ಉಪ್ಪಿನಂಗಡಿ: ಖಾಸಗಿ ಶಾಲೆಯಲ್ಲಿರುವ ಶಿಕ್ಷಕರಿಂದಲೂ ಸರಕಾರಿ ಶಾಲೆಯಲ್ಲಿರುವ ಶಿಕ್ಷಕರಲ್ಲಿ ಇಮ್ಮಡಿ ಪ್ರತಿಭೆಗಳಿವೆ ಮತ್ತು ಅವರಲ್ಲಿರುವ ಶಿಕ್ಷಣದ ಬದ್ಧತೆ ಖಾಸಗಿ ಶಾಲೆಯವರಲ್ಲಿ ಇರುವುದಿಲ್ಲ. ಆದರೆ ಸಮಾಜದಲ್ಲಿ ಸರಕಾರಿ ಶಾಲೆಯ ಬಗ್ಗೆ ಕೀಳರಿಮೆ ಮತ್ತು ತಪ್ಪು ಅಭಿಪ್ರಾಯಗಳಿವೆ. ವಾಸ್ತವವಾಗಿ ಸರಕಾರಿ ಶಾಲೆಯಲ್ಲಿ ಲಭಿಸುವ ಶಿಕ್ಷಣ ಖಾಸಗಿ ಶಾಲೆಯಲ್ಲಿ ಲಭಿಸದು ಹೀಗಾಗಿ ಶಿಕ್ಷಣಕ್ಕೆ ಆಸಕ್ತಿಯೇ ಮುಖ್ಯ ಹೊರತು ಶ್ರೀಮಂತಿಕೆ ಅಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಜೂ.2ರಂದು ಬಜತ್ತೂರು ಸರಕಾರಿ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಸಮನ್ವಯ ಟ್ರಸ್ಟ್ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಸಂಕಲ್ಪ ದಿನದ ಸಂಭ್ರಮ ಮತ್ತು ಶಾಲಾ ವಾಹನ ಮತ್ತು ಎಲ್.ಕೆ.ಜಿ. ತರಗತಿ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಶಾಲೆಗೆ ಸವಾಲು ಹಾಕುವ ರೀತಿಯಲ್ಲಿ ಯೋಜನೆಯನ್ನು ಹಾಕಿಕೊಂಡು, ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುವ ಈ ದಿನಗಳಲ್ಲಿ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ಸರಕಾರಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ್ದೀರಿ. ಇದಕ್ಕಾಗಿ ಶ್ರಮಿಸುತ್ತಿರುವ ಎಲ್ಲರನ್ನು ಅಭಿನಂಧಿಸುವುದಾಗಿ ತಿಳಿಸಿದರು.
ಕೆ.ಪಿ.ಎಸ್. ಸ್ಕೂಲ್ ಮಂಜೂರಾತಿಗೆ ಪ್ರಯತ್ನಿಸುವೆ:
ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಣ ಸಮನ್ವಯ ಟ್ರಸ್ಟ್ ಇಲ್ಲಿಗೆ ಕೆ.ಪಿ.ಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಮಂಜೂರು ಮಾಡುವಂತೆ ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯಿಸಿ ಈ ಶಾಲೆ ಕೆಪಿಎಸ್ ಶಾಲೆ ಮಾಡುವುದಕ್ಕೆ ಅರ್ಹತೆಯನ್ನು ಹೊಂದಿದೆ. ಈಗಾಗಲೇ ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ 4 ಕೆ.ಪಿ.ಎಸ್. ಶಾಲೆ ಇದೆ. ಇನ್ನೂ 2 ಕೆ.ಪಿ.ಎಸ್. ಸ್ಕೂಲ್ ಮಾಡಿಸುವುದಕ್ಕೆ ಅಸಕ್ತನಾಗಿದ್ದೇನೆ. ನಿಮ್ಮ ಕಡೆಯಿಂದ ಅದರ ಮಂಜೂರಾತಿ ಆಗಬೇಕಾದ ದಾಖಲೆಯನ್ನು ಅರ್ಪಿಸಿ ಶಿಕ್ಷಣಾಧಿಕಾರಿಯಿಂದ ಸರಕಾರಕ್ಕೆ ಪ್ರಸ್ತಾವನೆ ಕಲಿಸುವಂತೆ ಮಾಡಿ. ಆ ಬಳಿಕ ನಾನು ಸರಕಾರಕ್ಕೆ ಒತ್ತಡ ತಂದು ಮಂಜೂರಾತಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳು ಮತ್ತು ಊರ ದಾನಿಗಳ ಸಹಕಾರ ಪಡೆದುಕೊಂಡು ಶಾಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ. ಮುಂದೆ ಕೆಪಿಎಸ್ ಸ್ಕೂಲ್ ತೆರೆಯುವುದಕ್ಕೆ ಕನಿಷ್ಠ 5 ಎಕ್ರೆ ಜಾಗ ಬೇಕಾಗುತ್ತದೆ, ಅದು ಇಲ್ಲಿ ಲಭ್ಯ ಇದೆ. ಹೀಗಿರುವಾಗ ಅದಕ್ಕೆ ಬೇಕಾದ ದಾಖಲೆಗಳನ್ನು ಒದಗಿಸಿ ಕೊಡಿ, ಇಲಾಖೆಯ ವತಿಯಿಂದ ಆಗಬೇಕಾದ ಎಲ್ಲಾ ಕೆಲಸವನ್ನು ಮಾಡುವುದಾಗಿ ತಿಳಿಸಿದರಲ್ಲದೆ, ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು.
ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಬಗ್ಗೆ ಹೆಮ್ಮೆ ಆಗುತ್ತಿದೆ. ಶಿಕ್ಷಣಕ್ಕೆ ನೀಡುವ ಸಹಕಾರ ಗ್ರಾಮದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ. ನಿಮ್ಮೆಲ್ಲರ ಸಾಧನೆಗೆ ಪಂಚಾಯತ್ಗೆ ಅಭಾರಿ ಆಗಿರುವುದಾಗಿ ಹೇಳಿದರು.
ಪುತ್ತೂರು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಆಲಾಜೆ ಬೆದ್ರೋಡಿ, ಸಾಮಾಜಿಕ ಕಾರ್ಯಕರ್ತ, ಪಂಚಾಯತ್ ರಾಜ್ ತಜ್ಞ ವಿಲ್ಫ್ರೆಡ್ ಡಿಸೋಜಾ ಸಂದರ್ಭೋಚಿತವಾಗಿ ಮಾತನಾಡಿದರು.
ಸಮಾರಂಭದಲ್ಲಿ ಬಜತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿಮಲಾ ಬೆದ್ರೋಡಿ, ಸದಸ್ಯರಾದ ಉಮೇಶ್ ಓಡ್ರಪಾಲ್, ಪ್ರೆಸಿಲ್ಲಾ ಬೆದ್ರೋಡಿ, ರತ್ನಾ, ದೈಹಿಕ ಶಿಕ್ಷಣ
ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಬಜತ್ತೂರು ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಯಶೋಧ, ಕಾರ್ಯಾಧ್ಯಕ್ಷ ಸಿದ್ದಪ್ಪ ನಾಯ್ಕ್ ಬೆದ್ರೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನಂಜಯ ಬಾರಿಕೆ, ಉಪಾಧ್ಯಕ್ಷ ಸರ್ಫ್ರಾಝ್, ಶಿಕ್ಷಣ ಸಮನ್ವಯ ಸಮಯಿಯ ನವೀನ್ ವೇಗಸ್, ಉಪ್ಪಿನಂಗಡಿಯ ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ., ಯು.ಟಿ. ತೌಸೀಫ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಕೆ.ವಿ. ಸ್ವಾಗತಿಸಿದರು. ಎಸ್.ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ವಳಾಲು ದಡ್ಡು ವಂದಿಸಿದರು. ಶಿಕ್ಷಕರಾದ ಮೋಹನ್ ಚಂದ್ರ, ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.