ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಜೂನ್.2ರಂದು ಪ್ರಥಮ ಪದವಿ ಪೂರ್ವ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಉದ್ಘಾಟನೆಯು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರು ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ.ಶ್ರೀ ಪ್ರಕಾಶ್ ಬಿ ಮಾತನಾಡಿ, ಎಲ್ಲಾ ರೀತಿಯ ಉತ್ತಮವಾದ ಸೌಕರ್ಯವನ್ನು ಒದಗಿಸುವುದರ ಜೊತೆಗೆ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಸ್ಥೆ ಪುತ್ತೂರಿನ ಸಂತ ಫಿಲೋಮಿನಾ ಪ.ಪೂ ಕಾಲೇಜು. ವಿದ್ಯಾರ್ಥಿಯ ಭವಿಷ್ಯದಲ್ಲಿ ಉತ್ತಮವಾದ ಕನಸು ಇರಬೇಕು. ಒಳ್ಳೆಯ ಗುರಿಯನ್ನು ಕಷ್ಟಪಟ್ಟು ಸಾಧಿಸುತ್ತೇನೆ ಎನ್ನುವ ಮನಸ್ಸು ಇರಬೇಕು. ಸಹಿಸುವಿಕೆಯಿಂದ ನಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕು. ಕನಸು-ಮನಸ್ಸು- ಸಹಿಸು-ನನಸು ಈ ನಾಲ್ಕು ಬದ್ಧತೆಗಳು ನಮ್ಮ ಜೊತೆ ಇದ್ದಾಗ ಖಂಡಿತವಾಗಿಯೂ ಯಶಸ್ಸನ್ನು ಕಾಣಲು ಸಾಧ್ಯ. ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಯಶಸ್ಸನ್ನು ಕಾಣುವಂತಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ. ಫಾ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ನಮ್ಮ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸದ ಜೊತೆಗೆ ಮೌಲ್ಯಯುತವಾದ ವ್ಯಕ್ತಿತ್ವವನ್ನು ಬದುಕಿನಲ್ಲಿ ರೂಪಿಸಿಕೊಂಡು ನಮ್ಮ ದೇಶಕ್ಕೆ ಒಳ್ಳೆಯ ಆಸ್ತಿಯಾಗಬೇಕು. ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ತಮಗೆ ಸಿಕ್ಕಿರುವ ಅವಕಾಶವನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಕಾಣಬೇಕು. ಒಳ್ಳೆಯ ಶಿಸ್ತು, ಸಮಯ ಪಾಲನೆ, ಶ್ರದ್ಧೆ, ಉತ್ತಮ ನಡವಳಿಕೆ ಹಾಗೂ ವಿಶಾಲವಾದ ಮನೋಭಾವವನ್ನು ಬೆಳೆಸಿಕೊಂಡು, ಎಲ್ಲರನ್ನು ಪ್ರೀತಿಸಿ ಗೌರವಿಸುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತಾಗಲಿ ಎಂದು ಹೇಳಿದರು.

ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾದ ಜೆರಾಲ್ಡ್ ಡಿ ಕೋಸ್ಟ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಸ್ಎಸ್ಎಲ್ಸಿ ಯಲ್ಲಿ 612 ಕ್ಕಿಂತ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಅಶೋಕ್ ರಾಯನ್ ಕ್ರಾಸ್ತಾ ಪ್ರಾಸ್ತಾವಿಕ ನುಡಿಗಳನ್ನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರದರ್ಶನ ಕಲಾಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕಿಯರಾದ ಫಿಲೋಮಿನಾ ಮೊಂತೆರೋ ಸ್ವಾಗತಿಸಿ, ಕವಿತಾ ಕೆ ವಂದಿಸಿ, ಸುಮಾ ಡಿ ಕಾರ್ಯಕ್ರಮವನ್ನು ನಿರೂಪಿಸಿದರು.