✍️ ಹರೀಶ್ ಬಾರಿಂಜ
ನೆಲ್ಯಾಡಿ: ನಾನಾ ಕಾರಣಗಳಿಂದ ಜಿಲ್ಲೆಯಲ್ಲಿ ಕೃಷಿಕರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಹಾಲು ಉತ್ಪಾದನೆಯ ಪ್ರಮಾಣವು ಕುಸಿಯುತ್ತಿದೆ. ತಮ್ಮ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಹಾಲು ಸಕಾಲದಲ್ಲಿ ಸೊಸೈಟಿಗೆ ತಲುಪಿಸುವುದೂ ಹೈನುಗಾರರಿಗೆ ಸವಾಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹೈನುಗಾರರು ಹಾಲು ಸೊಸೈಟಿಗೆ ಬರಲು ನಾಲ್ಕೈದು ಕಿ.ಮೀ.ದೂರ ಕ್ರಮಿಸಿ ಬರಬೇಕಾಗುತ್ತಿದೆ. ಈ ಎಲ್ಲಾ ಸಂಕಷ್ಟಗಳಿಂದ ಹೈನುಗಾರರನ್ನು ಪಾರು ಮಾಡಲು ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘ ಸಂಚಾರಿ ವಾಹನದ ಮೂಲಕ ಹೈನುಗಾರರ ಮನೆ ಬಾಗಿಲಿಗೆ ತೆರಳಿ ಹಾಲು ಖರೀದಿ ಆರಂಭಿಸಿದೆ. ಇದಕ್ಕಾಗಿ ಸಂಘಕ್ಕೆ ಇವಿ ಗೂಡ್ಸ್ ರಿಕ್ಷಾ ಬಂದಿದ್ದು, ಹಾಲು ಸಂಗ್ರಹ ಪ್ರಮಾಣವೂ ಹೆಚ್ಚಳಗೊಂಡಿದೆ.

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಶಿಫಾರಸ್ಸಿನಂತೆ ಯುನಿಯೂನ್ ಬ್ಯಾಂಕ್ನ ಅನುದಾನದಲ್ಲಿ ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇವಿ ಗೂಡ್ಸ್ ರಿಕ್ಷಾ ಬಂದಿದೆ. ಸಂಘದ ವ್ಯಾಪ್ತಿಯ ನಿಗದಿತ ಸ್ಥಳಗಳಿಗೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಇವಿ ಗೂಡ್ಸ್ ರಿಕ್ಷಾದಲ್ಲಿ ಹೋಗಿ ಹಾಲು ಸಂಗ್ರಹ ಮಾಡಲಾಗುತ್ತಿದೆ. ಪ್ರಸ್ತುತ ಕಟ್ಟೆಮಜಲು ಹಾಗೂ ಹಳೆಮುಂಡ್ಲಕ್ಕೆ ತೆರಳಿ ಹಾಲು ಸಂಗ್ರಹ ಮಾಡಲಾಗುತ್ತಿದೆ. ಪಡುಬೆಟ್ಟು ಹಾಗೂ ಹೊಸಮಜಲುನಲ್ಲಿ ಸಂಘದ ಶಾಖೆಯ ಮೂಲಕ ಹಾಲು ಸಂಗ್ರಹ ಆಗುತ್ತಿದೆ. ಈ ವ್ಯವಸ್ಥೆಯೂ ಹೈನುಗಾರರಿಗೆ ಬಹಳಷ್ಟು ಅನುಕೂಲ ಕಲ್ಪಿಸಿದೆ. ಹೈನುಗಾರರ ಸಮಯ, ವೆಚ್ಚವೂ ಉಳಿಕೆಯಾಗಿದೆ.
ಹಾಲು ಸಂಗ್ರಹ ಹೆಚ್ಚಳ:
ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕಳೆದ ಮಾರ್ಚ್ ತಿಂಗಳಿನಿಂದ ಇವಿ ಗೂಡ್ಸ್ ರಿಕ್ಷಾ ಮೂಲಕ ಹಾಲು ಸಂಗ್ರಹ ಆರಂಭಗೊಂಡಿದೆ. ಇದರಿಂದಾಗಿ ಹಾಲು ಸಂಗ್ರಹದಲ್ಲೂ ಹೆಚ್ಚಳಗೊಂಡಿದೆ. ಈ ಹಿಂದೆ ದಿನದಲ್ಲಿ 1100 ಲೀ.ಹಾಲು ಸಂಗ್ರಹ ಆಗುತ್ತಿದ್ದು ಇವಿ ಗೂಡ್ಸ್ ವಾಹನ ಬಂದ ಬಳಿಕ ದಿನವೊಂದಕ್ಕೆ 1500ಲೀ.ನಷ್ಟು ಹಾಲು ಸಂಗ್ರಹ ಆಗುತ್ತಿದೆ. ಹಾಲು ಸಂಗ್ರಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸಂಘಕ್ಕೆ ಹಾಲು ಪೂರೈಸುವ ಹೈನುಗಾರರ ಸಂಖ್ಯೆಯೂ ಹೆಚ್ಚಳ ಆಗಿದೆ.
ಇವಿ ಗೂಡ್ಸ್ ವಾಹನವನ್ನು ಗ್ರಾಮೀಣ ಪ್ರದೇಶಕ್ಕೆ ಅನುಕೂಲವಾಗುವಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ. ಏರು ಪ್ರದೇಶಗಳಿಗೆ ಅನುಕೂಲವಾಗುವಂತೆ ಗೇರ್ ಸಹ ಅಳವಡಿಸಿಕೊಳ್ಳಲಾಗಿದೆ. 550 ಕೆ.ಜಿ.ತನಕ ಇದರಲ್ಲಿ ಸಾಗಾಟ ಮಾಡಬಹುದಾಗಿದೆ. ಲಿಫ್ಟಿಂಗ್ ವ್ಯವಸ್ಥೆಯೂ ಸಹ ಇದೆ. 2 ಗಂಟೆ ಬ್ಯಾಟರಿ ಚಾರ್ಜ್ ಮಾಡಿದಲ್ಲಿ ಸುಮಾರು 80ಕಿ.ಮೀ. ಓಡಾಟ ನಡೆಸಲಿದೆ. ಒಟ್ಟಿನಲ್ಲಿ ಈ ವ್ಯವಸ್ಥೆಯು ಹೈನುಗಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಟ್ಟಿದೆ.
ಉದ್ಘಾಟನೆ:
ಕಳೆದ ಮಾರ್ಚ್ನಲ್ಲಿ ಸಂಘದ ವ್ಯಾಪ್ತಿಯ ಕಟ್ಟೆಮಜಲುನಲ್ಲಿ ಮೊಬೈಲ್ ವಾಹನದ ಉದ್ಘಾಟನೆ ನಡೆದಿದ್ದು ಪ್ರತಿದಿನ ಎರಡು ಹೊತ್ತು ಹಾಲು ಸಂಗ್ರಹ ನಡೆಯುತ್ತಿದೆ. ಹಿರಿಯ ಹೈನುಗಾರರಾದ ಪದ್ಮಯ್ಯ ಗೌಡ ಅವರು ಮೊಬೈಲ್ ವಾಹನ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಗುರುಪ್ರಸಾದ್, ಉಪಾಧ್ಯಕ್ಷರು. ನಿರ್ದೇಶಕರು, ಸಿಬ್ಬಂದಿಗಳು, ಹೈನುಗಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತುಂಬಾ ಸಹಕಾರಿಯಾಗಿದೆ
ಇವಿ ಗೂಡ್ಸ್ ರಿಕ್ಷಾ ಸಂಘಕ್ಕೆ ತುಂಬಾ ಸಹಕಾರಿಯಾಗಿದೆ. ಈ ಸೌಲಭ್ಯ ಒದಗಿಸಿಕೊಟ್ಟಿರುವ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಹಾಗೂ ಯೂನಿಯನ್ ಬ್ಯಾಂಕ್ನವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಸಂಘದಲ್ಲಿ ಹಾಲು ಸಂಗ್ರಹ ಕಡಿಮೆಯಾಗುತ್ತಿತ್ತು. ಈ ಬಗ್ಗೆ ಚಿಂತಿಸುತ್ತಿದ್ದ ಸಂದರ್ಭದಲ್ಲೇ ಇವಿ ಗೂಡ್ಸ್ ರಿಕ್ಷಾ ದೊರೆತಿದೆ. ಇದರಿಂದ ಸಂಘದ ಸದಸ್ಯರಿಗೆ ಅನುಕೂಲವಾಗಿದೆ. ಸದ್ಯಕ್ಕೆ ಎರಡು ಕಡೆ ಹಾಲು ಸಂಗ್ರಹಕ್ಕೆ ವ್ಯವಸ್ಥೆ ಮಾಡಿದ್ದು ಹಾಲು ಸಂಗ್ರಹದಲ್ಲಿ ಹೆಚ್ಚಳವಾಗಿದೆ.
ಗುರುಪ್ರಸಾದ್, ಅಧ್ಯಕ್ಷರು, ಹಾಲು ಉ.ಸ.ಸಂಘ, ನೆಲ್ಯಾಡಿ
ಹಾಲು ಸಂಗ್ರಹದಲ್ಲಿ ಹೆಚ್ಚಳ
ಹೈನುಗಾರರ ಅನುಕೂಲಕ್ಕಾಗಿ 2014ರಲ್ಲಿ 3 ಸಾವಿರ ಲೀ.ಸಾಮರ್ಥ್ಯದ ಸಾಂಧ್ರಶೀತಲೀಕರಣ ಘಟಕ ಆರಂಭಿಸಿದ್ದೇವು. ನಂತರ ಇದರ ಸಾಮರ್ಥ್ಯವನ್ನು 5 ಸಾವಿರ ಲೀಟರ್ಗೆ ಹೆಚ್ಚಿಸಿದ್ದೇವೆ. ಆದರೆ ನಮಗೆ ಹಾಲಿನ ಕೊರತೆ ಉಂಟಾಯಿತು. ಗ್ರಾಮೀಣ ಪ್ರದೇಶವಾಗಿರುವುದರಿಂದ ಇಲ್ಲಿಗೆ ನಾಲ್ಕೈದು ಕಿ.ಮೀ. ದೂರದಿಂದ ಹಾಲು ತರುವ ಹೈನುಗಾರರೂ ಇದ್ದರು. ಸಂಚಾರಿ ವ್ಯವಸ್ಥೆ ಇದ್ದಲ್ಲಿ ಈ ಹೈನುಗಾರರಿಗೆ ಅನುಕೂಲವಾಗುತ್ತದೆ ಎಂದು ಒಕ್ಕೂಟಕ್ಕೆ ಮನವಿ ಮಾಡಿದ್ದೇವೆ. ಯುನಿಯನ್ ಬ್ಯಾಂಕ್ನವರು ಒಕ್ಕೂಟಕ್ಕೆ ನೀಡಿದ ಇವಿ ಗೂಡ್ಸ್ ರಿಕ್ಷಾವನ್ನು ನಮ್ಮ ಸಂಘಕ್ಕೆ ನೀಡಿದ್ದಾರೆ. ಇವಿ ಗೂಡ್ಸ್ ರಿಕ್ಷಾ ಬಂದ ಬಳಿಕ ಹಾಲು ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಮುಂದೆ ಇನ್ನೂ ಹೆಚ್ಚು ಸಂಗ್ರಹ ಆಗಬಹುದೆಂಬ ಆಶಾ ಭಾವನೆ ಇದೆ.
ಮಹಾಬಲ ಶೆಟ್ಟಿ ದೋಂತಿಲ, ನಿರ್ದೇಶಕರು, ಹಾಲು ಉ.ಸ.ಸಂಘ, ನೆಲ್ಯಾಡಿ
ಮೊದಲ ಪ್ರಯೋಗ
ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಬಹುದಿನಗಳ ಕನಸು ನನಸು ಆಗಿದೆ. 4 ರಿಂದ 5 ಕಿ.ಮೀ.ದೂರ ಇರುವ ಪ್ರದೇಶಗಳಿಂದ ಸೊಸೈಟಿಗೆ ಹಾಲು ತರಲು ಹೈನುಗಾರರಿಗೆ ಸಮಸ್ಯೆಯಾಗುತಿತ್ತು. ಇದನ್ನು ಅರಿತುಕೊಂಡು ಸಂಚಾರಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ದ.ಕ.ಹಾಲು ಒಕ್ಕೂಟದ ಇತಿಹಾಸದಲ್ಲಿ ಮೊದಲ ಪ್ರಯೋಗವೂ ಆಗಿದೆ. ಈ ವಾಹನದಲ್ಲಿ 550 ಕೆ.ಜಿ. ತೂಕ ಸಾಗಾಟ ಮಾಡಬಹುದು. ಲಿಫ್ಟಿಂಗ್ ವ್ಯವಸ್ಥೆ ಇದೆ. 11 ಕ್ಯಾನ್ ಸಾಗಾಟ ಮಾಡಬಹುದು. ಈ ಭಾಗಕ್ಕೆ ಇದು ಸೂಕ್ತವಾಗಿದೆ. ಈ ವ್ಯವಸ್ಥೆ ಕಲ್ಪಿಸಿಕೊಟ್ಟ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಾಗೂ ಯೂನಿಯನ್ ಬ್ಯಾಂಕ್ಗೆ ಚಿರಋಣಿಯಾಗಿರುತ್ತೇವೆ.
ರಾಜೇಶ್ ಕಾಮತ್, ವಿಸ್ತರಣಾಧಿಕಾರಿ, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು