ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಪತ್ತು ನಿರ್ವಹಣಾ ಸಮಿತಿ ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಮೇ.31ರಂದು ಗ್ರಾಪಂ ಕಛೇರಿ ಸಭಾಂಗಣದಲ್ಲಿ ನಡೆಯಿತು.
ಮುಂಗಾರು ಆರಂಭದ ದಿನಗಳಲ್ಲೆ ಗ್ರಾಮದ ಹಲವು ಕಡೆಗಳಲ್ಲಿ ಕೆಲವೊಂದು ಧರೆ ಕುಸಿತದಂತಹ ಘಟನೆಗಳು ನಡೆದಿದ್ದು ಮನೆಗಳಿಗೆ ಹಾನಿ ಸಂಭವಿಸಿದೆ. ಎಲ್ಲೆಲ್ಲಿ ಮಳೆ,ಗಾಳಿಯಿಂದ ಹಾನಿ ಸಂಭವಿಸಿದೆ ಆ ಪ್ರದೇಶಗಳಿಗೆ ಪಂಚಾಯತ್ನಿಂದ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ತಿಳಿಸಿದರು. ಸಮಿತಿಯ ನೋಡೆಲ್ ಅಧಿಕಾರಿಯಾಗಿರುವ ಮೆಸ್ಕಾಂ ಎಇಇ ಶಿವಶಂಕರ್ರವರು ಗ್ರಾಮದಲ್ಲಿ ಯಾವುದೇ ಅನಾಹುತ ಸಂಭವಿಸಿದರೂ ತಕ್ಷಣವೇ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳಿಗೆ ಅಥವಾ ಸದಸ್ಯರುಗಳಿಗೆ ತಿಳಿಸುವಂತೆ ಕೇಳಿಕೊಂಡರು.
ಪರ್ಪುಂಜದಲ್ಲೊಂದು ಅಪಾಯಕಾರಿ ಮರ: ಪರ್ಪುಂಜ ಲಕ್ಷ್ಮೀ ಬಟ್ಯ ಎಂಬವರ ಮನೆಯ ಪಕ್ಕದಲ್ಲಿ ಅಪಾಯಕಾರಿಯಾಗಿದ್ದ ಮರವೊಂದಿದ್ದು ಇದು ಬೀಳುವ ಸ್ಥಿತಿಯಲ್ಲಿದೆ. ಈ ಮರ ಬಿದ್ದರೆ ಪಕ್ಕದಲ್ಲಿರುವ ಎರಡು ಮನೆಗಳಿಗೆ ಹಾನಿಯಂಟಾಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ತೆರವು ಕಾರ್ಯ ನಡೆದಿಲ್ಲ ಎಂಬ ವಿಚಾರವನ್ನು ಸಭೆಯಲ್ಲಿ ಸದಸ್ಯರುಗಳು ತಿಳಿಸಿದರು. ಗ್ರಾಪಂ ಅಧ್ಯಕ್ಷರು ಮಾತನಾಡಿ, ಮರ ಮುರಿದು ಬಿದ್ದು ಜೀವ ಹಾನಿ ಸಂಭವಿಸಿದರೆ ಅದಕ್ಕೆ ಯಾರು ಹೊಣೆ? ತಕ್ಷಣವೇ ಮರ ತೆರವುಗೊಳಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದೆ ಅಪಾಯಕಾರಿ ಹೊಂಡಗಳು: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗ್ರಾಪಂ ವ್ಯಾಪ್ತಿಯಲ್ಲೇ ರಸ್ತೆ ಬದಿಯಲ್ಲಿ ಅಪಾಯಕಾರಿ ಹೊಂಡಗಳು ನಿರ್ಮಾಣಗೊಂಡಿವೆ. ಕುಂಬ್ರ ಸೇತುವೆಯಿಂದ ಕುಂಬ್ರಕ್ಕೆ ಬರುವಾಗ ರಸ್ತೆ ಬದಿಯಲ್ಲೇ ದೊಡ್ಡ ಗಾತ್ರದ ಕಣಿ ನಿರ್ಮಾಣಗೊಂಡಿದ್ದು ವಾಹನ ಸವಾರರಿಗೆ, ಪಾದಚಾರಿಗಳಿಗೆ ಅಪಾಯವನ್ನು ತಂದೊಡ್ಡಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ಅಪಾಯಕಾರಿ ಮರ,ಮರದ ಗೆಲ್ಲು ತೆರವುಗೊಳಿಸಿ: ಶೇಖಮಲೆ, ದರ್ಬೆತ್ತಡ್ಕ, ಅಜಲಡ್ಕ ಪರಿಸರದಲ್ಲಿ ವಿದ್ಯುತ್ ಕಂಬಗಳಿಗೆ ಅಪಾಯ ತರಬಲ್ಲಂತಹ ಮರ ಹಾಗೂ ಮರದ ಗೆಲ್ಲುಗಳಿದ್ದು ಈ ಬಗ್ಗೆ ಮೆಸ್ಕಾಂ ಜಾಗೃತ ವಹಿಸಬೇಕು ಎಂದು ಶೀನಪ್ಪ ನಾಯ್ಕ ತಿಳಿಸಿದರು. ಕೈಕಾರ ಆರೋಗ್ಯ ಇಲಾಖೆಯ ಆರೋಗ್ಯ ಉಪಕೇಂದ್ರದ ಬಳಿ ಟ್ರಾನ್ಸ್ಫಾರ್ಮರ್ ಇದರಲ್ಲಿ ಬೆಂಕಿ ಹತ್ತಿಕೊಳ್ಳುತ್ತಿದೆ. ಇದರಿಂದ ಅಪಾಯವಿದ್ದು ಈ ಬಗ್ಗೆ ಪರಿಶೀಲನೆ ಮಾಡುವಂತೆ ಸಿಎಚ್ಒ ವಿದ್ಯಾಶ್ರೀ ಕೇಳಿಕೊಂಡರು, ಪರ್ಪುಂಜ ಕುರಿಯ ರಸ್ತೆಯಲ್ಲಿ ಮಾವಿನ ಮರವಿದ್ದು ಇದರ ಗೆಲ್ಲು ತೆರವು ಮಾಡಬೇಕು, ದೇವಸ್ಯ-ದೇರ್ಲ ಪಿಡಬ್ಲ್ಯೂ ರಸ್ತೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪು ಲೈನ್ ಕಾಮಗಾರಿಯಿಂದ ಚರಂಡಿ ಸಮಸ್ಯೆ ಉಂಟಾಗಿದ್ದು ಮಳೆ ನೀರು ಹರಿದು ಹೋಗಲು ಸಮಸ್ಯೆಯಾಗಿದೆ ಎಂದು ಮಹೇಶ್ ರೈ ಕೇರಿ ತಿಳಿಸಿದರು. ಪರ್ಪುಂಜ ಆರೋಗ್ಯ ಉಪಕೇಂದ್ರದ ಬಳಿ ಮರವಿದೆ ತೆರವು ಮಾಡಬೇಕು, ಮುಡಾಲ ಬಸ್ಸು ತಂಗುದಾಣದ ಬಳಿ ಆಲದ ಮರ ಗೆಲ್ಲು ತೆರವು ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳು ಸಭೆಯಿಂದ ಕೇಳಿಬಂದವು. ಎಲ್ಲಾ ಬೇಡಿಕೆ,ಸಮಸ್ಯೆಗಳನ್ನು ದಾಖಲಿಸಿಕೊಳ್ಳಲಾಯಿತು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಗ್ರಾಮ ಆಡಳಿತ ಅಧಿಕಾರಿ ಸುನೀತಾ, ಸಭೆಯಲ್ಲಿ ಗ್ರಾಪಂ ಸದಸ್ಯರುಗಳಾದ ಲತೀಪ್ ಕುಂಬ್ರ, ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ ಕೇರಿ, ಸುಂದರಿ, ಶಾರದಾ, ಬಿ.ಸಿ ಚಿತ್ರಾ, ರೇಖಾ ಯತೀಶ್, ನಳಿನಾಕ್ಷಿ ಹಾಗೇ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್. ಸ್ವಾಗತಿಸಿ, ವಂದಿಸಿದರು. ಗ್ರಾಪಂ ಕಾರ್ಯದರ್ಶಿ ಜಯಂತಿಯವರು ಗ್ರಾಮದ ಬೇಡಿಕೆ, ಸಮಸ್ಯೆಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಜಾನಕಿ, ಕೇಶವ, ಗುಲಾಬಿ, ಲೋಕನಾಥ್, ಮೋಹನ್, ಸಿರಿನಾ ಸಹಕರಿಸಿದ್ದರು.