ಸರಕಾರ ಪೊಲೀಸರ ಮೂಲಕ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡಿಸಿದರೆ ನಾವು ಸುಮ್ಮನಿರುವುದಿಲ್ಲ-ಮುರಳಿಕೃಷ್ಣ ಹಸಂತ್ತಡ್ಕ
ಕಡಬ: ಸರಕಾರ ಪೊಲೀಸ್ ಇಲಾಖೆಯ ಮೂಲಕ ಹಿಂದೂಗಳನ್ನು ಕಟ್ಟಿ ಹಾಕುವ ಯತ್ನಕ್ಕೆ ಕೈ ಹಾಕುತ್ತಿದ್ದು, ಈ ಮೂಲಕ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡಿದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ, ಇದಕ್ಕೆ ತಕ್ಕ ಉತ್ತರ ನೀಡಲಿದ್ದೇವೆ ಎಂದು ಹಿಂದೂ ಸಂಘಟನೆ ಮುಖಂಡ ಮುರಳಿಕೃಷ್ಣ ಹಸಂತ್ತಡ್ಕ ಹೇಳಿದರು.
ಜೂ.4ರಂದು ಸಂಜೆ ಕಡಬ ಪೋಲಿಸ್ ಠಾಣೆಯ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಹಿಂದೂ ಕಾರ್ಯಕರ್ತರು ಎಂದಿಗೂ ದೇಶದ್ರೋಹದ ಕೆಲಸ ಮಾಡಿಲ್ಲ, ಇಂತಹ ಕಾರ್ಯಕರ್ತರನ್ನು ಗುರಿಯಾಗಿರಿಸಿಕೊಂಡು ಅವರ ಮನೆಗೆ ನಡು ರಾತ್ರಿ 2 ಗಂಟೆಗೆ ತೆರಳಿ ಜಿ.ಪಿ.ಎಸ್. ಫೋಟೋ ತೆಗೆಯುವುದು ಅಲ್ಲದೆ ಕಡಬದ ತನಿಖಾ ಎಸ್.ಐ. ಅಕ್ಷಯ್ ಅವರು ಕಾರ್ಯಕರ್ತನೋರ್ವನಿಗೆ ಮನೆಯವರ ಮುಂದೆಯೇ ನಿನ್ನನ್ನು ರೌಡಿಲಿಸ್ಟ್ಗೆ ಹಾಕ್ತೇನೆ, ಕೇಸ್ ಹಾಕ್ತೇನೆ ಎಂದೆಲ್ಲ ಬೆದರಿಕೆ ಹಾಕಿದ್ದಾರೆಎಂದು ಆರೋಪಿಸಿದ ಅವರು, ನೀವೇ ರೌಡಿ ಶೀಟರ್ ಮಾಡಿ ಶಾಂತಿ ಕದಡ್ತೀರಾ, ನೀವು ಯಾರನ್ನು ಮೆಚ್ಚಿಸಲು ಈ ಕೆಲಸ ಮಾಡುತ್ತಿದ್ದೀರಾ, ಪ್ರಮೋಷನ್ಗೆ ಬೇಕಾಗಿ ಈ ರೀತಿ ಮಾಡುತ್ತಿದ್ದೀರಾ? ನೀವು ಅಕ್ರಮವಾಗಿ ಕಸಾಯಿಖಾನೆ ನಡೆಸುವವರ ವಿರುದ್ದ ಕ್ರಮ ಕೈಗೊಂಡಿದ್ದೀರಾ, ದೇಶದ್ರೋಹದದ ಕೆಲಸ ಮಾಡುತ್ತಿರುವರ ಮನೆಗೆ ಹೋಗಿದ್ದೀರಾ ಇದನ್ನೆಲ್ಲ ಮಾಡದೆ ಹಿಂದೂ ಕಾರ್ಯಕರ್ತರನ್ನು ದಮನಿಸುವ ಕೆಲಸ ಮಾಡುತ್ತಿದ್ದೀರ. ಇದನ್ನು ಕೂಡಲೇ ನಿಲ್ಲಿಸಿ, ನಿಮ್ಮ ಬೆದರಿಕೆಯನ್ನು ನಿಲ್ಲಿಸದಿದ್ದರೆ ನಮ್ಮ ಮೇಲೆ ಕೇಸು ಆದರೂ ಪರ್ವಾಗಿಲ್ಲ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿ ನಿಮಗೆ ಉತ್ತರವನ್ನು ನೀಡಲಿದ್ದೇವೆ ಎಂದು ಎಚ್ಚರಿಸಿದರು. ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇವಲ ದಬ್ಬಾಳಿಕೆ ಮಾಡಿ ಶಾಂತಿಯನ್ನು ಮಾಡುತ್ತೇವೆ ಎಂದರೆ ಅದು ಕನಸಿನ ಮಾತು, ಖಾಕಿ ಹಾಕಿದ ಕೂಡಲೇ ನಿಮಗೇನು ಭೂತ ಹಿಡಿಯುತ್ತ, ನಿಮಗೆ ಮಾನವೀಯತೆ ಇಲ್ಲವೇ, ಕೇವಲ ಕಡಬದಲ್ಲಿ ಮಾತ್ರ ಅಲ್ಲ ಇಡೀ ಜಿಲ್ಲೆಯಲ್ಲಿ ಈ ರೀತಿ ಮಾಡ್ತಾ ಇದ್ದೀರಿ,ನಾವು ಶಾಂತಿ ಪ್ರಿಯರು ಶಾಂತಿ ಕದಡುವವರಲ್ಲ. ಪೊಲೀಸರ ಮೂಲಕ ಸರಕಾರವೇ ಶಾಂತಿ ಕದಡುತ್ತಿದೆ ಎಂದು ದೂರಿದರು. ಅತ್ಯಾಚಾರಿಗಳನ್ನು ಏನೂ ಮಾಡಲು ಸಾಧ್ಯವಾಗದ ನೀವು ಈ ರಾಷ್ಟ್ರಕ್ಕೋಸ್ಕರ, ಧರ್ಮಕ್ಕೋಸ್ಕರ ನಿಸ್ವಾರ್ಥ ಸೇವೆ ಮಾಡುವ ಕಾರ್ಯ ಕರ್ತರ ಮೇಲೆ ದಬ್ಬಾಳಿಕೆ ಮಾಡಿದರೆ ಅದರ ನೇರ ಪರಿಣಾಮ ಎದುರಿಸಬೇಕಾಗುತ್ತದೆ. ಆಹೋರಾತ್ರಿ ಹೋರಾಟ ಮಾಡಬೇಕಾದೀತು, ಎಷ್ಟೇ ಪ್ರಕರಣ ದಾಖಲಿಸಿದರೂ ನಾವು ಹಿಂಜರಿಯುವುದಿಲ್ಲ ಎಂದರು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಸುಳ್ಯ ವಿಧಾನ ಸಭಾ ಕ್ಷೇತ್ರದ ಹಿಂದೂಗಳು ಶಾಂತಿ ಪ್ರಿಯರು ಅವರನ್ನು ಕೆಣಕಿದರೆ ಕ್ಷೇತ್ರದ ಪ್ರತೀ ಬೂತ್ನಿಂದ ಸಾವಿರಾರು ಹಿಂದೂ ಕಾರ್ಯಕರ್ತರು ಎದ್ದು ನಿಲ್ಲುತ್ತಾರೆ. ನೀವು ಕೆಲವರ ಮೇಲೆ ಪ್ರಕರಣ ದಾಖಲಿಸಬಹುದು ಆದರೆ ಹೊರಗಡೆ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ ಎನ್ನುವುದು ನಿಮ್ಮ ಗಮನದಲ್ಲಿರಲಿ, ಪೊಲೀಸ್ ಇಲಾಖೆ ತಮ್ಮ ಬೇಜವಾಬ್ದಾರಿ ಕೆಲಸವನ್ನು ನಿಲ್ಲಿಸಬೇಕು, ತಪ್ಪಿದಲ್ಲಿ ಮುಂದೆ ಆಗುವ ಅನಾಹುತಕ್ಕೆ ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ ಕಡಬ ಪೊಲೀಸರಿಗೆ ಮುಸ್ಲಿಂ ಮನೆಗೆ ಹೋಗಲು ಮೀಟರ್ ಇಲ್ಲ. ಅವರಿಗೆ ಹೆದರಿ ಹಿಂದೂ ಕಾರ್ಯಕರ್ತರ ಮನೆಗೆ ಹೋಗುತ್ತಾರೆ, ಅತ್ಯಾಚಾರವಾದ ಹೆಣ್ಣು ಮಗಳಿಗೆ ನೋಟೀಸ್ ಕೊಡುವ ನೆಪದಲ್ಲಿ ಹೋಗಿ ಆಕೆಯನ್ನು ಅತ್ಯಾಚಾರ ಮಾಡಿದ ಇತಿಹಾಸ ಇರುವ ಕಡಬ ಪೋಲೀಸರಿಗೆ ಯಾವ ನೈತಿಕತೆ ಇದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ ಮಾತನಾಡಿ ರಾತ್ರಿ ಹೊತ್ತು ನಮ್ಮ ಕಾರ್ಯಕರ್ತರ ಮನೆಗೆ ತೆರಳಿ ದಬ್ಬಾಳಿಕೆ ನಡೆಸಿದರೆ ಮನೆಯ ಮಾತೆಯರು ದುರ್ಗೆಯರಾಗಬೇಕಾಗುತ್ತದೆ, ಇದಕ್ಕೆ ಅವಕಾಶ ನೀಡಬೇಡಿ, ರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ತೆರಳುವುದನ್ನು ತಕ್ಷಣ ನಿಲ್ಲಿಸಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆ ಮುಖಂಡರಾದ ಮೋಹನ್ ದೋಳ್ಪಾಡಿ, ಶ್ರೀಧರ ತೆಂಕಿಲ, ರಾಧಾಕೃಷ್ಣ ಕೋಲ್ಪೆ, ಅಶ್ವಿತ್ ಕಂಡಿಗ, ಪ್ರಮೋದ್ ನಂದುಗುರಿ, ವಾಸುದೇವ ಭಟ್ ಕಡ್ಯ, ವಾಸುದೇವ ಕೊಲ್ಲೆಸಾಗು, ಉಮೇಶ್ ಶೆಟ್ಟಿ ಸಾಯಿರಾಮ್, ಮೋಹನ್ ಕೆರೆಕ್ಕೋಡಿ, ವೀಣಾ ರಮೇಶ್, ರಘುರಾಮ ನಾಯ್ಕ್, ಕಿಶೋರ್ ಶಿರಾಡಿ, ಹೇಮಲತಾ ಕೇಪುಂಜ, ಪ್ರಮೀಳಾ ಲೋಕೇಶ್, ಬಿಜೆಪಿ ಮುಖಂಡರಾದ ಆಶಾ ತಿಮ್ಮಪ್ಪ ಗೌಡ, ಶ್ರೀ ಕೃಷ್ಣ ಎಂ.ಆರ್., ಪ್ರದೀಪ್ ರೈ ಮನವಳಿಕೆ, ಸುರೇಶ್ ದೇಂತಾರು, ಲಕ್ಷ್ಮೀನಾರಾಯಣ ರಾವ್, ಪ್ರಕಾಶ್ ಎನ್.ಕೆ. ರಾಮಣ್ಣ ಗೌಡ ಜಾಲ್ತಾರು, ಪ್ರಕಾಶ್ ಕೆಮ್ಮಾರ, ಶಶಾಂಕ್ ಗೋಖಲೆ, ದಾಮೋದರ ಗುಂಡ್ಯ, ಸುದರ್ಶನ ಶಿರಾಡಿ, ಸಂತೋಷ್ ಗುಂಡ್ಯ, ಸಂತೋಷ್ ಕೋಡಿಬೈಲು ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ವಿಶಾಕ್ ಪುತ್ತೂರು ಸ್ವಾಗತಿಸಿ, ವಂದಿಸಿದರು.
ಪ್ರತಿಭಟನೆಯ ಬಳಿಕ ಮಹಿಳೆಯರು ಕಡಬ ಠಾಣಾ ಎಸ್.ಐ. ಅಭಿನಂದನ್ ಅವರಿಗೆ ಮನವಿ ನೀಡಿದರು.