
ಪುತ್ತೂರು: ಪುತ್ತೂರು ತಾಲೂಕನ್ನು ಕೇಂದ್ರೀಕರಿಸಿ ಕಳೆದ 12 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿರುವ, ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರೋತ್ಸಾಹ ನೀಡುತ್ತಾ ಬಂದಿರುವ ಇ-ಫೌಂಡೇಶನ್ ಇಂಡಿಯಾ ವತಿಯಿಂದ ಸ್ಕೂಲ್ ಚಲೋ ಕಾರ್ಯಕ್ರಮ ಸಂಸ್ಥೆಯ ಕಾರುಣ್ಯ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್ ಅವರು ಪುಸ್ತಕ ಹಾಗೂ ಬ್ಯಾಗ್ಗಳನ್ನು ಸಾಂಕೇತಿಕವಾಗಿ ವಿತರಿಸುವುದರೊಂದಿಗೆ ಉದ್ಘಾಟಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಇ-ಫ್ರೆಂಡ್ಸ್ನ ಇಮ್ತಿಯಾಝ್ ಅವರು ಕಳೆದ ಹಲವು ವರ್ಷಗಳಿಂದ ಶಿಕ್ಷಣಕ್ಕೆ ಇ-ಫ್ರೆಂಡ್ಸ್ ಪುತ್ತೂರು ನೀಡುತ್ತಿರುವ ಕೊಡುಗೆ ಮತ್ತು ಶೈಕ್ಷಣಿಕ ಪ್ರಗತಿ ಸಾಮುದಾಯಿಕ ಅನಿವಾರ್ಯ ಕೂಡ ಆಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಆರಿಫ್ ಪಿ.ಕೆ ಮಾತನಾಡಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುತ್ತಿರುವ ಈ ಎಲ್ಲಾ ಕಲಿಕೆಯ ಸಲಕರಣೆಗಳು ಉತ್ತಮ ರೀತಿಯಲ್ಲಿ ಸದ್ಭಳಕೆ ಮಾಡಿ ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಅತ್ಯುತ್ತಮ ವ್ಯಕ್ತಿಗಳಾಗಿ ಮಾದರಿಯಾಗಬೇಕೆಂದು ಹೇಳಿದರು.
ವೇದಿಕೆಯಲ್ಲಿ ಆದಂ ಹಾಜಿ ಸಿಟಿ ಗೋಲ್ಡ್, ಇಹ್ಸಾನ್ ಫೌಂಡೇಶನ್ ಅಧ್ಯಕ್ಷ ಆರ್.ಪಿ ಅಬ್ದುಲ್ ರಝಾಕ್, ಕಮರುದ್ದೀನ್ ಸಾಲ್ಮರ, ಅಬ್ದುಲ್ ರಝಾಕ್ ಸಾಲ್ಮರ, ಪದಾಧಿಕಾರಿಗಳಾದ ಇಜಾಝ್ ಪುತ್ತೂರು, ರಿಯಾಝ್ ಝರಾ, ಹಾರಿಸ್ ಝರಾ, ಶಾಕಿರ್ ಪುತ್ತೂರು ಉಪಸ್ಥಿತರಿದ್ದರು. ಇ-ಫ್ರೆಂಡ್ಸ್ ಕೋಶಾಧಿಕಾರಿ ಹೈದರ್ ಕೂರ್ನಡ್ಕ ಕಾರ್ಯಕ್ರಮ ನಿರ್ವಹಿಸಿದರು.