ಆಲಂಕಾರು ಕಕ್ವೆಯಲ್ಲಿ ಮಳೆಗೆ ರಸ್ತೆ ಸಂಪರ್ಕ ಕಡಿತ

0

ವಾರ ಕಳೆದರೂ ಬಗೆಹರಿಯದ ಸಮಸ್ಯೆ | ಗ್ರಾಮಸ್ಥರ ಪರದಾಟ

ರಾಮಕುಂಜ: ಮೇ.30ರಂದು ಸುರಿದ ಧಾರಾಕಾರ ಮಳೆಗೆ ಕಡಬ ತಾಲೂಕು ಆಲಂಕಾರು ಗ್ರಾಮದ ಕಕ್ವೆ ಎಂಬಲ್ಲಿ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು 10ಕ್ಕೂ ಹೆಚ್ಚು ಮನೆಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಘಟನೆ ನಡೆದು ವಾರ ಕಳೆದರೂ ಸಮಸ್ಯೆ ಪರಿಹಾರವಾಗದೆ ಇರುವುದರಿಂದ ಈ ಭಾಗದ ಜನ ಸಂಚಾರಕ್ಕೆ ಪರದಾಡ ನಡೆಸುತ್ತಿದ್ದಾರೆ.

ಮೇ ೩೦ರಂದು ಸಾಯಂಕಾಲದಿಂದ ತಡರಾತ್ರಿಯವರೆಗೆ ಈ ಭಾಗದಲ್ಲಿ ಎಡೆಬಿಡದೆ ಧಾರಾಕಾರ ಮಳೆಯಾಗಿದೆ. ಈ ಮಳೆಗೆ ಕಕ್ವೆ ನಿವಾಸಿ ಪದ್ಮಯ್ಯ ಗೌಡರ ತೋಟದ ಪಕ್ಕದಲ್ಲಿ ಹರಿಯುವ ಕಣಿಯಲ್ಲಿ ನೀರು ಉಕ್ಕಿ ಮಳೆ ನೀರಿನ ಜೊತೆಗೆ ರಸ್ತೆಯ ಒಂದು ಭಾಗದಲ್ಲಿ ಹರಿದ ಪರಿಣಾಮ ರಸ್ತೆಯ ಒಂದು ಭಾಗ ಕೊಚ್ಚಿಹೋಗಿ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಇದರೊಂದಿಗೆ ಪದ್ಮಯ್ಯ ಗೌಡರ ಸುಮಾರು 100ಕ್ಕೂ ಹೆಚ್ಚು ಫಸಲುಭರಿತ ಅಡಿಕೆ ಮರ ನೀರು ಪಾಲಾಗಿದೆ. ಇವರ ಮನೆ ಪಕ್ಕದ ಶಿವಣ್ಣ ಗೌಡರ ಫಸಲು ಭರಿತ ಸುಮಾರು ೪೦೦ಕ್ಕೂ ಹೆಚ್ಚು ಅಡಿಕೆ ಗಿಡಗಳ ಮಧ್ಯೆ ಕೆಸರು ಮಣ್ಣು ತುಂಬಿಕೊಂಡಿದೆ. ತೋಟಕ್ಕೆ ನೀರುಣಿಸಲು ಇದ್ದ ಬೃಹತ್ ಕೆರೆಯಲ್ಲಿ ಸಂಪೂರ್ಣ ಮಣ್ಣು ತುಂಬಿಕೊಂಡು ಮುಚ್ಚಿ ಹೋಗಿದೆ. ತೋಟದ ಪಕ್ಕದಲ್ಲಿದ್ದ ಮರಗಳು, ಅಡಿಕೆ ಗಿಡಗಳು ನೆಲಕ್ಕುರುಳಿವೆ. ಇದೀಗ ರಸ್ತೆಯನ್ನು ದಿನ ನಿತ್ಯ ಬಳಕೆ ಮಾಡುತ್ತಿದ್ದವರು ಸಂಪರ್ಕ ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಕೊಚ್ಚಿ ಹೋಗಿ ಸ್ವಲ್ಪವೇ ಉಳಿದ ರಸ್ತೆಯಲ್ಲಿ ಅಪಾಯಕಾರಿಯಾಗಿ ನಡೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಶಾಲಾ ಮಕ್ಕಳಿಗೂ ತೊಂದರೆ:
ಈ ಭಾಗದಿಂದ ಶಾಲೆಗೆ ಹೋಗುವ ಮಕ್ಕಳನ್ನು ಸುರಕ್ಷತೆ ದೃಷ್ಟಿಯಿಂದ ಅವರ ಪೋಷಕರು ಬೆಳಿಗ್ಗೆ ಮತ್ತು ಸಂಜೆ ರಸ್ತೆ ದಾಟಿಸುತ್ತಿದ್ದಾರೆ. ಮಳೆ ಪ್ರಮಾಣ ಹೆಚ್ಚಿದಲ್ಲಿ ಇಲ್ಲಿ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಆದ್ದರಿಂದ ಇಲ್ಲಿಗೆ ಶಾಶ್ವತ ಪರಿಹಾರ ನೀಡಬೇಕೆನ್ನುವ ಆಗ್ರಹ ಸ್ಥಳೀಯರಿಂದ ಕೇಳಿಬಂದಿದೆ.

ಯುವಕನ ಚಿಕಿತ್ಸೆಗೆ ತೊಂದರೆ;
ಈ ಭಾಗದಲ್ಲಿ ಯುವಕನೋರ್ವ ಅನಾರೋಗ್ಯದಿಂದ ಮಲಗಿದ ಸ್ಥಿತಿಯಲ್ಲಿದ್ದಾರೆ. ಈತನ ಅರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲು ರಸ್ತೆ ಕುಸಿತದಿಂದ ಸಾಧ್ಯವಾಗುತ್ತಿಲ್ಲ ಎಂದು ಯುವಕನ ಮನೆಯವರು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಭಾಗದವರು ಅನಾರೋಗ್ಯ ಪೀಡಿತರಾದರೆ ತೆರಳುವುದು ಹೇಗೆ ಎನ್ನುವ ಚಿಂತೆ ಉಂಟಾಗಿದೆ.

ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಪರಿಶೀಲನೆ:
ಘಟನಾ ಸ್ಥಳಕ್ಕೆ ಮೇ.31 ರಂದು ಗ್ರಾಮ ಆಡಳಿತಾಧಿಕಾರಿ, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಗ್ರಾಮ ಪಂಚಾಯತ್‌ನವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇದೊಂದು ಗಂಭೀರ ಸ್ವರೂಪದ ಸಮಸ್ಯೆಯಾಗಿದೆ. ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ತಕ್ಷಣದ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಅನಾಹುತ ಉಂಟಾದಲ್ಲಿ ಕಂದಾಯ ಇಲಾಖೆಯೆ ಹೊಣೆಹೊರಬೇಕಾಗುತ್ತದೆ ಎಂದು ಈ ಭಾಗದ ಜನ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ:
ಸಂಪರ್ಕ ರಸ್ತೆ ಕಡಿತವಾದ ಬಗ್ಗೆ ಜೂ.6ರಂದು ಈ ಭಾಗದ ಜನ ಒಟ್ಟಾಗಿ ಆಲಂಕಾರು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ, ತಹಶೀಲ್ದಾರ್‌ರವರನ್ನು ಭೇಟಿ ಮಾಡಿ ತುರ್ತಾಗಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಲಾಗಿದೆ. ಇಲ್ಲಿ ತಡೆಗೋಡೆ ರಚಿಸಿ ರಸ್ತೆ ಸಂಪರ್ಕ ಕಲ್ಪಿಸಬೇಕು. ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ಹಾನಿಯಾದ ಕೃಷಿ ತೋಟಗಳಲ್ಲಿ ಇನ್ನಷ್ಟು ಹಾನಿಯಾಗದಂತೆ ತಡೆಯಲು ಶಾಶ್ವತ ಪರಿಹಾರ ನೀಡಬೇಕೆಂದು ಮನವಿ ಮಾಡಲಾಗಿದೆ.
-ಶಿವಣ್ಣ ಗೌಡ ಕಕ್ವೆ, ಸ್ಥಳೀಯರು

ಸುಳ್ಯ ಶಾಸಕರ ಭರವಸೆ;
ಭಾರೀ ಮಳೆಯಿಂದಾಗಿ ಕಕ್ವೆಯಲ್ಲಿ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿರುವ ವಿಚಾರ ಗಮನಕ್ಕೆ ಬಂದಿದೆ. ಸಮಸ್ಯೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here