ಭಗವಂತನ ಅನುಗ್ರಹ, ಇಚ್ಚೆಯಿಂದ ಸಂಕಲ್ಪಿಸಿದ ಕಾರ್ಯಗಳಾಗುತ್ತದೆ-ಶ್ರೀಕೃಷ್ಣ ಬೋಳಿಲ್ಲಾಯ
ಇಚ್ಚಾಶಕ್ತಿ ಇದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯ-ಶಶಿಕುಮಾರ್ ರೈ ಬಾಲ್ಯೊಟ್ಟು
- ಸುರಿಯುತ್ತಿರುವ ಮಳೆಯ ಮಧ್ಯೆಯೂ ಉತ್ತಮ ವ್ಯವಸ್ಥೆ ಆಗಿದೆ-ಅರುಣ್ ಕುಮಾರ್ ರೈ ಡಿಂಬ್ರಿ
- ಮಾದಕ ವ್ಯಸನಗಳಿಗೆ ಬಲಿಯಾಗದೆ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು-ವಸಂತಕೃಷ್ಣ ಕೋನಡ್ಕ
- ಕೌಟುಂಬಿಕ, ಧಾರ್ಮಿಕ ಮೌಲ್ಯಗಳು ಸನಾತನ ಸಂಸ್ಕೃತಿಯ ಶ್ರೇಷ್ಟ ಪರಂಪರೆಗಳು-ರಾಜರಾಮ್ ಸೂರ್ಯಂಬೈಲು
- ಅತೀಯಾದ ಸ್ವಾತಂತ್ರ್ಯದಿಂದ ಧಾರ್ಮಿಕ ಪರಂಪರೆ, ಸಂಸ್ಕಾರ ಮರೆಯುತ್ತಿದ್ದೇವೆ-ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್
- ಹತ್ತು ಮನೆಗಳಿಗೆ ಒಂದು ಭಜನಾ ಮಂದಿರ ನಿರ್ಮಾಣವಾಗಬೇಕು-ಯತೀಶ್ ರೈ ಚೆಲ್ಯಡ್ಕ
- ಭಗವಂತನಿಗೆ ಭಜನೆಗಿಂತ ದೊಡ್ಡ ಸಂಪತ್ತು, ಸೇವೆ ಕೊಡುವುದಕ್ಕೆ ಅಸಾಧ್ಯ-ಸದಾನಂದ ಕಾವೂರು
- ಭಜನಾ ಮಂದಿರದೊಂದಿಗೆ ಇಲ್ಲಿನ ಜನರ ಜೀವನವೂ ಬೆಳೆದಿದೆ-ದೇವಿಪ್ರಸಾದ್ ಇರ್ದೆಬೀಡು
- ಶಿಕ್ಷಣ, ಜ್ಞಾನ, ಪರಿಜ್ಞಾನದಿಂದ ಯೋಗ, ಯೋಗ್ಯತೆ ಲಭಿಸುತ್ತದೆ-ಚಿದಾನಂದ ಗೌಡ ಬನಾರಿ
ಪುತ್ತೂರು: ಹಿಂದೂ ಧರ್ಮದಲ್ಲಿ ದೇವರು ದೈವಗಳ ಮಹಿಮೆ ಅಪಾರ. ಭಗವಂತನ ಅನುಗ್ರಹ, ಇಚ್ಚೆ ಸೇರಿದಾಗ ನಾವು ಅಂದುಕೊಂಡ ಕೆಲಸಗಳು ಆಗುತ್ತದೆ. ಇಲ್ಲಿ ನಿರ್ಮಾಣವಾದ ಸುಂದರ ಭಜನಾ ಮಂದಿರವೇ ಇದಕ್ಕೆ ನಿದರ್ಶನ ಎಂದು ಪಾಣಾಜೆ ರಣಮಂಗಲ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಹೇಳಿರು. ಕಕ್ಕೂರು ಶ್ರೀಸಿದ್ಧಿವಿನಾಯಕ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ದೇವರ ಛಾಯಾಬಿಂಬದ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಹತ್ತು ಜನರ ಸಹಕಾರದಿಂದ ಈ ಸ್ಥಳದಲ್ಲಿ ಭವ್ಯವಾದ ಭಜನಾ ಮಂದಿರ ಕಟ್ಟಿದ್ದೀರಿ ಭಕ್ತ ಜನರ ಸಹಕಾರದಿಂದ ಮಂದಿರದ ಪುನರ್ ನಿರ್ಮಾಣದ ಕೆಲಸ ಆಗಿದೆ. ಎಲ್ಲಾ ಭಕ್ತಾದಿಗಳು ಕೈಜೋಡಿಸಿದರೆ ಎಲ್ಲವೂ ಸಾಧ್ಯ. ಇಲ್ಲಿ ಮುಂದಕ್ಕೆ ಉತ್ತಮ ಸಭಾಭವನ ನಿರ್ಮಾಣವಾಗಿ ಅನ್ನದಾಸೋಹದ ಕಾರ್ಯವೂ ನಡೆಯಲಿ ಎಂದು ಹೇಳಿದ ಅವರು ಈ ಗ್ರಾಮಕ್ಕೆ ಸಿದ್ದವಿನಾಯಕ ದೇವರ ಅನುಗ್ರಹ ಸದಾ ಸಿಗಲಿ ಎಂದು ಹಾರೈಸಿದರು.
ಸುರಿಯುತ್ತಿರುವ ಮಳೆಯ ಮಧ್ಯೆಯೂ ಉತ್ತಮ ವ್ಯವಸ್ಥೆ ಆಗಿದೆ-ಅರುಣ್ ಕುಮಾರ್ ರೈ ಡಿಂಬ್ರಿ:
ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಅರುಣ್ ಕುಮಾರ್ ರೈ ಡಿಂಬ್ರಿ ಮಾತನಾಡಿ ಪ್ರಕೃತಿದತ್ತವಾದ ಸುಂದರವಾದ ಬೆಟ್ಟದಲ್ಲಿ ಸಿದ್ದಿವಿನಾಯಕ ಮಂದಿರದ ನಿರ್ಮಾಣ ಆಗಿದೆ. ಸುರಿಯುತ್ತಿರುವ ಮಳೆಯ ಮಧ್ಯೆಯೂ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಹಿಂದೂ ಧರ್ಮದ ಧಾರ್ಮಿಕ ಪದ್ಧತಿಗಳಿಗೆ ವೈಜ್ಞಾನಿಕ ಹಿನ್ನಲೆಯೂ ಇದೆ. ಯಾರಿಗೂ ಆತ್ಮವಂಚನೆ ಮಾಡದೆ ಪರಿಶುದ್ಧರಾಗಿ ಸಮಾಜದಲ್ಲಿ ಬದುಕಬೇಕು. ಧಾರ್ಮಿಕ ಪರಂಪರೆಗಳನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದ ಅವರು ಇಂತಹ ದೈವಿಕ ಕಾರ್ಯದಲ್ಲಿ ತೊಡಗಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.
ಮಾದಕ ವ್ಯಸನಗಳಿಗೆ ಬಲಿಯಾಗದೆ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು-ವಸಂತಕೃಷ್ಣ ಕೋನಡ್ಕ:
ಹೈಕೋರ್ಟ್ ವಕೀಲರಾದ ವಸಂತಕೃಷ್ಣ ಕೋನಡ್ಕ ಮಾತನಾಡಿ ಇಲ್ಲಿ ಅತ್ಯಂತ ಸುಂದರವಾದ ಮಂದಿರ ಎದ್ದುನಿಂತಿದೆ. ಎಲ್ಲಾ ಕಾರ್ಯಕರ್ತರು ಅವಿರತ ದುಡಿದಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಮಂದಿರದ ನಿರ್ವಹಣೆಯಾಗಲಿ. ಧಾರ್ಮಿಕ ಶ್ರದ್ಧಾಕೇಂದ್ರವಾಗಿ ಬೆಳೆಯಲಿ. ಇಂದು ಮಾದಕ ವ್ಯಸನಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ನಿಯಂತ್ರಣವಾಗಬೇಕು. ಯುವಜನರು ಮಾದಕ ವ್ಯಸನಗಳಿಗೆ ಬಲಿಯಾಗದೆ ಆರೋಗ್ಯವಂತ ಸಮಾಜ ನಿರ್ಮಾಣವಾಗುವಲ್ಲಿ ಪ್ರಯತ್ನಪಡಬೇಕು ಎಂದು ಹೇಳಿದ ಅವರು ಭಜನಾ ಮಂದಿರದ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದು ತಿಳಿಸಿದರು.
ಕೌಟುಂಬಿಕ, ಧಾರ್ಮಿಕ ಮೌಲ್ಯಗಳು ಸನಾತನ ಸಂಸ್ಕೃತಿಯ ಶ್ರೇಷ್ಟ ಪರಂಪರೆಗಳು-ರಾಜರಾಮ್ ಸೂರ್ಯಂಬೈಲು:
ಹೈಕೋರ್ಟ್ ವಕೀಲರಾದ ರಾಜರಾಮ್ ಸೂರ್ಯಂಬೈಲು ಮಾತನಾಡಿ ಸನಾತನ ಹಿಂದೂ ಧರ್ಮ ಅತ್ಯಂತ ಶ್ರೇಷ್ಟ ಧರ್ಮವಾಗಿದೆ. ಹಿಂದೂ ಪರಂಪರೆ ಶ್ರೇಷ್ಟ ಪರಂಪರೆ, ವೇದ ಉಪನಿಷತ್ತು ಪರಂಪರಾಗತವಾಗಿ ಬಂದ ಕಾರಣ ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳ ನಿರ್ಮಾಣವಾಗುತ್ತಿದೆ. ಕೌಟುಂಬಿಕ ಮೌಲ್ಯಗಳು ಮತ್ತು ಶ್ರೇಷ್ಟ ಧಾರ್ಮಿಕ ಮೌಲ್ಯಗಳು ಸನಾತನ ಸಂಸ್ಕೃತಿಯ ಶ್ರೇಷ್ಟ ಪರಂಪರೆಗಳಾಗಿದೆ. ಆದರೆ ಇಂದು ಹಿಂದೂ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆ ಮಾಯವಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ನಮ್ಮ ಜೀವನ ವ್ಯವಸ್ಥೆ ಮೃಗೀಯ ಭಾವನೆಯಲ್ಲಿದೆ. ಆದುದರಿಂದ ಜೀವನದಲ್ಲಿ ಶ್ರೇಷ್ಟ ವ್ಯವಸ್ಥೆಗೆ ನಾವು ತಲುಪಬೇಕು. ಧಾರ್ಮಿಕತೆಯಲ್ಲಿ ಕೆಟ್ಟ ಘಳಿಗೆಗಳು ಬಂದಾಗ ನಾವು ಮಲಗಿ ನಿದ್ರಿಸಬಾರದು ಎಂದು ಹೇಳಿ ಎಲ್ಲರೂ ಏಕತೆಯಲ್ಲಿ ಮುಂದವರಿಯಬೇಕು. ಹಿಂದೂ ಪರಂಪರೆ, ಸಂಸ್ಕೃತಿಯನ್ನು ಉಜ್ಜೀವನಗೊಳಿಸಬೇಕು ಎಂದರು.
ಅತೀಯಾದ ಸ್ವಾತಂತ್ರ್ಯದಿಂದ ಧಾರ್ಮಿಕ ಪರಂಪರೆ, ಸಂಸ್ಕಾರ ಮರೆಯುತ್ತಿದ್ದೇವೆ-ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್:
ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ಮಾತನಾಡಿ ಹಿಂದೂ ಧರ್ಮದಲ್ಲಿ ಜಾತಿ ಪಂಥ ಬೇಧವಿದೆ. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ನಾವೆಲ್ಲರೂ ಒಂದು ಎಂಬ ಸಂದೇಶವನ್ನು ಸಾರುತ್ತೇವೆ. ಆದರೆ ಸಮಾಜದಲ್ಲಿ ನಾವು ಬೇರೆ ಬೇರೆಯಾಗಿ ಭೇದ ಭಾವದಿಂದ ಬದುಕುತ್ತೇವೆ. ಪ್ರತಿಯೊಬ್ಬರೂ ಅತೀಯಾದ ಸ್ವಾತಂತ್ರ್ಯವನ್ನು ಬಯಸಿ ಬದುಕುತ್ತಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಪರಂಪರೆ, ಸಂಸ್ಕಾರಗಳನ್ನು ಮರೆಯುತ್ತಿದ್ದೇವೆ. ಎಲ್ಲರೂ ಯೋಗ್ಯರಾಗಿಯೇ ಇದ್ದಾರೆ. ಆದರೆ ಸಂಸ್ಕಾರಯುತರಾಗಿ ಬಾಳುವುದನ್ನು ಕಲಿಯಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಬದಲಾವಣೆ ನಮ್ಮ ಮನೆಯಿಂದಲೇ ಆರಂಭವಾಗಲಿ. ಮುಂದಿನ ಜನಾಂಗ ಸನಾತನ ಧರ್ಮವನ್ನು ಅರಿತು ಬಾಳಬೇಕು ಎಂದರು.
ಹತ್ತು ಮನೆಗಳಿಗೆ ಒಂದು ಭಜನಾ ಮಂದಿರ ನಿರ್ಮಾಣವಾಗಬೇಕು-ಯತೀಶ್ ರೈ ಚೆಲ್ಯಡ್ಕ:
ಬೈಕಂಪಾಡಿ ಶ್ರೀಗಣೇಶ್ ಇಂಡಸ್ಟ್ರೀಸ್ನ ಮಾಲಕ ಯತೀಶ್ ರೈ ಚೆಲ್ಯಡ್ಕ ಮಾತನಾಡಿ ಮನೆಯಲ್ಲಿ ಭಜನೆ ಮಾಡಿದಲ್ಲಿ ದೇವರ ಶಕ್ತಿ ಬರುತ್ತದೆ. ಅಂತಹ ಶಕ್ತಿ ಈ ಭಜನಾ ಮಂದಿರದಲ್ಲಿದೆ. ಹಿಂದೂ ಸಮಾಜ ಉಳಿಯಬೇಕಾದರೆ ಭಕ್ತಿ, ಶಕ್ತಿ ಧರ್ಮ ಬೇಕು. ಹತ್ತು ಮನೆಗಳು ಇದ್ದಲ್ಲಿ ಒಂದು ಭಜನಾ ಮಂದಿರ ನಿರ್ಮಾಣವಾಗಬೇಕು. ಈ ಭಜನಾ ಮಂದಿರಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ, ಸಂಸ್ಕಾರ ನೀಡುವ ಕೆಲಸಗಳಾಗಬೇಕು. ಮುಂದಿನ ದಿನಗಳಲ್ಲಿ ಆತ್ಮರಕ್ಷಣೆಯ ವಿದ್ಯೆಯ ಅಗತ್ಯವಿದೆ. ಉತ್ಕೃಷ್ಟವಾದ ಸ್ಥಾನಕ್ಕೆ ಹಿಂದೂ ಧರ್ಮ ಸಾಗಲು ನಾವೆಲ್ಲರೂ ಕೆಲಸ ಮಾಡಬೇಕು ಎಂದು ಹೇಳಿದ ಅವರು ಭಜನಾ ಮಂದಿರದ ಅಭಿವೃದ್ಧಿಗೆ ನಮ್ಮ ಸಹಕಾರ ಯಾವಾಗಲೂ ಇದೆ ಎಂದರು.
ಭಗವಂತನಿಗೆ ಭಜನೆಗಿಂತ ದೊಡ್ಡ ಸಂಪತ್ತು, ಸೇವೆ ಕೊಡುವುದಕ್ಕೆ ಅಸಾಧ್ಯ-ಸದಾನಂದ ಕಾವೂರು:
ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷ ಸದಾನಂದ ಕಾವೂರು ಮಾತನಾಡಿ 24 ವರ್ಷಗಳಿಂದ ಒಂದು ಭಜನಾ ಮಂದಿರವನ್ನು ಊರಿನವರು ನಡೆಸುತ್ತಾ ಬಂದಿದ್ದೀರಿ. ಈಗ ಮಂದಿರ ಜೀರ್ಣೋದ್ಧಾರಗೊಂಡು ಪ್ರತಿಷ್ಠಾ ಮಹೋತ್ಸವದ ಹಂತಕ್ಕೆ ಬಂದಿದೆ. ಭಜನೆ ಇದ್ದರೆ ವಿಭಜನೆ ಇಲ್ಲ. ಭಜನೆಯಿಂದ ನನ್ನ ಜೀವನದಲ್ಲಿ ಧೈರ್ಯ ಕಲಿಯಲು ಸಾಧ್ಯವಾಯಿತು. ಸನಾತನ ಸಂಸ್ಕೃತಿಯಲ್ಲಿ ಭಜನೆ ಒಂದು ಪೂರಕ ಅಂಶವಾಗಿದೆ. ಭಗವಂತನಿಗೆ ಭಕ್ತಿಪೂರ್ವಕವಾದ ಭಜನೆಗಿಂತ ದೊಡ್ಡ ಸಂಪತ್ತು, ಸೇವೆ ಕೊಡುವುದಕ್ಕೆ ಸಾಧ್ಯವಿಲ್ಲ. ಭಜನಾ ಮಂದಿರ, ಕಮ್ಮಟಗಳ ಮೂಲಕ ನಮ್ಮ ಭಾವನೆಯನ್ನು ಬದಲಾವಣೆ ಮಾಡೋಣ ಎಂದು ಹೇಳಿದ ಅವರು ಈ ಭಜನಾ ಮಂದಿರದಲ್ಲಿ ಹಾಕಿಕೊಂಡ ಯೋಜನೆ, ಯೋಚನೆಗಳು ಸಫಲವಾಗಲಿ ಎಂದು ಹಾರೈಸಿದರು.
ಭಜನಾ ಮಂದಿರದೊಂದಿಗೆ ಇಲ್ಲಿನ ಜನರ ಜೀವನವೂ ಬೆಳೆದಿದೆ-ದೇವಿಪ್ರಸಾದ್ ಇರ್ದೆಬೀಡು:
ಬೈಲಾಡಿ ನೋವಿನೆಣ್ಣೆಯ ನಾಟಿವೈದ್ಯ ದೇವಿಪ್ರಸಾದ್ ಇರ್ದೆಬೀಡು ಮಾತನಾಡಿ 24 ವರ್ಷಗಳ ಹಿಂದೆ ಭಜನಾ ಮಂದಿರದ ನಿರ್ಮಾಣ ಆಗಿದೆ. ಆ ಸಂದರ್ಭದಲ್ಲಿ ತೆಂಗಿನ ಚಪ್ಪರದಲ್ಲಿ ಮಂದಿರದ ವ್ಯವಸ್ಥೆ ಇತ್ತು. ಬಳಿಕ ಮಂದಿರ ಅಭಿವೃದ್ಧಿಯಾಗಿ ಇಂದು ನೂತನ ಮಂದಿರವಾಗಿದೆ. ಜೊತೆಯಲ್ಲಿ ಇಲ್ಲಿನ ಜನರ ಜೀವನಮಟ್ಟ ಕೂಡ ಬೆಳೆದಿದೆ. ಭಜನಾ ಮಂದಿರ ಇಲ್ಲಿನ ಜನರಲ್ಲಿ ಹೊಸ ಬದಲಾವಣೆ ತಂದಿದೆ. ಈ ಕ್ಷೇತ್ರದಲ್ಲಿನ ಸಾನಿಧ್ಯ ಇಷ್ಟೆಲ್ಲಾ ಕಾಯಕವನ್ನು ಮಾಡಿಸಿದೆ. ಕಾರ್ಯಕರ್ತರಲ್ಲಿನ ಸ್ಪೂರ್ತಿ, ಶ್ರಮ, ಪದಾಧಿಕಾರಿಗಳ ಶಕ್ತಿಯಿಂದ ಕ್ಷೇತ್ರ ಪುನರ್ನಿರ್ಮಾಣವಾಗಿದೆ. ಈ ಊರಿನ ಎಲ್ಲಾ ಮನೆ, ಮನಗಳು ಪುನರ್ಜೀವನಗೊಂಡು ಬ್ರಹ್ಮಕಲಶದ ಸಂಭ್ರಮ ನಿತ್ಯನೂತನವಾಗಿರಲಿ ಎಂದು ಹೇಳಿ ಶುಭಹಾರೈಸಿದರು.
ಶಿಕ್ಷಣ, ಜ್ಞಾನ, ಪರಿಜ್ಞಾನದಿಂದ ಯೋಗ, ಯೋಗ್ಯತೆ ಲಭಿಸುತ್ತದೆ-ಚಿದಾನಂದ ಗೌಡ ಬನಾರಿ:
ಅರಣ್ಯ ಇಲಾಖೆಯ ಪಂಜ ವಲಯದ ಅರಣ್ಯ ರಕ್ಷಕ ಚಿದಾನಂದ ಗೌಡ ಬನಾರಿ ಮಾತನಾಡಿ ಒಂದು ಮನೆ ಕಟ್ಟಬೇಕಾದರೆ ಯೋಗ, ಯೋಗ್ಯತೆ ಕೂಡಿಬರಬೇಕು. ಅದರಂತೆ ಈ ಪರಿಸರದಲ್ಲಿ ಭಜನಾ ಮಂದಿರ ನಿರ್ಮಾಣವಾಗಲು ಇಲ್ಲಿನ 248 ಕುಟುಂಬದ ಯೋಗ ಹಾಗೂ ಯೋಗ್ಯತೆಯ ಫಲವಾಗಿದೆ. ಈ ಫಲ ಪಡೆಯಬೇಕಾದರೆ ಮನೆಯಿಂದ ಪಡೆಯುವ ಶಿಕ್ಷಣ, ಜ್ಞಾನ, ಪರಿಜ್ಞಾನದಿಂದ ಸಾಧ್ಯ. ಸಂಸ್ಕಾರಯುತವಾದ ಶಿಕ್ಷಣ ಪಡೆದಾಗ ಜ್ಞಾನದ ವೃದ್ದಿಯಾಗಿ ಪರಿಜ್ಞಾನ ದೊರೆಯುತ್ತದೆ. ಇದರಿಂದ ಭಕ್ತಿ ಜಾಗೃತಗೊಂಡು ಇಂತಹ ಪುಣ್ಯಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಸಂಘಟಿತರಾಗಿ ಅರ್ಪಣಾ ಭಾವದಿಂದ ಭಜನೆಯಲ್ಲಿ ನಮ್ಮನ್ನು ಸಮರ್ಪಿಸಿದಾಗ ಭಗವಂತನ ಸಾನಿಧ್ಯ ಬರಲು ಸಾಧ್ಯವಾಗಿದೆ ಎಂದರು.

ಇಚ್ಚಾಶಕ್ತಿ ಇದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯ-ಶಶಿಕುಮಾರ್ ರೈ ಬಾಲ್ಯೊಟ್ಟು:
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಉನ್ನತವಾದ ಕೆಲಸದಲ್ಲಿ ಭಾಗಿಯಾಗುವ ಯೋಗ ಈ ಊರಿಗೆ ಸಿಕ್ಕಿದೆ. ಇಚ್ಚಾಶಕ್ತಿ ಇದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯ ಎಂಬುದು ಇಲ್ಲಿ ತೋರಿಸಿಕೊಟ್ಟಿದ್ದೀರಿ. ಧೈರ್ಯ ಇದ್ದಾಗ ದೈವ ದೇವರ ಕೆಲಸ ಕಾರ್ಯ ಮಾಡಲು ದೈವ ದೇವರೆ ಅನುಗ್ರಹ ಕೊಡುತ್ತಾರೆ. ಇಲ್ಲಿ ಸುಂದರವಾದ ಭಜನಾ ಮಂದಿರದ ಲೋಕಾರ್ಪಣೆಯಾಗಿದೆ. ಭಜನೆಯಲ್ಲಿ ವಿಭಜನೆಯಿಲ್ಲ ಎಂಬ ಭಾವಾರ್ಥದಲ್ಲಿ ಕ್ಷೇತ್ರದ ಕೆಲಸದಲಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ. ಹಿಂದೂ ಒಂದು ಎಂಬ ಭಾವನೆಯಿಂದ ಧಾರ್ಮಿಕ ಕಾರ್ಯದಲ್ಲಿ ಸೇರಬೇಕು. ಸಮಾಜದಲ್ಲಿ ಹಿಂದುತ್ವ ಉಳಿಯಬೇಕಾದರೆ ಇಂತಹ ಧಾರ್ಮಿಕ ಕೇಂದ್ರಗಳ ವ್ಯವಸ್ಥೆಯಾಗಬೇಕು ಎಂದು ಹೇಳಿ ಹಾರೈಸಿದರು.
ಸೀತಾರಾಮ ಗೌಡ ಮಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು 24 ವರ್ಷಗಳ ಹಿಂದೆ ಗುಡ್ಡವಾಗಿದ್ದ ಈ ಸ್ಥಳದಲ್ಲಿ ಭಜನೆ ಮಾಡಬೇಕೆಂಬ ನಿಟ್ಟಿನಲ್ಲಿ ಹಿರಿಯರು ಭಜನಾ ಸಂಘ ಹುಟ್ಟುಹಾಕಿದರು. ತೆಂಗಿನ ಗರಿಯ ಚಪ್ಪರದಲ್ಲಿ ಆರಂಭವಾದ ಭಜನಾ ಮಂದಿರ ಬಳಿಕ ಶೀಟ್ ಮಾಡಿನಲ್ಲಿ ಮುಂದುವರೆಯಿತು. ನಂತರದ ದಿನಗಳಲ್ಲಿ ಈ ಭಜನಾ ಮಂದಿರದ ಮೂಲಕ ನಗರ ಭಜನೆ ಆರಂಭಿಸಲಾಯಿತು. ಸತ್ಯನಾರಾಯಣ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆಯುತ್ತಾ ಬಂತು. ಈ ಪರಿಸರದ ಭಗವದ್ಭಕ್ತರ ಇಚ್ಚೆಯಂತೆ ಭಜನಾ ಮಂದಿರವನ್ನು ಜೀರ್ಣೋದ್ಧಾರ ಮಾಡಬೇಕೆಂಬ ಸಂಕಲ್ಪ ಮಾಡಿ ದೈವಜ್ಞರ ಸೂಚನೆಯಂತೆ ಮಂದಿರದ ಜೀರ್ಣೋದ್ಧಾರಕ್ಕೆ ಮುಂದಡಿಯಿಡಲಾಯಿತು. ಜಯಪ್ರಕಾಶ್ ರೈರವರ ನೇತೃತ್ವದಲ್ಲಿ ಸಮಿತಿ ರಚಿಸಿ ಜೀರ್ಣೋದ್ಧಾರ ಮಾಡಲಾಗಿದೆ. ಪ್ರತೀ ಮನೆಯಿಂದ ಬೆಳ್ಳಿ ಸಂಗ್ರಹ ಮಾಡಿ ಅದೇ ಬೆಳ್ಳಿಯಿಂದ ದೇವರ ಉಬ್ಬುಚಿತ್ರ ನಿರ್ಮಿಸಿ ದೇವರ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಹೇಳಿದರು.
ಗೌರವಾರ್ಪಣೆ:
ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯ ಮುಖಪುಟ ವಿನ್ಯಾಸ ಮಾಡಿ ಸಹಕರಿಸಿದ ರಂಜಿತ್ ತಲೆಪ್ಪಾಡಿ ಹಾಗೂ ಯತೀಶ್ ಕೋರ್ಮಂಡರವರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕೂವೆ ಶಾಸ್ತಾರ ಶ್ರೀವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ಧನ ಪದಡ್ಕ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಉಜಿರೆಮಾರ್, ವಕೀಲರಾದ ಶಂಭು ಭಟ್, ನೋಟರಿ ವಕೀಲರಾದ ಮಂಜುನಾಥ್ ಎನ್.ಎಸ್., ಪಾಣಾಜೆ ಕಿನ್ನಿಮಾಣಿ, ಪೂಮಾಣಿ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ವಕೀಲರಾದ ಸುರೇಶ್ ರೈ ಪಡ್ಡಂಬೈಲು, ಕುಂಬ್ರ ಲಕ್ಷ್ಮಿ ಕ್ಲಿನಿಕ್ನ ಡಾ.ಸುಭಾಷ್ ರೈ ನುಳಿಯಾಲು, ಬೆಟ್ಟಂಪಾಡಿ ಬ್ಯಾಂಕ್ ಆಫ್ ಬರೋಡದ ರಮೇಶ್ ಸುರ್ಯ, ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿರಿಯ ಗುಮಾಸ್ತ ಆರ್.ಬಿ.ಸುವರ್ಣ, ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ರಾಜೇಶ್ ನೆಲ್ಲಿತ್ತಡ್ಕ, ನ್ಯೂಯಾರ್ಕ್ನಲ್ಲಿನ ಉದ್ಯೋಗಿ ಪಿಎಚ್ಡಿ ವಿದ್ಯಾರ್ಥಿ ಕಾರ್ತಿಕ್ ಭಟ್ ಅಡ್ಯೆತ್ತಿಮಾರ್, ಬೆಟ್ಟಂಪಾಡಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಪ್ರಭಾಕರ ರೈ ಬಾಜುವಳ್ಳಿ, ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಗನ್ನಾಥ್ ರೈ ಕೊಮ್ಮಂಡ, ಕಕ್ಕೂರು ಶ್ರೀಸಿದ್ದಿವಿನಾಯಕ ಸೇವಾ ಸಂಘದ ಮಾಜಿ ಅಧ್ಯಕ್ಷ ನಾಗರಾಜ್ ತಲೆಪ್ಪಾಡಿ, ಮುಂಡೋವುಮೂಲೆ ಶ್ರೀದೇವಿ ಭಜನಾ ಮಂದಿರದ ಅಧ್ಯಕ್ಷ ಈಶ್ವರ ನಾಯ್ಕ, ಇಂಜಿನಿಯರ್ ದಿಲೀಪ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಮಚಂದ್ರ ಗೌಡ ಕಟ್ಟೆಕೋಡಿ, ಲಿಂಗಪ್ಪ ಗೌಡ ಪಂಬೆಜಾಲು, ಕೃಷ್ಣಪ್ಪ ಕುಲಾಲ್ ಉಡ್ಡಂಗಳ, ಶಶಿಧರ್ ಕಕ್ಕೂರು, ಜಯಪ್ರಕಾಶ್ ಕಕ್ಕೂರು, ಕುಶಾಲಪ್ಪ ನಾಯ್ಕ ಕೋಡಿ, ದಯಾನಂದ ವಿನಾಯಕನಗರ, ಪ್ರಸಾದ್ ಭಟ್ ಅಡ್ಯೆತ್ತಿಮಾರ್, ಲಕ್ಷ್ಮೀಶ ರೈ ಕಕ್ಕೂರು, ಗೋಪಾಲಕೃಷ್ಣ ನಾಯರಡ್ಕ, ನವೀನ್ ನಾಕಪ್ಪಾಡಿ, ಚರಣ್ ಮಿತ್ತಡ್ಕ, ಲಿಂಗಪ್ಪ ಗೌಡ ಕಕ್ಕೂರು, ಸನತ್ ರೈ ತೋಟದಮೂಲೆ, ಶಶಿಕಾಂತ್ ಕಕ್ಕೂರು, ಮಂಜುನಾಥ್ ರೈ ತೋಟದಮೂಲೆ, ಪುಷ್ಪರಾಜ್ ವಿನಾಯಕನಗರ, ರೂಪೇಶ್ ಆನಡ್ಕ, ಕುಶಾಲಪ್ಪ ಗೌಡ ಮಿತ್ತಡ್ಕ, ಶೇಖರ ಮಿತ್ತಡ್ಕ, ಹರೀಶ್ ಮಿತ್ತಡ್ಕ, ದಿನೇಶ್ ಪಂಬೆಜಾಲು, ಯೋಗೀಶ್ ಮಿತ್ತಡ್ಕರವರು ಅತಿಥಿಗಳನ್ನು ಗೌರವಿಸಿದರು. ಕುಮಾರಿ ನವ್ಯಶ್ರೀ ಕಕ್ಕೂರು ಪ್ರಾರ್ಥಿಸಿದರು. ಮಂದಿರದ ಗೌರವ ಸಲಹೆಗಾರ ಲಕ್ಷ್ಮೀನಾರಾಯಣ ರೈ ತೋಟದಮೂಲೆ ಸ್ವಾಗತಿಸಿದರು. ಶ್ರೀಸಿದ್ಧಿವಿನಾಯಕ ಸೇವಾ ಸಂಘದ ಕಾರ್ಯದರ್ಶಿ ಗಣೇಶ್ ಪಂಬೆಜಾಲು ವಂದಿಸಿ ಶಿಕ್ಷಕ, ಸಭಾಕಾರ್ಯಕ್ರಮ ಸಮಿತಿಯ ಸಹಸಂಚಾಲಕ ರಾಧಾಕೃಷ್ಣ ಕೋಡಿ ಕಾರ್ಯಕ್ರಮ ನಿರೂಪಿಸಿದರು.
ಮೇ.29ರಂದು ಸಂಜೆ ವಿದುಷಿ ವೀಣಾರಾಘವೇಂದ್ರರವರ ಶಿಷ್ಯೆಯರಾದ ಸಿರಿ ಹಿಳ್ಳೆಮನೆ ಮತ್ತು ಗೌರಿ ಹಿಳ್ಳೆಮನೆಯವರಿಂದ ಭಕ್ತಿ ಸಂಗೀತ, ಧಾರ್ಮಿಕ ಕಾರ್ಯಕ್ರಮದಲ್ಲಿ ಆಲಯ ಪರಿಗ್ರಹ, ದೇವತಾ ಪ್ರಾರ್ಥನೆ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ಭೂವರಾಹ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲ ಇದರ ಮಕ್ಕಳ ಮೇಳದವರಿಂದ ಸುದರ್ಶನ ವಿಜಯ, ಅಗ್ರಪೂಜೆ ಯಕ್ಷಗಾನ ನಡೆಯಿತು.

ಭಜನಾ ಮಂದಿರ ಪುನರ್ನಿರ್ಮಾಣದ ಶಾಶ್ವತ ದಾನಿಗಳಿಗೆ ಸನ್ಮಾನ
ಭಜನಾ ಮಂದಿರದ ಗರ್ಭಗೃಹದ ಮಾಡಿನ ಕೆಲಸವನ್ನು ಸೇವಾರ್ಥವಾಗಿ ನಿರ್ವಹಿಸಿದ ಲಿಂಗಪ್ಪ ಆಚಾರ್ಯ, ಭಜನಾಮಂದಿರಕ್ಕೆ ಧ್ವಜಸ್ತಂಭ ಕೊಡುಗೆಯಾಗಿ ನೀಡಿದ ಮಿತ್ತಡ್ಕ ಕೇಸರಿ ಮಿತ್ರವೃಂದ, ಭಜನಾ ಮಂದಿರದ ಪುನರ್ನಿರ್ಮಾಣಕ್ಕೆ ರೂ.50 ಸಾವಿರಕ್ಕಿಂತ ಮೇಲ್ಪಟ್ಟು ಧನಸಹಾಯ ನೀಡಿದ ಲಿಂಗಪ್ಪ ಗೌಡ ಕಕ್ಕೂರು, ಮರಮಟ್ಟು ಕೊಡುಗೆಯಾಗಿ ನೀಡಿದ ಆನಡ್ಕ ತ್ಯಾಂಪಣ್ಣ ಪೂಜಾರಿ ಹಾಗೂ ತಲೆಪ್ಪಾಡಿ ಸತ್ಯನಾರಾಯಣ ಮನಿಯಾಣಿರವರನ್ನು ಸಮಾರಂಭದ ಮುಖ್ಯ ಅತಿಥಿ ಬೈಕಂಪಾಡಿ ಶ್ರೀಗಣೇಶ್ ಇಂಡಸ್ಟ್ರೀಸ್ನ ಮಾಲಕ ಯತೀಶ್ ರೈ ಚೆಲ್ಯಡ್ಕ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಶಾಲು, ಹಾರ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.