ಪುತ್ತೂರು: ನಾಟೆಕಲ್ನ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಬಾಂಬು ಇಟ್ಟು ಸ್ಫೋಟಿಸುವುದಾಗಿ ಬಂದ ಅನಾಮಧೇಯ ಹುಸಿ ಬಾಂಬ್ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಪಿಜಿ ವಿದ್ಯಾರ್ಥಿನಿ ಚಲಸಾನಿ ಮೋನಿಕಾ ಚೌಧರಿ ಬಂಧಿತ ಯುವತಿ.
ಜೂ.4 ರಂದು ಮಂಗಳೂರು ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಉಳ್ಳಾಲ ಪೊಲೀಸ್ ಠಾಣಾ ಸರಹದ್ದಿನ ದೇರಳಕಟ್ಟೆ ನಾಟೆಕಲ್ ರೋಡ್ ಕಣಚೂರು ಆಸ್ಪತ್ರೆಗೆ ಅನಾಮಧೇಯ ವ್ಯಕ್ತಿಯು ಕರೆ ಮಾಡಿ, ಆಸ್ಪತ್ರೆಗೆ ಬಾಂಬ್ ಇರಿಸಲಾಗಿದೆ, ಆಸ್ಪತ್ರೆಯನ್ನು ಖಾಲಿ ಮಾಡಬೇಕೆಂದು 5 ಬಾರಿ ಕರೆ ಮಾಡಿ ಬೆದರಿಕೆ ಹಾಕಿದ್ದು, ಈ ಬೆದರಿಕೆಯ ಬಗ್ಗೆ ದೂರು ಬಂದ ಮೇರೆಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು, ಬಾಂಬ್ ನಿಷ್ಕ್ರಿಯ ತಂಡ ಹಾಗೂ ಶ್ವಾನದಳ ತಂಡದೊಂದಿಗೆ ಆಸ್ಪತ್ರೆಯ ಸಂಪೂರ್ಣ ಕಟ್ಟಡ, ಆಸ್ಪತ್ರೆಯ ವಾಹನ ಪಾರ್ಕಿಂಗ್ ಸ್ಥಳ ಹಾಗೂ ಆಸ್ಪತ್ರೆಯ ಸುತ್ತಮುತ್ತಲಿನ ಪರಿಸರವನ್ನು ನಿರಂತರವಾಗಿ 10 ಗಂಟೆಗಳ ಕಾಲ ಪರಿಶೀಲಿಸಿದಾಗ ಯಾವುದೇ ರೀತಿಯ ಬಾಂಬ್ ಪತ್ತೆಯಾಗಿರುವುದಿಲ್ಲ.
ಪಿ.ಜಿ. ವಿದ್ಯಾರ್ಥಿನಿ ಡಾ. ಚಲಸಾನಿ ಮೋನಿಕಾ ಚೌಧರಿ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋನ್ ಕರೆ ಬಗ್ಗೆ ದೂರು ನೀಡಿದ ಮೇರೆಗೆ ಕಲಂ 352(2), 352(4) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದು, ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಸದರಿ ತಂಡ ಆರೋಪಿ ಪತ್ತೆಗೆ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿದಾಗ ತನಿಖೆಯಿಂದ ಡಾ. ಚಲಸಾನಿ ಮೋನಿಕಾ ಚೌಧರಿಯೇ ಆರೋಪಿಯಾಗಿದ್ದು ಅವರು ಸದರಿ ವೈದ್ಯಕೀಯ ಕಾಲೇಜ್ನಲ್ಲಿ ಸ್ನಾತಕೋತರ ಪದವಿ ವ್ಯಾಸಂಗ ಮಾಡುತ್ತಿದ್ದು, ಸೆಮಿನಾರ್ ನೀಡಬೇಕಾಗಿರುವುದರಿಂದ ಸೆಮಿನಾರ್ ತಪ್ಪಿಸುವ ಉದ್ದೇಶದಿಂದ ಯುವತಿಯೇ ಕರೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದ್ದು, ಆರೋಪಿಯನ್ನು ಜೂ7 ರಂದು ವಶಕ್ಕೆ ಪಡೆದು, ಅವರ ಹೇಳಿಕೆ ಮೇಲೆ ಅವರ ಮೊಬೈಲ್ ವಶಕ್ಕೆ ಪಡೆದಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.