ಸಮರ್ಥ ಮಹಿಳಾ ನಾಯಕತ್ವಕ್ಕೆ ಕೇಸರಿ ಪಡೆ ಶೋಧ – ಶೇ.33 ಮಹಿಳಾ ಮೀಸಲು ಜಾರಿ ಸಾಧ್ಯತೆ : ಹುಡುಕಾಟ ಆರಂಭಿಸಿದ ಬಿಜೆಪಿ ನಾಯಕರು

0

✍️ಸಂತೋಷ್ ಕುಮಾರ್ ಶಾಂತಿನಗರ

ಮುಂದಿನ ದಿನಗಳಲ್ಲಿ ರಾಜಕೀಯದ ಅಧಿಕಾರದಲ್ಲಿಯೂ ಮಹಿಳೆಯರಿಗೆ ಶೇ.33 ಮೀಸಲಾತಿ ಜಾರಿಗೆ ಬರುವುದರಿಂದ ಈಗಿನಿಂದಲೇ ಈ ಬಗ್ಗೆ ತಯಾರಿ ಮಾಡಿಕೊಳ್ಳಲು ಮಹಿಳಾ ಪ್ರಮುಖರಿಗೆ ಬಿಜೆಪಿ ನಾಯಕರು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿಯೂ ಸಮರ್ಥ ಮಹಿಳಾ ಮಣಿಗಳಿಗೆ ಹುಟುಕಾಟ ಆರಂಭಗೊಂಡಿದೆ. ಮುಂದಿನ ಚುನಾವಣೆಯಲ್ಲಿಯೇ ಶೇ.33 ಮೀಸಲಾತಿ ಅನ್ವಯವಾದರೆ ಬಹುತೇಕ ಕ್ಷೇತ್ರಗಳಲ್ಲಿ ಮಹಿಳೆಯರು ಮಿಂಚಲಿದ್ದಾರೆ. ಎಸ್.ಸಿ, ಎಸ್.ಟಿ., ಸಾಮಾನ್ಯ ಇತ್ಯಾದಿ ಮೀಸಲಾತಿ ಘೋಷಣೆ ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರ ಮಹಿಳೆಗೆ ಮೀಸಲಾದರೆ ಇಲ್ಲಿ ಕಣಕ್ಕಿಳಿಯುವವರು ಯಾರು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿ ಜೋರಾಗಿ ನಡೆಯುತ್ತಿದೆ. ಇದಕ್ಕಾಗಿ ಸಮರ್ಥ ಮಹಿಳೆಯರಿಗಾಗಿ ಈಗಿಂದಲೇ ಶೋಧ ಆರಂಭಗೊಂಡಿದೆ. ಜಾತಿ, ಹಣ, ಸಂಘಟನೆ ಇತ್ಯಾದಿ ಮಾನದಂಡಗಳಿಂದಲೇ ಅಭ್ಯರ್ಥಿಯ ಆಯ್ಕೆ ನಡೆಸುತ್ತಿದ್ದವರಿಗೆ ಇದೀಗ ಮಹಿಳೆಯರನ್ನೂ ಗಣನೆಗೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.


ಮಹಿಳೆಯರಿಗೆ ಮಣೆ:
ಶೇ.33 ಮಹಿಳಾ ಮೀಸಲಾತಿ ಜಾರಿಯಾದಾಗ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ ಸಾಕಷ್ಟು ಅವಕಾಶ ಸಿಗುತ್ತದೆ. ಈ ವೇಳೆ ಸಮರ್ಥ ಮಹಿಳಾ ಅಭ್ಯರ್ಥಿಗಳ ಕೊರತೆಯೇ ಪಕ್ಷಕ್ಕೆ ಸವಾಲಾಗಬಾರದು ಎಂಬ ಕಾರಣಕ್ಕಾಗಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಮಹಿಳೆಯರನ್ನು ಹೆಚ್ಚೆಚ್ಚು ತೊಡಗಿಸಿ ಪಕ್ಷದ ತತ್ವ-ಸಿದ್ಧಾಂತ, ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಟ್ಟರೆ ರಾಜಕೀಯ, ಪಕ್ಷದತ್ತ ಒಲವು ಬೆಳೆಯುತ್ತದೆ. ರಾಜಕೀಯ ರಂಗಕ್ಕೆ ಯುವಜನರು, ಹೊಸಬರು ಬರಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಆಶಯಕ್ಕೆ ಪುಷ್ಟಿ ನೀಡಿದಂತಾಗುತ್ತದೆ ಎಂದು ಬಿಜೆಪಿ ನಾಯಕರು ರಾಜ್ಯಮಟ್ಟದಲ್ಲಿ ಸೂತ್ರ ಸಿದ್ಧಪಡಿಸಿದ್ದಾರೆ. ಈ ಮೂಲಕ ಹೊಸಬರನ್ನು ಗುರುತಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿ ಪಕ್ಷದ ಪರ ಒಲವು ಬೆಳೆಸುವ ಜವಾಬ್ದಾರಿ ಮಹಿಳಾ ಪ್ರಮುಖರ ಹೆಗಲೇರಿದೆ. ಜತೆಗೆ ಈಗಾಗಲೇ ಪಕ್ಷದಲ್ಲಿ ಗುರುತಿಸಿಕೊಂಡಿರುವ ಮಹಿಳೆಯರನ್ನು ಇನ್ನಷ್ಟು ಸಕ್ರಿಯಗೊಳಿಸುವ ಕರ್ತವ್ಯ ಮಹಿಳಾ ನಾಯಕಿಯರದ್ದಾಗಿದೆ.

ಬಿಡುವು ಇಲ್ಲದೆ ಚರ್ಚೆ:
ಶಿಕ್ಷಣ, ಉದ್ಯೋಗ ಮತ್ತು ಸವಲತ್ತುಗಳಾಚೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿಸ್ತರಿಸಿ ಬಲಿಷ್ಠ ಕಾರ್ಯಕರ್ತರ ಪಡೆಯೊಂದಿಗೆ ಸಂಘಟನೆ ಬಲಗೊಳಿಸುವುದು ಬಿಜೆಪಿಯ ಹೊಸ ಲೆಕ್ಕಾಚಾರವಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಪಕ್ಷದ ಬೇರುಗಳು ಇನ್ನಷ್ಟು ಆಳ, ವ್ಯಾಪಕವಾಗಿ ಹರಡುವುದಕ್ಕೆ ಲಭ್ಯ ವಿಪುಲ ಅವಕಾಶಗಳ ಬಳಕೆ, ಹೊಸ ತಲೆಮಾರಿನ ರಾಜಕೀಯ ನಾಯಕತ್ವಕ್ಕೆ ಬುನಾದಿ ಹಾಕಲು ಬಿಜೆಪಿ ಮುಂದಾಗಿದೆ. ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದಲ್ಲಿ ರಾಜಕೀಯ ಕೆಮಿಸ್ಟ್ರಿ ವಿಭಿನ್ನವಾಗಿ ವರ್ಕೌಟ್ ಮಾಡಿಕೊಳ್ಳಲು ಬಯಸಿರುವ ಬಿಜೆಪಿ ನಾಯಕರು ಈ ಪ್ರಯತ್ನದ ಭಾಗವಾಗಿ ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಮೋಹನ್ ದಾಸ್ ಅಗರ್ವಾಲ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬಿಡುವಿಲ್ಲದ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.


ವಿಭಿನ್ನ ಆಯಾಮ:
ಎಸ್‌ಸಿ, ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗಗಳು ಬಿಟ್ಟು ಹೋಗದಂತೆ ನೋಡಿಕೊಳ್ಳಲು ಆಡಳಿತ ಕಾಂಗ್ರೆಸ್ ಪಕ್ಷ ಹವಣಿಸಿ ಜಾತಿ ಜನಗಣತಿ ವರದಿಗೆ ಹೆಚ್ಚಿನ ಆದ್ಯತೆ ನೀಡಿದೆ. ಆಳುವ ಪಕ್ಷದ ತಂತ್ರಕ್ಕೆ ಪ್ರತಿಪಕ್ಷ ಪ್ರತಿತಂತ್ರ ಹೂಡಿ ಪಕ್ಷದೊಂದಿಗೆ ಇರುವವರನ್ನು ಖಾಯಂ ಆಗಿ ಉಳಿಸಿಕೊಂಡು ಎಲ್ಲ ವರ್ಗಗಳ ವಿಶ್ವಾಸ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿದೆ. ಪಕ್ಷದಲ್ಲಿರುವ ಪರಿಶಿಷ್ಟ ಜಾತಿ, ಪಂಗಡಗಳು, ಇತರೆ ಹಿಂದುಳಿದ ವರ್ಗಗಳ ಪ್ರಮುಖರು, ಮಾಜಿ, ಹಾಲಿ ಪದಾಧಿಕಾರಿಗಳೊಂದಿಗೆ ಅಗರ್ವಾಲ್ ಖುದ್ದು ಮುಖಾಮುಖಿಯಾಗಿದ್ದಾರೆ. ಸಂಘಟನೆ ಬಲಪಡಿಸುವುದಕ್ಕೆ ಅನುಸರಿಸಬೇಕಾದ ನಡೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮಾಡಬೇಕಾದ ಪ್ರಯತ್ನಗಳನ್ನು ತಿಳಿಸಿದ್ದಾರೆ.


ಪ್ರಮುಖರ ಹೊಣೆಗಾರಿಕೆ:
ಪರಿಶಿಷ್ಟ ಜಾತಿಗಳಲ್ಲಿ ಹೆಚ್ಚಿನ ಸಂಖ್ಯಾಬಲ ಹೊಂದಿರುವ ಮಾದಿಗ ಸಮುದಾಯದ ನಾಯಕರು, ಉಪಜಾತಿಗಳ ಮುಖಂಡರು, ಹೊಸ ಮುಖಗಳಿಗೆ ಮನ್ನಣೆ ನೀಡಿ, ಜವಾಬ್ದಾರಿ ಹಂಚಿಕೊಳ್ಳಬೇಕು. ಅದೇ ರೀತಿ ಪರಿಶಿಷ್ಟ ಪಂಗಡಗಳಲ್ಲಿ ರಾಜಕೀಯವಾಗಿ ಮುನ್ನೆಲೆಗೆ ಬಂದ ಸಮುದಾಯಗಳು ಹಿಂದೆ ಬಿದ್ದಿರುವವರನ್ನು ಜತೆಗೆ ಕರೆದೊಯ್ಯಲು ಶ್ರಮಿಸಬೇಕು. ಒಬಿಸಿಯಲ್ಲಿ ನಿರ್ಲಕ್ಷಿತ, ಸಣ್ಣ, ಅತಿಸಣ್ಣ ಸಮುದಾಯಗಳಿಗೆ ರಾಜಕೀಯ ನಾಯಕತ್ವ ಧಾರೆಯೆರೆಯಬೇಕು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲ ಎಲ್ಲ ಸಮುದಾಯಗಳಿಗೆ ತಲುಪಿದ್ದನ್ನು ಮನೆ ಮನೆಗೆ ತೆರಳಿ ತಿಳಿಸುವುದು ಪ್ರಮುಖರ ಹೊಣೆಯಾಗಿದೆ. ಇದರಿಂದ ನಿಕಟತೆ ಸಾಧಿಸಲು, ಹೊಸಬರನ್ನು ಪಕ್ಷಕ್ಕೆ ಕರೆತರಲು ಸಾಧ್ಯವಾಗುತ್ತದೆ ಎಂಬುದು ಲೆಕ್ಕಾಚಾರವಾಗಿದೆ.


ತಂತ್ರಗಳು:
ಸೋಷಿಯಲ್ ಇಂಜಿನಿಯರಿಂಗ್ ತಂತ್ರಗಾರಿಕೆ ತಳಸ್ತರಕ್ಕೆ ವಿಸ್ತರಣೆ, ಹಳೇ ಬೇರು ಹೊಸ ಚಿಗುರು ಆಧಾರದಲ್ಲಿ ಸಂಘಟನೆಗೆ ಹೆಚ್ಚಿನ ಬಲ, ಪಕ್ಷಕ್ಕೆ ಹೊಸರಕ್ತ ಹರಿದು ಬರಲೆಂದು ಸಮ ಪಾಲು ಸಮ ಬಾಳು ತತ್ವ, ಸಾಮಾಜಿಕ ಸೇವೆ ಮುಖೇನ ರಾಜಕೀಯ ನಾಯಕತ್ವ ಬೆಳೆಸಲು ಆದ್ಯತೆ, ಚುನಾವಣಾ ರಾಜಕಾರಣದಲ್ಲಿ ಗೆಲ್ಲಲು ಬೂತ್ ಮಟ್ಟದಲ್ಲಿ ಮತಗಳನ್ನು ಭದ್ರ ಪಡಿಸುವುದು ಇತ್ಯಾದಿ ತಂತ್ರಗಳನ್ನು ಬಿಜೆಪಿ ಹೆಣೆದಿದೆ.

ಜಿ.ಪಂ., ತಾ.ಪಂ. ಚುನಾವಣೆಗೆ ಸಿದ್ಧತೆ

ಬಹುದಿನಗಳ ಬಳಿಕ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಯಾವುದೇ ವಿವಾದವಿಲ್ಲದೆ ಬೆಂಗಳೂರಿನಲ್ಲಿ ನಡೆದಿದೆ. ರಾಜ್ಯ ಘಟಕದ ಒಂದು ವರ್ಷದ ಸಾಧನೆ ಬಗ್ಗೆ ಪರಾಮರ್ಶೆ ನಡೆಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್ವಾಲ್ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ. ಮೊನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಂಘಟನೆ ಹಾಗೂ ಮುಂದಿನ ಚಟುವಟಿಕೆಗಳ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪ್ರವಾಸ ಮಾಡುವ ಬಗ್ಗೆ ಸೂಚನೆ ನೀಡಲಾಗಿದೆ. ಜತೆಗೆ 1 ವರ್ಷದ ಚಟುವಟಿಕೆ ಬಗ್ಗೆ ಅಗರ್ವಾಲ್ ವರದಿ ತಯಾರಿಸಿದ್ದು, ಇದನ್ನು ವರಿಷ್ಠರಿಗೆ ಸಲ್ಲಿಸಿದ್ದಾರೆ. ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಇರುವವರ ಪಟ್ಟಿ ಸಿದ್ಧಪಡಿಸುವ ಕಾರ್ಯ ಬಿಜೆಪಿಯಲ್ಲಿ ಈಗಲೇ ಆರಂಭಗೊಂಡಿದೆ. ಈ ಮೂಲಕ ಯುದ್ಧ ಘೋಷಣೆಯಾದ ಬಳಿಕ ಶಸಾಭ್ಯಾಸ ನಡೆಸುವ ಮೊದಲೇ ಸರ್ವ ಸಿದ್ಧತೆ ನಡೆಸಲಾಗುತ್ತಿದೆ. ಕೋರ್ ಕಮಿಟಿ ಸದಸ್ಯರ ನೇತೃತ್ವದಲ್ಲಿ ಮೂರು ಜಿಲ್ಲೆಗಳಿಗೆ ಒಂದು ತಂಡ ಮಾಡಿ ಪ್ರವಾಸ ಮಾಡಲು ತೀರ್ಮಾನ ಕೈಗೊಂಡಿರುವ ಬಿಜೆಪಿ ನಾಯಕರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಪಶ್ಚಿಮ ಬಂಗಾಲದ ರೀತಿಯಲ್ಲಿ ಆಡಳಿತ ನಡೆಸುತ್ತಿದೆ. ವಿಪಕ್ಷಗಳ ಧ್ವನಿ ಅಡಗಿಸುವ ಪ್ರಯತ್ನದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ನಿರ್ಣಯಿಸಿದ್ದಾರೆ.

ಸುಹಾಸ್ ಶೆಟ್ಟಿ ಪ್ರಕರಣ: ತಾರ್ಕಿಕ ಅಂತ್ಯಕ್ಕೆ ಒಯ್ಯದಿರುವ ಬಗ್ಗೆ ಡಿ.ವಿ, ಕಟೀಲ್ ಬೇಸರ

ಸದ್ಯದ ದಿನಗಳಲ್ಲಿ ಬಿಜೆಪಿ ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯದಿರುವ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ತುಸು ಆಕ್ಷೇಪ ವ್ಯಕ್ತವಾಗಿದೆ. ಮಂಗಳೂರಿನ ಬಜ್ಪೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ನಡೆದಾಗ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದ ಬಗ್ಗೆ ವಿಷಯ ಪ್ರಸ್ತಾಪಿಸಿದ ಮಾಜಿ ರಾಜ್ಯಾಧ್ಯಕ್ಷರಾದ ದ.ಕ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌ರವರು ನಾವು ಹೋರಾಟಗಳನ್ನು ಇನ್ನಷ್ಟು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು. ಆದರೆ ಆ ಕೆಲಸ ಆಗುತ್ತಿಲ್ಲ. ಚರ್ಚೆಗಳಷ್ಟೇ ಮಾಡುತ್ತಿದ್ದೇವೆ ಎಂದರು. ಧ್ವನಿಗೂಡಿಸಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರವರು ಜೆಡಿಎಸ್ ಜತೆಗೂಡಿದ್ದರೂ ಪಕ್ಷ ಸೋತ ಬಗ್ಗೆ ಇನ್ನೂ ವಿಮರ್ಶೆಯೇ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಎಲ್ಲಾ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಹೈಕಮಾಂಡ್‌ಗೆ ವರದಿ ಸಲ್ಲಿಕೆಯಾಗಿದೆ.

LEAVE A REPLY

Please enter your comment!
Please enter your name here