ಉಪ್ಪಿನಂಗಡಿ: ನಿನ್ನೆ ಬೆಳಗ್ಗೆಯಿಂದ ಮೇ.31ರ ಬೆಳಗ್ಗಿನ ತನಕ ಉಪ್ಪಿನಂಗಡಿಯಲ್ಲಿ 223.4 ಮಿ.ಮೀ. ಮಳೆಯಾಗಿದ್ದು, ಭಾರೀ ಮಳೆಗೆ ಅಲ್ಲಲ್ಲಿ ಧರೆ, ಆವರಣ ಗೋಡೆಗಳ ಕುಸಿತ, ಮನೆಗೆ ಹಾನಿ, ರಸ್ತೆ ಸಂಚಾರಕ್ಕೆ ತಡೆ ಮೊದಲಾದ ಘಟನೆಗಳು ನಡೆದಿದೆ.

34 ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಧರೆ ಕುಸಿತಕ್ಕೊಳಗಾಗಿದ್ದು, ಕೆಲವು ಕಡೆ ಮರಗಳು, ಮಣ್ಣು ರಸ್ತೆಗೆ ಬಿದ್ದಿವೆ. ಕೆಲವು ವಿದ್ಯುತ್ ಕಂಬಗಳೂ ಧರೆಗುರುಳಿವೆ. 34 ನೆಕ್ಕಿಲಾಡಿ ಗ್ರಾಮದ ಕಜೆಯ ಮುಹಮ್ಮದ್ ಎಂಬವರ ಮನೆ ಬಳಿಯ ಧರೆ ಕುಸಿದಿದ್ದು, ಅಂಗಳ ತುಂಬೆಲ್ಲಾ ಮಣ್ಣಿನ ರಾಶಿ ಬಿದ್ದಿದೆ. ಶಿವಾನಂದ ಎಂಬವರ ಮನೆ ಬಳಿಯ ಧರೆಯು ತಡೆಗೋಡೆ ಸಹಿತ ಕುಸಿದು ಬಿದ್ದಿದ್ದು, ಧರೆ ಮೇಲಿರುವ ಇವರ ಮನೆ ಅಪಾಯದ ಸ್ಥಿತಿಯಲ್ಲಿದೆ. ಧರೆ ಜರಿದು ಹಮೀದ್ ಎಂಬವರ ಮನೆಗೆ ಹೋಗುವ ದಾರಿ ಬಂದ್ ಆಗಿದೆ. ಹನೀಫ್ ಎಂಬವರ ಮನೆಗೆ ಮರ ಬಿದ್ದಿದ್ದು, ಮನೆಯ ಅಡುಗೆ ಕೋಣೆಗೆ ಹಾನಿಯಾಗಿದೆ. ಅಬ್ದುರ್ರಹ್ಮಾನ್ ಯುನಿಕ್ ಅವರ ಫರ್ನಿಜರ್ ಅಂಗಡಿಗೆ ನೀರು ನುಗ್ಗಿದ್ದು, ಪೀಠೋಪಕರಣಗಳಿಗೆ ಹಾನಿಯಾಗಿವೆ. ಶಬೀರ್ ನೆಕ್ಕಿಲಾಡಿಯವರ ಮನೆಯ ಹಿಂದಿನ ಧರೆ ಕುಸಿತಕ್ಕೊಳಗಾಗಿದೆ. ಧರೆ ಕುಸಿದು ನೆಕ್ಕಿಲಾಡಿಯ ಮುಹಮ್ಮದ್ ಪಿ.ಪಿ. ಅವರ ಮನೆಯು ಅಪಾಯದ ಸ್ಥಿತಿಯಲ್ಲಿದೆ. ಇದಲ್ಲದೆ, ಆನೆಮಜಲು, ಆದರ್ಶನಗರ, ಶಾಂತಿನಗರ ಸೇರಿದಂತೆ ಗ್ರಾಮದ ಹಲವು ಕಡೆಗಳಲ್ಲಿ ಧರೆ ಕುಸಿದು ತೀವ್ರ ಹಾನಿಯಾಗಿದೆ.
ಶಾಸಕ ಅಶೋಕ್ ಕುಮಾರ್ ರೈವರ ಕೋಡಿಂಬಾಡಿಯ ರೈ ಎಸ್ಟೇಟ್ನಲ್ಲಿರುವ ದನದ ಕೊಟ್ಟಿಗೆಗೆ ಧರೆ ಕುಸಿದು ಬಿದ್ದಿದ್ದು, ದನವೊಂದು ಸಾವನ್ನಪ್ಪಿದೆ. ಉಪ್ಪಿನಂಗಡಿ ಗ್ರಾಮದ ಪಂಚೇರು ಹಾಗೂ ನಾಲಾಯದ ಗುಂಡಿ ಎಂಬಲ್ಲಿ ಸಣ್ಣ ಹೊಳೆಗಿರುವ ಕಿಂಡಿ ಅಣೆಕಟ್ಟಿನಲ್ಲಿ ಮರ ಸೇರಿದಂತೆ ಕಸ ಕಡ್ಡಿಗಳು ಬಂದು ತುಂಬಿಕೊಂಡಿದ್ದು, ಇದರಿಂದ ನೀರಿನ ಸರಾಗ ಹರಿವಿಗೆ ತಡೆಯುಂಟಾಗಿ ರಸ್ತೆ, ಸೇತುವೆಯ ಮೇಲೆಲ್ಲಾ ಹೊಳೆ ಉಕ್ಕಿ ಹರಿದಿದೆ.
ಪೆರಿಯಡ್ಕದ ನೆಕ್ಕರೆ ಎಂಬಲ್ಲಿ ರಸ್ತೆಗೆ ಮರಗಳೊಂದಿಗೆ ಧರೆಯು ಕುಸಿದು ಬಿದ್ದಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನೆಡ್ಚಿಲ್ ರಸ್ತೆಯ ಮೇಲೆ ಕೂಡಾ ಧರೆ ಕುಸಿದು ಬಿದ್ದಿದ್ದು, ಇಲ್ಲಿ ಕೂಡಾ ಸಂಚಾರಕ್ಕೆ ತೊಂದರೆಯಾಗಿದೆ. ಹರಿನಗರದಲ್ಲಿ ಕಿಶೋರ್ ಅವರ ಧರೆಯು ಜರಿದು ಉಷಾಚಂದ್ರ ಮುಳಿಯ ಅವರ ಮನೆಯೊಳಗೆ ಮಣ್ಣು ಹಾಗೂ ನೀರು ನುಗ್ಗಿದೆ. ಉಷಾಚಂದ್ರ ಅವರ ಆವರಣ ಗೋಡೆ ಕುಸಿದು ಬಿದ್ದು ಮೀನಾಕ್ಷಿ ಎಂಬವರ ಮನೆಗೆ ಹಾನಿಯಾಗಿದೆ.
ಹರಿನಗರದಲ್ಲಿ ಇನ್ನಿತರ ಕಡೆಗಳಲ್ಲಿಯೂ ಧರೆ ಕುಸಿದಿದೆ. ನಂದಿನಿನಗರ ಭಜನಾ ಮಂದಿರದ ಬಳಿಯೂ ಧರೆ ಕುಸಿದಿದೆ. ಕೂಟೇಲು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯ ಗುಡ್ಡ ಕುಸಿದಿದ್ದು, ವಿದ್ಯುತ್ ಕಂಬ ಹಾಗೂ ಮರಗಳು ಧರೆಗುರುಳಿವೆ. ಶ್ರೀ ಕ್ಷೇತ್ರ ಧರ್ಮಸ್ಥಳದವರ ಬೊಳ್ಳಾವಿನಲ್ಲಿರುವ ಜಾಗದಲ್ಲಿದ್ದ ಆವರಣ ಗೋಡೆ ಕುಸಿದು ಬಿದ್ದಿದೆ. ಧರೆ ಕುಸಿದಿದ್ದರಿಂದ ಕೊಪ್ಪಳದ ನೈಕುಳಿ ಎಂಬಲ್ಲಿ ರಮೇಶ್ ಎಂಬವರ ಮನೆಗೆ ಹಾನಿಯಾಗಿದೆ.
ಇಳಂತಿಲ ಗ್ರಾಮದ ಕಾಯರ್ಪಾಡಿಯಲ್ಲಿ ಕೂಡಾ ರಸ್ತೆಯ ಮೇಲೆ ಮರ ಬಿದ್ದು ಸಂಚಾರಕ್ಕೆ ತೊಡಕಾಗಿತ್ತು. ಒಟ್ಟಿನಲ್ಲಿ ನಿನ್ನೆಯ ಸಿಡಿಲು ಸಹಿತ ಭಾರೀ ಮಳೆಯು ಜನರನ್ನು ಭಯಭೀತಗೊಳಿಸಿದ್ದು, ರಸ್ತೆಗಳೆಲ್ಲಾ ತೋಡಾಗಿ ಮಾರ್ಪಾಡಾಗಿತ್ತು. ಮಳೆ ಬಿಟ್ಟ ಬಳಿಕ ರಸ್ತೆಗಳ ಮೇಲೆಲ್ಲಾ ಕಲ್ಲು, ಮಣ್ಣುಗಳ ರಾಶಿಯೇ ತುಂಬಿಕೊಂಡಿದ್ದು ನಿನ್ನೆಯ ಮಳೆಯ ಭೀಕರತೆಗೆ ಸಾಕ್ಷಿಯನ್ನೊದಗಿಸುತ್ತಿತ್ತು.