ಪುತ್ತೂರು: ಕಳೆದ ಆರು ವರ್ಷಗಳಿಂದ ಪುತ್ತೂರು ಕಾವು ಲಯನ್ಸ್ ಕ್ಲಬ್ ಉತ್ತಮ ರೀತಿಯಲ್ಲಿ ಮುಂದುವರೆಯುತ್ತಿದೆ ಮಾತ್ರವಲ್ಲ ಈ ಕ್ಲಬ್ ಮುಖಾಂತರ ಇನ್ನೂ ಮೂರು ಕ್ಲಬ್ ಗಳ ಉದಯಕ್ಕೆ ಕಾರಣವಾಗಿದೆ. ಶರೀರ, ಅಂತಸ್ತು, ಮಕ್ಕಳು, ಹಿತೈಷಿಗಳು ನಾವು ಸಾಯುವ ತನಕ ಮಾತ್ರ ಆದರೆ ನಮ್ಮಲ್ಲಿರುವ ಆತ್ಮವನ್ನು ಶುದ್ಧವಾಗಿಸಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಮುನ್ನೆಡೆಸಿಕೊಂಡು ಹೋದಾಗ ನಮ್ಮ ಜೀವನ ಫಲಪ್ರದವಾಗುತ್ತದೆ ಎಂದು ಅಂತರ್ರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಡಿ ಇದರ ಮಾಜಿ ಜಿಲ್ಲಾ ಗವರ್ನರ್ ಎಂಜೆಎಎಫ್ ಎಂ.ಅರುಣ್ ಶೆಟ್ಟಿರವರು ಹೇಳಿದರು.
ಜೂ.15ರಂದು ಸಂಜೆ ಕಾವು ಮುಖ್ಯ ರಸ್ತೆಯ ಸಮುದಾಯ ಭವನದಲ್ಲಿ ಅಂತರರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಡಿ, ರೀಜನ್ 4, ವಲಯ ಒಂದರ ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ೨೦೨೫-೨೬ರ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನವನ್ನು ನೆರವೇರಿಸಿ ಮಾತನಾಡಿದರು.



ಪ್ರಾಂತ್ಯದಲ್ಲಿಯೇ ಉತ್ತಮ ಕ್ಲಬ್ ಆಗಿ ಮುನ್ನೆಡೆಯಲಿ-ಸುದರ್ಶನ್ ಪಡಿಯಾರ್:
ಮುಖ್ಯ ಅತಿಥಿ ಹಾಗೂ ಚಾರ್ಟರ್ ನೈಟ್ನಲ್ಲಿ ಭಾಗವಹಿಸಿದ ಲಯನ್ಸ್ ನಿಯೋಜಿತ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್ ಮಾತನಾಡಿ, ಆಡಳಿತಾತ್ಮಕ ಹಾಗೂ ಸೇವೆಯ ಯಾವುದೇ ಕಾರ್ಯಕ್ರಮವು ಲಯನ್ಸ್ ಉತ್ತಮ ಸೇವೆ ನೀಡುತ್ತಿದೆ. ಕಾವು ಹೇಮನಾಥ ಶೆಟ್ಟಿಯವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದೊಂದಿಗೆ ಲಯನ್ಸ್ ಪುತ್ತೂರು ಕಾವು ಸಮಾಜಮುಖಿ ಕಾರ್ಯಕ್ರಮಗಳ ನಡುವೆ ಮತ್ತೂ ಮೂರು ಕ್ಲಬ್ ಅನ್ನು ಪ್ರಾಯೋಜಿಸಿದೆ. ಈ ಕ್ಲಬ್ ಸಮಾಜದಲ್ಲಿ ಮಾದರಿ ಆಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಇದು ಪ್ರಾಂತ್ಯದಲ್ಲಿಯೇ ಉತ್ತಮ ಕ್ಲಬ್ ಆಗಿ ಮುನ್ನೆಡೆಯಲಿ ಎಂದರು.

ಸಂಘ-ಸಂಸ್ಥೆಗಳಿರುವುದು ವ್ಯಾಪಾರಕ್ಕಾಗಿ, ವ್ಯವಹಾರಕ್ಕಾಗಿ ಅಲ್ಲ-ಹೇಮನಾಥ ಶೆಟ್ಟಿ:
ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ಸ್ಥಾಪಕಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ದೊಡ್ಡವರು, ಶ್ರೀಮಂತರಿರುವ ನಗರಗಳಲ್ಲಿ ಕ್ಲಬ್ಗಳು ಉಳಿದುಕೊಳ್ಳುತ್ತದೆ ಎಂಬ ಭಾವನೆ ಎಲ್ಲರಲ್ಲೂ ಇದೆ ಆದರೆ ಕೃಷಿಕರಿರುವ ಗ್ರಾಮೀಣ ಪ್ರದೇಶದಲ್ಲೂ ಜನತೆಗೆ ಸೇವೆಯನ್ನು ನೀಡುವ ಕ್ಲಬ್ಗಳು ಇವೆ ಎನ್ನುವುದನ್ನು ನಾವು ಮನಗಾಣಬೇಕು. ಕ್ಲಬ್ನಲ್ಲಿನ ಕೆಲವು ಗೊಂದಲಗಳಿಂದಾಗಿ ಮತ್ತು ಇದರಲ್ಲಿ ನಮಗೆ ಏನು ಲಾಭವಿದೆ ಎಂಬ ಚಿಂತನೆಯೊಂದಿಗೆ ಜಿಲ್ಲೆಯಲ್ಲಿ ಹಲವು ಕ್ಲಬ್ಗಳು ಮುಚ್ಚಿ ಹೋಗಿವೆ. ನಾವು ನಮ್ಮ ವೈಯಕ್ತಿಕ ಲಾಭಕ್ಕೆ ಚಿಂತಿಸಿದರೆ ಪ್ರಯೋಜನವಿಲ್ಲ, ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದು ಮುಖ್ಯ ಜೊತೆಗೆ ನಾವು ಪ್ರತಿಷ್ಠಿತ ಕ್ಲಬ್ನಲ್ಲಿ ಸದಸ್ಯರಾಗುವುದೇ ನಮಗೆ ಹೆಮ್ಮೆಯಾಗಿದೆ. ಮನುಷ್ಯ ಸಂಘ ಜೀವಿ, ಸ್ನೇಹ ಜೀವಿಯಾಗಿದ್ದು ಸಂಘ ಸಂಸ್ಥೆಗಳಿರುವುದು ವ್ಯಾಪಾರಕ್ಕಾಗಿ ಅಥವಾ ವ್ಯವಹಾರಕ್ಕಾಗಿ ಅಲ್ಲ ಎಂದರು.

ಪುತ್ತೂರು ಆಸ್ಪತ್ರೆಗೆ ಅಗತ್ಯ ಸಲಕರಣೆಗಳ ಸಿಗುವಲ್ಲಿ ಜಿಲ್ಲೆಯ ಸಹಕಾರವಿರಲಿ-ಪಾವನಾರಾಮ:
ಲಯನ್ಸ್ ರೀಜನ್ ಚೇರ್ಪರ್ಸನ್ ಪಾವನಾರಾಮ ಬಿ. ಮಾತನಾಡಿ, ಈ ಗ್ರಾಮೀಣ ಪ್ರದೇಶದಲ್ಲಿ ಕೃಷಿಕರಿಗೆ ಬೆಳೆಯ ಅಡಚಣೆಯಿದ್ದರೂ ಸೇವಾ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿರುವುದು ಶ್ಲಾಘನೀಯ. ಕ್ಲಬ್ ಸದಸ್ಯರುಗಳ ನಡುವೆ ಪರಸ್ಪರ ನಂಬಿಕೆ, ವಿಶ್ವಾಸಾರ್ಹ ಮನೋಭಾವನೆಯಿದ್ದಾಗ ಸೇವಾ ಚಟುವಟಿಕೆಗಳು ಯಶಸ್ವಿಯಾಗುತ್ತದೆ. ಪುತ್ತೂರು ಆಸ್ಪತ್ರೆಗೆ ಬೇಕಾದ ಅಗತ್ಯ ಸಲಕರಣೆಗಳ ಸಿಗುವಲ್ಲಿ ಜಿಲ್ಲೆಯ ಸಹಕಾರವಿರಲಿ ಎಂದರು. ಗ್ರಾಮೀಣ ಪ್ರದೇಶದಲ್ಲಿ ಸೇವಾ ಮನೋಭಾವನೆಯನ್ನು ಜನತೆಗೆ ತೋರಿಸಿಕೊಟ್ಟಿದ್ದಾರೆ-ದಯಾನಂದ ರೈ:
ಲಯನ್ಸ್ ವಲಯಾಧ್ಯಕ್ಷ ದಯಾನಂದ ರೈ ಮನವಳಿಕೆ ಮಾತನಾಡಿ, ಕಳೆದ ಆರು ವರ್ಷಗಳಲ್ಲಿ ಲಯನ್ಸ್ ಕಾವು ಕ್ಲಬ್ ಜಿಲ್ಲೆಯಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಹೆಸರು ಗಳಿಸಿದೆ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲಿ ಸೇವಾ ಮನೋಭಾವನೆಯನ್ನು ಜನತೆಗೆ ತೋರಿಸಿಕೊಟ್ಟಿದ್ದಾರೆ ಎಂದರು.

ಸದಸ್ಯರ ಸಹಕಾರದೊಂದಿಗೆ ಸೇವಾ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ-ಜಗನ್ನಾಥ ರೈ:
ಲಯನ್ಸ್ ಕ್ಲಬ್ ಪುತ್ತೂರು ಕಾವು ನಿಕಟಪೂರ್ವ ಅಧ್ಯಕ್ಷ ಜಗನ್ನಾಥ್ ರೈ ಗುತ್ತು ಮಾತನಾಡಿ, ಕ್ಲಬ್ ಮುನ್ನೆಡೆಸಲು ಒಬ್ಬರಿಂದ ಸಾಧ್ಯವಿಲ್ಲ. ನಮ್ಮ ಕ್ಲಬ್ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಸಾಧ್ಯವಾದಷ್ಟರ ಮಟ್ಟಿಗೆ ಸೇವಾ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ. ಕ್ಲಬ್ ಆರಂಭವಾದಾಗಿನಿಂದ ಇಲ್ಲಿಯವರೆಗೆ ಎಲ್ಲಾ ವಿಭಾಗಗಳಲ್ಲಿ ನಮ್ಮ ಕ್ಲಬ್ ಟಾಪ್ ಹತ್ತರಲ್ಲಿದ್ದೇವೆ ಎಂದರು.

ಸೇವಾ ಕೊಡುಗೆ:
ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 20 ಕುರ್ಚಿಗಳ ಚೆಕ್ ಅನ್ನು ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಶಾಲಾ ಎಸ್ಡಿಎಂಸಿ ಸದಸ್ಯ ಯೋಗೀಶ್ ಕಾವುರವರಿಗೆ ಹಸ್ತಾಂತರಿಸಲಾಯಿತು.
ನಿಯೋಜಿತ ರೀಜನ್ ಚೇರ್ಪರ್ಸನ್ ಆನಂದ್ ರೈಯವರು ಜಿಲ್ಲಾ ಗವರ್ನರ್ ಬಿಡುಗಡೆಗೊಳಿಸಿದ ಲಯನ್ಸ್ ಪಿನ್ ಅನ್ನು ನೂತನ ಪದಾಧಿಕಾರಿಗಳಿಗೆ ತೊಡಿಸಿದರು. ಪದ ಪ್ರದಾನ ಅಧಿಕಾರಿ ಅರುಣ್ ಶೆಟ್ಟಿಯವರ ಪತ್ನಿ ಇಂದಿರಾ ಶೆಟ್ಟಿ, ಮುಖ್ಯ ಅತಿಥಿ ಸುದರ್ಶನ್ ಪಡಿಯಾರ್ರವರ ಪತ್ನಿ ಸಾಯಿಗೀತಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಮೇಶ್ ರೈ ಸಾಂತ್ಯಪ್ರಾರ್ಥಿಸಿದರು. ದಿನೇಶ್ ಗೌಡರವರು ಧ್ವಜ ವಂದನೆಯನ್ನು, ಮೋಹನ್ದಾಸ್ ಶೆಟ್ಟಿಯವರು ನೀತಿ ಸಂಹಿತೆಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ವಿಶ್ವ ಶಾಂತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ್ ರೈ ಗುತ್ತು ಸ್ವಾಗತಿಸಿ, ನೂತನ ಕಾರ್ಯದರ್ಶಿ ದೇರಣ್ಣ ರೈ ವಂದಿಸಿದರು. ಅನಿತಾ ಹೇಮನಾಥ ಶೆಟ್ಟಿಯವರು ಪದ ಪ್ರದಾನ ಅಧಿಕಾರಿಯನ್ನು, ದಿವ್ಯನಾಥ ಶೆಟ್ಟಿಯವರು ನೂತನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಯವರ ಪರಿಚಯವನ್ನು, ಸುರೇಖಾ ಶೆಟ್ಟಿಯವರು ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು. ಡಾ.ರಂಜಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಮಾಜದ ಸ್ವಾಸ್ಥ್ಯ ನಮ್ಮ ಜವಾಬ್ದಾರಿ..
ಲಯನ್ಸ್ ಪುತ್ತೂರು ಕಾವು ಇದರ ಸ್ಥಾಪಕ ಸದಸ್ಯನಾಗಿ ಹಾಗೂ ಪ್ರಸ್ತುತ ಅಧ್ಯಕ್ಷನಾಗಿ ಕ್ಲಬ್ ನ ಸೇವೆ ಮಾಡುವುದು ನನ್ನ ಭಾಗ್ಯ. ಕ್ಲಬ್ ಗೆ ಸೇರಿದಾಗ ಮಾತ್ರ ಅದರ ಮಹತ್ವ ಹಾಗೂ ಬೆಲೆ ತಿಳಿಯುವುದು. ಗ್ರಾಮೀಣ ಪ್ರದೇಶದಲ್ಲಿ ಇರುವುದು ಬಹುತೇಕ ಕೃಷಿಕರಾಗಿದ್ದರೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಖುಶಿ ಎನಿಸುತ್ತದೆ.ಹಣಕ್ಕೋಸ್ಕರ ಕ್ಲಬ್ ಇರುವುದಲ್ಲ, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ನಮ್ಮ ಜವಾಬ್ದಾರಿ ಏನೂಂತ ತೋರಿಸಿಕೊಡುತ್ತದೆ. ಹುದ್ದೆಯನ್ನು ಸ್ವೀಕರಿಸಿದ ಮೇಲೆ ಗೊತ್ತಾಗುವುದು ಅದರ ಅನುಭವ.
-ಕೆ.ಇಬ್ರಾಹಿಂ ಹಾಜಿ,
ನೂತನ ಅಧ್ಯಕ್ಷರು, ಲಯನ್ಸ್ ಕ್ಲಬ್ ಪುತ್ತೂರು-ಕಾವು
ಸನ್ಮಾನ..
ಪೆನ್ಸಿಲ್ ಆರ್ಟ್, ಆಯಿಲ್ ಪೈಟಿಂಗ್ ಇತ್ಯಾದಿ ಕಲೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು, ಜೊತೆಗೆ ತನ್ನ ಕಲಾ ಪ್ರತಿಭೆಯು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ರೆಕಾರ್ಡ್ನಲ್ಲಿ ಸೇರ್ಪಡೆಗೊಂಡಿರುವ ಕಲಾ ಪ್ರತಿಭೆ, ಆನಾಜೆ ಮನೋಜ್ರವರ ಪತ್ನಿ ಶ್ರೀಮತಿ ಪೂಜಾ ಬೋರ್ಕರ್, ಹರ್ಡಲ್ಸ್ನಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಪುಣ್ಯಶ್ರೀ ಪಿ., ಎನ್ಎಮ್ಎಮ್ಎಸ್ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿರುವ ಚಿರಾಯು ರೈ, ವಿಷ್ಣುಪ್ರಿಯಾ, ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿನೀತ್ ಕೆ.ವಿ, ಪದಪ್ರದಾನ ಅಧಿಕಾರಿ ಎಲ್.ಅರುಣ್ ಶೆಟ್ಟಿ ದಂಪತಿ, ಮುಖ್ಯ ಅತಿಥಿ ಸುದರ್ಶನ್ ಪಡಿಯಾರ್ ದಂಪತಿ, ಕಳೆದ ವರ್ಷ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಅಧ್ಯಕ್ಷ ಜಗನ್ನಾಥ್ ರೈ ಗುತ್ತು, ಕಾರ್ಯದರ್ಶಿ ದಿವೀಶ್ ರೈ, ಕೋಶಾಧಿಕಾರಿ ಕೆ.ಇಬ್ರಾಹಿಂ ಹಾಜಿರವರುಗಳನ್ನು ಸನ್ಮಾನಿಸಲಾಯಿತು. ಪೆನ್ಸಿಲ್ ಸ್ಕೆಚ್ ಮೂಲಕ ಬಿಡಿಸಿದ ಕಾವು ಹೇಮನಾಥ ಶೆಟ್ಟಿರವರ ಭಾವಚಿತ್ರವನ್ನು ಶ್ರೀಮತಿ ಪೂಜಾ ಬೋರ್ಕರ್ರವರು ಈ ಸಂದರ್ಭದಲ್ಲಿ ಕಾವು ಹೇಮನಾಥ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಪದ ಪ್ರದಾನ..
ನೂತನ ಅಧ್ಯಕ್ಷ ಕೆ.ಇಬ್ರಾಹಿಂ ಹಾಜಿ, ಕಾರ್ಯದರ್ಶಿ ದೇವಣ್ಣ ರೈ, ಕೋಶಾಧಿಕಾರಿ ರಮೇಶ್ ಆಳ್ವ, ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ರೈ ಗುತ್ತು, ಪ್ರಥಮ ಉಪಾಧ್ಯಕ್ಷ ಮೋಹನದಾಸ ಶೆಟ್ಟಿ, ದ್ವಿತೀಯ ಉಪಾಧ್ಯಕ್ಷ ಅಮ್ಮು ರೈ ಅಂಕೊತ್ತಿಮಾರ್, ತೃತೀಯ ಉಪಾಧ್ಯಕ್ಷ ಕುಶಾಲಪ್ಪ ಗೌಡ, ಎಲ್.ಸಿ.ಐ.ಎಫ್ ಸಂಯೋಜಕ ದಿವ್ಯನಾಥ ಶೆಟ್ಟಿ, ಸರ್ವೀಸ್ ಚೇರ್ ಪರ್ಸನ್ ರಮೇಶ್ ರೈ ಸಾಂತ್ಯ, ಕ್ಲಬ್ ಆಡಳಿತಾಧಿಕಾರಿ ಅನಿತಾ ಹೇಮನಾಥ ಶೆಟ್ಟಿ, ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಶನ್ ಸಿ.ಎಚ್ ಅಝೀಝ್, ಕ್ಲಬ್ ಪಿ.ಆರ್.ಒ ದಿವೀಶ್ ರೈ ದೆಂಬಲೆ, ಕ್ಲಬ್ ಮಾರ್ಕೆಟಿಂಗ್ ಕೋ-ಆರ್ಡಿನೇಟರ್ ಇಸ್ಮಾಯಿಲ್ ಹಾಜಿ, ಮೆಂಬರ್ಸ್ಶಿಪ್ ಚೇರ್ಪರ್ಸನ್ ಅಬ್ದುಲ್ ಖಾದರ್ ಹಾಜಿ, ಕ್ಲಬ್ ಟೇಮರ್ ಸುಭಾಶ್ಚಂದ್ರ ರೈ ಕರ್ನೂರು, ಕ್ಲಬ್ ಟೇಲ್ ಟ್ವಿಸ್ಟರ್ ಕಾರ್ತಿಕ್ ಆಳ್ವ, ನಿರ್ದೇಶಕರಾದ ಅಶೋಕ್ ಶೆಟ್ಟಿ ಕೆ.ಸಿ, ಉದನೇಶ್ವರ ಭಟ್, ಮಹೇಶ್ ರೈ ಅಂಕೊತ್ತಿಮಾರ್, ಜಯಪ್ರಕಾಶ್ ರೈ ನೂಜಿಬೈಲು, ದಿನೇಶ್ ಗೌಡ, ಮೋನಪ್ಪ ಪೂಜಾರಿ, ಅಬ್ದುಲ್ ರಹಿಮಾನ್ ಬಿ.ಕೆ, ಸುರೇಖಾ ಡಿ.ಶೆಟ್ಟಿ, ಶ್ರೀಶ ಕುಮಾರ್, ಡಾ.ವಾಸ್ತವಿ ಶೆಟ್ಟಿ, ಡಾ.ರಂಜಿತಾ ಶೆಟ್ಟಿ, ಸುಬ್ರಾಯ ಬಲ್ಯಾಯ, ಸವಿತಾ ಅಶೋಕ್ ಶೆಟ್ಟಿ, ಬಿ.ಪಾವನರಾಮರವರಿಗೆ ಪದಪ್ರದಾನ ಅಧಿಕಾರಿ ಎಲ್.ಅರುಣ್ ಶೆಟ್ಟಿರವರು ಪದಪ್ರದಾನವನ್ನು ನೆರವೇರಿಸಿದರು.