ಉಪ್ಪಿನಂಗಡಿ: ಬೈಕೊಂದರಲ್ಲಿ ಬಂದ ಸವಾರರಿಬ್ಬರು ದಾರಿ ಕೇಳುವ ನೆಪದಲ್ಲಿ ವೃದ್ಧೆಯೋರ್ವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ಜೂ.4ರಂದು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಎಂಬಲ್ಲಿ ನಡೆದಿದೆ.
ಪಡುಬೆಟ್ಟುವಿನ ಅಲೀಮಮ್ಮ (65) ಎಂಬವರ 10 ಪವನ್ ಚಿನ್ನವನ್ನು ಕಳ್ಳರು ಎಗರಿಸಿದ್ದಾರೆ. ತನ್ನ ಮನೆಗೆ ಕೆಲಸಕ್ಕೆ ಬರುವಾತ ಅನಾರೋಗ್ಯದ ಕಾರಣದಿಂದ ಕೆಲಸಕ್ಕೆ ಬಾರದಿದ್ದಾಗ ಅವರ ಆರೋಗ್ಯ ವಿಚಾರಿಸಲು ಅಲೀಮಮ್ಮ ಅವರು ಮುದರ ಅವರ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕೊಂದರಲ್ಲಿ ಬಂದ ಇಬ್ಬರು ಬೈಕ್ ನಿಲ್ಲಿಸಿ ಅಲೀಮಮ್ಮ ಅವರಲ್ಲಿ ತುಳು ಭಾಷೆಯಲ್ಲಿ ಸಿದ್ದೀಕ್ ಅವರ ಮನೆಗೆ ಹೋಗುವ ದಾರಿ ಹಾಗೂ ಮಸೀದಿ ಎಲ್ಲಿ ಬರುತ್ತದೆ ಎಂದು ಕೇಳಿದ್ದರು. ಹೀಗೆ ಮಾತಿನ ನೆಪದಲ್ಲಿ ಅಲೀಮಮ್ಮ ಅವರ ಗಮನ ಬೇರೆಡೆ ಸೆಳೆದಾಗ ಬೈಕ್ನ ಹಿಂಬದಿ ಸವಾರ ಅವರ ಕುತ್ತಿಗೆಯಲ್ಲಿದ್ದ 10 ಪವನ್ನ ಚಿನ್ನದ ಚೈನ್ ಅನ್ನು ಎಗರಿಸಿದ್ದ. ಕೂಡಲೇ ಇವರು ಬೈಕ್ನ್ನು ಚಲಾಯಿಸಿದ್ದು, ಆ ಸಂದರ್ಭ ಬೈಕ್ ಬಿದ್ದರೂ ಇವರು ಮತ್ತೆ ಎದ್ದುಕೊಂಡು ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್ ಎಚ್. ಗೌಡ, ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.