ಪುತ್ತೂರು: ತಾಲೂಕಿನ ವಿವಿಧ ಕಡೆಗಳಲ್ಲಿ ಈ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ 2 ಮನೆ ಪೂರ್ಣಹಾನಿ, 84 ಮನೆ ಭಾಗಶಃ ಹಾನಿ, 3 ದನದ ಹಟ್ಟಿಗೆ ಹಾನಿಯುಂಟಾಗಿದೆ. 1 ಜಾನುವಾರು ಸಾವನ್ನಪ್ಪಿದೆ. ಕಂದಾಯ ಇಲಾಖೆಯಿಂದ ಒಟ್ಟು ರೂ.8,19,500ಪರಿಹಾರ ವಿತರಿಸಲಾಗಿದೆ ಎಂದು ತಹಶೀಲಾರ್ ನಾಗರಾಜ್ ವಿ ಮಾಹಿತಿ ನೀಡಿದ್ದಾರೆ.
ತಾಲೂಕಿನಲ್ಲಿ 39 ಮನೆಗಳು ಪೂರ್ಣ ಹಾನಿಯಾಗಿರುವ ಬಗ್ಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಪೈಕಿ ಹಿರೇಬಂಡಾಡಿಯ ಗೀತಾ ಹಾಗೂ ಚಿಕ್ಕಮುಡ್ನೂರಿನ ತಿಮ್ಮಪ್ಪ ಗೌಡ ಎಂಬವರಿಗೆ ತಲಾ ರೂ.1.20ಲಕ್ಷದಂತೆ ಒಟ್ಟು ರೂ.2.40ಲಕ್ಷ ಪರಿಹಾರ ಮೊತ್ತವನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ.
ಉಳಿದ ಮನೆಗಳಿಗೆ ಪರಿಶೀಲನಾ ವರದಿಯಾದ ಬಳಿಕ ಪರಿಹಾರ ಮೊತ್ತ ಸಂತ್ರಸ್ಥರ ಖಾತೆಗಳಿಗೆ ಜಮೆಯಾಗಲಿದೆ. 82 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ತಲಾ ರೂ.6,500ರಂತೆ ಒಟ್ಟು 5.33ಲಕ್ಷ ಪರಿಹಾರ ವಿತರಿಸಲಾಗಿದೆ. ಮೂರು ದನದ ಕೊಟ್ಟಿಗೆಗೆ ಹಾನಿಯಾಗಿದೆ. ಒಂದು ದನ ಸಾವನ್ನಪ್ಪಿದೆ. ಕೊಟ್ಟಿಗೆ ಹಾನಿಗೆ ತಲಾ ರೂ.3000 ಹಾಗೂ ದನ ಮೃತಪಟ್ಟ ವಾರಿಸುದಾರರಿಗೆ ರೂ.37,500 ಪರಿಹಾರ ಮೊತ್ತ ಅವರ ಖಾತೆಗೆ ಜಮೆ ಮಾಡಲಾಗಿದೆ.
ಕೇಂದ್ರೀಯ ಗೃಹಮಂತ್ರಾಲಯದ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಮಾರ್ಗಸೂಚಿಯನ್ವಯ ನಿಗಧಿಪಡಿಸಿರುವ ಧರಗಳಂತೆ ಎ.1ರಿಂದ ಮೇ.31ರ ಅವಧಿಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಮನೆಗಳಿಗೆ ಭಾಗಶಃ ಹಾನಿ ಮತ್ತು ಪೂರ್ಣ ಹಾನಿ ಎಂಬ ಎರಡು ಹಂತದಲ್ಲಿ ಮಾತ್ರ ಈಗಾಗಲೇ ಪರಿಹಾರ ಧನ ವಿತರಿಸಲಾಗುತ್ತಿದೆ.
ಭಾಗಶಃ ಹಾನಿಗೆ ರೂ.6,500 ಹಾಗೂ ಪೂರ್ಣಹಾನಿಗೆ ರೂ.1.20ಲಕ್ಷ ಪರಿಹಾರ ನೀಡಲಾಗುತ್ತಿದೆ. ಜೂ.1ರ ನಂತರದ ಆದೇಶದಂತೆ ಶೇ.15-20ಹಾನಿಯಾದರೆ ರೂ.6,500, ಶೇ.20-50 ಹಾನಿಯಾದರೆ ರೂ.30,000, ಶೇ.50-75 ಹಾನಿಯಾದರೆ ರೂ.50,000 ಹಾಗೂ ಪೂರ್ಣಹಾನಿಯಾದರೆ ರೂ.1.20 ಲಕ್ಷ ಕಂದಾಯ ಇಲಾಖೆಯಿಂದ ಪರಿಹಾರ ಮೊತ್ತ ವಿತರಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.