ಪುತ್ತೂರು: ಜಿಲ್ಲೆಯಾದ್ಯಂತ ಕೆಂಪು ಕಲ್ಲು, ಮರಳು, ಜಲ್ಲಿ, ಕೊರತೆಯಿಂದಾಗಿ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುಂತಾಗಿದೆ. ಮನೆ ನಿರ್ಮಾಣದಲ್ಲಿ ತೊಡಗಿಸಿಕೊಂಡವರು ಸಾಮಗ್ರಿಗಳ ಕೊರತೆ
ಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ದಾರಿ ಕಾಣದಂತಾಗಿದ್ದಾರೆ. ಮಾತ್ರವಲ್ಲ, ಕಟ್ಟಡ ಕಾರ್ಮಿಕರು ಸೇರಿದಂತೆ ಕಟ್ಟಡ ಸಾಮಗ್ರಿಗಳ ಮಳಿಗೆಯ ಮಾಲೀಕ, ಕಾರ್ಮಿಕರಿಗೂ ಇದರಿಂದಾಗಿ ಕೆಲಸವಿಲ್ಲದಂತಾಗಿದ್ದು, ಜೀವನದ ದಾರಿ ದುಸ್ತರವಾಗಿದೆ. ನಿಗದಿತ ಅವಧಿಯಲ್ಲಿ ನಡೆಯಬೇಕಾಗಿದ್ದ ಸರಕಾರಿ ವಲಯದ ಕಾಮಗಾರಿಗಳು ಸಾಮಾಗ್ರಿಗಳ ಕೊರತೆಯಿಂದಾಗಿ ಅರ್ಧಕ್ಕೆ ನಿಂತಿದ್ದು, ಇದನ್ನು ನಂಬಿಕೊಂಡಿರುವ ಕೂಲಿ ಕಾರ್ಮಿಕ ವಾಹನ ಚಾಲಕ-ಮಾಲಕರು ಕಂಗಾಲಾಗಿದ್ದಾರೆ. ಮಳೆಗಾಲದಲ್ಲಿ ಕಟ್ಟಡ ನಿರ್ಮಾಣದ ಕೆಲಸಗಳು ನಡೆಯದೆ ಇರುವ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕಟ್ಟಡ ಕಾರ್ಮಿಕರು ಸಹಜವಾಗಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಕಳೆದ ಬಾರಿಯ ಅಡಿಕೆ ಫಸಲಿನಲ್ಲಿ ವ್ಯತ್ಯಯವಾಗಿದ್ದು, ಅಡಿಕೆ ಬೆಳೆಗಾರರು ಅಪಾರ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಕೃಷಿ ಕಾರ್ಮಿಕರ ಮೇಲೂ ಇದು ಪರಿಣಾಮ ಬೀರಿದೆ. ಇದೇ ರೀತಿ ಮುಂದುವರಿದರೆ ಕೃಷಿ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರ ಬದುಕು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಲಿದೆ.

ಗಂಭೀರವಾಗಿರುವ ಈ ಸಮಸ್ಯೆಯ ಕಡೆ ಸರಕಾರ ಗಮನಹರಿಸಬೇಕಾಗಿದ್ದು, ಸಂಬಂಧಪಟ್ಟ ಇಲಾಖೆಗಳಿಗೆ ಈಗಿರುವ ಕಠಿಣ ಕಾನೂನನ್ನು ಸಡಿಲಗೊಳಿಸುವ ಮೂಲಕ ತಲೆದೋರಿರುವ ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರವನ್ನು ಒದಗಿಸುವಂತೆ ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ ಎಂದು ಜಿಲ್ಲಾ ಕಾಂಗ್ರೆಸ್ ನ ಕಾರ್ಮಿಕ ಘಟಕದ ಕಾರ್ಯದರ್ಶಿ ಅಬೂಬಕ್ಕರ್ ಮುಳಾರ್ ಸರಕಾರಕ್ಕೆ ಮನವಿ ಮಾಡಿದ್ದಾರೆ.