*ಘಟನೆ ನಡೆದಾಗ ದೊಡ್ಡದಾಗಿ ಬಿಂಬಿಸಬೇಡಿ-ಆಂಜನೇಯ ರೆಡ್ಡಿ
*ಪುತ್ತೂರು ಶಾಂತಿಯುತವಾಗಿದೆ-ಎಲ್.ಟಿ.ಅಬ್ದುಲ್ ರಜಾಕ್
ಪುತ್ತೂರು: ಹಬ್ಬಗಳನ್ನು ಖುಷಿಯಾಗಿರಲು ಆಚರಣೆ ಮಾಡಬೇಕು.ಸಮಾಜದ ಸ್ವಾಸ್ಥ್ಯ ಕೆಡಿಸುವವರಿಂದ ದೂರವಿರಿ. ಅಂಥವರಿಂದ ಎಚ್ಚರಿಕೆಯಿಂದ ಇರಬೇಕು.ಸಮಾಜದಲ್ಲಿ ಶಾಂತಿ ಕದಡುವವರನ್ನು ಇಲಾಖೆ ಬಿಡುವುದಿಲ್ಲ.ಪ್ರಚೋದನಕಾರಿ ಸಂದೇಶಗಳಿಗೆ ಕಮೆಂಟ್ ಮಾಡದೆ ನಮಗೆ ತಿಳಿಸಿ. ನಾವು ಅದರ ವಿರುದ್ಧ ಕ್ರಮಕೈಗೊಳ್ಳುತ್ತೆವೆ ಎಂದು ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಾನ್ಸನ್ ಡಿ’ಸೋಜ ಅವರು ತಿಳಿಸಿದ್ದಾರೆ.
ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಜೂ.೪ರಂದು ಸಂಜೆ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿ,ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಮುಖಾಂತರ ಮತ್ತೊಬ್ಬರಿಗೆ ಮಾದರಿಯಾಗಿರಬೇಕು ಎಂದು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಶಾಂತಿ ವ್ಯವಸ್ಥೆ ಸರಿಯಿಲ್ಲ.ಹಾಗಾಗಿ ಯಾವುದೇ ಪ್ರಚೋದನಕಾರಿ ಭಾಷಣಕ್ಕೆ ಕಿವಿಗೊಡಬೇಡಿ. ಸಾಮಾಜಿಕ ಜಾಲತಾಣದಲ್ಲಿ ಬರುವ ಪ್ರಚೋದನಕಾರಿ ಸಂದೇಶಗಳಿಗೆ ಕಮೆಂಟ್ ಹಾಕದಂತೆ ಯುವಕರಿಗೆ ತಿಳಿಸಿ. ಅಂತಹ ಸಂದೇಶಗಳ ಕುರಿತು ನಮಗೆ ಮಾಹಿತಿ ನೀಡಿದರೆ ನಾವು ಅದರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಈಗಾಗಲೇ ಫೇಸ್ಬುಕ್ ಖಾತೆಯಲ್ಲಿ ಪ್ರಚೋದನಾಕಾರಿ ಸಂದೇಶ ಹಾಕಿದ್ದಕ್ಕೆ 5 ಪ್ರಕರಣ ದಾಖಲಿಸಿದ್ದೇವೆ.ಅವರ ಮೊಬೈಲ್ ಕೂಡಾ ಸೀಝ್ ಮಾಡಿ ಎಫ್ಎಸ್ಎಲ್ಗೆ ಕಳುಹಿಸಿದ್ದೇವೆ. ಹಾಗಾಗಿ ಏನಿದ್ದರೂ ನಮಗೆ ದೂರು ನೀಡಿ ಎಂದರು.
ಘಟನೆ ನಡೆದಾಗ ದೊಡ್ಡದಾಗಿ ಬಿಂಬಿಸಬೇಡಿ: ಎಸ್.ಐ.ಆಂಜನೇಯ ರೆಡ್ಡಿಯವರು ಮಾತನಾಡಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಮ್ಮೊಂದಿಗೆ ಸಹಕರಿಸಿ. ಸರ್ವಧರ್ಮದವರೂ ಒಂದಾಗಿ ಸಹಬಾಳ್ವೆ ಬೆಳೆಸಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಜೊತೆಗೆ ಪ್ರಾಮಾಣಿಕರ ರಕ್ಷಣೆಗಾಗಿ ನಾವಿದ್ದೇವೆ. ಅಕ್ರಮವಾಗಿ ಯಾವುದೇ ದನ ಸಾಗಾಟ, ವಧೆ ಮಾಡಬೇಡಿ ಎಂದರು. ಪ್ರಸ್ತುತ ದಿನಗಳಲ್ಲಿ ಸೈಬರ್ ಕ್ರೈಮ್ ಹೆಚ್ಚಾಗಿದೆ. ನೇರವಾಗಿ ಕಳ್ಳತನಕ್ಕಿಂತ ಸೈಬರ್ ಕ್ರೈಮ್ ಇವತ್ತು ಜಾಸ್ತಿಯಾಗಿದೆ. ಈ ಕುರಿತು ತಮಗೆ ತೊಂದರೆ ಅದರೆ 1930ಗೆ ಕರೆ ಮಾಡಿ ಎಂದ ಅವರು ಯುವಕರನ್ನು ಪೊಲೀಸ್ ಕೆಲಸಕ್ಕೆ ಸೇರಿಸಿ ಎಂದರು.
ಪುತ್ತೂರು ಶಾಂತಿಯುತವಾಗಿದೆ: ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಎಲ್.ಟಿ.ಅಬ್ದುಲ್ ರಜಾಕ್ ಅವರು ಮಾತನಾಡಿ ಪುತ್ತೂರು ಶಾಂತಿಯುತವಾಗಿದೆ. ಬಕ್ರೀದ್ ಹಬ್ಬದ ದಿನ ಬೆಳಗ್ಗೆ 9.3೦ಕ್ಕೆ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಯುತ್ತದೆ. ಆಮೇಲೆ ಎಲ್ಲರೂ ಅವರವರ ಮನೆಗೆ ಅಥವಾ ಸಂಬಂಧಿಕರ ಮನೆಗೆ ಹೋಗಿ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಾರೆ. ನಮ್ಮಲ್ಲಿ ಕುರಿಯನ್ನು ಕುರ್ಬಾನಿ ಮಾಡುವುದು ಹೊರತು ಎಲ್ಲಿಯೂ ಗೋ ವಧೆ ಇಲ್ಲ ಎಂದರು.
ನೈತಿಕ ಪೊಲೀಸ್ಗಿರಿ ನಿಲ್ಲಿಸಿ: ಎಸ್ಡಿಪಿಐ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಎ ಅವರು ಮಾತನಾಡಿ, ಕೆಲವೊಂದು ಸಂಘಟನೆಯಿಂದ ನೈತಿಕ ಪೊಲೀಸ್ಗಿರಿ ನಡೆಯುತ್ತದೆ. ಅದನ್ನು ನಿಲ್ಲಿಸಬೇಕು. ಕಾನೂನು ಪ್ರಕಾರ ಏನು ಮಾಡಬೇಕೋ ಮಾಡಿ ಎಂದರು. ಉತ್ತರಿಸಿದ ಇನ್ಸ್ಪೆಕ್ಟರ್ ಅಂತಹ ಘಟನೆ ನಡೆದಾಗ ನೇರವಾಗಿ ನಮಗೆ ತಿಳಿಸಿ. ನಿಮ್ಮ ನಿಮ್ಮ ಭಾಗದಲ್ಲಿ ಬೀಟ್ ಪೊಲೀಸರ ಸಂಪರ್ಕವಿಟ್ಟುಕೊಳ್ಳಿ ಎಂದರು.
ಸುಮೋಟೋ ಕೇಸ್ ಮಾಡುತ್ತಿಲ್ಲ: ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ಮಾತನಾಡಿ, ಸಾರ್ವಜನಿಕ ತೊಂದರೆ ಆದಾಗ ಸುಮೋಟೋ ಕೇಸ್ ಹಾಕುವ ರೈಟ್ ಇದ್ದರೂ ನೀವು ಅದನ್ನು ಉಪಯೋಗಿಸುತ್ತಿಲ್ಲ. ದೂರು ಕೊಟ್ಟ ಬಳಿಕ ಪ್ರಕರಣ ದಾಖಲಿಸುತ್ತೀರಿ. ಹೊರಗಿನಿಂದ ಬಂದು ಪುತ್ತೂರಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ. ನೂತನ ಎಸ್ಪಿ ಬಂದ ಬಳಿಕ ಎಲ್ಲವೂ ಸರಿಯಾಗುತ್ತಿದೆ ಎಂದರು. ಉತ್ತರಿಸಿದ ಎಸ್.ಐ ಆಂಜನೇಯ ರೆಡ್ಡಿಯವರು ಇತ್ತೀಚೆಗೆ ಆಸ್ಪತ್ರೆಯ ವಿಚಾರದಲ್ಲಿ ನಡೆದ ಘಟನೆಯಲ್ಲಿ ಸುಮೋಟೋ ಕೇಸ್ ದಾಖಲಿಸಿದ್ದೇವೆ. ಇನ್ನೂ ಎರಡು ಮೂರು ಕೇಸು ದಾಖಲಿಸಿದ್ದೇವೆ. ಇನ್ನೊಂದು ಕೇಸು ಕೂಡಾ ದಾಖಲಿಸಲು ಕೋರ್ಟ್ಗೆ ಮನವಿ ಸಲ್ಲಿಸಿದ್ದೇವೆ. ಹೊಸ ಕಾನೂನು ಬಿಎನ್ಎಸ್ ಪ್ರಕಾರ ತಕ್ಷಣ ಕೇಸು ದಾಖಲಿಸಲು ಆಗುವುದಿಲ್ಲ ಎಂದರು. ಧ್ವನಿಗೂಡಿಸಿದ ಇನ್ಸ್ಪೆಕ್ಟರ್ ಜಾನ್ಸನ್ ಡಿ’ಸೋಜ ಅವರು ಬಿಎನ್ಎಸ್ನಲ್ಲಿ 7 ವರ್ಷದ ಶಿಕ್ಷೆಗೆ ಬಂಧಿಸುವಂತಿಲ್ಲ. ನೋಟಿಸ್ ಕೊಟ್ಟು ಹಾಜರಾಗಲು ತಿಳಿಸಬಹುದು. ಬಳಿಕ ಕೋರ್ಟ್ಗೆ ಮನವಿ ಮಾಡಬೇಕು. ಬಳಿಕ ಪ್ರಕರಣ ದಾಖಲಾಗುತ್ತದೆ. ಅನ್ಯಾಯ ಆದವರು ಕೋರ್ಟ್ ತೀರ್ಮಾನಕ್ಕೆ ಕಾಯಬೇಕು. ಕಾನೂನಿನ ಮೇಲೆ ನಂಬಿಕೆ ಇಡಿ ಎಂದರು.
ಬಸ್ಸ್ಟ್ಯಾಂಡ್ ಪ್ರಯಾಣಿಕರ ದಾರಿ ಸುಗಮವಾಗಿಲ್ಲ: ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಗಾಂಧಿಕಟ್ಟೆಯ ಬಳಿಯಿಂದ ಹೋಗುವ ದಾರಿ ಪ್ರಯಾಣಿಕರಿಗೆ ಸುಗಮವಾಗಿಲ್ಲ. ಅಲ್ಲಿ ಒಳ ದಾರಿಗಳು ಇರುವುದರಿಂದ ಅಕ್ಕಪಕ್ಕದಲ್ಲಿ ತೊಂದರೆಗಳಾಗುತ್ತವೆ. ಸಣ್ಣ ಮಕ್ಕಳು ಹೋಗುವ ದಾರಿಯಲ್ಲಿ ಇಂತಹ ಸಮಸ್ಯೆ ಬರಬಾರದು. ಅದು ಬೇರೆ ರೀತಿಯ ವಿಚಾರಕ್ಕೆ ಹೋಗುವ ಮೊದಲು ಪೊಲೀಸರು ಒಮ್ಮೆ ಪರಿಶೀಲಿಸಿ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ.ಜಿಲ್ಲಾ ಕಾರ್ಯದರ್ಶಿ ನೂರುದ್ದೀನ್ ಸಾಲ್ಮರ ಹೇಳಿದರು. ಉತ್ತರಿಸಿದ ಇನ್ಸ್ಪೆಕ್ಟರ್ ಅಲ್ಲಿ ಪೊಲೀಸ್ ಪಾಯಿಂಟ್ ಇದೆ. ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೂ ನಾವು ಪರಿಶೀಲಿಸುತ್ತೆವೆ ಎಂದರು.
ಸೈಬರ್ ಕ್ರೈಮ್ ಅಪರಾಧದಿಂದ ಎಚ್ಚರಿಸಲು ವಿಡಿಯೋ ಪ್ರದರ್ಶನ: ನಕಲಿ ಪೊಲೀಸ್ ಸಮವಸ ಧರಿಸಿ ಹಣದ ಬೇಡಿಕೆಯಿಟ್ಟು ಪೋಷಕರಿಗೆ ಕರೆ ಮಾಡುವ ಜಾಲ ಸಕ್ರಿಯವಾಗಿದ್ದು, ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ,ಸೈಬರ್ ಕ್ರೈಮ್ ಅಪರಾಧದಿಂದ ಪಾರಾಗುವ ವಿಚಾರದ ಕುರಿತು ವಿಡಿಯೋ ತುಣುಕನ್ನು ಸಭೆಯಲ್ಲಿ ಇನ್ಸ್ಪೆಕ್ಟರ್ ಜಾನ್ಸನ್ ಡಿ’ಸೋಜ ಪ್ರದರ್ಶಿಸಿದರು.ಸಭೆಯಲ್ಲಿ ಅಬ್ದುಲ್ ರಹಿಮಾನ್ ಆಝಾದ್, ಅಬ್ದುಲ್ ಹಾಜಿ ಶಿಬರ, ಅಮೀರ್ ಹೆಚ್ ಎಪಿಎಂಸಿ, ಯಂ.ಇಬ್ರಾಹಿಂ ಮುಲಾರು, ಯಾಹ್ಯ, ಮೊಹಮ್ಮದ್ ಫಾರೂಕ್, ಕೆ.ಅಬ್ದುಲ್ಲ, ರೆಹಮತ್ತುಲ್ಲ, ಕೆ.ಹಸನ್ ಸಿಟಿ, ಡಿ.ಕೆ.ಉಮರ್, ಅಬ್ದುಲ್ ರಜಾಕ್ ಆ.ಪಿ, ಪಿ. ಅಬ್ದುಲ್ ಲತೀ- ದರ್ಬೆ, ಶಬೀರ್ಖಾನ್, ಮಹಮ್ಮದ್, ಜುನೈದ್ ಸಾಲ್ಮರ, ತಾಜುದ್ದೀನ್ ಸಾಲ್ಮರ, ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಬಾವು, ಕೆಎಮ್ಇಮ್ತಿಹಾಜ್ ಮತ್ತಿತರರು ಉಪಸ್ಥಿತರಿದ್ದರು.
ಮಾದಕ ವ್ಯಸನಕ್ಕೆ ಬಲಿಯಾಗುವ ಯುವಕರನ್ನು ಸರಿ ದಾರಿಗೆ ತನ್ನಿ
ಮಾದಕ ದ್ರವ್ಯ ಗಾಂಜಾ ಸೇವೆನೆಗೆ ಅತಿ ಹೆಚ್ಚು ಯುವಕರು ಬಲಿಯಾಗುತ್ತಾರೆ.ಇತ್ತೀಚಿಗೆ ಓರ್ವ ಯುವಕ ಮಾದಕ ವ್ಯಸನಿಯಾಗಿದ್ದ.ವಿಚಾರಿಸಿದಾಗ, ಸಿರಪ್ ಕುಡಿದು ಅಮಲು ಏರಿಸುತ್ತಿದ್ದ. ಆತ ಹೊಟ್ಟೆಗೆ ಏನೂ ತಿನ್ನದೆ ಕೇವಲ ಅಮಲು ಪದಾರ್ಥ ಸೇವನೆ ಮಾಡುವುದನ್ನು ನೋಡಿ ನಾವೇ ಬೆಚ್ಚಿ ಬಿದ್ದಿದ್ದೇವೆ.ನಿಮ್ಮ ಸಂಘಟನೆಯಲ್ಲಿ ರಕ್ತದಾನ, ಆಂಬುಲೆನ್ಸ್ ಸೇವೆಯಂತಹ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುತ್ತೀರಿ.ಮಾದಕ ವ್ಯಸನಿಗಳನ್ನೂ ಸರಿ ದಾರಿಗೆ ತರುವ ಕಾರ್ಯಕ್ರಮ ಮಾಡಿ
-ಜಾನ್ಸ್ನ್ ಡಿ’ಸೋಜ
ಇನ್ಸ್ಪೆಕ್ಟರ್ ಪುತ್ತೂರು ನಗರ ಪೊಲೀಸ್ ಠಾಣೆ