ಗುಣಮಟ್ಟದ ಗಿಡಪೂರೈಕೆ, ಮಾಹಿತಿ ವಿನಿಮಯ ಎಲ್ಲದಕ್ಕೂ ಭಟ್ಟರು ಸೈ
ಕಪ್ಪು ಬಂಗಾರ ಎಂದೇ ಖ್ಯಾತವಾಗಿರುವ ಕಾಳುಮೆಣಸಿಗೆ ಈಚೆಗಿನ ದಿನಗಳಲ್ಲಿ ಒಮ್ಮೊಂದೊಮ್ಮೆಗೇ ವ್ಯಾಪಕ ಬೇಡಿಕೆ ಸೃಷ್ಟಿಯಾಗಿದೆ. ತಲೆತಲಾಂತರಗಳಿಂದ ಹಲವು ಕೃಷಿಕರ ತೋಟಗಳಲ್ಲಿ ಉಪಬೆಳೆಯಾಗಿ ಕಾಳುಮೆಣಸು ಕಾಣಿಸಿಕೊಳ್ಳುತ್ತಿದ್ದರೂ ಈಗೀಗ ’ಪ್ರಮುಖ ಬೆಳೆ’ಯ ಪಟ್ಟಕ್ಕೆ ಏರಲಾರಂಭಿಸಿದೆ. ಕೆಲವು ತೋಟಗಳಲ್ಲಿ ಕಾಳುಮೆಣಸೇ ಪ್ರಧಾನ ಕೃಷಿಯಾಗಿ ಅಡಿಕೆಗೆ ಎರಡನೇ ಸ್ಥಾನ ದೊರಕಲಾರಂಭಿಸಿದೆ. ಹೊಸಬರು ಕಾಳುಮೆಣಸು ಕೃಷಿಗೆ ಅಡಿಯಿಡುತ್ತಿದ್ದಾರೆ. ಕೇವಲ ಕಾಳುಮೆಣಸಷ್ಟೇ ಇರುವ ತೋಟಗಳು ರೂಪುಗೊಳ್ಳಲಾರಂಭಿಸಿವೆ.
ಹೀಗೆ ಕಾಳುಮೆಣಸಿನ ಮೌಲ್ಯ ಹೆಚ್ಚಾಗುವುದಕ್ಕೆ; ಬಹುತೇಕ ಸ್ಥಿರವಾಗಿರುವ ಅಥವ ಕುಸಿದರೂ ನಷ್ಟ ಎನಿಸದಷ್ಟು ಉಳಿದುಕೊಳ್ಳುವ ಕಾಳುಮೆಣಸಿನ ದರ ಮಾತ್ರ ಕಾರಣವಲ್ಲ. ಅಡಿಕೆ ಕೃಷಿಯನ್ನು ಅಮರಿಕೊಳ್ಳುತ್ತಿರುವ ಹೊಸ ಹೊಸ ರೋಗಗಳು, ಬೆಳೆ ಹಾನಿ, ಅಡಿಕೆಗೆ ಔಷಧ ಸಿಂಪಡಣೆಗೆ, ಕೊಯ್ಲಿಗೆ ಜನರ ಅಭಾವ.. ಹೀಗೆ ಹತ್ತಾರು ಕಾರಣಗಳು ಹಲವರನ್ನು ಕಾಳುಮೆಣಸಿನೆಡೆಗೆ ಕೈಹಿಡಿದು ಎಳೆತರುತ್ತಿದೆ. ಆದರೆ ಇದ್ದಕ್ಕಿದ್ದಂತೆ ಕಾಳುಮೆಣಸಿನ ಕೃಷಿಯೆಡೆಗೆ ಲಕ್ಷ್ಯವಹಿಸುತ್ತಿರುವವರಿಗೆ ಆ ಬಗೆಗಿನ ಮಾಹಿತಿಯ ಕೊರತೆ ಸಾಕಷ್ಟಿದೆ. ಇಂತಹ ನ್ಯೂನತೆಯನ್ನು ಮನಗಂಡ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪಡಾರು ಶಶಿ ಭಟ್ ಕಾಳುಮೆಣಸಿನ ಕೃಷಿಕರಿಗೆ ಒಬ್ಬ ಸಮಗ್ರ ಸಹಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಆರಂಭದಲ್ಲಿ ಕಾಳುಮೆಣಸಿನ ಕೃಷಿ ಮಾಡಿ ಕೈಸುಟ್ಟುಕೊಂಡ ಭಟ್ಟರಿಗೆ ಮಾರ್ಗದರ್ಶನವಿಲ್ಲದೆ ಈ ಕೃಷಿ ಸಾಗದು ಎಂಬ ಭಾವನೆ ಬಂತು. ಹಾಗಾಗಿ ಪುತ್ತೂರಿನ ಬಹುದೊಡ್ಡ ಕಾಳುಮೆಣಸಿನ ಕೃಷಿಕ ಅಜಿತ್ ಪ್ರಸಾದ್ ರೈಯವರ ಸಲಹೆ ಸೂಚನೆಗಳ ಮೇರೆಗೆ ಮತ್ತೆ ಕಾಳುಮೆಣಸಿನ ಕಡೆಗೆ ಗಮನ ಹರಿಸಿದರು. ಜತೆಗೆ ಅನುಭವಿ ಕೃಷಿಕರಾದ ತೊಟ್ಟೆತ್ತೋಡಿ ಸುರೇಶ್ಚಂದ್ರ ಭಟ್, ಡಾ.ವೇಣುಗೋಪಾಲ್ ಕಳೆತ್ತೋಡಿ, ದೇಲಂಪಾಡಿಯ ಪಡಾರು ತಿರುಮಲೇಶ್ವರ ಭಟ್, ಕೋಮಲೆ ಗಣಪತಿ ಭಟ್ ಅವರಂತಹ ಕಾಳುಮೆಣಸಿನ ಕೃಷಿ ಜ್ಞಾನಿಗಳು ಭಟ್ಟರಿಗೆ ಹೆಗಲೆಣೆಯಾಗಿ ನಿಂತರು.
ಈ ಮಧ್ಯೆ ಅಡಿಕೆ ತೋಟದ ಹಲವು ಗೊಂದಲಗಳ ಮಧ್ಯೆ ಕಾಳುಮೆಣಸನ್ನು ಬೆಳೆಸಿ ಬದುಕು ಕಟ್ಟಿಕೊಳ್ಳಲು ಹಲವರಿಗೆ ತಾನೇಕೆ ಸಹಾಯ ಮಾಡಬಾರದೆಂಬ ಕಲ್ಪನೆಯಡಿ ಆಸಕ್ತ ಕೃಷಿಕರಿಗೆ ಭಟ್ಟರು ಉತ್ತರ ಕನ್ನಡದ ಶಿರಸಿಯ ನರ್ಸರಿಗಳಿಂದ ಲಕ್ಷಗಟ್ಟಳೆ ಕಾಳುಮೆಣಸಿನ ಗಿಡಗಳನ್ನು ತರಿಸಿ ವಿತರಿಸುವ ಕಾಯಕಕ್ಕಿಳಿದರು. ಆದರೆ ಯಾವಾಗ ಕಾಳುಮೆಣಸನ್ನು ಹೀಗೆ ವಿತರಿಸಲಾರಂಭಿಸಿದರೋ ಭಟ್ಟರಿಗೆ ಹೊಸ ಸವಾಲು ಎದುರಾಗತೊಡಗಿತು. ಗಿಡ ಪಡೆದ ಪ್ರತಿಯೊಬ್ಬರೂ ಗಿಡವನ್ನು ಬೆಳೆಸುವ ಬಗೆಗೆ, ರೋಗ ನಿರ್ವಹಣೆ ಕುರಿತು ಮಾತ್ರವಲ್ಲದೆ ಕಾಳುಮೆಣಸಿಗೆ ಸಂಬಂಧಿಸಿದ ಹತ್ತಾರು ವಿಷಯಗಳಿಗೆ ಅಡಿಗಡಿಗೆ ಕರೆಮಾಡತೊಡಗಿದರು. ಆಗ ಶಶಿ ಭಟ್ ತಲೆಯಲ್ಲಿ ಮೂಡಿದ ಯೋಚನೆಯೇ ವಾಟ್ಸಾಪ್ ಗ್ರೂಪ್!
ಕಾಳುಮೆಣಸಿನ ಬಗೆಗೆ ಪರಸ್ಪರ ಮಾಹಿತಿ ವಿನಿಯೋಗ, ಪ್ರಶ್ನೋತ್ತರ, ವೈಯಕ್ತಿಕ ಅನುಭವ, ಸಾಧ್ಯತೆ – ಸವಾಲುಗಳ ಚರ್ಚೆ ಮೊದಲಾದ ವಿಚಾರಗಳಿಗಾಗಿ ಶಶಿ ಭಟ್ ಇತ್ತೀಚೆಗೆ ’ಕಾಳುಮೆಣಸು ಕೃಷಿಕರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆ’ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ ಒಂದನ್ನು ರೂಪಿಸಿದ್ದಾರೆ. ಆ ಗುಂಪಿನಲ್ಲಿ ಮೊದಲಿಗೆ ತನಗೆ ಕಾಳುಮೆಣಸಿನ ಬಗೆಗೆ ಮಾರ್ಗದರ್ಶನ ನೀಡುತ್ತಿರುವ ತಜ್ಞ ಕಾಳುಮೆಣಸು ಬೆಳೆಗಾರರನ್ನು ಸೇರಿಸಿದ್ದಾರೆ. ತದನಂತರ ಸಾರ್ವಜನಿಕರಿಗೆ ಮುಕ್ತವಾಗಿ ಸೇರುವಂತೆ ಲಿಂಕ್ ಒಂದನ್ನು ಕಳುಹಿಸಿಕೊಟ್ಟಿದ್ದಾರೆ.
ಆದರೆ ಕಾಳುಮೆಣಸಿನ ಘಮ ಇಷ್ಟೊಂದು ಹಬ್ಬಿದೆಯೆಂದು ಭಟ್ಟರಿಗೆ ಗೊತ್ತಾದದ್ದು ಆಗಲೇ! ಗ್ರೂಪ್ ರಚಿಸಿ ನಲವತ್ತೆಂಟು ಗಂಟೆಗಳೊಳಗಾಗಿ ಗ್ರೂಪ್ ಭರ್ತಿಯಾಗಿ ಒಂದು ಸಾವಿರದ ಇಪ್ಪತ್ತೈದು ಮಂದಿ ನಿತ್ಯವೂ ಗ್ರೂಪಿನಲ್ಲಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ! ಅನುಭವಿಗಳಿಂದ ನೇರ ಸಲಹೆ ಸೂಚನೆಗಳು ಗುಂಪಿನಲ್ಲಿ ದೊರಕಲಾರಂಭಿಸಿವೆ. ಅದರಲ್ಲೂ ಪ್ರಶ್ನೆ ಕೇಳಿದ ಒಂದೆರಡು ಗಂಟೆಗಳೊಳಗಾಗಿ ಸಮರ್ಪಕ ಅನುಭವ ಜನ್ಯ ಉತ್ತರಗಳು ಲಭ್ಯವಾಗುತ್ತಿವೆ. ಇದೀಗ ’ನಮ್ಮನ್ನೂ ಸೇರಿಸಿಕೊಳ್ಳಿ’ ಎಂದು ಪ್ರತಿದಿನ ಭಟ್ಟರಿಗೆ ಹತ್ತಾರು ಕರೆಗಳು ಬರುತ್ತಿವೆ. ಹಾಗಾಗಿ ಭಟ್ಟರು ಇಂತಹ ಇನ್ನೊಂದೆರಡು ಗ್ರೂಪ್ಗಳು ಬೇಕಾದೀತೆಂಬ ಯೋಚನೆಗಿಳಿದಿದ್ದಾರೆ!
ಸಂದೇಶ ಕಳುಹಿಸುವುದು ’ಅಡ್ಮಿನ್ ಮಾತ್ರ’ ಎಂಬ ಸೆಟ್ಟಿಂಗ್ ಮಾಡಿಕೊಂಡು ಗ್ರೂಪ್ ತಯಾರಿಸುವುದು ದೊಡ್ಡ ವಿಷಯವಲ್ಲ. ಆದರೆ ಗುಂಪಿನಲ್ಲಿ ಪ್ರತಿಯೊಬ್ಬರಿಗೂ ಮುಕ್ತ ಚರ್ಚೆಗೆ ಅವಕಾಶ ಕೊಟ್ಟು ಸಾವಿರಾರು ಮಂದಿಯನ್ನು ನಿಭಾಯಿಸುವುದು ಸುಲಭದ ಮಾತೇನಲ್ಲ. ಯಾರಿಗೂ ನೋವಾಗದಂತೆ, ಜತೆಗೆ ವಿಷಯ ಹಳಿ ತಪ್ಪದಂತೆ ಕಾಪಾಡಿಕೊಳ್ಳುವುದು ದೊಡ್ಡ ಸಾಹಸ. ಕೆಲವರು ತಮ್ಮ ತಮ್ಮ ಜಾಹೀರಾತು ನೀಡುವುದು, ಮುಜುಗರ ತರುವ ವಿಷಯ, ಫೋಟೋ ಪ್ರಕಟಿಸುವುದು ಮಾಡುವುದಿದೆ. ಇಂತಹದ್ದೆಲ್ಲ ಕಂಡುಬಂದಾಗ ಶಶಿ ಭಟ್ಟರು ಪೊಲೀಸ್ ಆಗಿಬಿಡುತ್ತಾರೆ! ತಕ್ಷಣ ಶಿಸ್ತು ಕ್ರಮ ಕೈಗೊಂಡು ಅಂಥವರನ್ನು ಗುಂಪಿನಿಂದ ಹೊರಗೆ ಹಾಕುತ್ತಾರೆ. ಒಬ್ಬರು ಹೊರಗೆ ಹೋದಾಗ ಒಳಬರುವುದಕ್ಕೆ ಹತ್ತಾರು ಜನ ಕಾಯುತ್ತಿರುತ್ತಾರೆ! ಇಷ್ಟೆಲ್ಲವನ್ನೂ ನಿಭಾಯಿಸುವುದಕ್ಕೆ ಸಾಕಷ್ಟು ಸಮಯವನ್ನು ವಿನಿಯೋಗ ಮಾಡಬೇಕಾಗುತ್ತದೆ. ಆದರೆ ಹಲವಾರು ಜನಕ್ಕೆ ಉಪಯೋಗವಾಗುವುದಾದರೆ ನಾನು ಸಮಯ ಕೊಡಲು ಸಿದ್ಧ ಎಂಬ ಭಟ್ಟರ ನಿಲುವು ಅವರ ವ್ಯಕ್ತಿತ್ವವನ್ನು ಎತ್ತರಕ್ಕೇರುವಂತೆ ಮಾಡಿದೆ.
’ನಾನೊಬ್ಬ ಕೃಷಿಕನಾಗಿ ಇತರ ಕೃಷಿಕರಿಗೂ ಸಹಕಾರಿಯಾಗಬೇಕೆಂಬ ತುಡಿತ ನನಗಿದೆ. ಅದರಲ್ಲೂ ನಾನು ಈ ಹಿಂದೆ ಕಾಳುಮೆಣಸು ಮಾಡಿ ಸೋತದ್ದರಿಂದ ಮತ್ತೊಬ್ಬರಿಗೆ ಹೀಗಾಗಬಾರದೆಂದು ಯೋಚಿಸಿ ಈ ಗ್ರೂಪ್ ರಚಿಸಿದ್ದೇನೆ. ತುಂಬ ಜನ ಕರೆ ಮಾಡಿ ಕಾಳುಮೆಣಸು ಗ್ರೂಪಿನಿಂದಾಗಿ ಉಪಕಾರವಾಗಿದೆ ಎನ್ನುತ್ತಾರೆ. ಅಂತಹ ಮಾತು ಕೇಳುವಾಗ ನನ್ನ ಪ್ರಯತ್ನ ಸಾರ್ಥಕ ಎನಿಸುತ್ತದೆ. ಎಲ್ಲರ ಸಹಕಾರ, ಮಾರ್ಗದರ್ಶನದಿಂದಾಗಿ ಇಂತಹದ್ದೊಂದು ಕೆಲಸ ಸಾಧ್ಯವಾಗುತ್ತಿದೆ’ ಎಂದು ಭಟ್ಟರು ಸಂತಸ ವ್ಯಕ್ತಪಡಿಸುತ್ತಾರೆ.
ಅಂದಹಾಗೆ ಭಟ್ಟರಿಗೆ ಗುಂಪು ನಿಭಾಯಿಸುವ ಕಲೆ ಸಹಜವಾಗಿಯೇ ಸಿದ್ಧಿಸಿದೆ. ಎರಡು ಮೂರು ವರ್ಷಗಳ ಪೂರ್ವದಲ್ಲಿ ’ಪ್ರಾಚೀನ ವಸ್ತುಗಳು’ ಎಂಬ ಪುರಾತನ ವಸ್ತುಗಳ ಕೊಡುಕೊಳ್ಳುವಿಕೆಯ ಗ್ರೂಪ್ ಒಂದನ್ನು ಭಟ್ಟರು ರಚಿಸಿದ್ದರು. ಪ್ರಾಚೀನ ವಸ್ತುಗಳ ಬಗೆಗೆ ಅಪಾರ ಆಸಕ್ತಿ ಹೊಂದಿರುವ ಮಣಿಲ ರವಿಶಂಕರ ಶಾಸ್ತ್ರಿಯವರ ಮಾರ್ಗದರ್ಶನವೂ ಭಟ್ಟರಿಗೆ ದೊರೆತಿದೆ. ಆ ಗುಂಪು ಇದೀಗ ಮೂರು ಗುಂಪುಗಳವರೆಗೆ ಬೆಳೆದು ಮೂರು ಸಾವಿರಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಅದೇ ಧೈರ್ಯ ಹಾಗೂ ಪ್ರೇರಣೆಯಿಂದ ಇದೀಗ ಶಶಿ ಭಟ್ ಕಾಳುಮೆಣಸಿನ ಮಾಹಿತಿ – ವಿನಿಮಯದ ಗುಂಪನ್ನು ಹುಟ್ಟು ಹಾಕಿದ್ದಾರೆ. ಈ ಗುಂಪು ಇಡಿಯ ಕಾಳುಮೆಣಸು ಬೆಳೆಗಾರರಿಗೇ ದೊಡ್ಡ ಕೊಡುಗೆಯಾಗಿ ಪರಿಣಮಿಸಿದೆ.
ಶಶಿ ಭಟ್ ಅವರು ಕಾಳುಮೆಣಸಿನ ಗಿಡ ವಿತರಿಸುತ್ತಿರುವುದು ಅನೇಕರಿಗೆ ವರದಾನವೆನಿಸಿದೆ. ಇತ್ತ ಶಶಿ ಭಟ್ಟರೂ ಅತ್ಯುತ್ತಮ ಗಿಡಗಳನ್ನು ಕೃಷಿಕರಿಗೊದಗಿಸುವ ಪಣ ತೊಟ್ಟಿದ್ದಾರೆ. ತಾನು ಮುಂಗಣ ಹಣ ಕೊಟ್ಟು ಕಾಳುಮೆಣಸಿನ ಗಿಡಗಳನ್ನು ಪಡೆಯುವ ಶಿರಸಿಯ ನರ್ಸರಿಗಳಿಗೆ ತಿಂಗಳು ತಿಂಗಳು ಭೇಟಿ ನೀಡಿ ಫೋಟೋ, ವೀಡಿಯೊ ಪಡೆದುಕೊಂಡು ಅವುಗಳ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ. ತಜ್ಞರಿಂದ ಬೆಳವಣಿಗೆಯ ಬಗೆಗೆ ಅನಿಸಿಕೆ ಪಡೆಯುತ್ತಿದ್ದಾರೆ. ಕೃಷಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಗಿಡ ಒದಗಿಸುವ ಜವಾಬ್ದಾರಿ ತನ್ನದು ಎಂಬ ಭಾವನೆ ಭಟ್ಟರಿಗಿದೆ. ಶಶಿ ಭಟ್ ನೀಡಿದ ಗಿಡಗಳಲ್ಲಿ ಕೆಲವೆಡೆಗಳಲ್ಲಿ ಈ ವರ್ಷ ಫಸಲು ಬರಲಾರಂಭಿಸಿದೆ. ಪ್ರಸ್ತುತ ವರ್ಷ ಜುಲೈ – ಆಗಸ್ಟ್ ಸಂದರ್ಭದಲ್ಲಿ ಅಡಿಕೆ ಹಾಗೂ ಕಾಳುಮೆಣಸು ಕೃಷಿಕರಿಗಾಗಿ ಮಾಹಿತಿ ಶಿಬಿರವೊಂದನ್ನು ಪುತ್ತೂರಿನಲ್ಲಿ ಏರ್ಪಡಿಸುವ ಇರಾದೆಯೂ ಶಶಿ ಭಟ್ ಹಾಗೂ ಅವರ ತಂಡಕ್ಕಿದೆ.
ಶಶಿ ಭಟ್ :9481758955
ರಾಕೇಶ ಕುಮಾರ್ ಕಮ್ಮಜೆ
ಪ್ರಾಂಶುಪಾಲರು
ಅಂಬಿಕಾ ಪದವಿ ಮಹಾವಿದ್ಯಾಲಯ