ಪುತ್ತೂರು: ಶತಮಾನದ ಹೊಸ್ತಿಲಲ್ಲಿರುವ ದರ್ಬೆ ಲಿಟ್ಲ್ ಫ್ಲವರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೫-೨೬ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಜೂ.೨ರಂದು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು.

ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಮಾತನಾಡಿ ಲಿಟ್ಲ್ ಫ್ಲವರ್ ಶಾಲೆಯ ಮಕ್ಕಳು ಬಿಗ್ ಫ್ಲವರ್ಗಳು ರಾಷ್ಟ್ರ ಮಟ್ಟದವರೆಗೆ ತನ್ನ ಛಾಪನ್ನು ಮೂಡಿಸಿದ್ದಾರೆ. ಇಲ್ಲಿನ ಮಕ್ಕಳ ಶಿಸ್ತು ಅದ್ಭುತ, ಹಿರಿಯರಿಗೆ ಕೊಡೊ ಗೌರವ ಇನ್ನೂ ಚಂದ, ಇತರ ಶಾಲೆಗೆ ಅನುಕರಣೀಯ, ಮುಂದಿನ ಶೈಕ್ಷಣಿಕ ವರ್ಷದಲ್ಲೂ ಗತವರ್ಷದ ಸಾಧನೆ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಪಠ್ಯ ಪುಸ್ತಕ ವಿತರಿಸಿ ಮಾತನಾಡಿದ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ, ಪುತ್ತೂರಿನ ಸಣ್ಣ ಊರಿನ ಲಿಟ್ಲ್ ಫ್ಲವರ್ ಶಾಲೆಯ ಮಕ್ಕಳು ಇವತ್ತು ದೇಶದಲ್ಲಿ ಗುರುತಿಸಿಕೊಂಡಿದ್ದು ಇಲ್ಲಿನ ಶಿಕ್ಷಕರ ಶ್ರಮ, ವಿದ್ಯಾರ್ಥಿಗಳ ಕಾರ್ಯವೈಖರಿ ಮೆಚ್ಚುವಂತಹದು. ಇಲ್ಲಿನ ವಾತಾವರಣವೇ ನಮ್ಮನ್ನು ಪದೇ ಪದೇ ಈ ಶಾಲೆಗೆ ಬರುವಂತೆ ಮಾಡುತ್ತದೆ ಎಂದರು.

ಹಿರಿಯ ವಿದ್ಯಾರ್ಥಿ, ಉದ್ಯಮಿ, ಬಿ.ಜಿ ಕನ್ಸ್ಟ್ರಕ್ಷನ್ನ ಮ್ಹಾಲಕ ಬಿ.ಜಿ ಜುನೈದ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್ ಮಾತನಾಡಿ, ಶುಭ ಹಾರೈಸಿದರು. ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ ಸ್ಥಾಪಕ ಅಧ್ಯಕ್ಷರು, ತಾಲೂಕ್ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತರಾದ ರಝಾಕ್ ಬಪ್ಪಳಿಗೆ, ಹಿರಿಯ ವಿದ್ಯಾರ್ಥಿ, ಕೋಸ್ಟಲ್ ಹೋಮ್ ಮಾಲಕ ಸಂದೇಶ್ ರೈ ಹಾಗೂ ನಿವೃತ್ತ ಶಿಕ್ಷಕಿ ಭಗಿನಿ ಡೈನ ಮೇರಿ ಸಿಕ್ವೆರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುತ್ತೂರು ನಗರ ಠಾಣೆಯ ಉಪ ನಿರೀಕ್ಷಕ ಆಂಜನೇಯ ರೆಡ್ಡಿಯವರು, ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ರಸ ಪ್ರಶ್ನೆ ಕೇಳಿ ಬಹುಮಾನ ನೀಡಿ ಅಭಿನಂದಿಸಿದರು. ವರ್ಗಾವಣೆಗೊಳ್ಳುತ್ತಿರುವ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ರವರನ್ನು ಸನ್ಮಾನಿಸಲಾಯಿತು. ಶಾಲಾ ಹಿರಿಯ ಶಿಕ್ಷಕಿ ವಿಲ್ಮಾ ಫೆರ್ನಾಂಡಿಸ್ ಸ್ವಾಗತಿಸಿ, ಶಿಕ್ಷಕಿ ದಿವ್ಯ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರು ಸಹಕರಿಸಿದರು.