ಪುತ್ತೂರು: ಸಂತ ಫಿಲೋಮಿನ ಅನುದಾನಿತ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ| ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು-ಸಂಯಮ ಇರಬೇಕು. ಸಂಸ್ಥೆಯು ನೀಡಿದ ಸೌಲಭ್ಯವನ್ನು ಅಚ್ಚುಕಟ್ಟಾಗಿ ಕಾಪಾಡಬೇಕು. ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

ಸನ್ಮಾನ:
ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯನ್ನು ಪಡೆದಂತಹ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಕ ಕ್ಲೆಮೆಂಟ್ ಪಿಂಟೊ ಅಭಿನಂದನಾ ಭಾಷಣ ಮಾಡಿದರು. ಮಾಯ್ ದೆ ದೇವುಸ್ ಚರ್ಚ್ಗೆ ಹೊಸದಾಗಿ ಆಗಮಿಸಿದ ಸಹಾಯಕ ಧರ್ಮಗುರು ವಂ| ಮರ್ವಿನ್ ಪ್ರವೀಣ್ ಲೋಬೊರವರನ್ನು ಸ್ವಾಗತಿಸಿ ಸನ್ಮಾನಿಸಲಾಯಿತು. ಶಿಕ್ಷಕಿ ರೇಷ್ಮಾ ರೆಬೆಲ್ಲೊ ಸಹಾಯಕ ಧರ್ಮಗುರುಗಳ ಬಗ್ಗೆ ಮಾತನಾಡಿದರು. ಪುತ್ತೂರಿನ ಖ್ಯಾತ ಚರ್ಮ ವೈದ್ಯ ಡಾ.ಬದರಿನಾಥ್ರವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಮೋಲಿ ಫೆರ್ನಾಂಡಿಸ್ ಡಾ.ಬದರನಾಥ್ ಅವರ ಸಾಧನೆಯ ಬಗ್ಗೆ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಧರ್ಮಗುರು ವಂ| ಮರ್ವಿನ್ ಪ್ರವೀಣ್ ಲೋಬೊ ಮಾತನಾಡಿ ವಿದ್ಯಾರ್ಥಿಗಳೆಲ್ಲರೂ ಶಿಕ್ಷಕರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು. ಅವರು ತಿಳಿ ಹೇಳಿದ ರೀತಿಯಲ್ಲಿ ನಡೆದಲ್ಲಿ ಮಹತ್ತರ ಸಾಧನೆಯನ್ನು ಸಾಧಿಸಬಹುದು ಎಂದು ಹೇಳಿದರು. ಸನ್ಮಾನ ಸ್ವೀಕರಿಸಿದ ಡಾ.ಬದರಿನಾಥ್ ಮಾತನಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ತಮ್ಮನ್ನು ಪ್ರೌಢಶಾಲೆಯಲ್ಲಿ ಬೆಳೆಸಿದಂತಹ ಗುರುಗಳನ್ನು ಸ್ಮರಿಸಿದರು.
ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ, ಮುಖ್ಯಗುರು ವಂ|ಮ್ಯಾಕ್ಸಿಮ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರ್ವಧರ್ಮ ಪ್ರಾರ್ಥನಾ ವಿಧಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಹಿರಿಯ ಶಿಕ್ಷಕಿ ಕಾರ್ಮಿನ್ ಪಾಯ್ಸ್ ಸ್ವಾಗತಿಸಿದರು. ಶಿಕ್ಷಕ ರೋಶನ್ ವಂದಿಸಿ ಶಿಕ್ಷಕಿ ಆಶಾ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.