ಐದು ಗ್ರಾಮಗಳ ಸಂಪರ್ಕದ ಕೊಂಡಿಯಂತಿರುವ ಬೆಟ್ಟಂಪಾಡಿಯ ಕೋನಡ್ಕ ಸೇತುವೆ ಶಿಥಿಲ

0

ಪುತ್ತೂರು: ಮೂರು ದಶಕಗಳ ಹಿಂದೆ ನಿರ್ಮಾಣಗೊಂಡಿರುವ, ಐದು ಗ್ರಾಮಗಳ ಜನತೆಗೆ ಸಂಪರ್ಕದ ಕೊಂಡಿಯಂತಿರುವ ಕೋನಡ್ಕದ ಸೇತುವೆಯು ಶಿಥಿಲಗೊಂಡು ಕುಸಿಯುವ ಭೀತಿಯಲ್ಲಿದೆ.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಈ ಸೇತುವೆಯು ರೆಂಜ ಮಸೀದಿ ಬಳಿಯಿಂದ ಹಾದು ಹೋಗುವ ರಸ್ತೆಯ ಸುಮಾರು 1 ಕಿ.ಮೀ ದೂರದಲ್ಲಿದೆ. ಈ ರಸ್ತೆಯ ಮೂಲಕ ಇರ್ದೆ ಹಾಗೂ ಬೆಟ್ಟಂಪಾಡಿಯಿಂದ ಒಳಮೊಗ್ರು, ಅರಿಯಡ್ಕ, ನಿಡ್ಪಳ್ಳಿ ಗ್ರಾಮಗಳ ವಿವಿಧ ಪ್ರದೇಶಗಳಿಗೆ ಸಂಪರ್ಕಿಸಲು ಅತೀ ಹತ್ತಿರದ ರಸ್ತೆಯಾಗಿದೆ.

30 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಸೇತುವೆಯು ಇರ್ದೆ, ಬೆಟ್ಟಂಪಾಡಿ, ನಿಡ್ಪಳ್ಳಿ, ಒಳಮೊಗ್ರು, ಅರಿಯಡ್ಕ ಗ್ರಾಮಗಳ ಜನತೆಗೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದೆ. ಪ್ರತಿನಿತ್ಯ ಕೃಷಿ, ಕೂಲಿ ಕಾರ್ಮಿಕರು, ಉದ್ಯೋಗಿಗಳು ಸೇರಿದಂತೆ ನೂರಾರು ಮಂದಿ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಇದೇ ಮಾರ್ಗವಾಗಿ ವಿವಿಧ ಕಡೆಗಳಿಗೆ ತೆರಳುತ್ತಿದ್ದಾರೆ. ನೂರಾರು ಮಂದಿ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗಲು ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ. ನಿತ್ಯ ನೂರಾರು ಘನ ಹಾಗೂ ಲಘು ವಾಹನಗಳು ಈ ಸೇತುವೆ ಮೂಲಕವೇ ಸಂಚರಿಸುತ್ತಿವೆ.ಈ ಸೇತುವೆ ಇದೀಗ ಶಿಥಿಲಗೊಂಡು ಕುಸಿಯುವ ಭೀತಿಯಲ್ಲಿದೆ. ಒಂದು ವೇಳೆ ಸೇತುವೆ ಕುಸಿತಗೊಂಡರೆ ವಾಹನ ಸವಾರರು ಹತ್ತಾರು ಕಿಲೋ ಮೀಟರ್ ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆಯೂ ಇದೆ.

ತಡೆಬೇಲಿಯೂ ಇಲ್ಲದ ಸೇತುವೆ: ಈ ಸೇತುವೆ ಸಣ್ಣ ಸೇತುವೆಯಾಗಿದ್ದರೂ ಇದರ ಎರಡೂ ಬದಿಯಲ್ಲಿಯೂ ತಡೆಗೋಡೆ ನಿರ್ಮಿಸದೇ ಇರುವುದು ಆತಂಕಕಾರಿ ಸಂಗತಿಯಾಗಿದೆ. ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿಯಾಗಿದೆ. ನಿತ್ಯ ಈ ಸೇತುವೆ ಮೂಲಕ ನೂರಾರು ವಾಹನಗಳು, ಸಾರ್ವಜನಿಕರು ತೆರಳುತ್ತಾರೆ. ಈ ವೇಳೆ ಏನಾದರೂ ಆಯತಪ್ಪಿದರೆ ನೇರವಾಗಿ ಹೊಳೆಗೆ ಬೀಳುವ ಸಾಧ್ಯತೆಗಳಿವೆ.ಹೀಗಾಗಿ ಮಳೆಗಾಲದಲ್ಲಿ ಸೇತುವೆ ಮೇಲೆ ಆತಂಕದಲ್ಲಿಯೇ ಸಂಚರಿಸಬೇಕಾದ ಪರಿಸ್ಥಿತಿಯಿದೆ. ಅಮಾಯಕರು ಜೀವ ಕಳೆದುಕೊಳ್ಳುವ ಮುಂಚಿತವಾಗಿ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುವುದು ಅತ್ಯವಶ್ಯಕ.

ಬಲ ಕಳೆದುಕೊಂಡ ಸೇತುವೆ ಪಿಲ್ಲರ್‌ಗಳು: ಮೂರು ದಶಕಗಳು ಕಳೆದಿರುವ ಈ ಸೇತುವೆಯ ಪಿಲ್ಲರ್‌ಗಳು ಮಳೆಯ ರಭಸಕ್ಕೆ ಬಲ ಕಳೆದುಕೊಂಡಿವೆ. ಸೇತುವೆಯ ಪಿಲ್ಲರ್‌ಗಳ ತಳ ಭಾಗದಲ್ಲಿನ ಕಾಂಕ್ರೀಟ್ ಕಿತ್ತುಹೋಗಿದ್ದು ಜಲ್ಲಿ ಕಲ್ಲುಗಳು, ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿದೆ. ಸೇತುವೆಗೆ ಆಧಾರವಾಗಿ ನದಿಯ ಎರಡು ಬದಿಯಲ್ಲಿ ತಡೆಗೋಡೆಗೆ ಕಟ್ಟಿದ್ದ ಕಲ್ಲುಗಳು ತಳಭಾಗದಲ್ಲಿಯೂ ಕುಸಿತಗೊಂಡಿದ್ದು, ಸೇತುವೆಯ ಪಿಲ್ಲರ್‌ಗಳು ಬಲ ಕಳೆದುಕೊಂಡಿವೆ.ಸೇತುವೆಯ ಕೆಳ ಭಾಗದಲ್ಲಿ ವೃತ್ತಾಕಾರದಲ್ಲಿ ಐದು ಪಿಲ್ಲರ್‌ಗಳಿದ್ದು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಬರುವ ಮರದ ದಿಣ್ಣೆಗಳು ಪಿಲ್ಲರ್‌ಗಳಿಗೆ ಡಿಕ್ಕಿ ಹೊಡೆದು ಇನ್ನಷ್ಟು ಹಾನಿಯಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಅಲ್ಲಿನ ಸ್ಥಳೀಯರು.

ಬಹುಗ್ರಾಮ ಪೈಪ್‌ಲೈನ್‌ನಿಂದಲೂ ಸೇತುವೆಗೆ ಹಾನಿ: ಸದರಿ ರಸ್ತೆಯ ಮೂಲಕ ಬಹುಗ್ರಾಮ ಕುಡಿಯುವ ನೀರಿನ ಪೈಪ್‌ಲೈನ್ ಹಾದು ಹೋಗುತ್ತಿದೆ.ಪೈಪ್‌ಲೈನ್ ಕಾಮಗಾರಿಯ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆಗೆ ತಾಗಿಕೊಂಡಂತೆ ಜೇಸಿಬಿ ಮೂಲಕ ಅಗೆದು ಅದನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ಸೇತುವೆಯ ಒಂದು ಭಾಗದಲ್ಲಿ ಮಣ್ಣು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.ಪರಿಣಾಮ ಸೇತುವೆಗೆ ತಾಗಿಕೊಂಡಿರುವ ಕಾಂಕ್ರೀಟ್ ರಸ್ತೆಯ ಸ್ಲ್ಯಾಬ್‌ನ ಅಡಿ ಭಾಗದಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿದೆ.ಇನ್ನು,ಮಳೆಗಾಲದ ಧಾರಾಕಾರ ಮಳೆಯ ಸಂದರ್ಭದಲ್ಲಿ ಸೇತುವೆ ಗತಿಯೇನು ಎಂಬ ಆತಂಕವೂ ಸ್ಥಳಿಯರಲ್ಲಿದೆ.

ಕೋನಡ್ಕದ ಸೇತುವೆಯು ಐದು ಗ್ರಾಮಗಳ ಜನತೆಗೆ ಅನುಕೂಲವಾಗಿದೆ. ಸೇತುವೆ ಬಿರುಕು ಬಿಟ್ಟಿರುವುದನ್ನು ಪಂಚಾಯತ್‌ನಿಂದ ಪರಿಶೀಲನೆ ನಡೆಸಲಾಗಿದೆ. ಇದರ ಬಗ್ಗೆ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ನಿರ್ಣಯಕೈಗೊಂಡು ಸಂಬಂಧಪಟ್ಟ ಇಲಾಖೆಗೆ ಪಂಚಾಯತ್‌ನಿಂದ ಮನವಿ ಸಲ್ಲಿಸಲಾಗುವುದು. ಹೊಸ ಸೇತುವೆ ನಿರ್ಮಾಣಕ್ಕೆ ರೂ.1 ಕೋಟಿ ಅನುದಾನ ಮಂಜೂರುಗೊಳಿಸುವಂತೆ ಕಾಂಗ್ರೆಸ್ ವಲಯಾಧ್ಯಕ್ಷ ನವೀನ್ ರೈಯವರ ನೇತೃತ್ವದಲ್ಲಿ ನಾವು ಈಗಾಗಲೇ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ.
 ಮೊೖದು ಕುಂಞಿ ಕೋನಡ್ಕ,
ಸದಸ್ಯರು ಬೆಟ್ಟಂಪಾಡಿ ಗ್ರಾಮ ಪಂಚಾಯತ್

LEAVE A REPLY

Please enter your comment!
Please enter your name here