ಮಂಗಳೂರು ವಲಯದಿಂದ ಕರ್ನಾಟಕದ ರಾಜಸ್ವಕ್ಕೆ ಅತಿ ದೊಡ್ಡ ಕೊಡುಗೆ-ದಿನೇಶ್ ಗುಂಡೂರಾವ್
ಭಾಷಣದಲ್ಲಿ ಹೇಳಿದ್ದನ್ನು ಉಳಿಸುವ ಕೆಲಸ ಆಗಿದೆ-ಅಶೋಕ್ ಕುಮಾರ್ ರೈ
ಪುತ್ತೂರು: ಎಲ್ಲಾ ಕ್ಷೇತ್ರಕ್ಕೂ ಸಮಾನ ಅನುದಾನ ಹಂಚಿಕೆ ಮಾಡಿ-ಭಾಗೀರಥಿ ಮುರುಳ್ಯಪುತ್ತೂರು:ಜಿ.ಎಸ್.ಟಿ ಸಂಗ್ರಹದಲ್ಲಿ ದೇಶದಲ್ಲೇ ಕರ್ನಾಟಕ ನಂ.2ನೇ ಸ್ಥಾನದಲ್ಲಿದೆ.ಹಾಗಾಗಿ ದೇಶದ ಬೆಳವಣಿಗೆಯಲ್ಲಿ ನಮ್ಮ ಕೊಡುಗೆ ಅಪಾರವಿದೆ.ಅದೇ ರೀತಿ ಕರ್ನಾಟಕದ ರಾಜಸ್ವಕ್ಕೆ ಅತೀ ದೊಡ್ಡ ಕೊಡುಗೆ ಮಂಗಳೂರು ವಲಯ ನೀಡುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿ, ಲೆಕ್ಕಪರಿಶೋಧನೆ ಕಚೇರಿ ಹಾಗು ಜಾರಿ ವಿಭಾಗದ ಕಚೇರಿಗಳನ್ನೊಳಗೊಂಡು ದರ್ಬೆಯಲ್ಲಿ ನಿರ್ಮಾಣಗೊಂಡಿರುವ ‘ವಾಣಿಜ್ಯ ತೆರಿಗೆ ಭವನ’ ವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಕರ್ನಾಟಕಕ್ಕೆ ಕಳೆದ ಹಲವು ವರ್ಷಗಳಲ್ಲಿ ಬಹಳಷ್ಟು ಅನ್ಯಾಯವಾಗಿದೆ.ಈ ದೇಶದಲ್ಲಿ ಅತಿ ಹೆಚ್ಚು ಅನ್ಯಾಯವಾಗಿರುವ ರಾಜ್ಯ ಕರ್ನಾಟಕ.15ನೇ ಹಣಕಾಸು ಯೋಜನೆಯಲ್ಲಿ ಅನುದಾನ ಕಡಿಮೆ ನೀಡಿದ್ದಾರೆ.ಕೇಂದ್ರದ ಬಜೆಟ್ನಲ್ಲಿ ಘೋಷಣೆಯಾದ ಅನುದಾನವನ್ನೂ ಕೊಡಲಿಲ್ಲ.ಆರ್ಥಿಕ ಇಲಾಖೆ ಶಿಫಾರಸ್ಸು ಮಾಡಿದ ಅನುದಾನವನ್ನೂ ಕೊಡಲಿಲ್ಲ.ಹಾಗಾಗಿ ರಾಜ್ಯಕ್ಕೆ ಬಹಳ ದೊಡ್ಡ ಲುಕ್ಸಾನ್ ಆಗಿದೆ.ಪ್ರತಿ ವರ್ಷ ನಮಗೆ 16 ಸಾವಿರ ಕೋಟಿ ರೂಪಾಯಿ ಕೊರತೆ ಆಗುತ್ತಿದೆ.ಇವತ್ತು ನಾವು ಅದಕ್ಕೆ ಹೋರಾಟ ಮಾಡುತ್ತಿದ್ದೇವೆ. ನಮಗೆ ನ್ಯಾಯಯುತವಾದ ತೆರಿಗೆಯ ಹಣ ಕೊಡಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೊನ್ನೆ ದೆಹಲಿಗೆ ಹೋಗಿ ವಾದ ಮಾಡಿದ್ದಾರೆ ಎಂದರು.ಮಂಗಳೂರು ವಲಯದಲ್ಲಿ ನೋಡಿದಾಗ ರಾಜ್ಯದ ರಾಜಸ್ವಕ್ಕೆ ಅತಿ ದೊಡ್ಡ ಕೊಡುಗೆ ಬೆಂಗಳೂರು ಬಿಟ್ಟರೆ ಜಿಡಿಪಿಯಲ್ಲಿ 2ನೇ ಸ್ಥಾನದಲ್ಲಿ ಮಂಗಳೂರು ಇದೆ.ಮಂಗಳೂರು ವಿಭಾಗದಲ್ಲಿ 47,845 ತೆರಿಗೆ ಪಾವತಿದಾರರಿದ್ದಾರೆ.ಸರಕು ವಲಯದಲ್ಲಿ 35,556 ತೆರಿಗೆ ಪಾವತಿದಾರರಿದ್ದಾರೆ.ಸೇವಾ ವಲಯದಲ್ಲಿ 12,229 ಪಾವತಿದಾರರಿದ್ದಾರೆ.ಕರ್ನಾಟಕ ಸೇಲ್ಸ್ ಟ್ಯಾಕ್ಸ್ನಲ್ಲಿ 651 ಕೋಟಿ ರೂಪಾಯಿ, ವೃತ್ತಿ ತೆರಿಗೆಯಲ್ಲಿ 37.49 ಕೋಟಿ ರೂಪಾಯಿ ಪಾವತಿಯಾಗುತ್ತಿದೆ.ಮಂಗಳೂರಿಗೆ ಬಂಡವಾಳ ಹಾಕಿದರೆ ಇನ್ನೂ ಹೆಚ್ಚು ರಾಜಸ್ವ ಪಡೆಯಬಹುದು.ಈ ನಿಟ್ಟಿನಲ್ಲಿ ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು.ಕಾನೂನು ಸುವ್ಯವಸ್ಥೆ ಕಾಪಾಡಬೇಕು.ಸಹೋದರತ್ವ, ನೆಮ್ಮದಿ ಬೆಳೆಸಬೇಕು.ಈ ರೀತಿಯ ಬೆಳವಣಿಗೆ ಆದರೆ ಮಂಗಳೂರು ಬೆಳವಣಿಗೆ ಬಹುಶಃ ಯಾವ ಮಟ್ಟದಲ್ಲಿ ಹೋಗುತ್ತದೆ ಎಂಬುದನ್ನು ಊಹೆ ಮಾಡಲೂ ಸಾಧ್ಯವಿಲ್ಲ ಎಂದರು.
ಶಾಸಕರ ಪ್ರಯತ್ನದಿಂದ ಕಟ್ಟಡಕ್ಕೆ ಅನುದಾನ ಬಂದಿದೆ:
ಅನೇಕ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕೆಲಸ ಮಾಡಲು ಒಳ್ಳೆಯ ವಾತಾವರಣ ಇದ್ದಾಗ ಅವರಿಗೆ ಕೆಲಸ ಮಾಡಲು ಆಸಕ್ತಿ ಹೆಚ್ಚುತ್ತದೆ.ಕಟ್ಟಡ ಶಿಥಿಲಗೊಂಡು ವ್ಯವಸ್ಥೆ ಸರಿಯಿಲ್ಲದಿದ್ದರೆ ವ್ಯಕ್ತಿಯ ಉತ್ಸಾಹಕತೆ ಕಡಿಮೆ ಆಗುತ್ತದೆ.ಆ ವಾತಾವರಣ ಅವರನ್ನು ಕುಗ್ಗಿಸುತ್ತದೆ.ಈ ನಿಟ್ಟಿನಲ್ಲಿ ಒಳ್ಳೆಯ ಕಟ್ಟಡ ನಿರ್ಮಾಣ ಆಗುವುದು ಬಹಳ ಮುಖ್ಯ.ಕಾಲಮಿತಿಯೊಳಗೆ ಆಗಿರುವ ಈ ನೂತನ ಕಟ್ಟಡ ಬಹಳ ಹೆಮ್ಮೆಯ ವಿಚಾರ.ಶಾಸಕ ಅಶೋಕ್ ಕುಮಾರ್ ರೈ ಅವರು ಮುಖ್ಯಮಂತ್ರಿಯವರಲ್ಲಿ ಮಾತನಾಡಿ ಅನುಮೋದನೆ ತಂದ ಕಾರಣ ನೂತನ ಕಟ್ಟಡ ನಿರ್ಮಾಣ ಆಗಿದೆ. ಹಾಗಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದರು.ಅನೇಕ ಸಂದರ್ಭದಲ್ಲಿ ಸರಕಾರಿ ಯೋಜನೆಯ ಶಿಲಾನ್ಯಾಸದಲ್ಲಿ ಕಾಲಮಿತಿಯಲ್ಲಿ ಮುಗಿಸಲು ಸೂಚಿಸಿದರೂ ಬಹಳಷ್ಟು ಸಂದರ್ಭ ಸಮಯಕ್ಕೆ ಸರಿಯಾಗಿ ಆಗದೆ ಅದು ವಿಳಂಬವಾಗಿ ಕೊನೆಗೆ ಎಸ್ಆರ್ ರೇಟ್ ಬದಲಾವಣೆ ಆಗುವ ಸಾಧ್ಯತೆಯೂ ಇರುತ್ತದೆ.ಆದರೆ ಇಲ್ಲಿ ಅದು ಯಾವುದು ಕೂಡಾ ಆಗದೆ ಯಾವ ಮೊತ್ತಕ್ಕೆ ಈ ಕಟ್ಟಡಕ್ಕೆ ಅನುಮೋದನೆ ಸಿಕ್ಕಿದೆಯೋ ಅದಕ್ಕೆ ಅನುಗುಣವಾಗಿ ಶಿಲಾನ್ಯಾಸ ಆಗಿ ಕಟ್ಟಡ ಸರಿಯಾದ ಸಮಯಕ್ಕೆ ಮುಕ್ತಾಯವಾಗಿ ಉದ್ಘಾಟನೆ ಆಗುತ್ತಿರುವುದು ಶ್ಲಾಘನೀಯ ವಿಚಾರ.ಈ ಕಟ್ಟಡ ಪೂರ್ಣಗೊಳಿಸುವಲ್ಲಿ ನಿರ್ಮಿತಿ ಕೇಂದ್ರ ಮತ್ತು ಗುತ್ತಿಗೆದಾರರನ್ನು ಅಭಿನಂದಿಸುತ್ತೇನೆ ಎಂದ ದಿನೇಶ್ ಗುಂಡೂರಾವ್ ಅವರು, ಕಮರ್ಷಿಯಲ್ ಟ್ಯಾಕ್ಸ್ ಇಲಾಖೆ ಬಹಳ ಪ್ರಮುಖವಾದ ಇಲಾಖೆ.ಬೇರೆಲ್ಲ ಇಲಾಖೆಗಳು ನಮ್ಮಿಂದ ಖರ್ಚು ಮಾಡುವ ಇಲಾಖೆಗಳಾಗಿ, ನಮಗೆ ಅನುದಾನ ಬೇಕು ಎಂದು ಕೇಳುವವರು.ಆದರೆ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯನ್ನು ನಾವು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೋ ಅಷ್ಟು ಹಣ ಸರಕಾರಕ್ಕೆ ಸಿಗುವಂತಹ ಇಲಾಖೆ.ಈ ಹಣವನ್ನು ಸರಿಯಾದ ರೀತಿಯಲ್ಲಿ ಸಂಗ್ರಹ ಮಾಡಿದಾಗ ಹೆಚ್ಚು ಜನರಿಗೆ, ಸರಕಾರಕ್ಕೆ ಅನುದಾನ ಸಿಗುತ್ತದೆ ಎಂದರು.
ಭಾಷಣದಲ್ಲಿ ಹೇಳಿದ್ದನ್ನು ಉಳಿಸುವ ಕೆಲಸ ಆಗಿದೆ:
ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ವಾಣಿಜ್ಯ ತೆರಿಗೆಗೆ ಸಂಬಂಧಿಸಿ ಪುತ್ತೂರು, ಸುಳ್ಯ, ಕಡಬ ವ್ಯಾಪ್ತಿಯಲ್ಲಿ 140 ಕೋಟಿ ರೂಪಾಯಿ ತೆರಿಗೆಯನ್ನು ಸಂಗ್ರಹ ಮಾಡುತ್ತೇವೆ.ಅದರಲ್ಲಿ ಕೇಂದ್ರ ಸರಕಾರಕ್ಕೆ 70 ಕೋಟಿ ರೂಪಾಯಿ ಹೋಗುತ್ತದೆ.ರಾಜ್ಯ ಸರಕಾರಕ್ಕೆ 70 ಕೋಟಿ ರೂಪಾಯಿ ಹೋಗುತ್ತದೆ.ಸುಮಾರು 50,350 ತೆರಿಗೆದಾರರು ಈ ಭಾಗದಲ್ಲಿ ಇದ್ದಾರೆ.ಇವತ್ತು ತೆರಿಗೆ ಪಾವತಿಯಲ್ಲಿ ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿ ಇದೆ. ರಾಜ್ಯದಲ್ಲಿ ಮಂಗಳೂರು ವಲಯ 2ನೇ ಸ್ಥಾನದಲ್ಲಿದೆ. ಮೋದಿಯವರ ರಾಜ್ಯ ಅತ್ಯಂತ ಮುಂದುವರಿದ ರಾಜ್ಯ ಎಂದು ಹೇಳುತ್ತಾರೆ.ಆದರೆ ತೆರಿಗೆ ಪಾವತಿಯಲ್ಲಿ ಅತ್ಯಂತ ಮುಂದೆ ಇರುವುದು ಕರ್ನಾಟಕ ರಾಜ್ಯ.ಹಾಗಾಗಿ ಅನುದಾನಕ್ಕಾಗಿ ನಾವು ಮನವಿ ಮಾಡುತ್ತಾ ಬಂದಿದ್ದೇವೆ.ಚುನಾವಣೆಯ ಸಮಯದಲ್ಲಿ ನಾವು ಮೆಡಿಕಲ್ ಕಾಲೇಜನ್ನು ಈ ಭಾಗಕ್ಕೆ ತರುತ್ತೇವೆ ಎಂದು ಭಾಷಣ ಮಾಡಿದ್ದೆವು.ಈ ಭಾಷಣದಲ್ಲಿ ಹೇಳಿದ್ದನ್ನು ಉಳಿಸಿಕೊಳ್ಳುವುದು ಈಗಿನ ಕಾಲದಲ್ಲಿ ಬಹಳ ಕಡಿಮೆ. ಆದರೆ ನಾವು ಭಾಷಣ ಮಾಡಿದ್ದನ್ನು ನಮ್ಮ ರಾಜ್ಯ ಸರಕಾರ, ಉಸ್ತುವಾರಿ ಮಂತ್ರಿಗಳ ಮಾರ್ಗದರ್ಶನದ ಮೂಲಕ ಉಳಿಸುವ ಕೆಲಸ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿದೆ ಎಂದು ನಾನು ಎದೆ ತಟ್ಟಿ ಹೇಳುತ್ತೇನೆ.ಇಷ್ಟು ಮಾತ್ರವಲ್ಲ ಹಲವು ಅನುದಾನ ಬರುತ್ತಿದೆ.ಕುಡಿಯುವ ನೀರಿಗೆ 1 ಸಾವಿರದ 10 ಕೋಟಿ ರೂಪಾಯಿ ಬಂದಿದೆ.ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ಡ್ಯಾಮ್ ನಿರ್ಮಾಣಕ್ಕೆ 352 ಕೋಟಿ ರೂಪಾಯಿ ಅನುದಾನ ಬಂದಿದೆ ಎಂದರು.ಉದ್ಯಮಗಳು ಬೆಳೆಯಬೇಕಾದರೆ ತೆರಿಗೆ ಕಟ್ಟುವವರಿಗೆ ಆದ್ಯತೆ ಮೇರೆಗೆ ಅವಕಾಶ ಕೊಡಬೇಕು.ಇವತ್ತು ಬಿಂದು, ಜಿ.ಎಲ್ನಂತಹ ಸಂಸ್ಥೆಗಳು ದೊಡ್ಡ ಮೊತ್ತದ ತೆರಿಗೆ ಪಾವತಿ ಮಾಡುತ್ತಾರೆ ಬಿಂದು ಸಂಸ್ಥೆಯಿಂದ ದೊಡ್ಡ ಪ್ರಾಜೆಕ್ಟ್ಗೆ ಮನವಿಯನ್ನೂ ಮಾಡಿದ್ದಾರೆ ಎಂದ ಶಾಸಕರು,ದಕ್ಷಿಣ ಕನ್ನಡದಲ್ಲಿ ಎಲ್ಲವೂ ಇದೆ.ಆದರೆ ಜಾತಿ ಜಾತಿ ಎಂದು ಹೋರಾಡುವುದು ಒಂದು ಸಮಸ್ಯೆ ಬಿಟ್ಟರೆ ನಮ್ಮನ್ನು ಯಾರೂ ಎದುರು ಹಾಕುವವರಿಲ್ಲ.ನಮ್ಮ ವೈಮನಸ್ಸು ಬಿಟ್ಟರೆ ಅಭಿವೃದ್ಧಿ ಕೆಲಸ ಆಗಲಿದೆ ಎಂದರಲ್ಲದೆ, ಮುಂದಿನ ದಿನ ಎಸ್ಪಿ ಕಚೇರಿ ಪುತ್ತೂರಿಗೆ ಶಿಫ್ಟ್ ಆಗಲಿದೆ ಎಂದರು.
ಎಲ್ಲಾ ಕ್ಷೇತ್ರಕ್ಕೂ ಸಮಾನ ಅನುದಾನ ಹಂಚಿಕೆ ಮಾಡಿ:
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಆರ್ಥಿಕತೆಯ ಬದಲಾವಣೆಯಲ್ಲಿ ನಮ್ಮ ಭಾಗದಿಂದ ಅಧಿಕ ತೆರಿಗೆ ಸಂಗ್ರಹ ಆಗುತ್ತದೆ.ಇದು ನಮ್ಮ ಭಾಗದ ರಸ್ತೆಗಳಿಗೆ ಅನುದಾನದ ರೂಪದಲ್ಲಿ ಸಿಗಬೇಕು ಎಂದು ಹೇಳಿ, ಎಲ್ಲಾ ಕ್ಷೇತ್ರಕ್ಕೂ ಸಮಾನ ರೀತಿಯಲ್ಲಿ ಅನುದಾನ ಹಂಚಿಕೆ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ|ಎಂ.ಪಿ.ಶ್ರೀನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಲಕ್ಷ್ಮೀಪತಿ ನಾಯಕ್ ಸಚಿವರನ್ನು, ಹಿರಿಯ ಉಪ ಆಯುಕ್ತ ಬಾಲಚಂದ್ರ ಪುತ್ತೂರು ಶಾಸಕರನ್ನು, ಜಂಟಿ ಆಯುಕ್ತೆ ಸುಲಕ್ಷಣ ಸುಳ್ಯ ಶಾಸಕರನ್ನು, ಉಪ ಆಯುಕ್ತರು ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷರನ್ನು ಗೌರವಿಸಿದರು.ಕಟ್ಟಡದ ಕಾಮಗಾರಿ ನಡೆಸಿಕೊಟ್ಟ ನಿರ್ಮಿತಿ ಕೇಂದ್ರದ ಹರೀಶ್ ಮೆದು ಮತ್ತು ಗುತ್ತಿಗೆದಾರ ಆಶಿಕುದ್ದೀನ್ ಅಕ್ತರ್ ಅವರನ್ನು ಗೌರವಿಸಲಾಯಿತು.ದತ್ತಾಂಶ ಸಮೂಹ ಸಹಾಯಕಿ ಚಂಚಲ ಪ್ರಾರ್ಥಿಸಿದರು. ವೃಂದಗಾನ ನಾಡಗೀತೆ ಹಾಡಿದರು.ಮಂಗಳೂರು ವಾಣಿಜ್ಯ ಮತ್ತು ತೆರಿಗೆಗಳ ಜಂಟಿ ಆಯುಕ್ತ ವಿ.ಕುಮಾರ ಸ್ವಾಗತಿಸಿದರು.ವಾಣಿಜ್ಯ ತೆರಿಗೆ ಅಧಿಕಾರಿ ಮಂಜುನಾಥ್ ವಂದಿಸಿದರು.ವಾಣಿಜ್ಯ ತೆರಿಗೆಗಳ ಉಪ ಆಯುಕ್ತೆ ಹೇಮಲತಾ ಎನ್ ಕಾರ್ಯಕ್ರಮ ನಿರೂಪಿಸಿದರು.ಪ್ರಭಾರ ತಹಸೀಲ್ದಾರ್ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಸ್ವರ್ಣೋದ್ಯಮಿ ಜಿ.ಎಲ್.ಬಲರಾಮ ಆಚಾರ್ಯ, ಬಿಂದು ಸಂಸ್ಥೆಯ ಮಾಲಕ ಸತ್ಯಶಂಕರ್, ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜ, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರಾದ ನಿಹಾಲ್ ಪಿ ಶೆಟ್ಟಿ, ಅನ್ವರ್ ಖಾಸಿಂ, ತೆರಿಗೆ ಪಾವತಿದಾರರು, ತೆರಿಗೆ ಸಲಹೆಗಾರರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಪುತ್ತೂರಿನ ಶಾಸಕರು ಅಭಿವೃದ್ದಿಯ ಪರ
ಶಾಸಕ ಅಶೊಕ್ ಕುಮಾರ್ ರೈ ಅವರು ವಾಣಿಜ್ಯ ತೆರಿಗೆ ಭವನ ನಿರ್ಮಾಣಕ್ಕೆ ಅನುದಾನಕ್ಕಾಗಿ ಮುಖ್ಯಮಂತ್ರಿಯವರಲ್ಲಿ ಅನುಮೋದನೆ ಪಡೆದು ಅನುದಾನ ತರಿಸಿದ್ದಾರೆ.ಅವರು ಎಲ್ಲಾ ಕಡೆ ಅಭಿವೃದ್ಧಿಯ ಪರ.ಎಲ್ಲಾ ಮಂತ್ರಿಗಳಲ್ಲಿ, ಮುಖ್ಯಮಂತ್ರಿಗಳಲ್ಲಿ ಹೋಗಿ ಯಾವ ಯಾವ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆಯೋ ಅದನ್ನೆಲ್ಲ ಮಾಡಿಸಿಕೊಳ್ಳುವಲ್ಲಿ ಬಹಳ ಮುಂಚೂಣಿಯಲ್ಲಿದ್ದಾರೆ.ತನ್ನ ಕ್ಷೇತ್ರ, ಜಿಲ್ಲೆಗೆ ಒಳ್ಳೆಯದಾಗಬೇಕೆಂಬ ಉತ್ಸಾಹ ಅವರಲ್ಲಿದೆ.ಸಿಕ್ಕಿದ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದಾರೆ.ಅವರು ಮೊದಲ ಬಾರಿ ಶಾಸಕರಾದರೂ ಬಹಳ ಅನುಭವ ಇದ್ದವರು.ಇವತ್ತು ವೈದ್ಯಕೀಯ ಕಾಲೇಜು ಮಾಡಬೇಕೆಂದು ಹೋರಾಟ ಮಾಡಿ ಅದು ಬಜೆಟ್ ಪುಸ್ತಕದಲ್ಲೂ ಬಂದಿದೆ.ಕಾರ್ಯವೂ ಆಗಿದೆ.ಇದು ಅಷ್ಟು ಸುಲಭದ ಕೆಲಸವಲ್ಲ.ಆದರೂ ಅದನ್ನು ಮಾಡಿಸಿರುವುದು ಅವರ ಆಸಕ್ತಿ ಮತ್ತು ಕಮಿಟ್ಮೆಂಟ್ ತೋರಿಸುತ್ತದೆ-ದಿನೇಶ್ ಗುಂಡೂರಾವ್
ದ.ಕ.ಜಿಲ್ಲಾ ಉಸ್ತುವಾರಿ ಸಚಿವರು