ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸೋಣ: ಹರಿಣಾಕ್ಷಿ
ಪುತ್ತೂರು: ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಕಿಶೋರಿಯರ ಬಗ್ಗೆ ಹೆತ್ತವರು ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯತೆ ಇದೆ. ತಮ್ಮ ಮಕ್ಕಳಿಗೆ ಗುಡ್ ಟಚ್ ಯಾವುದು ಬ್ಯಾಡ್ ಟಚ್ ಯಾವುದು ಎಂಬುದನ್ನು ತಿಳಿಸಿಕೊಡಬೇಕಾದ ಅಗತ್ಯತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಹರಿಣಾಕ್ಷಿಯವರು ಹೇಳಿದರು.
ಅವರು ಮೇ.31 ರಂದು ಗ್ರಾಪಂ ಸಭಾಂಗಣದಲ್ಲಿ ನಡೆದ ಒಳಮೊಗ್ರು ಗ್ರಾಮ ಪಂಚಾಯತ್ನ 2025-26 ನೇ ಸಾಲಿನ ಮಹಿಳಾ ಗ್ರಾಮಸಭೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಬಗ್ಗೆ ಮಾಹಿತಿ ನೀಡಿದರು. ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಿಳೆಯರ ಹಾಗೂ ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರು ತಕ್ಷಣವೇ ಮಹಿಳಾ ಸಾಂತ್ವನ ಕೇಂದ್ರಕ್ಕೆ ಅಥವಾ ಮಹಿಳಾ ಸಹಾಯವಾಣಿ ಅಥವಾ ಮಹಿಳಾ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಬಹುದು ಎಂದು ಹರಿಣಾಕ್ಷಿಯವರು ತಿಳಿಸಿದರು.
ಪುತ್ತೂರು ಮಹಿಳಾ ಸಾಂತ್ವನ ಕೇಂದ್ರದ ನಿಶಾಪ್ರಿಯರವರು ಮಾತನಾಡಿ, ಮಹಿಳೆಯರಿಗೆ ಮತ್ತು ಕಿಶೋರಿಯರಿಗೆ ಮನೆಯ ಒಳಗೆ, ಮನೆಯ ಹೊರಗೆ ಆಗುವ ಯಾವುದೇ ರೀತಿಯ ದೌರ್ಜನ್ಯವಿದ್ದರೂ ತಕ್ಷಣವೇ ಅವರು ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರನ್ನು ನೀಡಬಹುದಾಗಿದೆ. ಮಕ್ಕಳ ಮೊಬೈಲ್ ಬಳಕೆಯ ಮೇಲೆ ಹೆತ್ತವರು ನಿಗಾ ವಹಿಸುವುದು ಅತೀ ಅಗತ್ಯ. ಮಕ್ಕಳ ಮೊಬೈಲ್ಗಳನ್ನು ಪರಿಶೀಲನೆ ಮಾಡುತ್ತಾ ಇರಬೇಕು ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಸಹಾಯಕಿ ವಿದ್ಯಾಶ್ರೀಯವರು ಮಹಿಳೆಯರ ಆರೋಗ್ಯದ ಬಗ್ಗೆ, ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು. ಸಿಎಚ್ಒ ಶಶಿಕಲಾರವರು ಮಹಿಳೆಯರನ್ನು ಮಕ್ಕಳನ್ನು ಕಾಡುವ ವಿವಿಧ ರೀತಿಯ ಖಾಯಿಲೆಗಳ ಬಗ್ಗೆ ಹಾಗೇ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಸಭಾಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ಮಹಿಳೆಯರ ಮೇಲೆ ಅಥವಾ ಕಿಶೋರಿಯರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೂ ಪಂಚಾಯತ್ ಗಮನಕ್ಕೆ ತರಬಹುದು ಅಥವಾ ಮಹಿಳಾ ಸಹಾಯವಾಣಿಗೆ ತಿಳಿಸಬಹುದು. ಪಂಚಾಯತ್ ಸದಾ ನಿಮ್ಮೊಂದಿಗೆ ಇದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳಾದ ಲತೀಪ್ ಕುಂಬ್ರ, ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ ಕೇರಿ, ಸುಂದರಿ, ಶಾರದಾ, ಬಿ.ಸಿ ಚಿತ್ರಾ, ರೇಖಾ ಯತೀಶ್, ನಳಿನಾಕ್ಷಿ ಹಾಗೇ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಜಾನಕಿ, ಕೇಶವ, ಗುಲಾಬಿ, ಲೋಕನಾಥ್, ಮೋಹನ್ ಕೆ.ಪಿ, ಸಿರಿನಾ ಸಹಕರಿಸಿದ್ದರು.
ಮಹಿಳಾ ಸಹಾಯವಾಣಿ 181 ಗೆ ದೂರು ನೀಡಿ
ಮಹಿಳೆಯರಿಗೆ ಅಥವಾ ಹದಿ ಹರೆಯದ ಕಿಶೋರಿಯರಿಗೆ ಮನೆಯ ಒಳಗೆ ಅಥವಾ ಹೊರಗೆ ಎಲ್ಲಿಯಾದರೂ ಲೈಂಗಿಕ ದೌರ್ಜನ್ಯವಾಗಿರಬಹುದು ಅಥವಾ ಮಾನಸಿಕವಾಗಿ ಯಾವುದೇ ದೌರ್ಜನ್ಯಗಳು ನಡೆದರೂ ತಕ್ಷಣವೇ ಮಹಿಳಾ ಸಹಾಯವಾಣಿ 181ಗೆ ಕರೆ ಮಾಡಿ ತಿಳಿಸಬಹುದು ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ದೂರು ಅರ್ಜಿ ನೀಡಬಹುದಾಗಿದೆ. ಇದಲ್ಲದೆ ಸ್ಥಳೀಯ ಪಂಚಾಯತ್, ಮಹಿಳಾ ಸಾಂತ್ವನ ಕೇಂದ್ರಕ್ಕೆ ತಿಳಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಹರಿಣಾಕ್ಷಿಯವರು ತಿಳಿಸಿದರು.
ಮಗುವನ್ನು ದತ್ತು ಪಡೆಯುವವರಿಗೊಂದು ‘ಮಮತೆಯ ತೊಟ್ಟಿಲು.’
ಮಕ್ಕಳು ಇಲ್ಲದೇ ಇರುವ ದಂಪತಿಗಳಿಗೆ ಮಕ್ಕಳನ್ನು ದತ್ತು ಪಡೆದುಕೊಳ್ಳುವ ಅವಕಾಶವಿದ್ದು ಇದಕ್ಕಾಗಿಯೇ ಕಾನೂನು ಇದೆ. ಪ್ರತಿ ಸರಕಾರಿ ಆಸ್ಪತ್ರೆ ಸೇರಿದಂತೆ ಶಿಶು ಅಭಿವೃದ್ಧಿ ಇಲಾಖೆಯಲ್ಲೂ ‘ಮಮತೆಯ ತೊಟ್ಟಿಲು’ ಎಂಬ ಯೋಜನೆ ಇದ್ದು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಮಕ್ಕಳನ್ನು ದತ್ತು ಪಡೆದುಕೊಳ್ಳುವ ಅವಕಾಶವಿದೆ.ಆದರೆ ಇದಕ್ಕಾಗಿಯೇ ಕಾನೂನು ಕ್ರಮಗಳಿದ್ದು ಈ ಕಾನೂನು ರೀತಿಯಲ್ಲಿಯೇ ಮಕ್ಕಳ ದತ್ತು ಪ್ರಕ್ರಿಯೆ ನಡೆಯುತ್ತದೆ ಎಂದು ಇಲಾಖಾ ಮೇಲ್ವಿಚಾರಕಿ ಹರಿಣಾಕ್ಷಿಯವರು ಮಾಹಿತಿ ನೀಡಿದರು.
ಪ್ರತಿಯೊಬ್ಬರು ಶೇ.20 ಮಾನಸಿಕ ಅಶ್ವಸ್ಥರೇ…?!
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಶೇ.20 ರಷ್ಟು ಮಾನಸಿಕ ಅಶ್ವಸ್ಥತೆ ಇದ್ದೇ ಇರುತ್ತದೆ. ಯಾರೂ ಪರಿಪೂರ್ಣರಾಗಿರುವುದಿಲ್ಲ. ಆದರೆ ಇದು ಶೇ.20 ಕ್ಕಿಂತ ಹೆಚ್ಚು ದಾಟಬಾರದು ಆಗ ನಾವು ಖಿನ್ನತೆಗೆ ಹೋಗುತ್ತವೆ. ನಮ್ಮನ್ನು ಮಾನಸಿಕ ಖಾಯಿಲೆ ಆವರಿಸಿಕೊಳ್ಳುತ್ತದೆ. ಬೇರೆ ಬೇರೆ ಕಾರಣಗಳಿಂದ ಇಂದು ಇಂತಹ ಮಾನಸಿಕ ಖಿನ್ನತೆಯಂತಹ ಖಾಯಿಲೆಗಳು ಜಾಸ್ತಿಯಾಗುತ್ತಿದೆ. ಈ ಬಗ್ಗೆ ನಾವು ಜಾಗೃತೆ ವಹಿಸಬೇಕಾಗಿದೆ. ನಮ್ಮ ಮಕ್ಕಳು ಕೂಡ ಯಾವುದೇ ಚಟಗಳಿಗೆ ಬೀಳದಂತೆ ಜಾಗೃತೆ ವಹಿಸಬೇಕಾಗಿದೆ. ನಮ್ಮ ಮಾನಸಿಕ ಆರೋಗ್ಯ ಕೂಡ ನಮ್ಮ ಕೈಯಲ್ಲೇ ಇದೆ.
- ನಿಶಾಪ್ರಿಯ, ಮಹಿಳಾ ಸಾಂತ್ವನ ಕೇಂದ್ರ ಪುತ್ತೂರು
‘ ಮಹಿಳೆಯರ ಅಥವಾ ಕಿಶೋರಿಯರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೂ ಹೆದರುವ ಅವಶ್ಯಕತೆ ಇಲ್ಲ ತಕ್ಷಣವೇ ಪಂಚಾಯತ್ ಗಮನಕ್ಕೆ ತನ್ನಿ ನಾವು ನಿಮ್ಮೊಂದಿಗೆ ಸದಾ ಇದ್ದೇವೆ ಅಥವಾ ಮಹಿಳಾ ಸಹಾಯವಾಣಿ, ಮಹಿಳಾ ಪೊಲೀಸ್ ಠಾಣೆಗೆ, ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿ. ಮನೆಯಲ್ಲಿರುವ ಮಕ್ಕಳ ಬಗ್ಗೆ ಕಾಳಜಿ ಇರಲಿ.’ - ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ