ಕಾವು: ಮಳಿ ರಾಮಚಂದ್ರ ಭಟ್‌ರವರ ಮನೆಯಲ್ಲಿ ಕಾಶಿ ಸಮಾರಾಧನೆ, ಸತ್ಕಾರ-ಸನ್ಮಾನ

0

ಕಾವು: ಮಾಡ್ನೂರು ಗ್ರಾಮದ ಮಳಿ ರಾಮಚಂದ್ರ ಭಟ್‌ರವರು ಸಪತ್ನೀಕರಾಗಿ ತನ್ನ ಆತ್ಮೀಯ ಬಳಗದೊಡನೆ ಅಯೋಧ್ಯೆ, ಪ್ರಯಾಗ, ಕಾಶಿ ಕ್ಷೇತ್ರ ಪ್ರವಾಸ ಮುಗಿಸಿ, ಆ ನಿಮಿತ್ತ ತನ್ನ ಪಡ್ಪು ನಿವಾಸದಲ್ಲಿ ಕಾಶಿ ಸಮಾರಾಧನೆ ಕಾರ್ಯಕ್ರಮ ನೆರವೇರಿಸಿದರು. ಪೂರ್ವಾಹ್ನ ಮಹಾಗಣಪತಿ ಹವನ ಮಾಡಿ, ರುದ್ರಾಭಿಷೇಕ ಪೂರ್ವಕ ಶಿವರಾಧನೆ, ಪ್ರಸಾದ ವಿತರಣೆ ನಡೆಯಿತು.


ಸನ್ಮಾನ:
ಪ್ರವಾಸದ ಜವಾಬ್ದಾರಿ ವಹಿಸಿದ್ದ ಬೆಂಗಳೂರಿನ ಟ್ರಾವೆಲ್ಸ್ ಫಾರ್ ಯು ನಿರ್ವಹಣಾಕಾರ ನೂಜಿಬಾಳ್ತಿಲದ ಬಾಲಕೃಷ್ಣರವರಿಗೆ ಮಳಿ ರಾಮಚಂದ್ರ ಭಟ್‌ರವರು ಬಂಧು ಮಿತ್ರರ ಸಮ್ಮುಖದಲ್ಲಿ ಪೇಟ ತೊಡಿಸಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಬಾಲಕೃಷ್ಣರವರು ಕೃತಜ್ಞತೆ ಅರ್ಪಿಸಿ ಮಾತನಾಡಿ ತನ್ನ ಸಂಸ್ಥೆಯ ಬಗೆಗೆ ವಿಶ್ವಾಸವಿರಿಸಿ ಸಂಸ್ಥೆಯ ಮೂಲಕ ಹೆಚ್ಚಿನ ಬಾರಿ ವಿವಿಧ ಪ್ರದೇಶಗಳಿಗೆ ಪ್ರವಾಸಗೈದ ವಿವಿಧ ಕಡೆಗಳ ಹವ್ಯಕ ಸಮಾಜದ ಮಹನೀಯರ ಪ್ರೋತ್ಸಾಹವನ್ನು ಸ್ಮರಿಸಿದರು.

ಪುತ್ತೂರು ಫಿಲೋಮಿನಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹರಿನಾರಾಯಣ ಮಾಡಾವು ಮತ್ತು ಕಾಡೂರು ಸೀತಾರಾಮ ಶಾಸ್ತ್ರಿಯವರು ಪ್ರವಾಸದ ಕುರಿತಾದ ತಮ್ಮ ಅನುಭವವನ್ನು ಹಂಚಿಕೊಂಡರು. ಪ್ರವಾಸದ ನೇತೃತ್ವದ ವಹಿಸಿದ್ದ ಪುತ್ತೂರಿನ ಜಿ. ಕೆ. ಪ್ರಸನ್ನರವರು ಕಾರ್ಯಕ್ರಮ ನಿರ್ವಹಿಸಿ, ಯಲ್. ಬಿ. ಪೆರ್ನಾಜೆಯವರು ಸ್ವಾಗತಿಸಿದರು. ಕಾರ್ಯಕ್ರಮದ ನಂತರ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ 250ಕ್ಕೂ ಅಧಿಕ ಜನ ಭಾಗವಹಿಸಿದ್ದರು. ಮಳಿ ರಾಮಚಂದ್ರ ಭಟ್ ಮತ್ತು ಸಾವಿತ್ರಿ ಆರ್ ಭಟ್‌ರವರು ಅತಿಥಿಗಳನ್ನು ಸತ್ಕರಿಸಿದರು.

LEAVE A REPLY

Please enter your comment!
Please enter your name here