ಮೇನಾಲ: ರಸ್ತೆ ಬಿದ್ದ ಮರ ತೆರವುಗೊಳಿಸುವ ವೇಳೆ ಹಲವರ ಮೇಲೆ ಹೆಜ್ಜೇನು ದಾಳಿ.!- ಮೇನಾಲ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಿಗೆ ಗಾಯ – 4 ತಾಸು ಸಂಚಾರ ಬಂದ್

0

ಪುತ್ತೂರು: ಈಶ್ವರಮಂಗಲ ಸಮೀಪದ ಮೇನಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಬೃಹದಾಕಾರದ ಆಲದಮರ ರಸ್ತೆಗೆ ಬಿದ್ದು ವಾಹನ ಸಂಚಾರ ಬಂದ್ ಆಗಿ ಸವಾರರು ಪರದಾಡಿದ ಮತ್ತು ನಂತರದ ಬೆಳವಣಿಗೆಯಲ್ಲಿ ಮರವನ್ನು ತೆರವುಗೊಳಿಸುವ ವೇಳೆ ಅದರೊಳಗೆ ಗೂಡು ಕಟ್ಟಿದ್ದ ಹೆಜ್ಜೇನು ಏಕಾಏಕಿ ಜನರ ಮೇಲೆ ದಾಳಿ ನಡೆಸಿದ ಘಟನೆ ಜೂ.13ರಂದು ನಡೆದಿದೆ.
ಮರ ಬಿದ್ದ ಪರಿಣಾಮ ಸುಮಾರು 4 ತಾಸುಗಳ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಅನುಭವಿಸಿದರು.


ಬೃಹದಾಕಾರದ ಆಲದಮರ ಬುಡ ಸಮೇತ ಉರುಳಿ ಬಿದ್ದಿದ್ದರಿಂದ ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ವಿದ್ಯುತ್ ತಂತಿಗಳು ತುಂಡಾಗಿದ್ದು ಸಂಪರ್ಕ ಕಡಿತಗೊಂಡಿದೆ.

ಆಲದ ಮರದೊಳಗಿತ್ತು ಹೆಜ್ಜೇನು ಗೂಡು: ಬಿದ್ದ ಮರದ ತೆರವು ಕಾರ್ಯ ನಡೆಯುತ್ತಿರುವಾಗ ಟೊಳ್ಳು ಮರದ ಒಳಗಡೆ ಇದ್ದ ಹೆಜ್ಜೇನು ನೊಣಗಳು ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಸ್ಥಳದಲ್ಲಿದ್ದ ಹಲವರಿಗೆ ಹೆಜ್ಜೇನು ಕಚ್ಚಿದ್ದು ಅಲ್ಪ ಸ್ವಲ್ಪ ಗಾಯಗೊಂಡಿದ್ದಾರೆ. ಅನೇಕರು ಸ್ಥಳದಿಂದ ಓಡಿಹೋಗಿ ತಮ್ಮನ್ನು ತಾವು ರಕ್ಷಿಸಿಕೊಂಡಿದ್ದಾರೆ.

ಸ್ಥಳದಲ್ಲಿದ್ದ ಮೇನಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ಲ ಮೆಣಸಿನಕಾನ ಎಂಬವರ ತಲೆ, ಮುಖಕ್ಕೆ ಹೆಜ್ಜೇನು ಕಚ್ಚಿದ್ದು ಅವರು ಈಶ್ವರಮಂಗಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಹೆಜ್ಜೇನು ನೊಣಗಳು ಶಾಲಾ ಆವರಣದಲ್ಲಿ ಸುತ್ತು ಬರುವುದನ್ನು ಗಮನಿಸಿ ಮುಂಜಾಗ್ರತಾ ಕ್ರಮವಾಗಿ ಮೇನಾಲ ಸ.ಹಿ.ಪ್ರಾ.ಶಾಲೆಗೆ ರಜೆ ಸಾರಲಾಗಿತ್ತು.

ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ ಮತ್ತು ಸದಸ್ಯ ಇಬ್ರಾಹಿಂ ಪಳ್ಳತ್ತೂರು ಅವರು ಸ್ಥಳದಲ್ಲೇ ಇದ್ದುಕೊಂಡು ಸಾರ್ವಜನಿಕರಿಗೆ ನೆರವಾದರು.
ನಂತರ ಸ್ಥಳೀಯ ಯುವಕರು, ಸಾರ್ವಜನಿಕರು ಸೇರಿ ತೆರವು ಕಾರ್ಯ ನಡೆಸಿ ವಾಹನ ಸಂಚಾರ ಸುಗಮಗೊಳಿಸಿದರು. ನಂತರ ಅಲ್ಲಿಯೇ ಇದ್ದ ಅಪಾಯಕಾರಿ ಮರದ ಕೊಂಬೆ, ರೆಂಬೆ ತೆರವು ಕಾರ್ಯ ನಡೆಯಿತು.

ಸುಮಾರು 4 ತಾಸು ಕಾಲ ವಾಹನ ಸಂಚಾರ ಬಂದ್ ಆಗಿರುವುದರಿಂದ ರಸ್ತೆ ಬದಿಯಲ್ಲಿ ಸರ್ಕಾರಿ, ಖಾಸಗಿ ಬಸ್‌ಗಳು, ಕಾರು, ಜೀಪ್‌ಗಳು ಸಾಲಾಗಿ ನಿಂತಿದ್ದವು. ಕೆಲವು ವಾಹನಗಳು ಸುತ್ತಿ ಬಳಸಿ ಹೋಗುತ್ತಿದ್ದ ದೃಶ್ಯ ಕಂಡು ಬಂದಿತ್ತು.

ಮೆಸ್ಕಾಂ, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here