ಮರದಿಂದ ಮರಣ ಸಂಭವಿಸಿದರೆ ಅರಣ್ಯ ಇಲಾಖೆಯವರೇ ಹೊಣೆಗಾರರು…!?- ಪರ್ಪುಂಜದಲ್ಲೊಂದು ಅಪಾಯಕಾರಿ ಮರ..!- ಅರ್ಜಿ ಸಲ್ಲಿಸಿದರೂ ಕ್ಯಾರೇ ಅನ್ನದ ಅಧಿಕಾರಿಗಳು..?

0

@ ಸಿಶೇ ಕಜೆಮಾರ್

ಪುತ್ತೂರು: ಆ ಎರಡು ಮನೆಗಳು, ಪಕ್ಕದಲ್ಲೇ ಒಣಗಿ ನಿಂತ ಬೃಹತ್ ಗಾತ್ರದ ಮರ. ಅಪ್ಪಿತಪ್ಪಿ ಮರದ ಗೆಲ್ಲೊಂದು ಬಿದ್ದರೂ ಕೂಡ ಅಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಮರವೇನಾದರೂ ಮುರಿದು ಬಿದ್ದರೆ ಅಲ್ಲಿ ಜೀವ ಹಾನಿ ಸಂಭವಿಸುವ ಸಾಧ್ಯತೆಯೂ ಇದೆ. ‘ ಎಂಕ್ಲೆಗ್ ರಾತ್ರೆ ಪೂರ ನಿದ್ರೆ ಬರ್ಪುಜಿ, ಈ ಬರ್ಸೊ ಗಾಳಿಗ್ ಜೀವ ಕೈಟ್ ಪತ್ತ್ ಕುಳ್ಳುವ, ಏಪೋ ಈ ಮರ ಬೂರು ಪನ್ದ್ ಪನಿಯರ ಆಪುಜಿ, ಆ ದೇವರೇ ಎಂಕ್ಲೆನ್ ಕಾಪೊಡು’ ಆ ಮನೆಯ ಒಂದು ಹಿರಿ ಜೀವ ಹೀಗೆ ಹೇಳುತ್ತಾ ಇದ್ರೆ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತ್ತೆ. ಮರ ತೆರವು ಮಾಡಿಕೊಡಿ ಎಂದು ಕಳೆದ ಎರಡು ವರ್ಷಗಳಿಂದ ಈ ಎರಡೂ ಮನೆಯರು ಪಂಚಾಯತ್‌ನಿಂದ ಹಿಡಿದು ಅರಣ್ಯ ಇಲಾಖೆಯ ತನಕ ಮನವಿ ಮಾಡುತ್ತಲೇ ಬಂದಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಮಾತ್ರ ವಿಪರ‍್ಯಾಸ.
ಬರ‍್ತಾರೆ ನೋಡ್ತಾರೆ ಹೋಗ್ತಾರೆ…!?
ಕಳೆದ ಎರಡು ವರ್ಷಗಳಿಂದ ಈ ಮರವನ್ನು ತೆಗೆಸಿಕೊಡಿ ಎಂದು ಗಿರಿಜ ಹಾಗೂ ಲಕ್ಷ್ಮೀ ಮನೆಯವರು ಮನವಿ ಮಾಡುತ್ತಲೆ ಬಂದಿದ್ದಾರೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಾಜೇಶ್ ರೈ ಪರ್ಪುಂಜರವರು ಕೂಡ ಒಳಮೊಗ್ರು ಗ್ರಾಮಸಭೆಯಲ್ಲಿ ವರ್ಷಗಳ ಹಿಂದೆಯೇ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಪಂಚಾಯತ್‌ನವರು ಕೂಡ ಸ್ಥಳ ಪರಿಶೀಲನೆ ಮಾಡಿ ಮರವನ್ನು ತೆರವುಗೊಳಿಸುವ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಸುಮ್ಮನೆ ಕುಳಿತಿಲ್ಲ ಸ್ಥಳಕ್ಕೆ ಬಂದಿದ್ದಾರೆ. ಮರವನ್ನೊಮ್ಮೆ ಕಣ್ಣೆತ್ತಿ ನೋಡಿದ್ದಾರೆ ಹೋಗಿದ್ದಾರೆ ಅಷ್ಟೇ…? ಗಿರಿಜಾರವರು ಹೇಳುವಂತೆ ಬರ‍್ತಾರೆ, ನೋಡ್ತಾರೆ ಹೋಗ್ತಾರೆ. ೨ ವರ್ಷವಾದರೂ ಮರ ತೆರವು ಮಾಡುವ ಕೆಲಸ ಮಾತ್ರ ಆಗಿಲ್ಲ.
ಮರ ತೆರವುಗೊಳಿಸಿ ಜೀವ ಉಳಿಸಿ…
ಒಂದು ಮಾಹಿತಿಯ ಪ್ರಕಾರ ಈ ಮರ ಸರಕಾರಿ ಜಾಗದಲ್ಲಿ ಇದೆಯೋ ಅಥವಾ ಖಾಸಗಿ ಜಾಗದಲ್ಲಿ ಇದೆಯೋ ಎಂದು ಇಲಾಖಾ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಜಾಗದ ನಕ್ಷೆಯನ್ನು ಕೂಡ ಕೇಳಿದ್ದಾರೆ ಎಂಬ ಮಾಹಿತಿ ಇದೆ. ಅದೆನೇ ಇರಲಿ ಮರ ಎಲ್ಲಿದ್ದರೂ ಬಿದ್ದರೆ ಹಾನಿಯಾಗುವುದು ಮಾತ್ರ ಎರಡು ಮನೆಗಳಿದೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಒಂದು ಒಣಗಿದ ಮರವನ್ನು ಅದರಲ್ಲೂ ಎರಡು ಮನೆಗಳಿಗೆ ಅಪಾಯವನ್ನು ತರುವಂತಹ ಮರವನ್ನು ತೆಗೆಯಲು ಕಾನೂನು ಮುಖ್ಯವೊ ಅಥವಾ ಮಾನವೀಯತೆ ಮುಖ್ಯವೋ? ಇದು ಅರ್ಥವಾಗದಿರುವುದು ದುರಂತ.
ಬಾಕ್ಸ್
ಜೀವ ಹಾನಿಯಾದರೆ ಅರಣ್ಯ ಇಲಾಖೆಯೇ ಹೊಣೆ…!
ಇಂದಲ್ಲ ನಾಳೆಯಾದರೂ ಈ ಮರ ಬಿದ್ದೇ ಬೀಳುತ್ತದೆ. ಏಕೆಂದರೆ ಮರಕ್ಕೆ ಸಿಡಿಲು ಬಡಿದಿದ್ದು ಮರ ಸಂಪೂರ್ಣ ಒಣಗಿ ಹೋಗಿದೆ. ಮರದ ಮಧ್ಯ ಬಾಗದಲ್ಲಿ ಪೊಟರೆ ರೀತಿ ಟೊಳ್ಳಾಗಿದ್ದು ಅಪಾಯಕಾರಿಯಾಗಿದೆ. ಬೃಹತ್ ಮರ ಇದಾಗಿರುವುದರಿಂದ ರಭಸವಾದ ಗಾಳಿ ಬಂದರೆ ಮರ ತುಂಡಾಗಿ ಬೀಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಮರ ಮುರಿದು ಬಿದ್ದರೆ ಎರಡು ಮನೆಗಳಿಗೆ ಒಂದು ಕೋಳಿ ಪಾರಂಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಎಲ್ಲಾದರೂ ಜೀವ ಹಾನಿ ಸಂಭವಿಸಿದರೆ ಅದಕ್ಕೆ ಅರಣ್ಯ ಇಲಾಖೆಯೇ ನೇರ ಹೊಣೆ ಎಂಬುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಸ್ಥಳೀಯರು.
ಬಾಕ್ಸ್
ಗೆಲ್ಲು ಬಿದ್ದರೂ ಅಪಾಯ…
ಶಾಸಕರೇ ಗಮನಿಸಿ
ಈ ಬಗ್ಗೆ ಶಾಸಕರು ಗಮನಿಸಬೇಕಾಗಿದೆ. ಕಳೆದ ಎರಡು ವರ್ಷಗಳಿಂದ ಗಿರಿಜ ಮತ್ತು ಲಕ್ಷ್ಮೀ ಈ ಎರಡು ಮನೆಯವರು ತಮ್ಮ ಮನೆಯ ಪಕ್ಕದ ಅಪಾಯಕಾರಿ ಮರವನ್ನು ತೆರವು ಮಾಡಿಕೊಡಿ ಎಂದು ಅಧಿಕಾರಿಗಳ ಮುಂದೆ ಮನವಿ ಮಾಡಿಕೊಂಡು ಅಂಗಲಾಚಿದರೂ ಇದುವರೆಗೆ ಮರವನ್ನು ತೆರವು ಮಾಡುವ ಕೆಲಸ ಆಗಿಲ್ಲ. ಒಂದು ಬಡ ಕುಟುಂಬದವರ ಮನವಿಗೆ ಬೆಲೆಯೇ ಇಲ್ಲವೇ? ಬೀಮ ಗಾತ್ರದ ಮರದ ಒಂದು ಗೆಲ್ಲು ಬಿದ್ದರೆ ಇಲ್ಲಿ ಅಪಾಯವಿದೆ ಎಂದು ತಿಳಿದರೂ ಯಾಕಿಷ್ಟು ಕ್ಯಾರ್‌ಲೆಸ್ ಎಂಬುದು ತಿಳಿಯುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.
………………
ಚಿತ್ರ: ಒಣಗಿ ನಿಂತ ಅಪಾಯಕಾರಿಯಾದ ಬೃಹತ್ ಗಾತ್ರದ ಮರ

LEAVE A REPLY

Please enter your comment!
Please enter your name here