ನೆಲ್ಯಾಡಿ: ವಿಪರೀತ ಅಮಲು ಪದಾರ್ಥ ಸೇವಿಸಿ ಚಟ ಹೊಂದಿದ್ದ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ಶ್ರೀನಿವಾಸ ಆಚಾರ್ಯ(70ವ.)ಅವರು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೂ.13ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಶ್ರೀನಿವಾಸ ಆಚಾರ್ಯ ಅವರು ಅಮಲು ಪದಾರ್ಥ ಸೇವಿಸುವ ಚಟವನ್ನು ಹೊಂದಿದ್ದು, ಇತ್ತೀಚೆಗೆ ಹುಷಾರಿಲ್ಲದೇ ಇರುವುದರಿಂದ ಅವರ ಮಗ ಅಮಲು ಪದಾರ್ಥ ತಂದು ಕೊಡುತ್ತಿದ್ದರು. ಇತ್ತೀಚೆಗೆ ಶ್ರೀನಿವಾಸ ಆಚಾರ್ಯ ಅವರು ಅಮಲು ಪದಾರ್ಥ ಸೇವಿಸಿ ಮಾನಸಿಕ ಅಸ್ವಸ್ಥರಂತೆ ವರ್ತಿಸಿ ಮನೆಯಲ್ಲಿ ಎಲ್ಲರಿಗೂ ಕಿರಿಕಿರಿ ಮಾಡುತ್ತಿದ್ದ ಕಾರಣ ಅಮಲು ಪದಾರ್ಥವನ್ನು ತಂದು ಕೊಡುತ್ತಿರಲಿಲ್ಲ. ಜೂ.12ರಂದು ಸಂಜೆ 6 ಗಂಟೆಯಿಂದ ಶ್ರೀನಿವಾಸ ಆಚಾರ್ಯರವರು ಮನೆಯಲ್ಲಿ ಕಾಣಿಸದೇ ಇದ್ದು ರಾತ್ರಿಯಾದರೂ ಮನೆಗೆ ಬಾರದೇ ಇದ್ದುದರಿಂದ ಎಲ್ಲಾ ಕಡೆ ಹುಡುಕಾಡಿ, ಮನೆಯ ಆವರಣವಿಲ್ಲದ ಬಾವಿಯ ಬಳಿ ಹೋಗಿ ನೋಡಿದಾಗ ಅವರ ಕನ್ನಡಕ ಮತ್ತು ಬೈರಾಸ್ ಇದ್ದು, ಬಾವಿಯೊಳಗಡೆ ಟಾರ್ಚ್ ಲೈಟ್ ಹಾಕಿ ನೋಡಿದಾಗ ಏನೂ ಕಾಣಿಸಿರಲಿಲ್ಲ.
ಜೂ.13ರಂದು ಬೆಳಿಗ್ಗೆ 6.೦೦ ಗಂಟೆಗೆ ಮತ್ತೆ ಬಾವಿಯನ್ನು ಪರಿಶೀಲಿಸಿದಾಗ ಬಾವಿಯೊಳಗಡೆ ಶ್ರೀನಿವಾಸ ಆಚಾರ್ಯರವರ ಮೃತದೇಹ ಕಂಡು ಬಂದಿದೆ. ಶ್ರೀನಿವಾಸ ಆಚಾರ್ಯರವರು ಅಮಲು ಪದಾರ್ಥ ಸೇವಿಸುವ ಚಟವನ್ನು ಹೊಂದಿದ್ದು, ಅಮಲು ಪದಾರ್ಥವನ್ನು ತಂದು ಕೊಡುವುದಿಲ್ಲವೆಂದು ಬೇಸರದಿಂದ ಇದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಅವರ ಪುತ್ರ ಶ್ರೀಕಾಂತ ಆಚಾರ್ಯರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.