ರೂ. 20 ಲಕ್ಷ ಅನುದಾನ ಭರವಸೆ ನೀಡಿದ ಶಾಸಕ ಅಶೋಕ್ ರೈ
ಪುತ್ತೂರು: ದಾರಂದಕುಕ್ಕುವಿನಿಂದ ಕಂಜೂರಿಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಭಿವೃದ್ದಿ ಮಾಡುವಂತೆ ಸ್ಥಳೀಯ ನಾಗರಿಕರು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿದ ಶಾಸಕರು ರಸ್ತೆಗೆ ಎರಡು ಹಂತದಲ್ಲಿ ರೂ. 20 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಈ ಬಗ್ಗೆ ಶಾಸಕರಲ್ಲಿ ದೂರು ನೀಡಿದ ಗ್ರಾಮಸ್ಥರು ಈ ರಸ್ತೆಯನ್ನು ಅಭಿವೃದ್ದಿ ಮಾಡಿ ಎಂದು ಕಳೆದ ಹಲವು ವರ್ಷಗಳಿಂದ ಶಾಸಕರಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದು, ನಮ್ಮ ಮನವಿಯನ್ನು ಯಾರೂ ಪರಿಗಣಿಸಿಲ್ಲ. ಈ ರಸ್ತೆ ಈಗ ನಡೆದಾಡಲು ಅಸಾಧ್ಯವಾಗಿದೆ. ತಮ್ಮ ಮೂಲಕ ಈ ರಸ್ತೆಯನ್ನು ಅಭಿವೃದ್ದಿ ಮಾಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ ಅವರು ಹಿಂದಿನ ಶಾಸಕರು ಯಾಕೆ ಈ ರಸ್ತೆಗೆ ಹಣ ಇಟ್ಟಿಲ್ಲ ಎಂಬುದು ನನಗೆ ಗೊತ್ತಿಲ್ಲ, ಆ ವಿಚಾರ ಈಗ ಚರ್ಚೆ ಮಾಡಿಯೂ ಪ್ರಯೋಜನವಿಲ್ಲ. ನಾನು ನಿಮ್ಮ ಮನವಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ. ಎರಡು ಹಂತದಲ್ಲಿ ಒಟ್ಟು 20 ಲಕ್ಷ ಅನುದಾನವನ್ನು ನೀಡುತ್ತೇನೆ. ಈ ಭಾಗದಲ್ಲಿ ಕಾಂಗ್ರೆಸ್ ವೋಟು ಕಡಿಮೆ ಇದೆ. ಆದರೂ ನಾನು ಅಭಿವೃದ್ದಿಯಲ್ಲಿ ರಾಜಕೀಯ ಮಾಡುವುದೇ ಇಲ್ಲ. ಈ ರಸ್ತೆಯನ್ನು ಮುಂದಿನ ಮೂರು ವರ್ಷದಲ್ಲಿ ಪೂರ್ತಿಯಾಗಿ ಅಭಿವೃದ್ದಿ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಕುಂಟ್ಯಾನ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ದರ್ಣಪ್ಪ ಮೂಲ್ಯ, ಬೂತ್ ಅಧ್ಯಕ್ಷ ಡೆನ್ನಿಸ್ ಮಸ್ಕರೇನಸ್, ಗ್ರಾ.ಪಂ ಸದಸ್ಯೆ ಹರಿಣಾಕ್ಷಿ, ರತ್ನಾಕರ ಪ್ರಭು, ಸುಮಿತ್ರ, ಲತಾ ಕಜೆ ಬನ್ನೂರು, ಗ್ರಾಪಂ ಮಾಜಿ ಸದಸ್ಯೆ ಶುಭ, ಬನ್ನೂರು ಗ್ರಾಪಂ ಸದಸ್ಯೆ ಸುಪ್ರಿತ ಪ್ರಭು, ಬಾತಿಷ, ಕಲಂದರ್, ಜಮೀಲಾ, ನೆಸೀಮಾ, ರೇಶ್ಮ, ಸಂಶುದ್ದೀನ್, ಜಮಾಲ್, ರಝಾಕ್, ಸರ್ಫುದ್ದೀನ್ ಸುರೇಶ್ ಉಪಸ್ಥಿತರಿದ್ದರು.