ಪುತ್ತೂರು: ಕರ್ನಾಟಕ ಸರಕಾರದ ಜನ ವಿರೋಧಿ ನೀತಿ ಸೃಜನ ಪಕ್ಷಾಪಾತ, ಭ್ರಷ್ಟಾಚಾರ ಹಾಗು ವಿರೋಧ ಪಾರ್ಟಿಯ ಧಮನ ನೀತಿಯ ವಿರುದ್ಧ ಬಿಜೆಪಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾ.ಪಂಗಳು, ಪಟ್ಟಣ ಪಂಚಾಯತ್, ನಗರಸಭೆ ಎದುರು ಒಂದು ದಿನದ ಪ್ರತಿಭಟನೆ ಜೂ.23ರಂದು ನಡೆಯಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ರಾಜ್ಯ ಸರಕಾರ ಜನವಿರೋಧಿ ನೀತಿಯನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. 94 ಸಿ ಯಿಂದ ಹಿಡಿದು ವಾಲ್ಮೀಕಿ ನಿಗಮದ ತನಕ ರಾಜ್ಯದಲ್ಲಿ ಬಹಿರಂಗವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಸಂಘರ್ಷಕ್ಕೆ ರಾಜ್ಯ ಸರಕಾರ ಎಡೆ ಮಾಡಿಕೊಟ್ಟಿದೆ. ಕಲುಷಿತ ವಾತಾವರಣಕ್ಕೆ ಸರಕಾರವೇ ನೇರ ಹೊಣೆ. ಯಾವುದೋ ಒಂದು ಕೊಲೆಯಾದಾಗ ಅದನ್ನು ಬಿಂಬಿಸುವ ರೀತಿ ಮತ್ತು ಸರಕಾರದ ನಡವಳಿಕೆ ಜನರನ್ನು ರೊಚ್ಚಿಗೆಬ್ಬಿಸಿದೆ. ಅದರ ಜೊತೆಯಲ್ಲಿ ರಾಜ್ಯದಲ್ಲಿ ಶಿಕ್ಷಣ, ಅಭಿವೃದ್ದಿ ಹೊಂದಿರುವ ದ.ಕ.ಜಿಲ್ಲೆಯಲ್ಲಿ ಹಿಂದು ಸಂಘಟನೆಗಳನ್ನು ಮಟ್ಟಹಾಕಲು ಹೊಸ ಪೊಲೀಸ್ ಕಾರ್ಯಾಪಡೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ನಿಯೋಜನೆ ಮಾಡಿರುವುದು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾವಂತ ಜನ ಕಾಂಗ್ರೆಸ್ನ ಕೆಂಗಣ್ಣಿಗೆ ಬಿದ್ದಿದ್ದಾರೆ ಎಂದವರು ಹೇಳಿದರು.
ಯಡಿಯೂರಪ್ಪ ಘೋಷಣೆ ಮಾಡಿದ ಪರಿಹಾರ ತಕ್ಷಣ ಘೋಷಣೆ ಮಾಡಲಿ:
ಮೇ ತಿಂಗಳಲ್ಲಿ ಮಳೆ ಬಂದು ಪ್ರಾಕೃತಿಕ ವಿಕೋಪ ಆದಾಗ ಸರಕಾರ ಗಾಡ ನಿದ್ರೆಯಲ್ಲಿತ್ತು. ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಮಾಡಿ ಪ್ರಾಕೃತಿಕ ವಿಕೋಪಗಳಿಗೆ ಪರಿಹಾರ ನೀಡಬೇಕು ಮತ್ತು ನಮ್ಮಲ್ಲಿ ಹಣಕಾಸಿನ ಸಮಸ್ಯೆ ಇಲ್ಲ, ಅಧಿಕಾರಿಗಳು 24/7 ಗ್ರಾಮದಲ್ಲೇ ವಾಸ್ತವ್ಯ ಮಾಡಬೇಕೆಂದು ತಿಳಿಸಿದ್ದಾರೆ. ಆದರೆ ಇವೆಲ್ಲ ಪತ್ರಿಕೆ ಮತ್ತು ಹೇಳಿಕೆಗಳಿಗೆ ಸೀಮಿತವಾಗಿದೆ. ಎಲ್ಲಾ ಕಡೆ ಪರಿಹಾರಕ್ಕೆ ಆದೇಶ ಮಾತ್ರ ಬಂದಿದೆ. ಇನ್ನೂ ಹಣ ಬಂದಿಲ್ಲ ಎಂದು ಗ್ರಾ.ಪಂನಿಂದ ಮಾಹಿತಿ ದೊರಕಿದೆ. ಒಂದು ಕೊಟ್ಟು ಮಣ್ಣು ತೆಗೆಯುವುದು ಬಿಡಿ ಪಿಕ್ಕಾಸ್ ತೆಗೆಯಲು ಕೂಡಾ ಹಣ ಬಂದಿಲ್ಲ. ರಸ್ತೆ ಬದಿಯಲ್ಲಿ ಬಿದ್ದ ಮಣ್ಣು, ಮನೆಗಳ ಮೇಲೆ ಬಿದ್ದ ಮಣ್ಣು ತೆರವು ಮಾಡಲು 10 ಪೈಸೆ ಸರಕಾರ ಕೊಡಲಿಲ್ಲ. ನಿನ್ನೆಯ ದಿವಸ ಉಸ್ತುವಾರಿ ಸಚಿವರು ನಮ್ಮಲ್ಲಿ ಬೇಕಾದಷ್ಟು ದುಡ್ಡಿದೆ ಎಂದು ಹೇಳಿದ್ದಾರೆ. ಪೂರ್ತಿ ಮನೆ ಬಿದ್ದವರಿಗೆ ರೂ. 1.20ಲಕ್ಷ, ಭಾಗಶಃ ಬಿದ್ದವರಿಗೆ ರೂ. 50ಸಾವಿರ, ರೂ. 30 ಸಾವಿರ ಕೊಡುವುದೆಂದು ಹೇಳಿ ಕೊನೆಗೆ ರೂ. 3ಸಾವಿರ ಕೊಟ್ಟಿದ್ದಾರೆ. 5 ವರ್ಷ ಇಲ್ಲಿ ಯಡಿಯೂರಪ್ಪ ಸರಕಾರ ಇದ್ದಾಗ ಪೂರ್ತಿ ಮನೆ ಹಾನಿಯಾದದಕ್ಕೆ ರೂ. 5ಲಕ್ಷ, ಭಾಗಶಃ ಮನೆ ಕಳೆದುಕೊಂಡವರಿಗೆ ರೂ.1ಲಕ್ಷ ನೀಡಲಾಗಿದೆ. ಇವತ್ತು ಪೂರ್ತಿ ಮನೆ ಕಳೆದುಕೊಂಡವರಿಗೆ ಹಣ ಬಂದಿಲ್ಲ. ಗುಡ್ಡದ ಬಳಿಯ ಮನೆಯ ಶಿಫ್ಟ್ ಮಾಡಲು ಆದೇಶ ಮಾಡುತ್ತಾರೆ. ಆದರೆ ಅವರಿಗೆ ಸ್ಥಳಾಂತರಕ್ಕೆ ಕಾಳಜಿ ಕೇಂದ್ರ ತೆರೆಯಲಿಲ್ಲ. ಅವರು ಎಲ್ಲಿಗೆ ಹೋಗಬೇಕು ಎಂಬುದು ಪ್ರಶ್ನೆ. ಹಾಗಾಗಿ ಯಡಿಯೂರಪ್ಪ ಸರಕಾರ ಇದ್ದಾಗ ಘೋಷಣೆ ಮಾಡಿದ ಪರಿಹಾರ ತಕ್ಷಣ ಈ ಸರಕಾರ ಘೋಷಣೆ ಮಾಡಲಿ ಎಂದು ಸಂಜೀವ ಮಠಂದೂರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಅನಿಲ್ ತೆಂಕಿಲ, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ ಉಪಸ್ಥಿತರಿದ್ದರು.