ನೆಕ್ಕಿಲಾಡಿ: ದಾಮಸ್‌ಕೋಡಿಯಲ್ಲಿ ತೋಟಕ್ಕೆ ನುಗ್ಗಿದ ಮಳೆ ನೀರು-ಹಾನಿ

0

ಅವೈಜ್ಞಾನಿಕವಾಗಿ ನಡೆಸುತ್ತಿರುವ ಹೆದ್ದಾರಿ ಕಾಮಗಾರಿಯಿಂದ ಸಮಸ್ಯೆ: ಆರೋಪ

ಪುತ್ತೂರು: ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ದಾಮಸ್‌ಕೋಡಿಯಲ್ಲಿರುವ ಗೀತಾ ವಿ.ನೋಂಡ ಮತ್ತು ನಿಖಿಲ್ ವಿ.ನೋಂಡರವರಿಗೆ ಸೇರಿದ ತೋಟಕ್ಕೆ ಮಳೆ ನೀರು ನುಗ್ಗಿ ಹಾನಿಯಾದ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ75ರಲ್ಲಿ ಕೆಎನ್‌ಆರ್ ಕನ್ಸ್‌ಸ್ಟ್ರಕ್ಷನ್ಸ್‌ನವರು ನಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಆರೋಪ ವ್ಯಕ್ತವಾಗಿದೆ. ಕಾಮಗಾರಿಯ ವೇಳೆ ಮಳೆನೀರಿನ ಸುರಕ್ಷಿತ ಮತ್ತು ನೇರ ಹರಿವಿಗೆ ಸರಿಯಾದ ಒಳಚರಂಡಿ ವ್ಯವಸ್ಥೆ ಮಾಡದ ಪರಿಣಾಮ ಹೆದ್ದಾರಿಯಿಂದ ಹರಿಯುವ ನೀರು ಗೀತಾ ವಿ.ನೋಂಡ ಮತ್ತು ನಿಖಿಲ್ ವಿ. ನೋಂಡ ಅವರ ಅಡಿಕೆ ತೋಟಕ್ಕೆ ನುಗ್ಗಿ ಹಾನಿ ಉಂಟಾಗಿದೆ. ತೋಟಕ್ಕೆ ನುಗ್ಗಿದ ಮಳೆ ನೀರಿನಿಂದಾಗಿ ತೋಟದಲ್ಲಿ ನೈಸರ್ಗಿಕವಾಗಿ ಹರಿಯುತ್ತಿರುವ ತೊರೆಯ ನೀರಿನ ಮಟ್ಟದಲ್ಲಿ ನಿರಂತರ ಹೆಚ್ಚಳವಾಗಿದ್ದು ತೋಟದ ಬೆಳೆಗಳ ಆರೋಗ್ಯ ಮತ್ತು ಸುಸ್ಥಿರತೆಗೆ ಅಪಾಯವನ್ನುಂಟು ಮಾಡಿದೆ.

ಮೇ.31ರಂದು ಹೊಳೆ ಉಕ್ಕಿ ಹರಿದಿದ್ದು ನೀರು ತೋಟಕ್ಕೆ ನುಗ್ಗಿ ಬೆಳೆಗಳಿಗೆ ಹಾನಿಯಾಗಿದೆಯಲ್ಲದೆ ಬೇರು ಕೊಳೆಯುವ ಅಪಾಯ ಉಂಟಾಗಿದೆ. ಹೆದ್ದಾರಿ ಕಾಮಗಾರಿ ನಡೆಸುವ ವೇಳೆ ರಸ್ತೆಯ ಪಕ್ಕ ಹೆಚ್ಚಿನ ಪ್ರಮಾಣದಲ್ಲಿ ಸಡಿಲ ಮಣ್ಣು ಸುರಿಯಲಾಗಿದೆ. ಈ ಮಣ್ಣು ಇಲ್ಲಿನ ತೊರೆಗೆ ಸೇರಿ ಅದರ ನೈಸರ್ಗಿಕ ಹರಿವನ್ನು ತಡೆಯುತ್ತಿದೆ. ಇದರಿಂದಾಗಿ ನೀರಿನ ಕಾಲುವೆಗೆ ಹಾನಿಯಾಗುತ್ತಿದ್ದು ತೋಟದಲ್ಲಿನ ಪ್ರವಾಹವನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here