಾ, ಸದಸ್ಯರಾದ ವಿನಯ ಕುಮಾರ್ ಕಲ್ಲೇಗ, ಶಾಬಾ ಕೆ. ಶಂಕರಿ ಜಿ. ಭಟ್, ಗ್ರಾಮಸ್ಥರಾದ ರಶೀದ್ ಮುರ, ಕೇಶವ, ಉಮೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಮುರದಿಂದ ಕೆದಿಲಕ್ಕೆ ತೆರಲುವ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಮೇಲ್ಸೇತುವೆಯ ಸಂಪರ್ಕ ರಸ್ತೆಯಿಂದಾಗಿ ಮುರದಲ್ಲಿ ನಿರಂತರ ಅಪಘಾತಗಳಿಗೆ ಕಾರಣವಾಗಿದೆ. ಇದನ್ನು ಸರಿಪಡಿಸುವಂತೆ ಹಲವು ಇಲಾಖೆಗಳಿಗೆ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದೀಗ ಮತ್ತೆ ಮನವಿ ಸಲ್ಲಿಸಲಾಗುತ್ತಿದ್ದು ಗ್ರಾ.ಪಂ, ತಾ.ಪಂ., ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೂ ಮನವಿ ಸಲ್ಲಿಸಲಾಗುವುದು.
ವಿನಯ ಕುಮಾರ್ ಕಲ್ಲೇಗ,
ಸದಸ್ಯರು ಕಬಕ ಗ್ರಾಮ ಪಂಚಾಯತ್