ಕೋಮುಶಕ್ತಿಗಳ ಮಟ್ಟಹಾಕಲು ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಪಡೆ ರಚನೆ

0

ಬೆಂಗಳೂರು: ದಕ್ಷಿಣ ಕನ್ನಡ,ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಮಾಜಘಾತುಕ ಕೋಮುಶಕ್ತಿಗಳನ್ನು ಮಟ್ಟ ಹಾಕಲು, ಕೋಮು ದ್ವೇಷ ಪ್ರಚೋದನೆಯನ್ನು ನಿಗ್ರಹಿಸಲು ರಾಜ್ಯ ಸರ್ಕಾರವು ‘ವಿಶೇಷ ಕಾರ್ಯಪಡೆ’(ಸ್ಪೆಷಲ್ ಟಾಸ್ಕ್ ಫೋರ್ಸ್)ಯನ್ನು ರಚಿಸಿ ಆದೇಶ ಹೊರಡಿಸಿದೆ. ಈ ಕಾರ್ಯಪಡೆಯು ಮೂರು ತಂಡಗಳನ್ನು ಹೊಂದಿದ್ದು ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲಿವೆ.

‘ದಕ್ಷಿಣ ಕನ್ನಡ ಜಿಲ್ಲೆಯು ಕೋಮು ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಹೆಚ್ಚು ಸೂಕ್ಷ್ಮವಾಗುತ್ತಿದ್ದು, ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತವಾಗುತ್ತಿವೆ. ಶಾಂತಿ, ಸಾಮಾಜಿಕ ಒಗ್ಗಟ್ಟನ್ನು ತರುವ ಉದ್ದೇಶದಿಂದ ಈ ಕಾರ್ಯಪಡೆ ರಚಿಸಲಾಗುತ್ತಿದೆ’ಎಂದು ಗೃಹ ಇಲಾಖೆಯು ಆದೇಶ ಪತ್ರದಲ್ಲಿ ತಿಳಿಸಿದೆ.

ಈಗಾಗಲೇ ಅಸ್ತಿತ್ವದಲ್ಲಿ ಇರುವ ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್)ಯಲ್ಲಿ ಒಟ್ಟು 667 ಹುದ್ದೆಗಳಿದ್ದು, ಇವರಲ್ಲಿ 248 ಹುದ್ದೆಗಳನ್ನು ಎಸ್‌ಟಿಎಫ್ ಗೆ ನಿಯೋಜಿಸಿ ಉಳಿದ 376 ಹುದ್ದೆಗಳನ್ನು ಎಎನ್‌ಎಫ್ ನಲ್ಲಿಯೇ ಮುಂದಿನ 3 ವರ್ಷಗಳವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ.‌ ಒಂದು ಡಿಜಿಪಿ, ಒಂದು ಡಿವೈಎಸ್‌ಪಿ, ಒಂದು ಸಹಾಯಕ ಕಮಾಂಡೆಂಟ್,ನಾಲ್ವರು ಪಿಐ/ಆರ್‌ಪಿಐ, 16 ಪಿಎಸ್‌ಐ/ಆರ್‌ಎಸ್‌ಐ, 60 ಸಿಹೆಚ್‌ಸಿ,150 ಸಿಪಿಸಿ/ಎಪಿಸಿ,‌ 15 ಅನುಯಾಯಿ ಸಿಬಂದಿ ಸೇರಿ 248 ಹುದ್ದೆಗಳನ್ನು ಎಎನ್‌ಎಫ್ ನಿಂದ ಬೇರ್ಪಡಿಸಿ, ಇಷ್ಟೇ ಸಿಬ್ಬಂದಿ ಇರುವ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ.
ವಿಶೇಷ ಕಾರ್ಯಪಡೆಯ ಪ್ರತಿ ತಂಡಕ್ಕೆ ಆಯಾ ಜಿಲ್ಲಾ ಪೊಲೀಸ್ ಕಮಿಷನರ್ ಅಥವಾ ಎಸ್‌ಪಿ ಅಗತ್ಯ ಮೂಲಸೌಕರ್ಯವನ್ನು ಒದಗಿಸಬೇಕು. ಈ ತಂಡಗಳು ಸಂಬಂಧಿತ ವಲಯ ಐಜಿಪಿ ಅವರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಆದೇಶದಲ್ಲಿ ತಿಳಿಸಿದೆ.

ಗೃಹ ಸಚಿವರು ಮಂಗಳೂರುನಲ್ಲಿ ಹೇಳಿಕೆ ನೀಡಿದ್ದರು: ಕರಾವಳಿ ಜಿಲ್ಲೆಗಳಲ್ಲಿ ಪದೇ ಪದೇ ಕೋಮು ಸಂಘರ್ಷಗಳು ನಡೆಯುತ್ತಿದ್ದು, ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಈ ರೀತಿಯ ಘಟನೆ ಆಡಳಿತಕ್ಕೆ ಕಪ್ಪು ಚುಕ್ಕೆಯಾಗುತ್ತಿದ್ದು, ಇದನ್ನು ನಿಯಂತ್ರಣ ತರುವ ನಿಟ್ಟಿನಲ್ಲಿ ಎಸ್‌ಟಿಎ- ರಚನೆ ಮಾಡುವ ಕುರಿತು ರಾಜ್ಯದ ಗೃಹಸಚಿವ ಡಾ|ಜಿ.ಪರಮೇಶ್ವರ್ ಅವರು ಕೆಲ ದಿನಗಳ ಹಿಂದೆಯಷ್ಟೆ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.

ದ.ಕ.,ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪನೆಯಾಗುವ ಎಸ್‌ಟಿಎಫ್ ಹಾಗೂ ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತರು ಈ ಪಡೆಗಳನ್ನು ನಿಯೋಜಿಸಲು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು. ಅಸ್ತಿತ್ವದಲ್ಲಿರುವ ಕೆಲವು ನಕ್ಸಲ್‌ಗಳು ಛತ್ತೀಸ್‌ಗಢ ಮತ್ತು ಜಾರ್ಖಂಡ್ ರಾಜ್ಯಗಳಿಂದ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಗಡಿ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿವೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಒದಗಿಸಿದೆ.ಆ ಕಾರಣದಿಂದ ನಕ್ಸಲ್ ನಿಗ್ರಹ ಪಡೆ(ಆಂಟಿ ನಕ್ಸಲ್ ಫೋರ್ಸ್-ಎಎನ್‌ಎಫ್)ಯಲ್ಲಿರುವ ಅಧಿಕಾರಿ, ಸಿಬ್ಬಂದಿ ಬಲದಿಂದ ಕೆಲ ಅಧಿಕಾರಿ ಸಿಬ್ಬಂದಿಗಳ ಹುದ್ದೆ ಬೇರ್ಪಡಿಸಿ ರಾಜ್ಯದಲ್ಲಿ ವಿಶೇಷ ಕಾರ್ಯಪಡೆ ಸ್ಥಾಪಿಸುವಂತೆ ಕೋರಿದ್ದು ಇದೀಗ ವಿಶೇಷ ಕಾರ್ಯಪಡೆ ರಚನೆ ಮಾಡಿ ಆದೇಶಿಸಲಾಗಿದೆ.

ಎಸ್‌ಟಿಎಫ್ ಕಾರ್ಯನಿರ್ವಹಣೆ
ದ್ವೇಷ ಭಾಷಣ, ಉದ್ರೇಕಕಾರಿ ಘಟನೆಗಳು ಮತ್ತು ಕೋಮು ಸಂಬಂಧಿತ ಘಟನೆಗಳಿಗಾಗಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳನ್ನು, ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು, ಮೇಲ್ವಿಚಾರಣೆ ಮಾಡಲು ತಾಂತ್ರಿಕ ಕೋಶ ಒಳಗೊಂಡ ಗುಪ್ತಚರ ಘಟಕವನ್ನು ಹೊಂದುವುದು. ಸಂಭಾವ್ಯ ಕೋಮು ಹಿಂಸಾಚಾರದ ಬಗ್ಗೆ ಕಣ್ಗಾವಲು ಮತ್ತು ಮಾನವ ಗುಪ್ತಚರ ಮೂಲಕ ಎಚ್ಚರಿಕೆ ವ್ಯವಸ್ಥೆ ರಚಿಸುವುದು.ಪ್ರಾಬಲ್ಯದ ಮೂಲಕ ವಿಶ್ವಾಸವೃದ್ಧಿ ಕ್ರಮಗಳನ್ನು ಕೈಗೊಳ್ಳುವುದು. ಮೂಲಭೂತೀಕರಣ ಗುರುತಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕ್ರಮ ಕೈಗೊಳ್ಳುವುದು. ವಲಯ ಐಜಿಪಿಯವರು ಕೋಮುಗಲಭೆ ಸಂದರ್ಭ ವಿಶೇಷ ಕಾರ್ಯಪಡೆ ಅಧಿಕಾರಿ, ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳುವುದು.

LEAVE A REPLY

Please enter your comment!
Please enter your name here