ಪುತ್ತೂರು: ಕೊಳ್ತಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆ ಕಾಣಿಸಿಕೊಂಡಿದ್ದು, ಕೃಷಿ ಹಾನಿಯುಂಟು ಮಾಡಿದೆ.
ಗ್ರಾಮದ ಬರಮೇಲು ಎಂಬಲ್ಲಿ ಮೇದಪ್ಪ ಗೌಡರವರ ಕೃಷಿ ತೋಟಕ್ಕೆ ಲಗ್ಗೆ ಇಟ್ಟ ಒಂಟಿ ಸಲಗ ತೋಟದಲ್ಲಿದ್ದ ಆರು ತೆಂಗಿನ ಗಿಡ ಮತ್ತು ಅಡಿಕೆ ಗಿಡಗಳನ್ನು ನಾಶ ಮಾಡಿದೆ ಎಂದು ತಿಳಿದು ಬಂದಿದೆ. ಕೊಳ್ತಿಗೆ, ಕೆಯ್ಯೂರು, ಅರಿಯಡ್ಕ ಮತ್ತು ಮಾಡ್ನೂರು ಗ್ರಾಮ ವ್ಯಾಪ್ತಿಯಲ್ಲೇ ಓಡಾಡಿಕೊಂಡಿರುವ ಈ ಕಾಡಾನೆ ಈಗಾಗಲೇ ಹಲವು ಕೃಷಿಕರ ತೋಟಕ್ಕೆ ದಾಳಿ ನಡೆಸಿ ಹಾನಿಯುಂಟು ಮಾಡಿದೆ. ತನ್ನ ಹಸಿವು ನೀಗಿಸುವ ಸಲುವಾಗಿ ತೋಟದಲ್ಲಿರುವ ತೆಂಗಿನ ಗಿಡ, ಬೈನೆ ಮರ, ಬಾಳೆಗಿಡ, ಅಡಿಕೆ ಸಸಿ ಇತ್ಯಾದಿಗಳನ್ನು ನಾಶ ಮಾಡುತ್ತಿದೆ. ಆನೆಯಿಂದ ಕೃಷಿ ಹಾನಿಗೊಳಗಾದ ರೈತರು ಸಭೆ ನಡೆಸಿ ಆನೆಯನ್ನು ಅಭಯಾರಣ್ಯಕ್ಕೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದ್ದು, ಅಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಮನವಿ ಕೂಡ ಮಾಡಿಕೊಂಡಿದ್ದಾರೆ. ಆದರೆ ಆನೆಯನ್ನು ಸ್ಥಳಾಂತರ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ ಮತ್ತು ಇದಕ್ಕೆ ಸರಕಾರದ ಅನುಮತಿ ಕೂಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಭಾಗದ ಜನರಿಗೆ ಈ ಒಂಟಿ ಸಲಗದ ಕಾಟ ಮಾತ್ರ ತಪ್ಪಿದ್ದಲ್ಲ.