ತುಳು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆಗೆ ಕ್ರಮವಹಿಸುವಂತೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

0

ಪುತ್ತೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿಸುವಲ್ಲಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ರೈ ಅವರು ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಿಗೆ ಮನವಿ ಮಾಡಿದ್ದಾರೆ.

ಬುಧವಾರ ಸಚಿವರನ್ನು ಭೇಟಿಯಾದ ಶಾಸಕರು ‘ದ್ರಾವಿಡ ಭಾಷೆಗಳಲ್ಲಿ ಮೂಲ ದ್ರಾವಿಡ ಭಾಷೆಯಿಂದ ಪ್ರಪ್ರಥಮವಾಗಿ ಸ್ವತಂತ್ರವಾದ ಭಾಷೆ ತುಳು ಭಾಷೆಯಾಗಿದ್ದು, ತುಳು ಭಾಷೆಗೆ ಸುಮಾರು 3೦೦೦ ವರ್ಷಗಳ ಇತಿಹಾಸವಿರುತ್ತದೆ. ಪ್ರಸ್ತುತ ತುಳು ಭಾಷೆಯನ್ನು 2 ಕೋಟಿ ಗಿಂತ ಹೆಚ್ಚಿನ ಸಾರ್ವಜನಿಕರು ಮಾತನಾಡುತ್ತಿರುತ್ತಾರೆ. ಪಂಚ ಡ್ರಾವಿಡ ಭಾಷೆಗಳಲ್ಲಿ ತುಳು ಭಾಷೆ ಕೂಡ ಒಂದಾಗಿರುತ್ತದೆ. ತುಳು ಭಾಷೆಯು ಸ್ವತಂತ್ರ ಲಿಪಿಯನ್ನು ಹೊಂದಿರುತ್ತದೆ. ಸದ್ರಿ ತುಳು ಭಾಷೆಯನ್ನು ಪ್ರಪಂಚದಾದ್ಯಂತ ವ್ಯವಹಾರಿಕಾ ಭಾಷೆಯಾಗಿ ಮಾತಾಡುತ್ತಿದ್ದು, ವಿಶ್ವದ ಮಾನ್ಯತೆ ಪಡೆದ 130 ಭಾಷೆಗಳಲ್ಲಿ ತುಳು ಭಾಷೆಯು 103ನೇ ಕೋಡ್ ಸಂಖ್ಯೆಯನ್ನು ಪಡೆದಿರುತ್ತದೆ. ಸಾಮಾಜಿಕ ಜಾಲತಾಣವಾದ ಗೂಗಲ್‌ನಲ್ಲಿ ತುಳು ಭಾಷೆಗೆ ವಿಶೇಷವಾಗಿ ಸ್ಥಾನಮಾನ ನೀಡಿ ಬೇರೆ ಭಾಷೆಯಿಂದ ತುಳುಭಾಷೆಗೆ ಭಾಷಾಂತರ (ಟ್ರಾನ್ಸ್‌ಲೇಟ್) ಮಾಡಲು ಅವಕಾಶ ನೀಡಲಾಗಿದೆ.

ತುಳು ಭಾಷೆಯನ್ನು ರಾಜ್ಯದ 2 ನೇ ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ಮಾನ್ಯ ಮುಖ್ಯ ಮಂತ್ರಿಗಳು ಹಲವಾರು ಬಾರಿ ಅಧಿವೇಶನದಲ್ಲಿ ಹಾಗೂ ದಿನಾಂಕ: 16/೦5/2025 ರಂದು ಮಂಗಳೂರಿನಲ್ಲಿ ನಡೆದ ಸಮಾವೇಷದಲ್ಲಿ ಭರವಸೆ ನೀಡಿರುತ್ತಾರೆ. ನಾನು ಶಾಸಕನಾದ ಪ್ರಥಮ ಅಧಿವೇಶನದಿಂದ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಸತತವಾಗಿ ಪ್ರಯತ್ನ ಮಾಡುತ್ತಿರುತ್ತೇನೆ. ಈಗಾಗಲೇ ದೇಶದ ವಿವಿಧ ಮೂರು ರಾಜ್ಯಗಳಿಂದ ವರದಿಗಳನ್ನು ಪಡೆಯಲಾಗಿರುತ್ತದೆ ಹಾಗೂ ಸದರಿ ವರದಿಯ ಮೇಲೆ ಅಧ್ಯಾಯನ ಮಾಡಲು ಆಂಧ್ರ ಪ್ರದೇಶ ರಾಜ್ಯಕ್ಕೆ 5 ಜನರ ತಂಡವನ್ನು ಈಗಾಗಲೇ ಕಳುಹಿಸಿ ವರದಿ ಪಡೆಯಲು ಸೂಚಿಸಲಾಗಿರುತ್ತದೆ. ಆದ್ದುದರಿಂದ ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ ಕೂಡಲೇ ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಗ್ಯಾರಂಟಿ ಸಮಿತಿಯ ಸಂತೋಷ್‌ ಕುಮಾರ್ ಭಂಡಾರಿ ಚಿಲ್ಮೆತ್ತಾರು, ಸೇರಿದಂತೆ ಹಲವು ಮಂದಿ ಇದ್ದರು.

LEAVE A REPLY

Please enter your comment!
Please enter your name here