ಆನೆ ಹಾವಳಿಯಿಂದ ಕೃಷಿ ಹಾಳಾಗುತ್ತಿದೆ, ಜೀವನ ಸಾಗಿಸುವುದೇ ಕಷ್ಟವಾಗಿದೆ
ದಯವಿಟ್ಟು ಆನೆಯನ್ನು ಸ್ಥಳಾಂತರ ಮಾಡಿಕೊಡಿ-ಕೃಷಿಕರ ಅಳಲು
ಆನೆಯನ್ನು ಶಾಶ್ವತ ಸ್ಥಳಾಂತರಿಸಲು ಡಿಸಿ, ಶಾಸಕರಿಗೆ ಮನವಿ- ನಿರ್ಣಯ
ಪುತ್ತೂರು: ಅರಿಯಡ್ಕ ಮತ್ತು ಮಾಡ್ನೂರು ಗ್ರಾಮ ವ್ಯಾಪ್ತಿಯಲ್ಲಿ ಆನೆ ಹಾವಳಿ ಜಾಸ್ತಿಯಾಗಿದ್ದು ಹಲವು ಮಂದಿ ಕೃಷಿಕರ ಕೃಷಿ ನಾಶವಾಗಿದೆ ಅಲ್ಲದೆ ಆನೆಗಳ ಉಪಟಳದಿಂದ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಆನೆಗಳನ್ನು ದಯವಿಟ್ಟು ಜನವಸತಿ ಪ್ರದೇಶದಿಂದ ಅಭಯಾರಣ್ಯಕ್ಕೆ ಸ್ಥಳಾಂತರ ಮಾಡಿಕೊಡಬೇಕು ಎಂದು ಆನೆ ಹಾವಳಿಯಿಂದ ಕೃಷಿ ಹಾನಿಗೊಳಗಾದ ಕೃಷಿಕರು ಕಾವು ಸಮುದಾಯ ಭವನದಲ್ಲಿ ಜೂನ್.5 ರಂದು ನಡೆಸಿದ ಸಭೆಯಲ್ಲಿ ಮನವಿ ಮಾಡಿಕೊಂಡರು.
ಅರಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಲ್ಪಟ್ಟ ಈ ಸಭೆಯಲ್ಲಿ ಅರಿಯಡ್ಕ ಮತ್ತು ಮಾಡ್ನೂರು ಗ್ರಾಮದ ಹಲವು ಮಂದಿ ಕೃಷಿಕರು ಭಾಗವಹಿಸಿದ್ದರು. ನಿರಂತರವಾಗಿ ಆನೆಗಳು ನಮ್ಮ ಕೃಷಿ ತೋಟಕ್ಕೆ ದಾಳಿ ಮಾಡುತ್ತಿದ್ದು ಕೃಷಿ ನಾಶ ಮಾಡುತ್ತಿವೆ ಇದಲ್ಲದೆ ಜನರಿಗೆ ವಾಸ ಮಾಡಲು ಕೂಡ ಜೀವ ಭಯ ಉಂಟಾಗಿದೆ. ಈಗಾಗಲೇ ಹಲವು ಬಾರಿ ಅರಣ್ಯ ಇಲಾಖೆಗೆ ಈ ಬಗ್ಗೆ ಮನವಿ ಮಾಡಿಕೊಂಡರು ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ಆನೆಯನ್ನು ಓಡಿಸುತ್ತಾರೆ ಆದರೆ ವಾರದೊಳಗೆ ಮತ್ತೆ ಆನೆಗಳು ಊರಿಗೆ ಬರುತ್ತಿದೆ. ಆನೆ ದಾಳಿಯಿಂದ ಹಾಳಾಗಿರುವ ಕೃಷಿಗೆ ಸರಕಾರದಿಂದ ಯಾವುದೇ ಪರಿಹಾರ ಕೂಡ ಸಿಗುತ್ತಿಲ್ಲ ಹೀಗಾದರೂ ಕೃಷಿಕರು ಏನು ಮಾಡೋದು? ಆದ್ದರಿಂದ ಶಾಶ್ವತವಾಗಿ ಆನೆಯನ್ನು ಅಭಯಾರಣ್ಯಕ್ಕೆ ಸ್ಥಳಾಂತರ ಮಾಡುವ ಕೆಲಸ ಆಗಬೇಕು ಎಂದು ಆಗ್ರಹಿಸಿದ ಕೃಷಿಕರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮಾಡಿಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ಆನೆಗಳನ್ನು ತಂದು ಬಿಡುತ್ತಿದ್ದಾರೆಯೇ?: ಕುಮಾರ್ ಪೆರ್ನಾಜೆ
ಪ್ರಶಸ್ತಿ ಪುರಸ್ಕೃತ ಕೃಷಿಕ ಕುಮಾರ್ ಪೆರ್ನಾಜೆಯವರು ಮಾತನಾಡಿ, ಆನೆಗಳಿಗೆ ಮನುಷ್ಯರಿಂದ ಜಾಸ್ತಿ ಬುದ್ದಿವಂತಿಕೆ ಇದೆ. ಆನೆಗಳು ಬರುತ್ತಿದ್ದರೆ ನಾಯಿಗಳು ಕೂಡ ಬೊಗಳುವುದಿಲ್ಲ. ಆನೆಗಳಿಂದ ಕೃಷಿ ಹಾನಿಯಾಗಿದೆ ಎಂಬುದು ಬೆಳಿಗ್ಗೆಯೇ ಗೊತ್ತಾಗುತ್ತದೆ. ನನ್ನ ಪ್ರಕಾರ ಆನೆಗಳನ್ನು ಎಲ್ಲಿಂದಲೋ ತಂದು ಬಿಡುತ್ತಾರೆಯೋ ಎಂಬ ಅನುಮಾನ ಇದೆ. ಈ ಬಗ್ಗೆಯೂ ತನಿಖೆಯಾಗಬೇಕು. ಆನೆ ದಾಳಿಯಿಂದ ಕೃಷಿ ಹಾನಿಯಾದರೆ ಈ ಹಿಂದೆ ಪರಿಹಾರ ಸಿಗುತ್ತಿತ್ತು ಈಗ ಅದು ಕೂಡ ಸಿಗುತ್ತಿಲ್ಲ ಈ ಬಗ್ಗೆ ಸರಕಾರ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.
ಪಂಚಾಯತ್ನಿಂದ ಈಗಾಗಲೇ ಮನವಿ ಸಲ್ಲಿಸಿದ್ದೇವೆ: ಸಂತೋಷ್ ಮಣಿಯಾಣಿ
ಗ್ರಾಮ ವ್ಯಾಪ್ತಿಯಲ್ಲಿ ಆನೆಗಳಿಂದ ಕೃಷಿ ಹಾನಿಯಾದ ಪ್ರದೇಶಗಳಿಗೆ, ತೋಟಗಳಿಗೆ ಪಂಚಾಯತ್ನಿಂದ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಕೃಷಿ ಹಾನಿ ಬಗ್ಗೆ ಅರಣ್ಯ ಇಲಾಖೆಗೆ ಅರ್ಜಿ ಕೊಡಲು ಕೂಡ ತಿಳಿಸಿದ್ದೇವೆ. ಇದಲ್ಲದೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಆನೆಯನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕು ಎಂಬ ನಿರ್ಣಯವನ್ನು ಕೂಡ ದಾಖಲಿಸಿಕೊಂಡು ಸಂಬಂಧಪಟ್ಟಿ ಇಲಾಖೆಗೆ ಕಳಿಸಿಕೊಟ್ಟಿದ್ದೇವೆ ಎಂದು ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ತಿಳಿಸಿದರು.

ಕೃಷಿ ನಾಶಕ್ಕೆ ಪರಿಹಾರ ಕೊಡುವವರು ಯಾರು?: ಲೋಕೇಶ್ ಚಾಕೋಟೆ
ಪ್ರಗತಿಪರ ಕೃಷಿಕ, ಪಂಚಾಯತ್ ಸದಸ್ಯ ಲೋಕೇಶ್ ಚಾಕೋಟೆಯವರು ಮಾತನಾಡಿ, ನಮ್ಮ ಭಾಗಕ್ಕೂ ನಿರಂತರವಾಗಿ ಆನೆಗಳು ಬರುತ್ತಿದ್ದು ಕೃಷಿ ಹಾನಿ ಮಾಡುತ್ತಿವೆ. ಈಗ ಒಂದು, ಎರಡು ಆನೆ ಬರುತ್ತಿದೆ ಕ್ರಮೇಣ ಆನೆಗಳ ಹಿಂಡುಗಳು ಬರುವ ಸಾಧ್ಯತೆ ಇದೆ. ಹೀಗೆ ಆದರೆ ಕೃಷಿಕರು ಏನು ಮಾಡೋದು? ಆನೆ ದಾಳಿಯಿಂದ ಕೃಷಿ ಹಾನಿ ನಿರಂತರ ಆಗುತ್ತಿದೆ. ಇದಕ್ಕೆ ಪರಿಹಾರ ಕೊಡುವವರು ಯಾರು? ಅರಣ್ಯ ಇಲಾಖೆಯೇ? ಯಾರು ಪರಿಹಾರ ಕೊಡುತ್ತಾರೆ. ಹೀಗೆ ಮುಂದುವರಿದರೆ ಕೃಷಿಕರ ಗತಿ ಏನು ಎಂದು ಪ್ರಶ್ನಿಸಿದರು.
ಪರಿಹಾರಕ್ಕೆ ಅರ್ಜಿ ಕೊಟ್ಟರೂ ಸಿಗುತ್ತಿಲ್ಲ: ಶರತ್ ಕುಮಾರ್ ಕಾವು
ಕೃಷಿಕರಾದ ಶರತ್ ಕುಮಾರ್ ಕಾವುರವರು ಮಾತನಾಡಿ, ನಮ್ಮ ತೋಟಕ್ಕೆ 2 ಸಲ ಆನೆಗಳು ಬಂದು ಅಡಿಕೆ,ತೆಂಗು, ಬಾಳೆ ಇತ್ಯಾದಿಗಳಿಗೆ ಹಾನಿಯುಂಟು ಮಾಡಿವೆ. ಅಪಾರ ನಷ್ಟ ಉಂಟಾಗಿದೆ. ಪರಿಹಾರಕ್ಕೆ ಅರ್ಜಿ ಕೊಟ್ಟರೂ ಯಾವುದೆ ಪರಿಹಾರ ಸಿಕ್ಕಿಲ್ಲ.ಆನೆಗಳ ಶಾಶ್ವತ ಸ್ಥಳಾಂತರ ಮಾಡುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ಪೈಪು ಲೈನ್, ಪಂಪುಗಳಿಗೆ ಹಾನಿಯುಂಟು ಮಾಡಿವೆ: ನಿರ್ಮಲಾ ಕುಮಾರಿ
ಕೃಷಿಕರಾದ ನಿರ್ಮಲಾ ಕುಮಾರಿ ಪೂವಂದೂರುರವರು ಮಾತನಾಡಿ, ನಮ್ಮ ತೋಟಕ್ಕೆ ಬಂದ ಆನೆ ಸುಮಾರು 5 ದಿನ ತನಕ ಇತ್ತು. ನಮ್ಮ ಪಂಪು ಶೆಡ್ಗೆ, ಪಂಪಿಗೆ ಹಾಗೇ ಪೈಪು ಲೈನ್ಗಳನ್ನು ಒಡೆದು ಹಾಕಿದೆ. ದುರಸ್ತಿಗೆ ಬಹಳಷ್ಟು ಖರ್ಚು ಇದೆ. ನಾವೇನು ಮಾಡೋದು? ಎಂದು ತಮ್ಮ ನೋವನ್ನು ತಿಳಿಸಿದರು.
ಅರಣ್ಯ ಇಲಾಖೆಯಿಂದ ಸ್ಪಂದನೆ ಸಿಗುತ್ತಿದೆ: ಕೊಚ್ಚಿ ಕೃಷ್ಣಪ್ರಸಾದ್
ಕೃಷಿಕ ಕೊಚ್ಚಿ ಕೃಷ್ಣ ಪ್ರಸಾದ್ರವರು ಮಾತನಾಡಿ, ಈ ರೀತಿಯ ಆನೆ ದಾಳಿ ನಮಗೆ ಹೊಸ ಅನುಭವ ಆಗಿದೆ. ಆನೆಯ ವಿಷಯದಲ್ಲಿ ಅರಣ್ಯ ಇಲಾಖೆಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ.ಆದರೆ ಇದಕ್ಕೊಂದು ಶಾಶ್ವತ ಪರಿಹಾರ ಆಗಬೇಕು ಈ ಬಗ್ಗೆ ಸರಕಾರ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.
ಕಾನೂನು ರೀತಿಯ ಹೋರಾಟದ ಅಗತ್ಯ ಇದೆ: ರಾಮ್ಪ್ರಸಾದ್
ಭಾರತೀಯ ಕಿಸಾನ್ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್ಪ್ರಸಾದ್ರವರು ಮಾತನಾಡಿ, ಆನೆಗಳ ಹಾವಳಿಯನ್ನು ತಪ್ಪಿಸಬೇಕಾದರೆ ಅದಕ್ಕೆ ಬೇಕಾದ ಅಗತ್ಯ ಕ್ರಮಗಳಾದ ಕಂದಕ ನಿರ್ಮಾಣ, ಸೋಲಾರ್ ಬೇಲಿ ಇತ್ಯಾದಿಗಳನ್ನು ಸರಕಾರ ಕೈಗೊಳ್ಳಬೇಕಾಗಿದೆ. ಕೃಷಿ ಹಾನಿಗೆ ಪರಿಹಾರ ದೊರಕಿಸಿಕೊಡುವ ಬಗ್ಗೆ ಕಾನೂನು ರೀತಿಯ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ರೈತರೊಂದಿಗೆ ಭಾರತೀಯ ಕಿಸಾನ್ ಸೇನೆ ಸದಾ ಇದೆ. ಕೃಷಿ ಹಾನಿ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಬನ್ನಿ ನಾವು ಜೊತೆಗೂಡಿ ಈ ಬಗ್ಗೆ ಹೋರಾಟ ಮಾಡೋಣ ಎಂದು ತಿಳಿಸಿದರು. ಕಿಸಾನ್ ಸೇನೆಯ ಜನಾರ್ದನ್ ಪಡ್ಡಂಬೈಲುರವರು ಮಾತನಾಡಿ, ಹಂದಿ ಸಹಿತ ಇತರ ಪ್ರಾಣಿಗಳಿಂದ ಕೃಷಿ ಹಾನಿಯಾದರೆ ಪರಿಹಾರ ಸಿಗುತ್ತದೆ ಆದರೆ ಆನೆಯಿಂದ ಕೃಷಿ ಹಾನಿಯಾದರೆ ಪರಿಹಾರ ಯಾಕೆ ಸಿಗುತ್ತಿಲ್ಲ ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಬೇಕಾದ ಅಗತ್ಯತೆ ಇದೆ ಎಂದರು.
ಆಹಾರಕ್ಕಾಗಿ ನಾಡಿಗೆ ಬರುತ್ತಿವೆ: ವಿದ್ಯಾಧರ್
ಅರಿಯಡ್ಕ ಪಂಚಾಯತ್ ಕಾರ್ಯದರ್ಶಿ ವಿದ್ಯಾಧರ್ರವರು ಮಾತನಾಡಿ, ಆನೆಗಳು ನಾಡಿಗೆ ದಾಳಿ ಮಾಡಲು ಮುಖ್ಯ ಕಾರಣ ಕಾಡಿನ ನಾಶ.ನಾವುಗಳು ಕಾಡನ್ನು ಕಡಿದು ನಾಶ ಮಾಡುತ್ತಿದ್ದೇವೆ ಕಾಡಿನಲ್ಲಿದ್ದ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಆನೆಗಳು ಹೆಚ್ಚಾಗಿ ಆಹಾರವನ್ನು ಹುಡುಕಿಕೊಂಡು ಬರುತ್ತವೆ. ಅವುಗಳಿಗೆ ಒಮ್ಮೆ ಒಂದು ಭಾಗದಲ್ಲಿ ಆಹಾರ ಸಿಕ್ಕಿದರೆ ಮತ್ತೆ ಮತ್ತೆ ಆ ಭಾಗಕ್ಕೆ ಬರುತ್ತವೆ. ಪಂಚಾಯತ್ನಿಂದ ಸಾಧ್ಯವಿರುವ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದೇವೆ. ಆನೆಯ ಸ್ಥಳಾಂತರ ಇತ್ಯಾದಿಗಳನ್ನು ಅರಣ್ಯ ಇಲಾಖೆ ಮತ್ತು ಸರಕಾರವೇ ಮಾಡಬೇಕಾಗಿದೆ ಎಂದು ತಿಳಿಸಿದರು.
ಪರಿಹಾರ ಕೊಡುವುದು ಬಿಡುವುದು ಸರಕಾರದ ಕೆಲಸ: ಮದನ್
ಪಾಣಾಜೆ ವಲಯ ಅರಣ್ಯಾಧಿಕಾರಿ ಮದನ್ರವರು ಮಾತನಾಡಿ, ಆನೆ ದಾಳಿಯಿಂದ ಕೃಷಿ ಹಾನಿಯಾದ ಬಗ್ಗೆ ನಾವು ಸ್ಥಳಕ್ಕೆ ಹೋಗಿ ಪರಿಶೀಲನೆ ಕೂಡ ಮಾಡಿದ್ದೇವೆ. ಇದಲ್ಲದೆ ಕೃಷಿ ಹಾನಿ ಬಗ್ಗೆ ಕೃಷಿಕರು ಕೊಟ್ಟಿರುವ ಅರ್ಜಿಗಳನ್ನು ಸರಕಾರಕ್ಕೆ ಕಳುಹಿಸಿಕೊಡುವ ಕೆಲಸ ಕೂಡ ಆಗಿದೆ. ಪರಿಹಾರ ಏನಿದ್ದರೂ ಸರಕಾರ ಕೊಡಬೇಕಿದೆ. ಪರಿಹಾರ ಕೊಡುವುದು ಬಿಡುವುದು ಸರಕಾರದ ಕೆಲಸವಾಗಿದೆ. ನಾವು ಏನಿದ್ದರೂ ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಇನ್ನು ಆನೆಯನ್ನು ಸ್ಥಳಾಂತರಿಸುವ ಬಗ್ಗೆ ಅದಕ್ಕೇ ಆಗಿರುವ ಕಾನೂನುಗಳಿವೆ. ಇದು ಅಷ್ಟು ಸುಲಭದಲ್ಲಿ ಆಗುವಂತಹ ಕೆಲಸವಲ್ಲ. ಇದಕ್ಕೆ ಸರಕಾರದ ಅನುಮತಿಯೂ ಬೇಕಾಗಿದೆ. ಇನ್ನು ಕೆಲವು ಮಂದಿ ಹೇಳುವಂತೆ ಇದೊಂದು ಸಾಕಿದ ಆನೆಯಾಗಿದೆ ಎನ್ನುತ್ತಾರೆ ಕೇರಳದಲ್ಲಿ ಆನೆ ಸಾಕಾಣಿಗೆ ಅನುಮತಿ ಇದ್ದರೂ ಯಾರು ಆನೆಯನ್ನು ಸಾಕುತ್ತಾರೋ ಅವರಿಗೆ ಸರಕಾರದಿಂದ ಕೆಲವೊಂದು ಷರತ್ತು ಮತ್ತು ಕಾನೂನುಕ್ರಮಗಳಿವೆ. ಸಾಕಿದ ಆನೆಯನ್ನು ಎಲ್ಲಿಂದಲೋ ಬಿಟ್ಟು ಬರುವ ಹಾಗಿಲ್ಲ. ಪ್ರತಿ ವರ್ಷ ಆನೆ ಇರುವ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಬೇಕಾಗಿದೆ ಎಂಬ ವಿಷಯವನ್ನು ತಿಳಿಸಿದರು.
ಕೃಷಿಕರಾದ ದೇವಣ್ಣ ರೈ ಕಾವು, ಯೋಗೀಶ್ ಕಾವು, ಯೂಸುಫ್ ಮುಖಾರಿಮೂಲೆರವರುಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನೀಲ್ ಎಚ್.ಟಿ ಉಪಸ್ಥಿತರಿದ್ದರು. ಸದಸ್ಯ ಲೋಕೇಶ್ ಚಾಕೋಟೆ ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಸದಸ್ಯರುಗಳಾದ ಅನಿತಾ ಆಚಾರಿಮೂಲೆ, ಹೇಮಾವತಿ ಚಾಕೋಟೆ, ಸೌಮ್ಯ ಬಾಲಸುಬ್ರಹ್ಮಣ್ಯ, ಜಯಂತಿ ಪಟ್ಟುಮೂಲೆ, ಮೋನಪ್ಪ ಪೂಜಾರಿ ಕೆರೆಮಾರು, ಪ್ರವೀಣ್, ಕೃಷಿಕರಾದ ರಾಮ್ದಾಸ್ ರೈ ಮದ್ಲ, ತಿಲಕ್ ರೈ ಕುತ್ಯಾಡಿ, ನವೀನ್ ಪಟ್ಲಾಜೆ, ಮಳಿ ರಾಮಚಂದ್ರ ಭಟ್,ಹೇಮಾವತಿ,ಪುಷ್ಪಾ,ಗಂಗಾಧರ ಚಾಕೋಟೆ,ಕುಶಾಲಪ್ಪ ಗೌಡ, ನಿರಂಜನ ರಾವ್, ಲೋಹಿತ್ ಅಮ್ಚಿನಡ್ಕ , ಸೂರ್ಯನಾರಾಯಣ ಭಟ್ ಸಹಿತ ಹಲವು ಮಂದಿ ಉಪಸ್ಥಿತರಿದ್ದರು. ಗ್ರಾಪಂ ಸಿಬ್ಬಂದಿಗಳಾದ ಯೋಗೀಶ್,ಪ್ರಭಾಕರ,ಶಶಿಕುಮಾರ್ ಸಹಕರಿಸಿದ್ದರು.
ಆನೆ ಮನೆ ಬಾಗಿಲಿಗೆ ಬರುತ್ತಿದೆ
ಇಬ್ಬರು ಮಕ್ಕಳೊಂದಿಗೆ ಜೀವ ಕೈಲಿ ಹಿಡಿದು ಕೂರುತ್ತೇವೆ…!
ನನ್ನ ಗಂಡ ತೀರಿ ಹೋಗಿದ್ದಾರೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಆನೆಗಳು ನಮ್ಮ ಮನೆ ಬಾಗಿಲಿಗೆ ಬರುತ್ತವೆ. ರಾತ್ರಿಯಾದರೆ ಭಯ ಶುರುವಾಗುತ್ತದೆ. ಜೀವ ಕೈಲಿ ಹಿಡಿದುಕೊಂಡು ಇಬ್ಬರು ಮಕ್ಕಳೊಂದಿಗೆ ಕೂರುತ್ತೇನೆ.ಹೀಗಾದರೆ ನಾವು ಜೀವನ ಮಾಡೋದು ಹೇಗೆ ಎಂದು ಸ್ವಾತಿ ಪೂವಂದೂರುರವರು ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡರು.
ಇರುವುದೇ ಕೇವಲ 2 ಆನೆ
ಸುಳ್ಳು ಸುದ್ದಿ ಹರಡಿಸಿ ಭಯ ಹುಟ್ಟಿಸಬೇಡಿ
ನಾಲ್ಕೈದು ಆನೆಗಳು ಬಂದಿವೆ, ಆನೆಗಳ ಹಿಂಡೇ ಇತ್ತು ಎಂಬಿತ್ಯಾದಿ ಮಾತುಗಳು ವಿಡಿಯೋಗಳು ಬರುತ್ತಿವೆ. ಇದೆಲ್ಲಾ ಸುಳ್ಳು. ಕೇವಲ 2 ಆನೆಗಳು ಮಾತ್ರ ಇವೆ. ಒಂದು ಆನೆಗುಂಡಿ ಭಾಗದಲ್ಲಿದ್ದರೆ ಇನ್ನೊಂದು ಈ ಭಾಗದಲ್ಲಿ ಓಡಾಡಿಕೊಂಡು ಇದೆ. ದಯವಿಟ್ಟು ಸುಳ್ಳು ಸುದ್ದಿ ಹರಡಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಕೆಲಸ ಆಗಬಾರದು. ಅರಣ್ಯ ಇಲಾಖೆಯ ಅಧಿಕಾರಿಗಳು ಸದಾ ಗ್ರಾಮಸ್ಥರ ಜೊತೆ ಇರುತ್ತಾರೆ. ಯಾವುದೆ ಕಾರಣಕ್ಕೂ ಭಯಪಡುವ ಅವಶ್ಯಕತೆ ಇಲ್ಲ ಎಂದು ಪಾಣಾಜೆ ವಲಯ ಅರಣ್ಯ ಅಧಿಕಾರಿ ಮದನ್ರವರು ಮನವಿ ಮಾಡಿಕೊಂಡರು.