ಪುತ್ತೂರು: ಕಾಂಗ್ರೆಸ್ ಸರಕಾರದ ದಬ್ಬಾಳಿಕೆ ಮತ್ತು ಪೊಲೀಸ್ ದೌರ್ಜನ್ಯ ಮಾಡಿದ್ದಾರೆಂದು ಆರೋಪಿಸಿ ರಾಜ್ಯ ಬಿಜೆಪಿಯಿಂದ ಮುಂದಿನ ಹೋರಾಟದ ಕುರಿತು ರೂಪುರೇಷೆ ತಯಾರಿ ಬಗ್ಗೆ ಜಿಲ್ಲೆಯಿಂದ ಮಾಹಿತಿ ಸಂಗ್ರಹಕ್ಕಾಗಿ ರಾಜ್ಯ ಬಿಜೆಪಿಯಿಂದ ಮಂಗಳೂರು ಸಂಘನಿಕೇತನದಲ್ಲಿ ಜೂ.9 ರಂದು ಸಭೆ ನಡೆದಿದ್ದು ಸಭೆಯಲ್ಲಿ ಪುತ್ತೂರಿನ ಹಲವಾರು ಪ್ರಮುಖರು ಭಾಗಿಯಾಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್ ಅಶೋಕ್ ಸಹಿತ ದ.ಕ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದ ಕ್ಯಾ| ಬ್ರಿಜೇಶ್ ಚೌಟ, ಡಿ ವಿ ಸದಾನಂದ ಗೌಡ, ಛಲವಾದಿ ನಾರಾಯಣ ಸ್ವಾಮಿ, ಭಾಸ್ಕರಗ ರಾವ್, ವಿಧಾನಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ದ.ಕ ಜಿಲ್ಲೆಯಾದ್ಯಂತ ಘಟನೆಗಳ ಮತ್ತು ಹಿಂದು ಕಾರ್ಯಕರ್ತರ ಮನೆಗೆ ಹೋಗಿ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆಂದು ಪ್ರಸ್ತಾಪಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ಪುತ್ತೂರಿನ ಹಲವಾರು ಹಿರಿಯ ಕಾರ್ಯಕರ್ತರ ಮನೆಗೆ ಪೊಲೀಸರು ರಾತ್ರಿ ಹೋಗುತ್ತಿರುವ ಮತ್ತು ಕಾರ್ಯಕರ್ತರ ಮೇಲೆ ಗಡಿಪಾರು ಆದೇಶ ನೀಡುತ್ತಿರುವ ಕುರಿತು ಪ್ರಸ್ತಾಪಿಸಿ ಇದಕ್ಕೆಲ್ಲ ಮುಂದಿನ ದಿನ ಹೋರಾಟದ ಮೂಲಕ ಉತ್ತರ ಕೊಡಬೇಕಾಗಿದೆ ಎಂದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಅರುಣ್ ಕುಮಾರ್ ಪುತ್ತಿಲ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು ಸಹಿತ ಹಲವಾರು ಮಂದಿ ಭಾಗವಹಿಸಿದರು.