ಪುತ್ತೂರು: ಬಹುಗ್ರಾಮ ಕಿಡಯುವ ನೀರು ಯೋಜನೆಯ ವಿಚಾರಕ್ಕೆ ಸಂಬಂಧಿಸಿದಂತೆ ಕಾಮಗಾರಿಯ ಪ್ರಗತಿ ಪರಿಶೀಲನೆ ಸಲುವಾಗಿ ಯೋಜನೆಯ ಇಂಜನಿಯರ್ಗಳು ಮತ್ತು ಗುತ್ತಿಗೆದಾರರ ಸಭೆಯನ್ನು ಕರೆದ ಶಾಸಕ ಅಶೋಕ್ ರೈ ಅವರು ಕಾಮಗಾರಿ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು, ಬಹುಗ್ರಾಮ ಕುಡಿಯುವ ನೀರು ಯೋಜನೆ ತನ್ನ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾಗಿದೆ. ಇದಕ್ಕೆ ಸರಕಾರದಿಂದ 1010 ಕೋಟಿ ರೂ ಅನುದಾನ ಮಂಜೂರುಗೊಂಡಿದ್ದು, ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಪೈಪ್ ಲೈನ್ ಕಾಮಗಾರಿ, ಟ್ಯಾಂಕ್ ನಿರ್ಮಾಣ ಕಾಮಗಾರಿ ಬಗ್ಗೆ ಈಗಾಗಲೇ ತಾನು ಸೂಚನೆಯನ್ನು ನೀಡಿದ್ದೇನೆ. ಕಾಮಗಾರಿ ಆಮೆಗತಿಯಲ್ಲಿ ಸಾಗದೆ ಸಮರೋಪಾದಿಯಲ್ಲಿ ನಡೆಯಬೇಕು. ಮುಂದಿನ ಬೇಸಿಗೆಯ ವೇಳೆ ಯೋಜಿತ ಎಲ್ಲಾ ಪ್ರದೇಶಗಳಿಗೂ ಶುದ್ದ ಕುಡಿಯುವ ನೀರು ಪೂರೈಕೆಯಾಗಬೇಕು. ಈಗ ಎಲ್ಲೆಲ್ಲಿ ಕಾಮಗಾರಿ ಪೂರ್ಣಗೊಂಡಿದೆಯೋ ಅಲ್ಲಿ ನೀರು ಬಿಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ರಸ್ತೆ ಬದಿ ಮಾಡಿದ ಗುಂಡಿ ಅನಾಹುತಕ್ಕೆ ಕಾರಣವಾಗಬಾರದು
ಪೈಪ್ ಲೈನ್ ಕಾಮಗಾರಿ ವೇಳೆ ರಸ್ತೆ ಬದಿಯಲ್ಲಿ ಗುಂಡಿ ತೆಗೆದಿದ್ದು, ಮಳೆಗೆ ಮಣ್ಣು ಕೊಚ್ಚಿ ಹೋಗಿ ಕೆಲವು ಕಡೆಗಳಲ್ಲಿ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿರುವ ಬಗ್ಗೆ ದೂರುಗಳು ಬಂದಿದೆ. ಎಲ್ಲೆಲ್ಲಾ ಮಳೆ ನೀರಿಗೆ ಮಣ್ಣು ಕೊಚ್ಚಿ ಹೋಗಿ ಹೊಂಡಗಳಾಗಿದ್ದರೆ ಅಲ್ಲಿಗೆ ಮಣ್ಣು ಹಾಕಿ ವೈಬ್ರೇಟ್ ಹಾಕಬೇಕು ಎಂದು ಶಾಸಕರು ಸೂಚನೆ ನೀಡಿದರು.
ವಿಟ್ಲ ಪಟ್ಟಣಕ್ಕೂ ನೀರು
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 49 ಟ್ಯಾಂಕ್ಗಳಿವೆ, ಅದೇ ಟ್ಯಾಂಕ್ಗೆ ನೀರು ತುಂಬಿದಲ್ಲಿ ವಿಟ್ಲಕ್ಕೆ ದಿನದ 24 ಗಂಟೆ ನೀರು ಪೂರೈಕೆ ಮಾಡಲು ಸಾಧ್ಯವೋ ಎಂಬುದನ್ನು ಪರಿಶೀಲಿಸಿ ಹೆಚ್ಚುವರಿ ಟ್ಯಾಂಕ್ ಬೇಕಾದಲ್ಲಿ ಅದನ್ನು ನಿರ್ಮಾಣ ಮಾಡಬೇಕು ಎಂದು ಶಾಸಕರು ಸೂಚನೆಯನ್ನು ನೀಡಿದರು.
ಸಭೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನಾ ಮುಖ್ಯ ಇಂಜಿನಿಯರ್ ರಘುನಾಥ್, ಸಹಾಯಕ ಇಂಜಿನಿಯರ್ ಸುರೇಶ್, ಪ್ರೋಜೆಕ್ಟ್ ಮ್ಯಾನೇಜರ್ ಶ್ರೀನಿವಾಸ ಕುಲಕರ್ಣಿ, ಯೋಜನೆಯ ಅಡ್ಮಿನ್ ಯಶ್ವಿನ್, ಕುಶಕುಮಾರ್, ನಟೇಶ್ ಉಪಸ್ಥಿತರಿದ್ದರು.