ನರಿಮೊಗರು: ಸಾಂದೀಪನಿ ವಿದ್ಯಾಸಂಸ್ಥೆ ಪೋಷಕರ ಸಭೆ

0

ಮಕ್ಕಳು ಅಪ್ಪ-ಅಮ್ಮನ ಆಸ್ತಿಯಲ್ಲ, ಸಮಾಜದ ಆಸ್ತಿ – ದಾಮೋದರ ಶರ್ಮ 

ನರಿಮೊಗರು: ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಶ್ರೀ ಗೋಪಾಲಕೃಷ್ಣ ಮಂದಿರ ವೇದಿಕೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ಮೊದಲ ಪೋಷಕರ ಸಭೆ ಜೂ.15ರಂದು ನಡೆಯಿತು.

ಮುಖ್ಯ ಅತಿಥಿ ದಾಮೋದರ ಶರ್ಮ ಅವರು ಮಾತನಾಡಿ, ಶ್ರೀಕೃಷ್ಣನ ಗುರುವಾದ ಸಾಂದೀಪನಿ ಮಹರ್ಷಿಗಳ ಹೆಸರಿರುವ ಈ ಶಾಲೆಯಲ್ಲಿ ಮಕ್ಕಳನ್ನು ಸೇರಿಸಿದ ಎಲ್ಲಾ ಪೋಷಕರನ್ನು ಅಭಿನಂದಿಸುತ್ತಾ ಈ ಶಾಲೆಯಲ್ಲಿ ಕಲಿತ ಎಲ್ಲಾ ಮಕ್ಕಳು ಪಾಠದ ಜೊತೆಗೆ ಜೀವನ ಮೌಲ್ಯ ಗಳನ್ನು ಕಲಿಯುತ್ತಾರೆ. ಜೀವನ ಮೌಲ್ಯಗಳಿಂದ ಮಕ್ಕಳಿಗೆ ಕಷ್ಟಗಳು ಬರುವುದಿಲ್ಲ ಬಂದರೂ, ಆತ್ಮವಿಶ್ವಾಸದಿಂದ ಕಷ್ಟಗಳನ್ನು ಎದುರಿಸುತ್ತಾರೆ. ನಾವು ಯಾವತ್ತೂ ಆಶಾವಾದಿಗಳಾಗಬೇಕು ಸೋಲು-ಗೆಲುವನ್ನು ಸಮಚಿತ್ತದಿಂದ ನೋಡಬೇಕು. ಮಕ್ಕಳು ಎತ್ತರಕ್ಕೆ ಬೆಳೆದಂತೆ ಹೆತ್ತವರ ಆತ್ಮಾನಂದ ಜಾಸ್ತಿ ಆಗುತ್ತೆ, ಪ್ರೀತಿಯಿಂದ ಮಕ್ಕಳಿಗೆ ಮೊಬೈಲ್ ಕೊಡಿ ಆದರೆ ನಿಯಂತ್ರಣ ಹೆತ್ತವರ ಕೈಯಲ್ಲಿರಲಿ, ಮಕ್ಕಳ ನಡುವೆ ಹೋಲಿಕೆ ಬೇಡ, ದೋಷ ಗುರುತಿಸುವುದು ಬೇಡ, ಬದಲಾಗಿ ಮಕ್ಕಳ ಒಳ್ಳೆಯ ವಿಚಾರ ಗುರಿತಿಸೋಣ. ಭಾರತ ದೇವ ಭೂಮಿ ಜ್ಞಾನದ ಬೆಳಕು ಶ್ರೀಕೃಷ್ಣನ ಗುರುವಿನ ಹೆಸರಿರುವ ಸಾಂದೀಪನಿ ಶಾಲೆಗೆ ಸೇರಿದ ಮಕ್ಕಳು ಭಾರತೀಯ ಸಂಸ್ಕೃತಿ, ಜೀವನ ಮೌಲ್ಯ, ಪಠ್ಯದ ಜೊತೆಗೆ ಕಲಿತುಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುವ ಕನಸು ಕಾಣೋಣ ಎಂದ ಅವರು ಶಿಕ್ಷಕರ-ವಿದ್ಯಾರ್ಥಿಗಳ-ಪೋಷಕರ ಕೊಂಡಿ ಹೇಗಿರಬೇಕು ಎಂದು ಮನಪೂರ್ವಕವಾಗಿ ತಿಳಿಸಿದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಅವರು ಮಾತಾನಾಡಿ, ನಮ್ಮ ಶಾಲೆಯ ಮಕ್ಕಳು ಸಮಾಜಕ್ಕೆ ಕೊಡುಗೆಯಾಗಬೇಕು ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ನಮ್ಮ ಸ್ವಂತ ಮಕ್ಕಳೆoದು ತಿಳಿದುಕೊಂಡಿದ್ದು ಅವರ ಕೀರ್ತಿ ಹೆಚ್ಚಿಸಲು ನಾವು ನೀವೆಲ್ಲಾ ಪ್ರಯತ್ನಪಡಬೇಕು. ಶ್ರೀ ಕೃಷ್ಣನಂತಹ ಮಕ್ಕಳು ನಿಮ್ಮದಾಗಲಿ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ಕಾರ್ಯದರ್ಶಿಗಳಾದ  ಕೃಷ್ಣಪ್ರಸಾದ್ ಕೆದಿಲಾಯ, ಆಡಳಿತ ಮಂಡಳಿಯ ಸದಸ್ಯ ಹರೀಶ್ ಪುತ್ತೂರಾಯ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಪೋಷಕರು ಹಾಗೂ ಶಿಕ್ಷಕ – ಶಿಕ್ಷಕೇತರ ವೃಂದ  ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಪ್ರಸನ್ನ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಕಿರುನೋಟ  ಹಾಗೂ ಶಿಕ್ಷಕರನ್ನು ಪೋಷಕ ವೃಂದದವರಿಗೆ ಪರಿಚಯಿಸಿದರು. ಶಾಲಾ ಪೋಷಕರಾದ ಡಾ ನರಸಿಂಹ ಶರ್ಮ ಕಾನಾವು ಅವರು ಅತಿಥಿಗಳ ಮಾತನ್ನು ಶ್ಲಾಘಿಸುತ್ತಾ ಶಾಲೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಸಂಸ್ಥೆಯ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ ಸ್ವಾಗತಿಸಿ, ಉಷಾ.ಬಿ ಪ್ರಾರ್ಥಿಸಿದರು. ನೀತು ನಾಯಕ್ ಡಿ ಕಾರ್ಯಕ್ರಮ ನಿರೂಪಿಸಿ, ಪ್ರಶಾಂತಿ. ಪಿ ವಂದಿಸಿದರು.

LEAVE A REPLY

Please enter your comment!
Please enter your name here