ಶ್ರೀ ಮಹಾಲಿಂಗೇಶ್ವರ ಅಟೋ ಡಿಟೇಲಿಂಗ್ ಕೆಫೆ ಕಾರ್ಯಾರಂಭ

0

ಪುತ್ತೂರು: ಬೈಪಾಸ್ ರಸ್ತೆಯ ಉರ್ಲಾಂಡಿ ಸುಶ್ರುತ ಆಸ್ಪತ್ರೆಯ ಬಳಿ ಇರುವ ಎಸ್‌ಜಿಕೆ ಬಿಲ್ಡಿಂಗ್‌ನಲ್ಲಿ ಶ್ರೀ ಮಹಾಲಿಂಗೇಶ್ವರ ಅಟೋ ಡಿಟೇಲಿಂಗ್ ಕೆಫೆ ಜೂ. 4 ರಂದು ಶುಭಾರಂಭಗೊಂಡಿತು. ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು ಗುತ್ತು ಸೇರಿದಂತೆ ಅನೇಕ ಗಣ್ಯರು ದೀಪ ಬೆಳಗಿಸುವುದರ ಮೂಲಕ ಅಟೋ ಡಿಟೇಲಿಂಗ್ ಕೆಫೆಯನ್ನು ಉದ್ಘಾಟಿಸಿದರು.


ಬಳಿಕ ಮಾತನಾಡಿದ ಶಿವರಾಮ ಆಳ್ವ, ಪುತ್ತೂರಿನಲ್ಲಿ ಅನೇಕ ಉದ್ಯಮಗಳು ಆರಂಭಗೊಂಡಿದೆ. ಅನೇಕ ಉದ್ಯಮಿಗಳು ವ್ಯಾಪಾರ ಆರಂಭಿಸಲು ಪುತ್ತೂರಿಗೆ ಕಾಲಿಡುತ್ತಿದ್ದಾರೆ ಎಂದು ಹೇಳಿ ಅಟೋ ಡಿಟೇಲಿಂಗ್ ಕೆಫೆ ಉದ್ಯಮವು ಉತ್ತಮ ರೀತಿಯಲ್ಲಿ ಮುನ್ನಡೆಯಲಿ ಎಂದು ಶುಭಹಾರೈಸಿದರು.


ಹಿಂದೂ ಸಂಘಟನೆ ಮುಖಂಡ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಕೆಲವೊಂದು ಉದ್ಯಮಗಳು ಹಣ ಮಾಡುವ ಉದ್ದೇಶ ಹೊಂದಿರುತ್ತವೆ. ಆದರೆ ಸರ್ವಿಸ್ ಸ್ಟೇಷನ್‌ಗಳು ಸೇವೆ ನೀಡುವ ಉದ್ಯಮಗಳಾಗಿವೆ. ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸಿಕೊಂಡು ಮುನ್ನಡೆಯಿರಿ, ಈ ಉದ್ಯಮಕ್ಕೆ ಯಶಸ್ಸು ಸಿಗುತ್ತದೆ ಎಂದು ಹೇಳಿ ಶುಭಹಾರೈಸಿದರು. ವಿಜಯ್ ಸಾಮ್ರಾಟ್‌ನ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ ಮಾತನಾಡಿ, ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಅಟೋ ಡಿಟೇಲಿಂಗ್ ಕೆಫೆ ಉದ್ಘಾಟನೆಗೊಂಡಿದೆ. ಮಂಗಳೂರಿನ ನಂತರ ಪುತ್ತೂರು ವ್ಯವಸ್ಥಿತವಾಗಿ ಬೆಳೆಯುತ್ತಿರುವ ನಗರವಾಗಿದೆ. ಈ ಕ್ಷೇತ್ರಕ್ಕೆ ಇಂತಹ ಉದ್ಯಮಗಳ ಅವಶ್ಯಕತೆ ಇದೆ. ಈ ಕೆಫೆಯ ಮಾಲಕರು ಶ್ರಮಜೀವಿಗಳಾಗಿದ್ದಾರೆ. ಇವರ ಮೇಲೆ ದೇಶವರ ಆಶೀರ್ವಾದ ಇರುತ್ತದೆ ಎಂದು ಹೇಳಿ ಶುಭಹಾರೈಸಿದರು.


ಪುತ್ತೂರು ಗ್ರಾಮಾಂತರದ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಸರ್ವಿಸ್ ಸ್ಟೇಷನ್‌ಗಳಿಂದ ಪುತ್ತೂರಿನ ಜನತೆಗೆ ಉಪಯೋಗವಿದೆ. ಪುತ್ತೂರಿನಲ್ಲಿ ಉತ್ತಮ ಸೇವೆ ನೀಡಬೇಕೆಂಬ ಉದ್ದೇಶದಿಂದ ಅಟೋ ಡಿಟೇಲಿಂಗ್ ಕೆಫೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಬೆಳವಣಿಗೆಗೆ ಎಲ್ಲರ ಸಹಕಾರ ಅವಶ್ಯಕ. ಬೆಳೆಯುತ್ತಿರುವ ಪುತ್ತೂರಿಗೆ ಈ ಉದ್ಯಮ ಕೊಡುಗೆಯಾಗಿದೆ. ಈ ಸಂಸ್ಥೆಯ ಜೊತೆಗೆ ಅನೇಕ ಸಹ ಸಂಸ್ಥೆಗಳು ಪ್ರಾರಂಭಿಸುವಂತಾಗಲಿ ಎಂದು ಶುಭಹಾರೈಸಿದರು.


ಪ್ರೊ. ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ಮಾತನಾಡಿ, ಶ್ರೀ ಮಹಾಲಿಂಗೇಶ್ವರ ಅಟೋ ಡಿಟೇಲಿಂಗ್ ಕೆಫೆ ಪುತ್ತೂರಿನ ಜನರಿಗೆ ಉಪಯೋಗವಾಗಲಿ ಎಂದು ಶುಭಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಮ್ ಡಿ’ಸೋಜ ಮಾತನಾಡಿ, ಅಟೋ ಡಿಟೇಲಿಂಗ್ ಕೆಫೆ ಉದ್ಯಮ ಯಶಸ್ಸು ಕಾಣಲಿ. ದೈವ ದೇವರುಗಳ ಅನುಗ್ರಹ ಸಿಗಲಿ ಎಂದು ಶುಭಹಾರೈಸಿದರು. ಕರ್ನಾಟಕ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ, ನಾವು ಇನ್ನೊಬ್ಬರ ಕಣ್ಣೀರಿನ, ಬೆವರಿನ ಹನಿಯಿಂದ ಅನ್ನ ತಿನ್ನಬಾರದು. ನಾವೇ ಬೆವರು ಸುರಿಸಿ ಸಂಪಾದಿಸಿ ಅನ್ನ ತಿನ್ನಬೇಕು. ಇದೊಂದು ಉತ್ತಮ ಉದ್ಯಮವಾಗಿದೆ ಎಂದು ಹೇಳಿ ಶುಭಹಾರೈಸಿದರು.


ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಉದ್ಯಮಿ ಪ್ರಸನ್ನ ಶೆಟ್ಟಿ ‘ಸಿಝ್ಲರ್’, ಸರ್ಪುದ್ದೀನ್ ಎಂ.ಜಿ., ಹರಿಕೃಷ್ಣ ಕಾಮತ್ ಸೇರಿದಂತೆ ಅನೇಕರು ಆಗಮಿಸಿ ಉದ್ಯಮಕ್ಕೆ ಶುಭಹಾರೈಸಿದರು. ಮಾನ್ವಿ ಪಿ ರೈ ಪ್ರಾರ್ಥಿಸಿದರು, ಜಯರಾಮ್ ರೈ ಆರ್ಲಪದವು ಸ್ವಾಗತಿಸಿ ನಿರೂಪಿಸಿದರು. ಸಾಮಾಜಿಕ ಕಾರ್ಯಕರ್ತ ಹರಿಪ್ರಸಾದ್ ಶೆಟ್ಟಿ ವಂದಿಸಿದರು. ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾಲಕರ ತಂದೆ ಬಾಲಕೃಷ್ಣ ರೈ ಹಾಗೂ ತಾಯಿ ಲೀಲಾವತಿ ಉಪಸ್ಥಿತರಿದ್ದರು.‌

LEAVE A REPLY

Please enter your comment!
Please enter your name here