ರೈತ-ವಿಜ್ಞಾನಿ ಸಂವಾದ, ತೋಟಗಾರಿಕೆ, ಹೈನುಗಾರಿಕೆ, ಗೇರು ಕೃಷಿ ಮಾಹಿತಿ ಕಾರ್ಯಾಗಾರ
ಕೃಷಿಯಲ್ಲಿ ಬುದ್ದಿವಂತಿಕೆ ಅತೀ ಮುಖ್ಯ – ವಿಜಯ ಕುಮಾರ್ ರೈ
ಕೃಷಿ ಭೂಮಿಗಳು ಮನೆ ನಿವೇಶನಗಳಾಗಬಾರದು – ಬೂಡಿಯಾರು
ಅಧ್ಯಯನದಿಂದಲೇ ಕೃಷಿಕ ಯಶಸ್ವಿಯಾಗಬಲ್ಲ – ಕಡಮಜಲು
ಪುತ್ತೂರು: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ, ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR), ಕೃಷಿ ವಿಜ್ಞಾನ ಕೆಂದ್ರ ದ.ಕ., ಹಾಗೂ ಗೇರು ಸಂಶೋಧನಾ ನಿರ್ದೇಶನಾಲಯ (DCR) ಪುತ್ತೂರು ಸಹಯೋಗದಲ್ಲಿ ಭಾರತ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ದ ಅಂಗವಾಗಿ ‘ರೈತರೊಂದಿಗೆ ವಿಜ್ಞಾನಿಗಳ ಸಂವಾದ, ಹೊಸ ತಂತ್ರಜ್ಞಾನ ಮತ್ತು ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಕಾರ್ಯಾಗಾರ ಜೂ.9 ರಂದು ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ರವರು ಮಾತನಾಡಿ ‘ಕಡಮಜಲು ಸಿರಿಕಡಮಜಲನ್ನಾಗಿಸಿದ ಉತ್ತಮ ಕಾರ್ಯಕ್ರಮಗಳ ಮೂಲಕ ಕೃಷಿ ಚಟುವಟಿಕೆ ಹಮ್ಮಿಕೊಂಡಿರುವ ಕಡಮಜಲು ಸುಭಾಸ್ ರೈಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೆನೆ. ಕೃಷಿಕರು ತಮಗೆ ಎದುರಾಗುವ ಸವಾಲುಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಕೃಷಿಯಲ್ಲಿ ಬುದ್ದಿವಂತಿಕೆ ಅತೀ ಮುಖ್ಯ. ಅದರ ಜೊತೆಗೆ ಸರಕಾರ ಮತ್ತು ಕೃಷಿ ವಿಜ್ಞಾನಿಗಳ ಮಾರ್ಗದರ್ಶನ ಪಡೆಯುವುದೂ ಸೂಕ್ತ’ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಬೂಡಿಯಾರು ರಾಧಾಕೃಷ್ಣ ರೈಯವರು ಮಾತನಾಡಿ ‘ಸಣ್ಣಪುಟ್ಟ ಕೃಷಿಕರಿಗೆ ಅನೇಕ ಸವಾಲುಗಳಿವೆ. ಆತ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಬೆಲೆ ದೊರೆತಾಗ ಕೃಷಿಕ ಸ್ವಾಭಿಮಾನಿಯಾಗಿ ಬದುಕಬಲ್ಲ. ಕೃಷಿ ಭೂಮಿ ಮನೆ ನಿವೇಶನಗಳಾಗಿ ಪರಿವರ್ತನೆಯಾಗುತ್ತಿದೆ. ಕೃಷಿಕರು ಕೃಷಿ ಸಮಸ್ಯೆಗಳಿಂದಾಗಿ ತಮ್ಮ ಕೃಷಿ ಭೂಮಿಗಳನ್ನು ಮಾರಾಟ ಮಾಡದಂತೆ ಅವರಿಗೆ ಬೆಂಬಲ, ಪ್ರೋತ್ಸಾಹ ನೀಡುವುದು ಸರಕಾರದ ಕಡೆಯಿಂದ ನಡೆಯಬೇಕು’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಘಟಕ, ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್ ರೈಯವರು ‘ಕೃಷಿಕನಾದವನು ಅಧ್ಯಯನ ಮಾಡಬೇಕು. ಪರಿಶ್ರಮ, ಪರಿಜ್ಞಾನ ಮತ್ತು ಪರಿಪೂರ್ಣ ನಿರ್ವಹಣೆಯಿಂದ, ಪತ್ನಿಯ ಸಹಕಾರದಿಂದ ಉತ್ತಮ ಫಲಿತಾಂಶ ಪಡೆಯಬಹುದು. ಪ್ರತಿಯೊಬ್ಬ ಕೃಷಿಕನೂ ಕೃಷಿಯಲ್ಲಿ ಸೋಲಬಾರದು ಎಂಬ ಸದುದ್ದೇಶದಿಂದ ರೈತರಿಗೆ ಇಂತಹ ಹಲವಾರು ಮಾಹಿತಿ ಕಾರ್ಯಾಗಾರಗಳು ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಸುತ್ತಿದ್ದೇವೆ. ರೈತರ ಮನೆ-ಮನದ ಬಾಗಿಲಿಗೆ ಅಧಿಕಾರಿಗಳು ಬಂದು ಮಾಹಿತಿ ಕೊಡುವ ಪ್ರಧಾನಿಯವರ ಮಹತ್ವಾಕಾಂಕ್ಷಿ ಪರಿಕಲ್ಪನೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನವಾಗಿದೆ’ ಎಂದ ಅವರು ‘ಮೋದಿಯವರ ಅಧಿಕಾರದ 11ನೇ ವರ್ಷ ಸಂಭ್ರಮಾಚರಣೆಯ ದಿನವೇ ನಮ್ಮಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ನಮ್ಮ ಸುಯೋಗ’ ಎಂದರು.
ವೇದಿಕೆಯಲ್ಲಿ ಸನ್ಯಾಸಿಗುಡ್ಡೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಜಾತ ಉಪಸ್ಥಿತರಿದ್ದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಮುಖ್ಯಸ್ಥ ಡಾ. ಟಿ. ಜೆ. ರಮೇಶ್ ರವರು ಮಾತನಾಡಿ ‘ಮೇ 29 ರಿಂದ ಆರಂಭವಾದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಜೂನ್ 12 ರವರೆಗೆ ನಡಯಲಿದ್ದು, ಅದರ ಒಂದು ಭಾಗವಾಗಿ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಅಭಿಯಾನದ ಮೂಲಕ 700 ಜಿಲ್ಲೆಗಳಲ್ಲಿ ಸುಮಾರು 2 ಸಾವಿರ ವಿಜ್ಞಾನಿಗಳಿಂದ ಗ್ರಾಮ ಗ್ರಾಮ ಭೇಟಿಯಾಗಿ ರೈತರಿಗೆ ಮಾರ್ಗದರ್ಶನ ಕೊಡಲಾಗುತ್ತಿದೆ. ರೈತರ ಸಮಸ್ಯೆಗಳನ್ನು ದಾಖಲಿಸಿಕೊಂಡು, ಕೃಷಿಯಲ್ಲಿ ಸ್ವತಃ ವಿಜ್ಞಾನಿಯಾಗಿರುವ ರೈತರು ಕಂಡುಕೊಂಡ ಪರಿಹಾರಗಳನ್ನು ದಾಖಲಿಸಿಕೊಂಡು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡುವ ಕಾರ್ಯ ನಡೆಯುತ್ತದೆ. ಈ ಅಭಿಯಾನದ ಜೊತೆಗೆ ಜಿಲ್ಲೆಯಲ್ಲಿ 17 ಸಾವಿರ ರೈತರೊಂದಿಗೆ ಸಂವಾದ ನಡೆಸುತ್ತಿದ್ದೇವೆ’ ಎಂದರು.
ತೋಟಗಾರಿಕೆ ಬಗ್ಗೆ ಮಣ್ಣು ಶಾಸ್ತ್ರ ವಿಜ್ಞಾನಿ ಮಲ್ಲಿಕಾರ್ಜುನ ಎಲ್., ಪಶುಪಾಲನಾ ವಿಜ್ಞಾನಿ ಡಾ. ಶಿವಕುಮಾರ್ ಆರ್., ಮೀನುಗಾರಿಕಾ ವಿಜ್ಞಾನಿ ಡಾ. ರವೀಂದ್ರ ಗೌಡ ಪಾಟೀಲ್ ಹಾಗೂ ಗೇರು ಸಂಶೋಧನಾ ನಿರ್ದೇಶನಾಲಯದ ಆಹಾರ ತಂತ್ರಜ್ಞಾನ ವಿಜ್ಞಾನಿ ಡಾ. ಜ್ಯೋತಿ ರವರು ವೈಜ್ಞಾನಿಕ ಗೇರು ಕೃಷಿ ಬಗ್ಗೆ ರೈತರಿಗೆ ಮಾಹಿತಿ ನೀಡಿ ಸಂವಾದ ನಡೆಸಿದರು.
ಸಮಾರೋಪ ಭಾಷಣ ಮಾಡಿದ ಕೆಯ್ಯೂರು ಕೆದಂಬಾಡಿ ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಎ.ಕೆ. ಜಯರಾಮ ರೈ ರವರು ಮಾತನಾಡಿ ‘ಉತ್ತಮ ಮಾಹಿತಿ ಕಾರ್ಯಗಾರಕ್ಮೆ ಅವಕಾಶ ಕಲ್ಪಿಸಿಕೊಟ್ಟವರು ಕಡಮಜಲು ಸುಭಾಸ್ ರೈ. ಇಲ್ಲಿ ರೈತರಿಂದ ವ್ಯಕ್ತವಾದ ಅಭಿಪ್ರಾಯ, ಸಮಸ್ಯೆಗಳಿಗೆ ಆದಷ್ಟು ಶೀಘ್ರವಾಗಿ ಪರಿಹಾರ ದೊರಕಲು ಈ ಕಾರ್ಯಕ್ರಮ ಕಾರಣವಾಗಲಿ’ ಎಂದು ಶುಭಾಶಿಸಿದರು. ಕಡಮಜಲು ಸುಭಾಸ್ ರೈ ವಂದಿಸಿದರು. ಮಧ್ಯಾಹ್ನ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಆಗಮಿಸಿದ ಗಣ್ಯರಿಗೆ ಹಾಗೂ ಕೃಷಿಕರಿಗೆ ಕಡಮಜಲು ಸುಭಾಸ್ ರೈಯವರು ತಾನು ಬರೆದಿರುವ ‘ಪ್ರೀತಿಯಿಂದ ಪ್ರೀತಿಗೆ’, ‘ಹೆಮ್ಮೆ ತಂದ ಎಮ್ಮೆ’, ‘ಗೇರು ಎತ್ತರಕ್ಕೆ ಏರು’ ಹೊತ್ತಗೆಯನ್ನು ವಿತರಿಸಿದರು. ಪ್ರೀತಿ ಎಸ್. ರೈ ಕಡಮಜಲು ಸಹಕರಿಸಿದರು.
ಅರಿಯಡ್ಕ ವಿಆರ್ಡಿಎಫ್ ಅಧ್ಯಕ್ಷ ಡಿ. ಅಮ್ಮಣ್ಣ ರೈ ದೇರ್ಲ, ಕೆಯ್ಯೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ರೈ, ಕೆಯ್ಯೂರು ಗ್ರಾ.ಪಂ. ಸದಸ್ಯ ಜಯಂತ ಕೆಂಗುಡೇಲು, ಮಾಜಿ ಉಪತಹಶೀಲ್ದಾರ್ ವಿಶ್ವನಾಥ ಪೂಜಾರಿ, ಒಳಮೊಗ್ರು ವಿಆರ್ಡಿಎಫ್ ಕಾರ್ಯದರ್ಶಿ ಅನಿಲ್ ರೈ ಪರ್ಪುಂಜ ಬಾರಿಕೆ, ಕೆಎಂಎಫ್ ಮಾಜಿ ನಿರ್ದೇಶಕಿ ವೀಣಾ ರೈ ಬೆದ್ರುಮಾರ್, ಕುಯ್ಯಾರು ಪುರಂದರ ರೈ, ರೈತ ಸಂಘದ ಪ್ರತಿನಿಧಿ ಕುರಿಕ್ಕಾರ ಶೇಖರ ರೈ, ತಾಲೂಕು ಕೃಷಿಕ ಸಮಾಜದ ಸದಸ್ಯರು ಸೇರಿದಂತೆ ತಾಲೂಕಿನ ಅನೇಕ ಕೃಷಿಕರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.
ರೈತರಿಗೆ ಅವರ ಬೆಳೆಗೆ ದರ ನಿಗದಿಗೊಳಿಸುವ ಹಕ್ಕು ಯಾಕಿಲ್ಲ ?
ವಿಜ್ಞಾನಿಗಳ ಸಂವಾದದಲ್ಲಿ ಪ್ರಶ್ನಿಸಿದ ನಿವೃತ್ತ ಸೈನಿಕ ಅಮ್ಮಣ್ಣ ರೈ ದೇರ್ಲರವರು ‘ಸೂಜಿ ತಯಾರಿಸುವ ಕಂಪೆನಿಯವರೂ ತಮ್ಮ ಸೂಜಿಗೆ ಅವರೆ ಬೆಲೆ ನಿಗದಿಪಡಿಸುತ್ತಾರೆ. ಆದರೆ ಕೃಷಿಕರು ಬೆಳೆದ ಬೆಳೆಗೆ ದರ ನಿಗದಿಗೊಳಿಸುವ ಹಕ್ಕು ಯಾಕಿಲ್ಲ ? ಅವರು ಮಧ್ಯವರ್ತಿಗಳು ನಿಗದಿಗೊಳಿಸಿದ ದರಕ್ಕೆ ಮಾರಾಟ ಮಾಡಬೇಕಾಗುತ್ತದೆ’ ಎಂದರು.
ಎಫ್ಪಿಒ ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ
ರೈತರ ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ, ಮೌಲ್ಯ ಒದಗಿಸುವಲ್ಲಿ ಕಾರ್ಯನಿರ್ವಹಿಸಬೇಕಾದ ಎಫ್ಪಿಒ ಗಳು ಫಂಡ್ ಕಲೆಕ್ಷನ್ ಮಾತ್ರ ಮಾಡುತ್ತಿದ್ದಾರೆ. ಆಮೇಲೆ ಅವರಿಂದ ಯಾವುದೇ ಸ್ಪಂದನೆ ಇರುವುದಿಲ್ಲ’ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಹೇಳಿದರು.
ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ
ಕೃಷಿಕರಿಗೆ ಇಂದು ನಿಗದಿತ ಮಾರುಕಟ್ಟೆಯೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರೈತರ ಬೆಳೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಕೃಷಿ ವಿಜ್ಞಾನ ಕೇಂದ್ರಗಳು ಕಾರ್ಯನಿರ್ವಹಿಸಬೇಕು ಎಂದು ಸಭೆಯಲ್ಲಿ ರೈತರಿಂದ ಒಕ್ಕೊರಳ ಅಭಿಪ್ರಾಯ ವ್ಯಕ್ತವಾಯಿತು.
ಪ್ರಧಾನಿ ಮೋದಿ, ಸಿದ್ದರಾಮಯ್ಯ ರವರಿಗೆ ಅಭಿನಂದನೆ
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿದ 11 ನೇ ಸಂಭ್ರಮಾಚರಣೆ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ವಹಿಸಿ 2 ವರ್ಷ ಸಂಭ್ರಮ ಸಲುವಾಗಿ ಸಭೆಯಲ್ಲಿ ಪ್ರಸ್ತಾಪಿಸಿದ ಕಡಮಜಲು ರವರು ಕರತಾಡನದ ಮೂಲದ ಅಭಿನಂದನೆ ಸಲ್ಲಿಸಿದರು.