ಉಪ್ಪಿನಂಗಡಿ-ಹಿರೇಬಂಡಾಡಿ ರಸ್ತೆಯಲ್ಲಿ ಗುಡ್ಡ ಜರಿದು ರಸ್ತೆಗೆ ಬಿದ್ದ ಮಣ್ಣು – ತಿಂಗಳು ಕಳೆದರೂ ತೆರವಾಗಿಲ್ಲ | ವಾಹನ ಸಂಚಾರಕ್ಕೆ ತೊಂದರೆ

0

ಹಿರೇಬಂಡಾಡಿ: ಉಪ್ಪಿನಂಗಡಿ-ಹಿರೇಬಂಡಾಡಿ ರಸ್ತೆಯ ನೂಜಿ, ದಾಸರಮೂಲೆ ಹಾಗೂ ಇನ್ನಿತರ ಕಡೆಗಳಲ್ಲಿ ಗುಡ್ಡ ಜರಿದು ಮಣ್ಣು ರಸ್ತೆಗೆ ಬಿದ್ದು 1 ತಿಂಗಳು ಕಳೆದರೂ ತೆರವುಗೊಳಿಸಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

1 ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಹಿರೇಬಂಡಾಡಿ-ಉಪ್ಪಿನಂಗಡಿ ರಸ್ತೆಯ ನೂಜಿ, ದಾಸರಮೂಲೆ ಹಾಗೂ ಇನ್ನಿತರ ಕಡೆಗಳಲ್ಲಿ ಗುಡ್ಡ ಜರಿದು ಮಣ್ಣು ಗಿಡ ಗಂಟಿ ಸಮೇತ ರಸ್ತೆಗೆ ಬಿದ್ದಿದೆ. ಇದರಿಂದಾಗಿ ರಸ್ತೆ ಚರಂಡಿಯೂ ಮುಚ್ಚಿಹೋಗಿದೆ. ಸದ್ರಿ ರಸ್ತೆಯಲ್ಲಿ ದಿನ ನಿತ್ಯ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿವೆ. ಉಪ್ಪಿನಂಗಡಿ, ಪುತ್ತೂರು ಹಾಗೂ ಇತರ ಕಡೆಗಳಿಗೆ ಹೋಗುವ ನೂರಾರು ಶಾಲಾ ಮಕ್ಕಳು ಓಡಾಟ ಮಾಡುತ್ತಾರೆ. ರಸ್ತೆಗೆ ಮಣ್ಣು ಬಿದ್ದಿರುವುದರಿಂದ ಎಲ್ಲರಿಗೂ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ದಾಸರಮೂಲೆ ಎಂಬಲ್ಲಿ ಗುಡ್ಡ ಜರಿದು ಬಿದ್ದ ಮಣ್ಣು ಅರ್ಧ ರಸ್ತೆಯನ್ನೇ ಆವರಿಸಿದೆ. ಇಲ್ಲಿ ಏಕಕಾಲದಲ್ಲಿ ಎರಡು ವಾಹನಗಳು ಬಂದಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ.

ರಸ್ತೆಯಲ್ಲೇ ಹರಿಯುವ ನೀರು:
ಉಪ್ಪಿನಂಗಡಿ-ಹಿರೇಬಂಡಾಡಿ ರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲ. ಗುಡ್ಡ ಜರಿದು ಮಣ್ಣು ಚರಂಡಿಗೆ ಬಿದ್ದಿರುವುದರಿಂದ ಚರಂಡಿ ಸಹ ಬ್ಲಾಕ್ ಆಗಿದೆ. ಇದರಿಂದಾಗಿ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಕೆಲವು ಕಡೆಗಳಲ್ಲಿ 1 ಅಡಿಗೂ ಹೆಚ್ಚು ನೀರು ನಿಂತಿದೆ. ವೇಗವಾಗಿ ಹೋಗುವ ವಾಹನಗಳು ನೀರಿನ ಮೇಲೆಯೇ ಸಂಚಾರ ಮಾಡುವುದರಿಂದ ಕೆಸರು ನೀರು ಶಾಲಾ ಮಕ್ಕಳು, ಸಾರ್ವಜನಿಕರ ಮೇಲೆಯೇ ಬೀಳುತ್ತಿದೆ. ಇದರಿಂದ ಮಕ್ಕಳು ಶಾಲೆಗೆ ಹೋಗದೆ ಮನೆಗೆ ಹೋಗುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಸದ್ರಿ ರಸ್ತೆಯು ಲೋಕೋಪಯೋಗಿ ರಸ್ತೆಯಾಗಿ ಮೇಲ್ದರ್ಜೆಗೇರಿದ್ದು ಇಲಾಖೆಯವರು ಈ ಬಗ್ಗೆ ಗಮನಹರಿಸಿ ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸಿ, ಸಮರ್ಪಕ ಚರಂಡಿ ವ್ಯವಸ್ಥೆ ಮಾಡುವಂತೆ ವಾಹನ ಸವಾರರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here