ಜೂ.17ಕ್ಕೆ ವಿಚಾರಣೆ:ಎಸ್.ಪಿ.ಗೆ ನೋಟೀಸ್ ಜಾರಿ
ಕಡಬ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕ್ರಿಮಿನಲ್ ಪ್ರಕರಣಗಳಿಲ್ಲದ ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕ ಮನೋಭಾವದ ವ್ಯಕ್ತಿಗಳ ಮನೆಗೆ ತಡ ರಾತ್ರಿಯಲ್ಲಿ ಪೊಲೀಸರು ಭೇಟಿ ನೀಡಿ ಜಿಪಿಎಸ್ ಸ್ಥಳಗಳನ್ನು ಯಾವುದೇ ಕಾನೂನು ಆದೇಶ ಅಥವಾ ಯಾವುದೇ ಸರಿಯಾದ ಪ್ರಕ್ರಿಯೆಗಳಿಲ್ಲದೆ ದಾಖಲಿಸುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಕಾನೂನಿನ ನಿಯಮಗಳಿಗೆ ಗಂಭೀರ ಅಪಾಯವನ್ನು ಉಂಟು ಮಾಡಲಾಗುತ್ತಿದೆ ಎಂದು ಆರೋಪಿಸಿ ನೀಡಲಾದ ದೂರನ್ನು ದಾಖಲಿಸಿಕೊಂಡಿರುವ ‘ಕರ್ನಾಟಕ ಪೊಲೀಸ್ ದೂರು ಪ್ರಾಽಕಾರ’ ಎಸ್ಪಿಯವರಿಗೆ ನೊಟೀಸ್ ಜಾರಿ ಮಾಡಿ, ಜೂ.17ಕ್ಕೆ ವಿಚಾರಣೆ ನಿಗದಿ ಮಾಡಿದೆ.
ಹೈಕೋರ್ಟ್ನ ಹಿರಿಯ ವಕೀಲರಾದ ಅರುಣ್ಶ್ಯಾಮ್ ಪುತ್ತೂರು ಅವರ ಮಾರ್ಗದರ್ಶನದಲ್ಲಿ,ವಕೀಲ ಗಿರೀಶ್ ಭಾರದ್ವಾಜ, ಉಪ್ಪಿನಂಗಡಿಯ ಯು.ಜಿ.ರಾಧಾ ಮತ್ತಿತರರು ಈ ಕುರಿತು ಕರ್ನಾಟಕ ಪೊಲೀಸ್ ದೂರು ಪ್ರಾಽಕಾರ ಹಾಗೂ ರಾಜ್ಯ,ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿ,ಅಗತ್ಯ ಕ್ರಮಕ್ಕೆ ಕೋರಿದ್ದರು.
ದ.ಕ.ಜಿಲ್ಲೆಯ ಪೊಲೀಸರು ಗೊಂದಲದ ಕ್ರಮಗಳನ್ನು ಮಾಡುತ್ತಿದ್ದು,ಕ್ರಿಮಿನಲ್ ಹಿನ್ನೆಲೆ ಅಥವಾ ಬಾಕಿ ಇರುವ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದ ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕ ಮನೋಭಾವದ ವ್ಯಕ್ತಿಗಳ ಮನೆಗಳಿಗೂ ಎಸ್ಪಿಯವರ ನಿರ್ದೇಶನದಲ್ಲಿ ಪೊಲೀಸ್ ಸಿಬ್ಬಂದಿ ಭೇಟಿ ನೀಡುತ್ತಿದ್ದಾರೆ.ಆಘಾತಕಾರಿ ಸಂಗತಿಯೆಂದರೆ, ಈ ಭೇಟಿಗಳನ್ನು ತಡರಾತ್ರಿಯ ಸಮಯದಲ್ಲಿ ನಡೆಸಲಾಗುತ್ತಿದ್ದು ರಾತ್ರಿ 11 ಗಂಟೆಯ ನಂತರ ಪೊಲೀಸರು ಈ ವ್ಯಕ್ತಿಗಳ ಜಿಪಿಎಸ್ ಸ್ಥಳಗಳನ್ನು ಯಾವುದೇ ಕಾನೂನು ಆದೇಶ ಅಥವಾ ಸರಿಯಾದ ಪ್ರಕ್ರಿಯೆಯಿಲ್ಲದೆ ದಾಖಲಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.ದೂರು ದಾಖಲಿಸಿಕೊಂಡಿರುವ ಕರ್ನಾಟಕ ಪೊಲೀಸ್ ದೂರು ಪ್ರಾಽಕಾರ ಈ ಕುರಿತು ಎಸ್ಪಿಯವರಿಗೆ ನೊಟೀಸ್ ಜಾರಿ ಮಾಡಿ, ಜೂ.17ಕ್ಕೆ ವಿಚಾರಣೆ ನಿಗದಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಉಚ್ಛ ನ್ಯಾಯಾಲಯ,ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ, ಮಾನವ ಹಕ್ಕು ಆಯೋಗಗಳಿಗೆ ದೂರು ಸಲ್ಲಿಸಲಾಗಿದೆ.ಇದೀಗ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರದಿಂದ ದ.ಕ.ಎಸ್.ಪಿ.ಯವರಿಗೆ ನೋಟಿಸ್ ಜಾರಿ ಮಾಡಲಾಗಿದೆ
-ಅರುಣ್ಶ್ಯಾಂ ಪುತ್ತೂರು ಹಿರಿಯ ವಕೀಲರು,ಹೈಕೋರ್ಟ್