ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ತೀರಾ ಹಿಂದುಳಿದವರ ಮನೆ ಹೆಚ್ಚಿದ್ದು, ಸ್ವಂತ ಖರ್ಚಿನಿಂದ ಮನೆ ನಿರ್ಮಾಣ ಮಾಡಲು ಸಾಧ್ಯವಿಲ್ಲದ ನೂರಾರು ಕುಟುಂಬಗಳು ಅರ್ಜಿ ಸಲ್ಲಿಸಿದ್ದು ಅವರಿಗೆ ಮನೆ ನೀಡಲು ಪುತ್ತೂರು ಕ್ಷೇತ್ರಕ್ಕೆ 500 ಮನೆಗಳನ್ನು ಮಂಜೂರು ಮಾಡುವಂತೆ ವಸತಿ ಸಚಿವ ಜಮೀರ್ ಅಹ್ಮದ್ಗೆ ಶಾಸಕ ಅಶೋಕ್ ರೈ ಮನವಿ ಸಲ್ಲಿಸಿದ್ದಾರೆ.
ಬುಧವಾರ ಸಚಿವರನ್ನು ಭೇಟಿಯಾದ ಶಾಸಕರು ಕಳೆದ ಹಲವು ವರ್ಷಗಳಿಂದ ಸರಕಾರದಿಂದ ಯಾವುದೇ ಮಂಜೂರಾತಿ ಆಗದ ಕಾರಣ ಕಳೆದ ಹತ್ತು ವರ್ಷಗಳಿಂದ ಅರ್ಜಿ ಹಾಕಿದವರ ಅರ್ಜಿಗಳು ಗ್ರಾಪಂ ಮಟ್ಟದಲ್ಲೇ ಇದೆ. ನಿವೇಶನರಹಿತರಿಗೆ ನಿವೇಶನ ನೀಡುವಲ್ಲಿ ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದ 13 ಗ್ರಾಮಗಳಲ್ಲಿ ಜಾಗವನ್ನು ಗುರುತಿಸಲಾಗಿದೆ. ತೀರಾ ಹಿಂದುಳಿದ ಕುಟುಂಬಗಳಿಗೆ ಮನೆ ಕಟ್ಟುವಲ್ಲಿ ಸರಕಾರದ ಸಹಾಯ ಅಗತ್ಯವಿದ್ದು ಇದಕ್ಕಾಗಿ 500 ಮನೆಗಳನ್ನು ಮಂಜೂರು ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಮನೆ ಇಲ್ಲದವರು ನನ್ನ ಕ್ಷೇತ್ರದಲ್ಲಿ ಅನೇಕ ಮಂದಿ ಇದ್ದಾರೆ. ಹತ್ತು ವರ್ಷಗಳ ಹಿಂದೆ ಮನೆಗಾಗಿ ಅರ್ಜಿ ಹಾಕಿದವರೂ ಇದ್ದಾರೆ. ಹಿಂದಿನ ಸರಕಾರ ಇದ್ದಾಗ ಒಂದೇ ಒಂದು ಮನೆ ಮಂಜೂರಾಗದ ಕಾರಣ ಅರ್ಜಿಗಳ ಸಂಖ್ಯೆಯೂ ಹೆಚ್ಚಿದೆ. ತೀರಾ ಹಿಂದುಳಿದವರಿಗೆ ಮನೆ ಕೊಡಿಸುವಲ್ಲಿ ಸಚಿವರಿಗೆ ಮನವಿ ಮಾಡಿದ್ದೇನೆ. 500 ಮನೆ ನೀಡುವಂತೆ ಕೇಳಿದ್ದೇನೆ. ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ.
ಅಶೋಕ್ ರೈ, ಶಾಸಕರು ಪುತ್ತೂರು