ಕೊಕ್ಕಡ: ವಿಷ ಸೇವಿಸಿ ಅಸ್ವಸ್ಥರಾಗಿದ್ದ ಯುವಕ, ಯುವತಿ ಸ್ಥಿತಿ ಚಿಂತಾಜನಕ-ಆಸ್ಪತ್ರೆಗೆ ದಾಖಲು

0

ನೆಲ್ಯಾಡಿ: ವಿಷ ಸೇವಿಸಿ ಅಸ್ವಸ್ಥರಾಗಿ, ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕ ಹಾಗೂ ಯುವತಿಯನ್ನು ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದ ಘಟನೆ ಕೊಕ್ಕಡ ಸಮೀಪ ಜೂ.22ರಂದು ರಾತ್ರಿ ನಡೆದಿದೆ.

ಬೆಂಗಳೂರು ಮೂಲದ ಯುವಕ ಹಾಗೂ ಯುವತಿ ಜೂ.22ರಂದು ಬೆಳಿಗ್ಗೆ ಧರ್ಮಸ್ಥಳದಿಂದ ಕೊಕ್ಕಡಕ್ಕೆ ಬಸ್ಸಿನಲ್ಲಿ ಬಂದು ಅಲ್ಲಿಂದ ಕೊಕ್ಕಡ-ಪೆರಿಯಶಾಂತಿ ರಾಜ್ಯ ಹೆದ್ದಾರಿ ಮೂಲಕ ನಡೆದುಕೊಂಡು ದಡ್ಡಲುಪಳಿಕೆ ಎಂಬಲ್ಲಿ ಅರಣ್ಯದೊಳಗೆ ಹೋಗಿ ವಿಷ ಸೇವಿಸಿದ್ದರು ಎನ್ನಲಾಗಿದೆ.

ಅಲ್ಲಿಂದ ಅವರು ಮತ್ತೆ ಹೆದ್ದಾರಿ ಪಕ್ಕಕ್ಕೆ ಬಂದಿದ್ದು, ಈ ವೇಳೆ ಅಸ್ವಸ್ಥರಂತೆ ಕಾಣುತ್ತಿದ್ದ ಇವರನ್ನು ಸ್ಥಳೀಯರು ವಿಚಾರಿಸಿದ ವೇಳೆ ಇಬ್ಬರು ವಿಷ ಸೇವಿಸಿರುವುದು ಗೊತ್ತಾಗಿದೆ. ತಕ್ಷಣ ಸ್ಥಳೀಯರು ಇಬ್ಬರನ್ನು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು ಅಲ್ಲಿನ ವೈದ್ಯರ ಸಲಹೆಯಂತೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತರಲಾಗಿದೆ.

ಬಳಿಕ ಅಲ್ಲಿಂದ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here