ಜೀವಂತವಾಗಿ ಉಳಿದಿರುವ ಸಾರ್ವಜನಿಕರ ಪ್ರಶ್ನೆಗಳು
ಉಪ್ಪಿನಂಗಡಿ: ಇಡೀ ಪುತ್ತೂರು ತಾಲೂಕನ್ನೇ ಬೆಚ್ಚಿ ಬೀಳಿಸಿದ ಹಿರೇಬಂಡಾಡಿ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಗುರುಮೂರ್ತಿ ಅವರ ಪತ್ನಿ ಪುಷ್ಪಲತಾ (34) ಅವರ ಕೊಲೆ ನಡೆದು ಇಂದಿಗೆ 11 ವರ್ಷವಾಗಿದೆ. ಆದರೂ ಇದರ ಹಂತಕರನ್ನು ಬಂಧಿಸಿ, ಈ ಪ್ರಕರಣಕ್ಕೆ ಇತಿಶ್ರೀ ಹಾಡಲು ಮಾತ್ರ ಇನ್ನೂ ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ.
ಉಪ್ಪಿನಂಗಡಿಯ ಕ್ರೈಸ್ತ ದೇಗುಲದ ಒಡೆತನದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಪುಷ್ಪಲತಾ 2014ರ ಜೂನ್ 5ರಂದು ಹಾಡಹಗಲೇ ಮನೆಯೊಳಗೆ ಮಾರಕಾಯುಧದಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಹತ್ಯೆಯಾಗಿದ್ದರು. ಇಬ್ಬರು ಮಕ್ಕಳ ತಾಯಿಯಾಗಿರುವ ಪುಷ್ಪಲತಾ ರವರು ಮೈಸೂರು ಮೂಲದವರಾಗಿದ್ದು, ಅಂದು ಪತಿ ಮಕ್ಕಳು ಶಾಲೆಗೆ ಹೋದ ಬಳಿಕ ಈ ಘಟನೆ ನಡೆದಿತ್ತು.
ಅಂದು ಅಲ್ಲಿನ ಸ್ಥಿತಿಯನ್ನು ಪರಿಶೀಲಿಸಿದಾಗ ಪರಿಚಿತ ಅಥವಾ ಅತಿಥಿ ನೆಲೆಯಲ್ಲಿ ಆಗಮಿಸಿದ ವ್ಯಕ್ತಿಗೆ ಬಟ್ಟೆ ಒಗೆಯುವ ಕೆಲಸದಲ್ಲಿದ್ದ ಪುಷ್ಪಲತಾರವರು ಮನೆಯೊಳಗೆ ಕರೆದು ಆತಿಥ್ಯ ನೀಡಿರುವುದು ಕಂಡು ಬರುತ್ತಿತ್ತು. ಪುಷ್ಪಲತಾ ಅವರ ಆತಿಥ್ಯವನ್ನು ಸ್ವೀಕರಿಸಿದ ಹಂತಕ ಬಳಿಕ ಆಕೆಯನ್ನು ಕೊಸರಾಡದಂತೆ ಅದುಮಿಟ್ಟು ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದ. ತನ್ನ ವಾಸ್ತವ್ಯದ ಮನೆಯ ಅಡುಗೆ ಕೋಣೆಯಲ್ಲಿ ಕೊಲೆಯಾಗಿ ಬಿದ್ದಿದ್ದ ಪುಷ್ಪಲತಾ ಕೊಸರಾಡಿಕೊಂಡ ಅಥವಾ ಸಾವಿನ ಸಂಧರ್ಭದಲ್ಲಿ ಪ್ರಾಣ ಉಳಿಸಿಕೊಳ್ಳುವ ಸಹಜ ಯತ್ನವನ್ನಾಗಲಿ ಮಾಡಿರುವ ಯಾವ ಕುರುಹು ಅಲ್ಲಿ ಕಂಡು ಬಂದಿರಲಿಲ್ಲ. ಕೊಲೆಗೀಡಾದಾಗ ಧರಿಸಿದ ಬಟ್ಟೆಯ ಮೇಲ್ಭಾಗದಲ್ಲಿ ರಕ್ತದ ಕಲೆಯೂ ಕಂಡು ಬರಲಿಲ್ಲ. ಹಂತಕ ಬಲಿಷ್ಠವಾಗಿ ಹಿಡಿದಿಟ್ಟುಕೊಂಡು, ಅಥವ ಪ್ರಜ್ಞೆ ತಪ್ಪಿಸಿ ಈ ಕೃತ್ಯವೆಸಗಿರುವ ಸಾಧ್ಯತೆಯನ್ನೂ ಶಂಕಿಸುವಂತಿತ್ತು. ಅಲ್ಲದೇ, ಕೊಲೆ ಮಾಡಿದ ಬಳಿಕ ಹಂತಕ ಆ ಮನೆಯ ಏಕೈಕ ಬಾಗಿಲಿಗೆ ಬೀಗ ಜಡಿದು ಪರಾರಿಯಾಗಿದ್ದ.
ಪ್ರತಿಭಟನೆಗಳ ಪರ್ವ:
ಈ ಪ್ರಕರಣ ಇಡೀ ಪರಿಸರದಲ್ಲಿ ತಲ್ಲಣ ಮೂಡಿಸಿತ್ತಲ್ಲದೆ, ಹಂತಕನ ಪತ್ತೆಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮಹಿಳಾ ಘಟಕಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದು ಪೊಲೀಸ್ ಇಲಾಖೆಗೆ ಒತ್ತಡ ಹೇರಲಾಗಿತ್ತು. ಶಕುಂತಳಾ ಶೆಟ್ಟಿಯವರು ಶಾಸಕಿಯಾಗಿದ್ದ ಅವಧಿಯಲ್ಲಿ ಕೆಡಿಪಿ ಸದಸ್ಯರಾಗಿದ್ದ ಅಶ್ರಫ್ ಬಸ್ತಿಕ್ಕಾರ್ ಅವರು ಪ್ರತಿ ಕೆಡಿಪಿ ಸಭೆಗಳಲ್ಲೂ ಈ ಬಗ್ಗೆ ಪ್ರಸ್ತಾಪಿಸಿ ಈ ಪ್ರಕರಣ ಭೇದಿಸಲು ಆಗ್ರಹಿಸುತ್ತಿದ್ದರು. ಅಲ್ಲದೇ, ಜನಸ್ಪಂದನ ಸಭೆಯಲ್ಲಿಯೂ ಇದು ಪ್ರತಿಧ್ವನಿಸಿತ್ತು. ಪ್ರತಿ ಪ್ರತಿಭಟನೆಯಲ್ಲೂ ಪ್ರಕರಣದ ತನಿಖೆ ನಡೆಯುತ್ತಿದೆ. ಮಹತ್ವದ ಸುಳಿವು ಲಭಿಸಿದೆ. ಆರೋಪಿಗಳನ್ನು ಬಂಧಿಸಿಯೇ ಸಿದ್ದ ಎಂಬ ಭರವಸೆ ಪೊಲೀಸ್ ಅಧಿಕಾರಿಗಳಿಂದ ಬರುತ್ತಿತ್ತು. ಆದರೆ ಈ ಪ್ರಕರಣಕ್ಕೆ 11 ವರ್ಷವಾದರೂ, ಹಂತಕನನ್ನು ಬಂಧಿಸಿ ಹೆಡೆಮುರಿ ಕಟ್ಟುವ ಕಾರ್ಯ ಮಾತ್ರ ಈವರೆಗೆ ಆಗಲೇ ಇಲ್ಲ.
ಪತಿಯ ತನಿಖೆ:
ಸಹಜವೆಂಬಂತೆ ಈ ಪ್ರಕರಣದಲ್ಲಿ ತನಿಖೆಯ ಸಂಶಯದ ಕಣ್ಣು ಕೊಲೆಗೀಡಾದಾಕೆಯ ಪತಿ ಗುರುಮೂರ್ತಿಯ ಮೇಲೆ ಇತ್ತಾದರೂ , ನಡೆಸಿದ ವಿಚಾರಣೆಯಲ್ಲಿ ಪೂರಕವಾದ ಯಾವುದೇ ಮಾಹಿತಿ ಪೊಲೀಸರಿಗೆ ದೊರೆತಿಲ್ಲವೆನ್ನಲಾಗಿದೆ. ಪತಿ ಗುರುಮೂರ್ತಿಯನ್ನು ಮಂಪರು ಪರೀಕ್ಷೆಗೂ ಒಳಪಡಿಸಲಾಗಿತ್ತು. ಅಂದಾಜಿನ ಪ್ರಕಾರ ಕೊಲೆ ನಡೆದ ಸಮಯ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 11 ಗಂಟೆಯ ಮಧ್ಯೆಯಾಗಿದ್ದರೆ ಸದ್ರಿ ಸಮಯದಲ್ಲಿ ಆಕೆ ಪತಿ ಹಿರೇಬಂಡಾಡಿ ಶಾಲೆಯಲ್ಲೇ ಕರ್ತವ್ಯದಲ್ಲಿರುವುದು ದೃಢಪಟ್ಟಿದೆ. ಪದೇ ಪದೇ ಮಾನಸಿಕ ಖಿನ್ನತೆಗೆ ತುತ್ತಾಗುವ ಪತ್ನಿಯ ಚಿಕಿತ್ಸೆಗೆ ಪತಿ ಬಹಳಷ್ಟು ಶ್ರಮಿಸುತ್ತಿರುವುದು, ಆಧ್ಯಾತ್ಮಿಕ ಕಾರ್ಯಗಳಿಗೆ ಕರೆದೊಯ್ಯುತ್ತಿದ್ದುದ್ದು ಕೂಡಾ ಪ್ರಕರಣದಲ್ಲಿ ಪತಿಯ ಪಾತ್ರದ ಸಾಧ್ಯತೆಯನ್ನು ಕ್ಷೀಣಿಸಿತ್ತು.
ಗೃಹಿಣಿ ಪುಷ್ಪಲತಾ ಕೊಲೆಯ ಪ್ರಕರಣವನ್ನು ಅಮೂಲಾಗ್ರ ತನಿಖೆಗೆ ಒಳಪಡಿಸಬೇಕೆಂದು ಪುತ್ತೂರಿನ ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಅದೇ ದಿನ ಜಿಲ್ಲಾ ಪೊಲೀಸ್ ವರಿಷ್ಠರನ್ನು ಒತ್ತಾಯಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆ ಮೇರೆಗೆ ಶವದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ಪ್ರತಿಷ್ಠಿತ ವೈದ್ಯ ಸಂಸ್ಥೆಯಲ್ಲಿ ನಡೆಸಲಾಗಿತ್ತು. ಆದಾಗ್ಯೂ ಮರಣೋತ್ತರ ಪರೀಕ್ಷೆ ತನಿಖೆಯಲ್ಲಿ ಫಲಿತಾಂಶವನ್ನು ಒದಗಿಸಲು ಸಹಕಾರಿಯಾಗಿಲ್ಲ ಎನ್ನುವುದು ಈ ವರೆಗಿನ ಬೆಳವಣಿಗೆಯಿಂದ ದೃಢಪಟ್ಟಿದೆ. ಕೊಲೆಗೀಡಾದ ಶವದ ಮರಣೋತ್ತರ ಪರೀಕ್ಷೆ ನಡೆಸುವಾಗ ಶವದ ಅಂಗಾಂಗಗಳ ಸ್ಥಿತಿಗತಿಯನ್ನಾಧರಿಸಿ ಮರಣೋತ್ತರ ಪರೀಕ್ಷೆಯ ಫಲಿತಾಂಶಗಳನ್ನು ದಾಖಲಿಸುವುದು ಸಾಮಾನ್ಯ ನಡೆಯಾಗಿದೆ. ಆದರೆ, ಈ ಪ್ರಕರಣದಲ್ಲಿ ವೈದ್ಯಾಧಿಕಾರಿಗಳ ತಂಡವೊಂದು ಘಟನಾ ಸ್ಥಳವನ್ನೂ ಕೂಡಾ ಪರಿಶೀಲನೆ ನಡೆಸಿದೆ. ಇಲ್ಲಿ ಘಟನಾ ಸ್ಥಳದ ಪರಿಶೀಲನೆ ತನಿಖಾಧಿಕಾರಿಗಳಿಗೆ ಪ್ರಮುಖವಾಗಿರುತ್ತದೆಯೇ ವಿನಹ ವೈದ್ಯಾಧಿಕಾರಿಗಳಿಗೆ ಯಾವ ಮಟ್ಟದಲ್ಲಿ ಪ್ರಮುಖವಾಗಿರುತ್ತದೆ ಎನ್ನುವುದು ಅರ್ಥವಾಗದ ವಿಚಾರ.
ಇದೇ ಸಂಧರ್ಭದಲ್ಲಿ ವೈದ್ಯರೊಬ್ಬರು ಮಾನಸಿಕ ಖಿನ್ನತೆಯ ವ್ಯಕ್ತಿ ಸ್ವಇಚ್ಚೆಯಿಂದಲೇ ಕುತ್ತಿಗೆಗೆ ಇರಿದು ಸಾವನ್ನಪ್ಪುವ ಸಾಧ್ಯತೆಯೂ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಈ ಸಾಧ್ಯತೆ ನಿಜವಾಗಿದ್ದರೂ, ಪುಷ್ಪಲತಾ ಪ್ರಕರಣದಲ್ಲಿ ಮಾತ್ರ ಅದು ನಿಜವಾಗಿಲ್ಲ.ಯಾಕೆಂದರೆ ಸ್ವತಹ ಇರಿದುಕೊಂಡು ಸಾವನ್ನಪ್ಪಿದ್ದರೆ ಇರಿದುಕೊಳ್ಳಲು ಬಳಸಿದ್ದ ಆಯುಧವೂ ಪತ್ತೆಯಾಗಬೇಕಿತ್ತು. ಮಾತ್ರವಲ್ಲದೆ ಒಂದೇ ಬಾಗಿಲು ಇರುವ ಈ ಮನೆಯಲ್ಲಿ ಎದುರುಗಡೆ ಬಾಗಿಲಿಗೆ ಬೀಗ ಹಾಕುವ ಸಾಧ್ಯತೆಯೂ ಇರುತ್ತಿರಲಿಲ್ಲ. ಆ ಮನೆಗೆ ಬರಬಹುದಾಗಿದ್ದ ವ್ಯಕ್ತಿಗಳ ಬಗ್ಗೆ ಸಹಜ ಸಂಶಯ ಮೂಡುತ್ತಿದ್ದು, ಅಪರಿಚಿತರು ಬಂದಿದ್ದಲ್ಲಿ ಅವರನ್ನು ಮನೆಯೊಳಗೆ ಕರೆದು ಪಾನೀಯವನ್ನು ನೀಡುವ ಸಾಧ್ಯತೆ ಇಲ್ಲವಾಗಿತ್ತು. ಪಾನೀಯದ ಸತ್ಕಾರವನ್ನು ಪಡೆದಿರಬೇಕಾದರೆ ಹಂತಕ ಪರಿಚಿತನೇ ಆಗಿರುವ ಸಾಧ್ಯತೆ ದಟ್ಟವಾಗಿತ್ತು. ಮಾತ್ರವಲ್ಲದೆ ತಾನು ಬಟ್ಟೆ ಒಗೆಯುವ ಸಂಧರ್ಭದಲ್ಲಿ ಬಂದಿದ್ದ ಹಂತಕನನ್ನು ಸತ್ಕರಿಸುವ ಸಲುವಾಗಿ ಆಕೆ ಬಟ್ಟೆ ಒಗೆಯುವ ಸ್ಥಳದಿಂದ ಮನೆಗೆ ನಿರ್ಗಮಿಸಿರುವುದು ಕಂಡು ಬಂದಿತ್ತು.
ಇಲ್ಲಿ ಪೊಲೀಸ್ ತನಿಖೆ ಹಳ್ಳ ಹಿಡಿದಿದ್ದರೂ, ಗುರುರ್ಮೂರ್ತಿ ಹಾಗೂ ಪುಷ್ಪಲತಾ ರವರ ವಿವಾಹವು ಅಂತರ್ಜಾತಿಯ ಪ್ರೇಮ ವಿವಾಹವೆನ್ನಲಾಗಿದ್ದು, ಈ ವಿವಾಹ ಸಹಿಸದ ಬಂಧುಗಳಿಂದ ಈ ಕೃತ್ಯ ನಡೆದಿರಬಹುದಾ? ಅಥವಾ ಈಕೆಯ ಶೀಲ ಕೆಡಿಸಲೆಂದು ಯತ್ನಿಸಿದಾಗ ಈಕೆ ಅದಕ್ಕೆ ಪ್ರತಿರೋಧವೊಡ್ಡಿದಾಗ ಹಂತಕ ಈ ಕೃತ್ಯ ನಡೆಸಿರಬಹುದಾ? ಹೀಗೆ ಸಾರ್ವಜನಿಕರಲ್ಲಿ ಹತ್ತು ಹಲವು ಪ್ರಶ್ನೆಗಳು ಇಂದಿಗೂ ಜೀವಂತವಾಗಿಯೇ ಉಳಿದಿವೆ.
ಪುಷ್ಪಲತಾರವರ ಕೊಲೆ ಪ್ರಕರಣ ನಡೆದು ಇಂದಿಗೆ 11 ವರ್ಷವಾಗಿದೆ. ಆದರೆ ಪೊಲೀಸ್ ತನಿಖೆಯು ಮಾತ್ರ ಪ್ರಗತಿ ಕಂಡಿಲ್ಲ. ಈಗ ಜಿಲ್ಲೆಗೆ ದಿಟ್ಟ ಎಸ್ಪಿಯವರು ಬಂದಿದ್ದಾರೆ. ಪೊಲೀಸ್ ಅಧಿಕಾರಿಗಳು ಚುರುಕುಗೊಂಡಿದ್ದಾರೆ. ಈಗ ಪೊಲೀಸ್ ಇಲಾಖೆಯ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಈ ಹುಮ್ಮಸ್ಸಿನ ಅಧಿಕಾರಿಗಳೆಲ್ಲಾ ಸೇರಿ ಹಳ್ಳ ಹಿಡಿದಿರುವ ಈ ಪ್ರಕರಣವನ್ನು ಮತ್ತೆ ತನಿಖೆಗೊಳಪಡಿಸಬೇಕು. ಈ ಕೊಲೆಯ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲು ಮಾಡಬೇಕಿದೆ.
ಅಶ್ರಫ್ ಬಸ್ತಿಕ್ಕಾರ್
ಸಾಮಾಜಿಕ ಕಾರ್ಯಕರ್ತರು