ಪ್ರಯತ್ನಕ್ಕೆ ಫಲ ಖಂಡಿತಾ ಇದೆ – ಮಧು ಎಸ್ ಮನೋಹರ್
ಭಾರತೀಯ ಮೌಲ್ಯಗಳನ್ನು ಮಕ್ಕಳು ಬೆಳೆಸಬೇಕು – ಅವಿನಾಶ್ ಕೊಡಂಗಿರಿ
ಪುತ್ತೂರು: ಬನ್ನೂರು ಗ್ರಾಮದ ಕೃಷ್ಣ ನಗರ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ ಜೂ.2ರಂದು 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಧಾರ್ಮಿಕ ವಿಧಿ ವಿಧಾನಗಳಿಂದ ನಡೆಯಿತು.
ಬೆಳಗ್ಗೆ ಗಣಪತಿ ಹೋಮ, ಸತ್ಯನಾರಾಯಣ ಪೂಜೆಯ ಬಳಿಕ ತರಗತಿಗಳಿಗೆ ಮಕ್ಕಳ ಪ್ರವೇಶಕ್ಕೆ ಸ್ವಾಗತಿಸಲಾಯಿತು. ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ, ಮಾಡುವ ಕೆಲಸ ಸಣ್ಣದಾದರೂ ನಿರಂತರ ಪ್ರಯತ್ನ ಫಲ ನೀಡುತ್ತದೆ. ಅದೇ ರೀತಿ ಚಿಕ್ಕದಾಗಿ ಪ್ರಾರಂಭವಾದ ಎವಿಜಿ ಶಾಲೆ ಖಂಡಿತವಾಗಿಯೂ ದೊಡ್ಡದಾಗಿ ಬೆಳೆದು ಖ್ಯಾತಿಯನ್ನು ಪಡೆಯುತ್ತದೆ ಎಂದರು.
ಭಾರತೀಯ ಮೌಲ್ಯಗಳನ್ನು ಮಕ್ಕಳು ಬೆಳೆಸಬೇಕು:
ನರಿಮೊಗರು ಸರಸ್ವತಿ ವಿದ್ಯಾಮಂದಿರದ ಅಧ್ಯಕ್ಷ ಅವಿನಾಶ್ ಕೊಡಂಗಿರಿ ದಿಕ್ಸೂಚಿ ಭಾಷಣ ಮಾಡಿದರು. ಆಂಗ್ಲ ಭಾಷೆಯ ಜೊತೆಗೆ ಹಿಂದಿ ಕನ್ನಡ ಹಾಗೂ ಇತರ ಭಾಷೆಗಳಿಗೂ ಆದ್ಯತೆ ನೀಡಬೇಕು ಹಾಗೂ ಭಾರತೀಯ ಮೌಲ್ಯಗಳನ್ನು ಮಕ್ಕಳು ಬೆಳೆಸುವಂತೆ ಸೂಚಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ಕಳುವಾಜೆ ವೆಂಕಟರಮಣ ಗೌಡ ಅವರು ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಸಂಚಾಲಕರಾದ ಎ ವಿ ನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಯಶಸ್ಸಿಗೆ ಜ್ಞಾನಾರ್ಜನೆಯು ಹಾಗೂ ಜೊತೆಗೆ ಪ್ರಯತ್ನ ಬೇಕೆಂದರು.
ಗುರುವಂದನೆ, ಸನ್ಮಾನ:
ಸಂಸ್ಥೆಯ ಸಂಚಾಲಕ ಎ.ವಿ.ನಾರಾಯಣ ಅವರು ತನ್ನ ಗುರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕ ರವಿರಾಮ ಸಿದ್ದಮೂಲೆ ಅವರಿಗೆ ಗುರುವಂದನೆ ಸಲ್ಲಿಸಿದರು. ಗಿರೀಶ್ ಕಾರ್ನಾಡ್ ಕುರಿತು ಬರೆದ (Treatment of women characters in the selected plays of Girish Karnad) ಸಂಶೋಧನಾ ಪ್ರಬಂಧಕ್ಕೆ ಕುಪ್ಪಂ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಪಿ .ಎಚ್.ಡಿ ಪದವಿ ಪಡೆದ ಡಾಕ್ಟರ್ ಮೋತಿ ಬಾಯಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಅವರು ಆಂಗ್ಲ ಭಾಷೆಯ ಮಹತ್ವದ ಕುರಿತು ತಿಳಿಸಿದರು. ಶಿಕ್ಷಕಿಯರಾದ ಹಿತಶ್ರೀ ಹಾಗೂ ಸುಚಿತ ಅವರು ಸನ್ಮಾನ ಪತ್ರವನ್ನು ವಾಚಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡಬಲ್ಯ, ನಗರಸಭೆ ಸ್ಥಳೀಯ ಸದಸ್ಯೆ ಗೌರಿ ಬನ್ನೂರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗಡೆ ಉಪಸ್ಥಿತರಿದ್ದರು. ಶಿಕ್ಷಕಿ ಶ್ವೇತಾ ಪ್ರಾರ್ಥಿಸಿ ಮುಖ್ಯೋಪಾಧ್ಯಾಯ ಅಮರನಾಥ ಪಟ್ಟೆ ಸ್ವಾಗತಿಸಿ, ಸಂಸ್ಥೆಯ ಉಪಾಧ್ಯಕ್ಷ ಉಮೇಶ್ ಮಳುವೇಲು ವಂದಿಸಿದರು. ನಿರ್ದೇಶಕರಾದ ಸೀತಾರಾಮ್ ಕೇವಳ ಹಾಗೂ ಎ ವಿ ನಾರಾಯಣರರು ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ರಾಧಾ ಕಾರ್ಯಕ್ರಮ ನಿರೂಪಿಸಿದರು ಇದೇ ಸಂದರ್ಭದಲ್ಲಿ ಆರನೆಯ ತರಗತಿ ವಿದ್ಯಾರ್ಥಿ ಹಾಗೂ ಶಾಲಾ ನಾಯಕ ಅದ್ವಿಕ್ ಬಂಜನ್ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ವಾಮನಗೌಡ ,ದೀಕ್ಷಾ ವಾಮನ ಗೌಡ, ಪ್ರತಿಭ ದೇವಿ ನಾರಾಯಣ, ಗಂಗಾಧರ ಗೌಡ,ಪೋಷಕ ವೃಂದ, ಶಿಕ್ಷಕ ವೃಂದ, ಶಿಕ್ಷಕೇತರವೃಂದ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.